ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, January 30, 2023

Mahabharata Tatparya Nirnaya Kannada 25-103-113

 

ಸಂಶ್ರಾವಿತಃ ಕ್ರೂರವಚಃ  ಸ ತೇನ ಚಕ್ರೇ ಸತ್ಯಂ ಮೃತ್ಯುಭಯಂ ವಿಹಾಯ ।

ಶಕ್ತ್ಯಾ  ಹನಿಷ್ಯಾಮಿ ಪರಾನಿತಿ ಸ್ಮ ಚಕ್ರೇ ಚ ತತ್ ಕರ್ಮ್ಮ ತಥಾSಪರೇದ್ಯುಃ  ॥೨೫.೧೦೩॥

 

ದುರ್ಯೋಧನನಿಂದ ಅತ್ಯಂತ ಕ್ರೂರ ವಚನವನ್ನು ಕೇಳಿಸಿಕೊಂಡ ಭೀಷ್ಮರು ಪ್ರತಿಜ್ಞೆ ಮಾಡಿದರು: ’ನಾಳೆ ನಾನು ಮರಣದ ಭಯವನ್ನು ಬಿಟ್ಟು ನನ್ನ ಶಕ್ತಿ ಇರುವಷ್ಟು ಶತ್ರುಗಳನ್ನು ಕೊಲ್ಲುತ್ತೇನೆ ಎಂದು. ಮರುದಿನದ (ಒಂಬತ್ತನೇ ದಿನದ) ಯುದ್ಧದಲ್ಲಿ ತಾನು ಏನು ಪ್ರತಿಜ್ಞೆ ಮಾಡಿದ್ದರೋ ಅದನ್ನು ಸತ್ಯವನ್ನಾಗಿ ಮಾಡಿದರು ಕೂಡಾ.

 

ತಂ ಶಕ್ತಿತೋ ಗುಪುರ್ದ್ಧಾರ್ತ್ತರಾಷ್ಟ್ರಾಸ್ತೇನಾರ್ದ್ದಿತಾಶ್ಚೇದಿಪಾಞ್ಚಾಲಮತ್ಸ್ಯಾಃ ।

ಪರಾದ್ರವನ್ ಭೀಷ್ಮಬಾಣೋರುಭೀತಾಃ ಸಿಂಹಾರ್ದ್ದಿತಾಃ ಕ್ಷುದ್ರಮೃಗಾ ಇವಾSರ್ತ್ತಾಃ ॥ ೨೫.೧೦೪॥

 

ದುರ್ಯೋಧನಾದಿಗಳು ತಮ್ಮ ಪೂರ್ಣಶಕ್ತಿಯೊಂದಿಗೆ ಭೀಷ್ಮರನ್ನು ರಕ್ಷಿಸಿದರು. ಭೀಷ್ಮರ ಪರಾಕ್ರಮದಿಂದ ಪೀಡಿತರಾಗಿರುವ ಚೇದಿ, ಪಾಂಚಾಲ, ಮತ್ಸ್ಯದೇಶದವರು ಅವರ ಬಾಣಗಳಿಂದ ಭೀತರಾಗಿ, ಹೇಗೆ ಸಿಂಹದಿಂದ ಪೀಡಿತವಾದ ಕ್ಷುದ್ರಮೃಗಗಳು ಓಡಿಹೋಗುತ್ತವೋ ಹಾಗೆ ಓಡಿಹೋದರು.

 

ಸಂಸ್ಥಾಪ್ಯ ತಾನ್ ಭೀಷ್ಮಮಭಿಪ್ರಯಾನ್ತಮಲಮ್ಬುಸೋSವಾರಯತ್ ಪಾರ್ತ್ಥಸೂನುಮ್ ।

ವಿಜಿತ್ಯ ತಂ ಕೇಶವಭಾಗಿನೇಯೋ ಯಯೌ ಭೀಷ್ಮಂ ಧಾರ್ತ್ತರಾಷ್ಟ್ರೋSಮುಮಾರ ॥೨೫.೧೦೫॥

 

