ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, January 21, 2023

Mahabharata Tatparya Nirnaya Kannada 25-01-17

 

೨೫. ಭೀಷ್ಮಪಾತಃ

 

̐

ತೇ ಸೇನೇ ಸಮರಾರಮ್ಭೇ ಸಮೇತೇ ಸಾಗರೋಪಮೇ 

ಭೀಮಭೀಷ್ಮಮುಖೇ ವೀಕ್ಷ್ಯ ಪ್ರಾಹ ವಾಸವಿರಚ್ಯುತಮ್ ॥೨೫.೦೧ ॥

 

ಸಮರದ ತೊಡುಗುವಿಕೆಯಲ್ಲಿ ಇರುವ, ಭೀಮ-ಭೀಷ್ಮಾಚಾರ್ಯರೇ ಅಗ್ರೇಸರರಾಗಿರುವ, ಕಡಲಿಗೆ ಸದೃಶರಾಗಿರುವ ಆ ಎರಡು ಸೇನೆಗಳನ್ನು ಕಂಡ ಆರ್ಜುನನು ಕೃಷ್ಣನನ್ನು ಕುರಿತು ಮಾತನಾಡಿದ-

 

‘ಸೇನಯೋರುಭಯೋರ್ಮ್ಮದ್ಧ್ಯೇ ರಥಂ ಸ್ಥಾಪಯ ಮೇSಚ್ಯುತ’ ।

ಇತ್ಯುಕ್ತಃ ಸ ತಥಾ ಚಕ್ರೇ ಪಾರ್ತ್ಥಃ ಪಶ್ಯಂಶ್ಚ ಬಾನ್ಧವಾನ್ ॥೨೫.೦೨॥

 

ವಿಸಸರ್ಜ್ಜ ಧನುಃ ಪಾಪಾಶಙ್ಕೀ ತತ್ರಾSಹ ಮಾಧವಃ ।

ಸ್ವಧರ್ಮ್ಮೋ ದುಷ್ಟದಮನಂ ಧರ್ಮ್ಮಜ್ಞಾನಾನುಪಾಲನಮ್ ॥೨೫.೦೩ ॥

 

ಕ್ಷತ್ರಿಯಸ್ಯ ತಮುತ್ಸೃಜ್ಯ ನಿನ್ದಿತೋ ಯಾತ್ಯಧೋ ದ್ಧ್ರುವಮ್ ।

‘ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ ॥೨೫.೦೪ ॥

 

‘ಸ್ವಕರ್ಮ್ಮಣಾ ತಮಭ್ಯರ್ಚ್ಚ್ಯ ಸಿದ್ಧಿಂ ವಿನ್ದತಿ ಮಾನವಃ’ ।

ನಚ ಶೋಕಸ್ತ್ವಯಾ ಕಾರ್ಯ್ಯೋ ಬನ್ಧೂನಾಂ ನಿಧನೇಕ್ಷಯಾ ॥೨೫.೦೫ ॥

 

ದೇಹಸ್ಯ ಸರ್ವಥಾ ನಾಶಾದನಾಶಾಚ್ಚೇತನಸ್ಯ ಚ ।

ಸೃಷ್ಟಿಸ್ಥಿತ್ಯಪ್ಯಯಾಜ್ಞಾನಬನ್ಧಮೋಕ್ಷಪ್ರವೃತ್ತಯಃ ॥೨೫.೦೬ ॥

 

ಪ್ರಕಾಶನಿಯಮೌ ಚೈವ ಬ್ರಹ್ಮೇಶಾದಿಕ್ಷರಸ್ಯ ಚ ।

ಅಕ್ಷರಪ್ರಕೃತೇಃ ಸನ್ತೋ ಮತ್ತ ಏವ ನಚಾನ್ಯತಃ ॥೨೫.೦೭ ॥

 

