ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, January 29, 2023

Mahabharata Tatparya Nirnaya Kannada 25-82-95

 

ತತ್ರಾSಸದನ್ನಾಗಸುತಾಸಮುದ್ಭವಃ ಪಾರ್ತ್ಥಾತ್ಮಜಃ ಶಾಕುನೇಯಾನ್ ಷಳೇಕಃ ।

ತೈಃ ಪ್ರಾಸಹಸ್ತೈಃ ಕ್ಷತಕಾಯೋSತಿರೂಢಕೋಪಃ ಸ ಖಡ್ಗೇನ ಚಕರ್ತ್ತ ತೇಷಾಮ್ ॥ ೨೫.೮೨॥

 

ಶಿರಾಂಸಿ ವೀರೋ ಬಲವಾನಿರಾವಾನ್  ಭಯಂ ದಧದ್ ಧಾರ್ತ್ತರಾಷ್ಟ್ರೇಷು ಚೋಗ್ರಮ್ ।

ದೃಷ್ಟ್ವಾ ತಮುಗ್ರಂ ಧೃತರಾಷ್ಟ್ರಪುತ್ರೋ ದಿದೇಶ ರಕ್ಷೋSಲಮ್ಭುಸನಾಮಧೇಯಮ್ ॥ ೨೫.೮೩॥

 

ಜಹ್ಯಾರ್ಜ್ಜುನಿಂ ಕ್ಷಿಪ್ರಮಿತಿ ಸ್ಮ ತಚ್ಚ ಸಮಾಸದನ್ನಾಗಸುತಾತನೂಜಮ್ ।

ತಯೋರಭೂದ್ ಯುದ್ಧಮತೀವ ದಾರುಣಂ ಮಾಯಾಯುಜೋರ್ವೀರ್ಯ್ಯವತೋರ್ಮ್ಮಹಾದ್ಭುತಮ್ ॥೨೫.೮೪॥

 

ಆ ದಿನದ ಯುದ್ಧದಲ್ಲಿ ಉಲೂಪಿಕೆಯಲ್ಲಿ ಹುಟ್ಟಿದ ಅರ್ಜುನನ ಮಗನಾದ ಇರಾವಂತನು ಆರು ಜನ ಶಕುನಿಯ ಮಕ್ಕಳನ್ನು ಯುದ್ಧಕ್ಕೆಂದು ಎದುರುಗೊಂಡ. ಈಟಿಯನ್ನು ಹಿಡಿದ ಶಕುನಿಪುತ್ರರಿಂದ ಗಾಯಗೊಂಡ ಮೈಯುಳ್ಳವನಾದ ಇರಾವಂತನು, ಉಕ್ಕಿಬಂದ ಸಿಟ್ಟುಳ್ಳವನಾಗಿ ಕತ್ತಿಯಿಂದ ಅವರೆಲ್ಲರ ಕತ್ತನ್ನು ಕತ್ತರಿಸಿದ. ವೀರನೂ, ಬಲಿಷ್ಠನೂ ಆದ ಇರಾವಂತ ದುರ್ಯೋಧನಾದಿಗಳಲ್ಲಿ ಭಯವನ್ನುಂಟುಮಾಡಿದ. ಉಗ್ರವಾಗಿ ಹೋರಾಡುತ್ತಿರುವ ಇರಾವಂತನನ್ನು ಕಂಡ ದುರ್ಯೋಧನನು ಅಲಂಬುಸ ಎನ್ನುವ ಹೆಸರಿನ ರಾಕ್ಷಸನಿಗೆ ‘ಅರ್ಜುನನ ಮಗನನ್ನು ಕೂಡಲೇ ಕೊಲ್ಲು’ ಎಂದು ಆಜ್ಞೆಮಾಡಿದ. ಅಲಂಬುಸನು ಉಲೂಪಿಯ ಮಗನಾದ ಇರಾವಂತನನ್ನು ಎದುರುಗೊಂಡ. ಮಾಯಾವಿದ್ಯೆಯನ್ನು ಬಲ್ಲ ಅವರಿಬ್ಬರ ನಡುವೆ ಅತ್ಯಂತ ಭಯಂಕರವಾದ, ಅದ್ಭುತ ಯುದ್ಧ ನಡೆಯಿತು.