ಓಡುತ್ತಿರುವ ಅವರೆಲ್ಲರನ್ನೂ ನಿಲ್ಲಿಸಿ, ಅವರನ್ನು ಹುರಿದುಂಬಿಸಿ, ಧೈರ್ಯತುಂಬಿ, ಭೀಷ್ಮರೊಂದಿಗೆ  ಯುದ್ಧಮಾಡಲೆಂದು ಎದುರುಗೊಳ್ಳುತ್ತಿರುವ ಅಭಿಮನ್ಯುವನ್ನು ಅಲಂಬುಸನು ತಡೆದ.  ಕೇಶವನ ಸೋದರಳಿಯನಾದ ಅಭಿಮನ್ಯುವು ಅಲಂಬುಸನನ್ನು ಸುಲಭವಾಗಿ ಗೆದ್ದು, ಭೀಷ್ಮರೊಂದಿಗೆ ಯುದ್ಧ ಮಾಡಲೆಂದು ಹೊರಟ. ಆಗ ಸ್ವಯಂ ದುರ್ಯೋಧನ ಅಭಿಮನ್ಯುವಿನ ಎದುರು ಬಂದ.  

 

ತದ್ ಯುದ್ಧಮಾಸೀನ್ನೃಪಪಾರ್ತ್ಥಪುತ್ರಯೋರ್ವಿಚಿತ್ರಮತ್ಯದ್ಭುತಮುಗ್ರರೂಪಮ್ ।

ಸಮಂ ಚಿರಂ ತತ್ರ ಧನುಶ್ಚಕರ್ತ್ತ ಧ್ವಜಂ ಚ ರಾಜಾ ಸಹಸಾSಭಿಮನ್ಯೋಃ ॥ ೨೫.೧೦೬॥

 

ದುರ್ಯೋಧನನಿಗೆ ಮತ್ತು ಅಭಿಮನ್ಯುವಿನ ನಡುವೆ ವಿಚಿತ್ರವಾಗಿರುವ ಅತ್ಯದ್ಭುತವಾಗಿರುವ, ಭಯಾನಕ ಯುದ್ಧವು ನಡೆಯಿತು. ಸಮಾನವಾಗಿರುವ ಅವರ ಯುದ್ಧ ಬಹಳಕಾಲ ನಡೆಯಿತು. ಆ ಯುದ್ಧದಲ್ಲಿ ದುರ್ಯೋಧನನು ಕೂಡಲೇ ಅಭಿಮನ್ಯುವಿನ ಧನುಸ್ಸನ್ನೂ ಧ್ವಜವನ್ನೂ ಕತ್ತರಿಸಿದನು.

 

ಅಥೈನಮುಗ್ರೈಶ್ಚ ಶರೈರ್ವವರ್ಷ ಸೂತಂ ಚ ತಸ್ಯಾSಶು ಜಘಾನ ವೀರಃ ।

ತದಾSSಸದದ್ ಭೀಮಸೇನೋ ನೃಪಂ ತಂ ಜಘಾನ ಚಾಶ್ವಾನ್ ಧೃತರಾಷ್ಟ್ರಜಸ್ಯ ॥ ೨೫.೧೦೭॥

 

ಹೀಗೆ ಬಿಲ್ಲನ್ನು ಕತ್ತರಿಸಿದ ಮೇಲೆ ಭಯಂಕರವಾದ ಬಾಣಗಳಿಂದ ಅಭಿಮನ್ಯುವನ್ನು ದುರ್ಯೋಧನ ಪೀಡಿಸಿದ. ಶೀಘ್ರದಲ್ಲಿ ಅಭಿಮನ್ಯುವಿನ ಸಾರಥಿಯನ್ನು ಕೊಂದ ಕೂಡಾ. ಆಗ ಅಭಿಮನ್ಯುವಿನ  ದೊಡ್ದಪ್ಪನಾದ ಭೀಮಸೇನನು ದುರ್ಯೋಧನನನ್ನು ಹೊಂದಿದನು ಮತ್ತು ಕೂಡಲೇ ದುರ್ಯೋಧನನ ಕುದುರೆಗಳನ್ನು ಕೊಂದುಹಾಕಿದನು.