ಕೃಷ್ಣನೇ, ಈ ಎರಡು ಸೇನೆಗಳ ಮಧ್ಯದಲ್ಲಿ  ನನ್ನ ರಥವನ್ನು ನಿಲ್ಲಿಸು ಎಂದು ಅರ್ಜುನನಿಂದ ಹೇಳಲ್ಪಟ್ಟ ಶ್ರೀಕೃಷ್ಣನು ಹಾಗೆಯೇ ಮಾಡಿದನು. ಬಂಧುಗಳನ್ನು ನೋಡಿ ಅರ್ಜುನನು ‘ಇದು ಪಾಪದ ಕೆಲಸವೋ ಏನೋ’ ಎಂದು ಮನಸ್ಸಿನಲ್ಲಿ ತಳಮಳ ಹೊಂದಿ  ಬಿಲ್ಲನ್ನು ಕೈಬಿಟ್ಟಾಗ, ಶ್ರೀಕೃಷ್ಣ ಹೇಳುತ್ತಾನೆ: ‘ಕ್ಷತ್ರಿಯರಿಗೆ ಸ್ವಧರ್ಮ ಎಂದರೆ ಧರ್ಮದ ಹಾಗೂ ಜ್ಞಾನದ ಪಾಲನೆ. ಹಾಗಾಗಿ ಅವರು ಸ್ವಧರ್ಮವನ್ನು ಬಿಟ್ಟರೆ ಲೋಕದ ನಿಂದೆಗೆ ಒಳಗಾಗಿ ಅಧೋಗತಿಯನ್ನು ಹೊಂದುತ್ತಾರೆ. ಯಾವ ಪರಮಾತ್ಮನಿಂದ ಎಲ್ಲಾ ಪ್ರಾಣಿಗಳ ತೊಡಗುವಿಕೆಯೋ, ಯಾರಿಂದ ಇವೆಲ್ಲವೂ ವ್ಯಾಪಿಸಲ್ಪಟ್ಟಿದೆಯೋ, ಯಾರು ಇದೆಲ್ಲವನ್ನೂ ಕೂಡಾ ಹಬ್ಬಿ ನಿಂತಿದ್ದಾನೋ, ಅವನನ್ನು ತನಗೆ ಯೋಗ್ಯವಾಗಿರುವ ಕರ್ಮದಿಂದ(ಸ್ವಕರ್ಮದಿಂದ) ಪೂಜಿಸಿ ಪ್ರಜ್ಞಾವಂತನು ಸಿದ್ಧಿಯನ್ನು ಹೊಂದುತ್ತಾನೆ.

ನೀನು ಬಂಧುಗಳು ಸಾಯುತ್ತಾರೆ ಎಂದು ಶೋಕಪಡಬೇಡ. ದೇಹ ಹೇಗೂ ನಾಶವಾಗುತ್ತದೆ, ಆದರೆ ಚೇತನ(ಜೀವ) ಎಂದೂ ನಾಶವಾಗುವುದಿಲ್ಲ.  ಸೃಷ್ಟಿ, ಸ್ಥಿತಿ, ಪ್ರಳಯ, ಅಜ್ಞಾನ, ಬಂಧ, ಮೋಕ್ಷ, ಪ್ರವೃತ್ತಿ, ಪ್ರಕಾಶ, ನಿಯಮ, ಮೊದಲಾದವುಗಳು ಲಕ್ಷ್ಮೀದೇವಿಗೂ, ಬ್ರಹ್ಮ ಮೊದಲಾದ ಕ್ಷರ-ಪುರುಷರಿಗೂ ನನ್ನಿಂದಲೇ ಆಗುತ್ತವೆ.