 

ಸಸಾದಿನೋSಶ್ವಾನ್ ಸ ತು ರಾಕ್ಷಸೋSಸೃಜತ್ ತೇ ಪಾರ್ತ್ಥಪುತ್ರಸ್ಯ ಚ ಸಾದಿನೋSಹನನ್ ।

ತತಸ್ತ್ವನನ್ತಾಕೃತಿಮಾಪ್ತಮಾರ್ಜ್ಜುನಿಂ ಸುಪರ್ಣ್ಣರೂಪೋSಹನದಾಶು ರಾಕ್ಷಸಃ ॥ ೨೫.೮೫॥

 

ಈ ರಾಕ್ಷಸನಾದರೋ, ತನ್ನ ಮಾಯೆಯಿಂದ ಅಶ್ವಾರೂಢರಿಂದ ಕೂಡಿರುವ ಕುದುರೆಗಳನ್ನು ಸೃಷ್ಟಿ ಮಾಡಿದನು. ಅವರು ಇರಾವಂತನ ಸೈನಿಕರನ್ನು ಕೊಂದರು. ತದನಂತರ ಸರ್ಪದ ರೂಪವನ್ನು  ಹೊಂದಿದ ಇರಾವಂತನನ್ನು ಅಲಂಬುಸ ಸುಪರ್ಣ(ಗರುಡ)ನ ರೂಪನಾಗಿ ಕೊಂದ.

 

ಹತಂ ನಿಶಮ್ಯಾSರ್ಜ್ಜುನಿಮುಗ್ರಪೌರುಷೋ ನನಾದ ಕೋಪೇನ ವೃಕೋದರಾತ್ಮಜಃ ।

ಚಚಾಲ ಭೂರ್ನ್ನಾನದತೋSಸ್ಯ ರಾವತಃ ಸಸಾಗರಾಗೇನ್ದ್ರನಗಾ ಭೃಶಂ ತದಾ ॥ ೨೫.೮೬॥

 

ಉಗ್ರವಾದ ಪರಾಕ್ರಮವುಳ್ಳ ಘಟೋತ್ಕಚನು ಅರ್ಜುನನ ಮಗನಾಗಿರುವ ಇರಾವಂತ ಸತ್ತಾ ಎಂದು ಕೇಳಿ, ಕೋಪದಿಂದ ಗರ್ಜಿಸಿದನು. ಅವನ ಘರ್ಜನೆಗೆ ಸಮುದ್ರ, ಪರ್ವತ, ಮರಗಳಿಂದ ಕೂಡಿರುವ ಭೂಮಿಯು ಕಂಪಿಸಿತು.

[ಮಹಾಭಾರತ ಘಟೋತ್ಕಚನ ಘರ್ಜನೆಯನ್ನು ಹೀಗೆ ವರ್ಣಿಸಿದೆ: ‘ನದತಸ್ತಸ್ಯ ಶಬ್ದೇನ ಪೃಥಿವೀ ಸಾಗರಾಮ್ಬರಾ । ಸಪರ್ವತವನಾ  ರಾಜಂಶ್ಚಚಾಲ ಸುಭೃುಶಂ ತದಾ’ (ಭೀಷ್ಮಪರ್ವ ೯೧.೩)]

 

ಅಲಮ್ಬುಸಸ್ತಂ ಪ್ರಸಮೀಕ್ಷ್ಯ ಮಾರುತೇಃ ಸುತಂ ಬಲಾಢ್ಯಂ ಭಯತಃ ಪರಾದ್ರವತ್ ।

ಪರಾದ್ರವನ್ ಧಾರ್ತ್ತರಾಷ್ಟ್ರಸ್ಯ ಸೇನಾಃ ಸರ್ವಾಸ್ತಮಾರಾಥ ಸುಯೋಧನೋ ನೃಪಃ ॥ ೨೫.೮೭॥

 