 

ದ್ರೋಣೋ ದ್ರೌಣಿರ್ಭಗದತ್ತಃ ಕೃಪಶ್ಚ ಸಚಿತ್ರಸೇನಾ ಅಭ್ಯಯುರ್ಭೀಮಸೇನಮ್ ।

ಸರ್ವಾಂಶ್ಚ ತಾನ್  ವಿಮುಖೀಕೃತ್ಯ ಭೀಮಃ  ಸ ಚಿತ್ರಸೇನಾಯ ಗದಾಂ ಸಮಾದದೇ ॥ ೨೫.೧೦೮॥

 

ದ್ರೋಣ, ಅಶ್ವತ್ಥಾಮ, ಭಗದತ್ತ, ಕೃಪ, ಚಿತ್ರಸೇನ, ಇವರೆಲ್ಲರೂ ಕೂಡಾ ಭೀಮಸೇನನನ್ನು ಎದುರುಗೊಂಡರು. ಅವರೆಲ್ಲರನ್ನೂ ಭೀಮ ಹೊಡೆದೋಡಿಸಿ, ದುರ್ಯೋಧನನ ತಮ್ಮನಾದ ಚಿತ್ರಸೇನನನ್ನು ಕೊಲ್ಲುವುದಕ್ಕಾಗಿ ಗದೆಯನ್ನು ಹಿಡಿದುಕೊಂಡ.

 

ತಾಮುದ್ಯತಾಂ ವೀಕ್ಷ್ಯ ಪರಾದ್ರವಂಸ್ತೇ ಸ ಚಿತ್ರಸೇನಶ್ಚ ರಥಾದವಪ್ಲುತಃ ।

ಸಞ್ಚೂರ್ಣ್ಣಿತೋ ಗದಯಾ ತದ್ರಥಶ್ಚ ತಜ್ಜೀವನೇನೋದ್ಧೃಷಿತಾಶ್ಚ ಕೌರವಾಃ ॥ ೨೫.೧೦೯॥

 

ಭೀಮಸೇನ ಎಸೆದ ಗದೆ ತಮ್ಮೆಡೆಗೆ ಬರುವುದನ್ನು ನೋಡಿದ ದ್ರೋಣಾದಿಗಳು ಓಡಿಹೋದರು. ಚಿತ್ರಸೇನನು ತನ್ನ ರಥದಿಂದ ಕೆಳಗೆ ಹಾರಿದನು. ಚಿತ್ರಸೇನನ ರಥವು ಆ ಗದೆಯಿಂದ ಪುಡಿ ಮಾಡಲ್ಪಟ್ಟಿತು. ಚಿತ್ರಸೇನ ಬದುಕುಳಿದಿರುವುದಕ್ಕೆ  ಕೌರವರೆಲ್ಲರೂ ಬಹಳ ಸಂತೋಷಪಟ್ಟರು.

 

ಭೀಷ್ಮಸ್ತು ಪಾಞ್ಚಾಲಕರೂಶಚೇದಿಷ್ವಹನ್ ಸಹಸ್ರಾಣಿ ಚತುರ್ದ್ದಶೋಗ್ರಃ ।

ರಥಪ್ರಬರ್ಹಾನತಿತಿಗ್ಮತೇಜಾ ವಿದ್ರಾವಯಾಮಾಸ ಪರಾನವೀನಿವ ॥ ೨೫.೧೧೦॥

 

ಇತ್ತ, ರಣಭೂಮಿಯ ಇನ್ನೊಂದು ಮಗ್ಗಲಲ್ಲಿ ಭೀಷ್ಮನು ಪಾಂಚಾಲ, ಕರೂಶ, ಛೇದಿದೇಶಗಳ ಹದಿನಾಲ್ಕು ಸಾವಿರ ಅತ್ಯಂತ ಶ್ರೇಷ್ಠ ರಥಿಕರನ್ನು ಭಯಂಕರನಾಗಿ ಕೊಂದ. ಶತ್ರುಗಳನ್ನು ಕುರಿಗಳನ್ನೆಂಬಂತೆ ಓಡಿಸಿದ.   

 

ವಿದ್ರಾಪ್ಯ ಸರ್ವಾಮಪಿ ಪಾಣ್ಡುಸೇನಾಂ ವಿಶ್ರಾವ್ಯ ಲೋಕೇಷು ಚ ಕೀರ್ತ್ತಿಮಾತ್ಮನಃ ।

ಸೇನಾಂ ಸಮಾಹೃತ್ಯ ಯಯೌ ನಿಶಾಗಮೇ ಸಮ್ಪೂಜ್ಯಮಾನೋ ಧೃತರಾಷ್ಟ್ರಪುತ್ರೈಃ ॥ ೨೫.೧೧೧॥

 