 

ನ ಮೇ ಕುತಶ್ಚಿತ್ ಸರ್ಗ್ಗಾದ್ಯಾಃ ಸ್ವಾತನ್ತ್ರ್ಯಾದ್ ಗುಣಪೂರ್ತ್ತಿತಃ ।

ಅತಃ ಸಮಾಧಿಕಾಭಾವಾನ್ಮಮ ಮದ್ವಶಮೇವ ಚ ॥೨೫.೦೮ ॥

 

ನಾನು ಬೇರೊಬ್ಬರ ವಶನಲ್ಲದಿರುವುದರಿಂದ(ಸರ್ವಸ್ವತಂತ್ರನಾಗಿರುವುದರಿಂದ), ಗುಣಗಳಿಂದ ತುಂಬಿರುವುದರಿಂದ, ನನಗೆ ಸಮನಾಗಲೀ ಮಿಗಿಲಾಗಲೀ ಇಲ್ಲದಿರುವುದರಿಂದ,  ಈ ಪ್ರಪಂಚ ನನ್ನ ವಶದಲ್ಲಿ ಇರುವುದರಿಂದಾಗಿ, ಯಾರಿಂದಲೂ ನನಗೆ ಸೃಷ್ಟಿ ಮೊದಲಾದವುಗಳು ಇಲ್ಲ.  

 

ಜ್ಞಾತ್ವೈಷಾಂ ನಿಧನಾದ್ಯಂ ಚ ಜೀವಾದೇರಸ್ವತನ್ತ್ರತಾಮ್ ।

ಅಸ್ವಾತನ್ತ್ರ್ಯನ್ನಿವೃತ್ತೌ ಚ ‘ಮಾಮನುಸ್ಮರ ಯುದ್ಧ್ಯ ಚ’ ॥೨೫. ೦೯ ॥

 

ಇವರೆಲ್ಲರ ಹುಟ್ಟು-ಸಾವು ಮೊದಲಾದವುಗಳು ನನ್ನ ಅಧೀನವಾಗಿದೆ ಎನ್ನುವುದನ್ನು ತಿಳಿದು, ಜೀವಾದಿಗಳಿಗೆ ಅಸ್ವಾತಂತ್ರ್ಯವನ್ನು ತಿಳಿದು, ಯುದ್ಧಮಾಡದೇ ಹಿಂತಿರುಗಲೂ ನಿನಗೆ ಸ್ವಾತಂತ್ರ್ಯ ಇಲ್ಲದಿರುವುದರಿಂದ  ನನ್ನನ್ನು ಸ್ಮರಣೆ ಮಾಡು, ಯುದ್ಧಮಾಡು ಕೂಡಾ.

 

ಯೇ ತು ಸರ್ಮಾಣಿ ಕರ್ಮ್ಮಾಣಿ ಮಯಿ ಸನ್ನ್ಯಸ್ಯ ಮತ್ಪರಾಃ ।

‘ಅನನ್ಯೇನೈವ ಯೋಗೇನ ಮಾಂ ದ್ಧ್ಯಾಯನ್ತ ಉಪಾಸತೇ ॥ ೨೫.೧೦ ॥

 

‘ತೇಷಾಮಹಂ ಸಮುದ್ಧರ್ತ್ತಾ ಮೃತ್ಯುಸಂಸಾರಸಾಗರಾತ್ ।

‘ಭವಾಮಿ ನಚಿರಾತ್ ಪಾರ್ತ್ಥ ಮಯ್ಯಾವೇಶಿತಚೇತಸಾಮ್ ॥೨೫.೧೧ ॥

 

ಯಾರು ತಮ್ಮೆಲ್ಲಾ ಕರ್ಮಗಳನ್ನು ನನ್ನಲ್ಲಿ ಸಮರ್ಪಿಸಿ, ಅನನ್ಯ ಭಕ್ತಿಯಿಂದ ನನ್ನನ್ನು ಧ್ಯಾನಿಸುತ್ತಾ ಉಪಾಸನೆ ಮಾಡುತ್ತಾರೋ, ಅವರನ್ನು ನಾನು ಮೃತ್ಯು-ಸಂಸಾರ ಎಂಬ ಸಾಗರದಿಂದ ಮೇಲೆತ್ತುತ್ತೇನೆ.  

 

‘ಮಯಾ ತತಮಿದಂ ಸರ್ವಂ ಜಗದವ್ಯಕ್ತ ಮೂರ್ತ್ತಿನಾ ।

‘ಮತ್ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ’ ॥ ೧೨ ॥

 

ಅವ್ಯಕ್ತಮೂರ್ತಿಯಾದ ನನ್ನಿಂದ ಇಡೀ ಪ್ರಪಂಚವು ವ್ಯಾಪಿಸಲ್ಪಟ್ಟಿದೆ. ಎಲ್ಲರೂ ಕೂಡಾ ನನ್ನನ್ನು ಆಶ್ರಯಿಸಿಕೊಂಡಿದ್ದಾರೆ. ಆದರೆ  ನಾನು ಅವರಲ್ಲಿ ಆಶ್ರಿತನಾಗಿಲ್ಲ.

 

ಸುಪೂರ್ಣ್ಣಸತ್ಸರ್ವಗುಣದೇಹೋsಹಂ ಸರ್ವದಾ ಪ್ರಭುಃ ।

ಅಸ್ಪೃಷ್ಟಾಖಿಲದೋಷೈಕನಿತ್ಯಸತ್ತನುರವ್ಯಯಃ ॥ ೨೫.೧೩ ॥

 

ನಾನು ಸರ್ವಕಾಲದಲ್ಲಿಯೂ ಪರಿಪೂರ್ಣವಾದ, ನಿರ್ದುಷ್ಟವಾದ, ಎಲ್ಲಾ ರೀತಿಯ ಗುಣವೇ ಮೈವೆತ್ತು ಬಂದವನು. ಯಾವಾಗಲೂ ನಾನು ಸರ್ವಸ್ವತಂತ್ರ.  ನನ್ನಲ್ಲಿ ಯಾವುದೇ ದೋಷಗಳಿಲ್ಲ. ನಿತ್ಯವಾದ, ಶೋಭಾನವಾದ, ನಾಶವಿಲ್ಲದ ಸ್ವರೂಪವುಳ್ಳವನು ನಾನು’.

 

ಇತ್ಯುಕ್ತೋ ವಾಸವಿಃ ಪ್ರಾಹ ವ್ಯಾಪ್ತಂ ತೇ ದರ್ಶಯೇಶ ಮೇ ।

ಅಥ ದಿವ್ಯದೃಶಂ ತಸ್ಯ ದತ್ವಾ ವ್ಯಾಪ್ತಂ ನಿಜಂ ವಪುಃ  ॥ ೨೫.೧೪ ॥

 

ಈರೀತಿಯಾಗಿ ಹೇಳಲ್ಪಟ್ಟ ಅರ್ಜುನನು – ‘ಓ ಒಡೆಯನೇ, ನಿನ್ನ ಎಲ್ಲೆಡೆ ಹರಡಿದ ರೂಪವನ್ನು ನನಗೆ ತೋರಿಸು’ ಎಂದು ಕೃಷ್ಣನನ್ನು ಬೇಡಿದನು. ಆಗ ಶ್ರೀಕೃಷ್ಣನು ಅರ್ಜುನನಿಗೆ ದೇವರನ್ನು ಕಾಣಬಲ್ಲ  ಅಲೌಕಿಕವಾದ ಕಣ್ಣನ್ನು ಕೊಟ್ಟು, ಎಲ್ಲೆಡೆ ಹರಡಿದ ತನ್ನ ರೂಪವನ್ನು ತೋರಿದನು.