ಭೀಷ್ಮಾಚಾರ್ಯರು ಎಲ್ಲಾ ಪಾಂಡವ ಸೇನೆಯನ್ನು ಓಡಿಸಿ, ಲೋಕದಲ್ಲಿ ತನ್ನ ಕೀರ್ತಿ ಸತ್ಯವಾದದ್ದು ಎಂದು ತೋರಿಸಿ, ಸೇನೆಯನ್ನು ಉಪಸಂಹರಿಸಿ, ದುರ್ಯೋಧನಾದಿಗಳಿಂದ ಸ್ತುತಿಸಲ್ಪಟ್ಟವರಾಗಿ ಶಿಬಿರಕ್ಕೆ ತೆರಳಿದರು. (ಹೀಗೆ ಒಂಬತ್ತನೆಯ ದಿನದ ಯುದ್ದವು ಭೀಷ್ಮಾಚಾರ್ಯರ ತೀಕ್ಷ್ಣವಾದ ಸಾಮರ್ಥ್ಯದಿಂದ ಕೌರವರ ಮೇಲುಗೈಯೊಂದಿಗೆ ಸಮಾಪ್ತಿಯಾಯಿತು).

 

[ಒಂಬತ್ತನೇ ದಿನದ ಯುದ್ಧದಲ್ಲಿ ಇನ್ನೂ ಕೆಲವು ಘಟನೆ ನಡೆದಿರುವುದನ್ನು ಇಲ್ಲಿ ಹೇಳುತ್ತಾರೆ:]

 

ದ್ರೋಣೋ ವಿರಾಟಸ್ಯ ಪುರೋ ನಿಹತ್ಯ ಶಙ್ಖಂ ಸುತಂ ತಸ್ಯ ವಿಜಿತ್ಯ ತಂ ಚ ।

ವಿದ್ರಾಪ್ಯ ಸೇನಾಮಪಿ ಪಾಣ್ಡವಾನಾಂ ಯಯೌ ನದೀಜೇನ ಸಹೈವ ಹೃಷ್ಟಃ ॥ ೨೫.೧೧೨॥

 

 

ದ್ರೋಣಾಚಾರ್ಯರು ವಿರಾಟನ ಎದುರುಗಡೆಯಲ್ಲಿಯೇ, ಅವನ ಮಗನಾಗಿರುವ ಶಂಖನನ್ನು ಕೊಂದು, ವಿರಾಟನನ್ನು ಗೆದ್ದು,  ಪಾಂಡವರ ಸೇನೆಯನ್ನು ಓಡಿಸಿ, ಭೀಷ್ಮಾಚಾರ್ಯರಿಂದ ಕೂಡಿಕೊಂಡು ಅತ್ಯಂತ ಸಂತೋಷದಿಂದ ತೆರಳಿದರು.

 

ಭೀಮಾರ್ಜ್ಜುನಾವಪಿ ಶತ್ರೂನ್ ನಿಹತ್ಯ ವಿದ್ರಾಪ್ಯ ಸರ್ವಾಂಶ್ಚ ಯುಧಿ ಪ್ರವೀರಾನ್ ।

ಯುಧಿಷ್ಠಿರೇಣಾಪಹೃತೇ ಸ್ವಸೈನ್ಯೇ ಭೀತೇನ ಭೀಷ್ಮಾಚ್ಛಿಬಿರಂ ಪ್ರಜಗ್ಮತುಃ ॥ ೨೫.೧೧೩॥

 

ರಣಭೂಮಿಯ ಇನ್ನೊಂದು ಮಗ್ಗಲಲ್ಲಿ ಭೀಮಸೇನಾರ್ಜುನರೂ ಕೂಡಾ ಶತ್ರುಗಳನ್ನು ಸಂಹಾರಮಾಡಿ, ಮಹಾವೀರರಾದವರೆಲ್ಲರನ್ನೂ ಓಡಿಸಿ,  ಭೀಷ್ಮಾಚಾರ್ಯರಿಂದ ಭಯಗೊಂಡ ಯುಧಿಷ್ಠಿರನಿಂದ ತಮ್ಮ ಸೈನ್ಯವು ಹಿಂದಕ್ಕೆ ಕರೆಸಲ್ಪಡುತ್ತಿರಲು, ಭೀಮಸೇನಾರ್ಜುನರೂ ಶಿಬಿರಕ್ಕೆ ತೆರಳಿದರು.

No comments:

Post a Comment