 

ದೇಶತಃ ಕಾಲತಶ್ಚೈವ ಪೂರ್ಣ್ಣಂ ಸರ್ವಗುಣೈಃ ಸದಾ ।

ದರ್ಶಯಾಮಾಸ ಭಗವಾನ್ ಯಾವತ್ಯರ್ಜ್ಜುನಯೋಗ್ಯತಾ ॥ ೨೫.೧೫ ॥

 

ಸರ್ವತ್ರವ್ಯಾಪ್ತವಾಗಿರುವ, ಎಲ್ಲಾ ಕಾಲದಲ್ಲೂ ಇರುವ, ಸರ್ವಗುಣಪೂರ್ಣವಾಗಿರುವ ತನ್ನ ವಿಶ್ವರೂಪವನ್ನು, ಅರ್ಜುನನಯೋಗ್ಯತೆಯ ಮಟ್ಟಕ್ಕೆ ಅನುಗುಣವಾಗಿ ಶ್ರೀಕೃಷ್ಣ ತೋರಿದ.

 

ತತ್ಪ್ರಾರ್ತ್ಥಿತಃ ಪುನಃ ಕೃಷ್ಣಸ್ತದ್ ರೂಪಂ ಲೋಕಮಾನತಃ ।

ಪೂರ್ವವದ್ ದರ್ಶಯಾಮಾಸ ಪುನಶ್ಚೈನಮಶಿಕ್ಷಯತ್ ॥ ೨೫.೧೬ ॥

 

ಪುನಃ ಅರ್ಜುನನಿಂದ ಬೇಡಲ್ಪಟ್ಟವನಾದ ಶ್ರೀಕೃಷ್ಣನು  (‘ನನ್ನಿಂದ ನಿನ್ನ ಈ ವಿಶ್ವರೂಪವನ್ನು ನೋಡಲಾಗುತ್ತಿಲ್ಲ, ದಯವಿಟ್ಟು ಆಚ್ಛಾದನೆ ಮಾಡಿ ಮೊದಲಿನಂತೆ ಕಾಣಿಸು’ ಎಂದು ಅರ್ಜುನನಿಂದ ಪ್ರಾರ್ಥಿಸಲ್ಪಟ್ಟ ಶ್ರೀಕೃಷ್ಣನು) ಹಿಂದಿನಂತೆಯೇ, ಆಕಾಲದ ರೂಪದಂತೆ ತೋರಿದ ಮತ್ತು ಅರ್ಜುನನಿಗೆ  ಅನೇಕ ಸಂಗತಿಗಳನ್ನು ಉಪದೇಶಿಸಿದ.   

 

ಜ್ಞಾನಜ್ಞೇಯಪ್ರಕೃತ್ಯಾದಿ ಜ್ಞಾಪಯನ್ ಪುರುಷೋತ್ತಮಃ ।

ತೇನಾನುಶಿಷ್ಟಃ ಪಾರ್ತ್ಥಸ್ತು ಸಶರಂ ಧನುರಾದದೇ ॥ ೨೫.೧೭ ॥

 

ಜ್ಞಾನವೆಂದರೇನು, ತಿಳಿಯಲೇ ಬೇಕಾದ ಸಂಗತಿ ಯಾವುದು, ಈ ಪ್ರಕೃತಿ ನಮ್ಮನ್ನು ಯಾವ ರೀತಿ ವ್ಯಾಪಿಸಿದೆ ಮತ್ತು ಅದನ್ನು ಮೀರುವ ಬಗೆ ಹೇಗೆ, ಇತ್ಯಾದಿಯಾದ ಅರ್ಜುನನಿಗೆ ಹಿಂದೆ ತಿಳಿದಿರುವುದನ್ನೇ ನೆನಪಿಸುತ್ತಾ, ಶ್ರೀಕೃಷ್ಣ ಶಿಕ್ಷಣವನ್ನು ಕೊಟ್ಟ. ಶ್ರೀಕೃಷ್ಣನಿಂದ ಶಿಕ್ಷಿಸಲ್ಪಟ್ಟ ಅರ್ಜುನನು ಬಿಲ್ಲು ಬಾಣಗಳನ್ನು ಹಿಡಿದು ಯುದ್ಧಕ್ಕೆ ಸನ್ನದ್ಧನಾದ.

No comments:

Post a Comment