ಅಂತಹ ಬಲದಿಂದ ಕೂಡಿರುವ ಘಟೋತ್ಕಚನನ್ನು ಕಂಡ ಅಲಂಬುಸನು ಭಯದಿಂದ ಕಾಲಿಗೆ ಬುದ್ಧಿಹೇಳಿದನು. ದುರ್ಯೋಧನನ ಬೆಂಗಾವಲು ಪಡೆ ಕೂಡಾ ಓಡಿಹೋಯಿತು. ಎಲ್ಲರೂ ಓಡಿಹೋಗಲು, ದುರ್ಯೋಧನನು ಘಟೋತ್ಕಚನನ್ನು ಹೊಂದಿದನು.

 

ಸ ಭೀಮಪುತ್ರಸ್ಯ ಜಘಾನ ಮನ್ತ್ರಿಣೋ ಮಹಾಬಲಾಂಶ್ಚತುರೋSನ್ಯಾಂಸ್ತಥೈವ ।

ಹತಾವಶೇಷೇಷು ಚ ವಿದ್ರವತ್ಸು ಘಟೋತ್ಕಚೋSಭ್ಯಾಹನದಾಶು ತಂ ನೃಪಮ್ ॥ ೨೫.೮೮॥

 

ದುರ್ಯೋಧನನು ಘಟೋತ್ಕಚನ ಮಹಾಬಲವುಳ್ಳ ನಾಲ್ಕುಜನ ಮಂತ್ರಿಗಳನ್ನು ಕೊಂದ. [‘ವೇಗವನ್ತಂ ಮಹಾರೌದ್ರಂ ವಿದ್ಯುಜ್ಜಿಹ್ವಂ ಪ್ರಮಾಥಿನಮ್ । ಶರೈಶ್ಚತುರ್ಭಿಶ್ಚತುರೋ ನಿಜಘಾನ ಮಹಾಬಲಃ’ (ಭೀಷ್ಮಪರ್ವ ೯೧.೨೦)]. ಅಷ್ಟೇ ಅಲ್ಲಾ, ಉಳಿದ ಅನೇಕರನ್ನು ಕೊಂದ ಕೂಡಾ.  ಅಳಿದುಳಿದ ಬೆಂಗಾವಲುಪಡೆ ಓಡಲು, ಘಟೋತ್ಕಚ ದುರ್ಯೋಧನನನ್ನು ಬಲವಾಗಿ ಹೊಡೆದ. 

 

ಸ ಪೀಡ್ಯಮಾನೋ ಯುಧಿ ತೇನ ರಕ್ಷಸಾ ಪ್ರವೇಶಯಾಮಾಸ ಶರಂ ಘಟೋತ್ಕಚೇ ।

ದೃಢಾಹತಸ್ತೇನ ತದಾ ಬಲೀಯಸಾ ಘಟೋತ್ಕಚಃ ಪ್ರವ್ಯಥಿತೇನ್ದ್ರಿಯೋ ಭೃಶಮ್ ।

ತಸ್ಥೌ ಕಥಞ್ಚಿದ್ ಭುವಿ ಪಾತ್ಯಮಾನಃ ಪುನಃ ಶರಾನಪ್ಯಸೃಜತ್ ಸುಯೋಧನೇ ॥ ೨೫.೮೯॥

 

ಯುದ್ಧದಲ್ಲಿ ಘಟೋತ್ಕಚನಿಂದ ವಿಪರೀತ ಪೀಡೆಗೆ ಒಳಗಾದ ದುರ್ಯೋಧನನು ಘಟೋತ್ಕಚನ ದೇಹದೊಳಗೆ ಬಾಣವನ್ನು ತೂರಿದನು. ಆ ಬಾಣದಿಂದ ಗಟ್ಟಿಯಾಗಿ ಹೊಡೆಯಲ್ಪಟ್ಟ ಘಟೋತ್ಕಚನು ನೋವುಳ್ಳ ಇಂದ್ರಿಯದವನಾಗಿ ರಥದಿಂದ ಕೆಳಗೆ ಭೂಮಿಯಲ್ಲಿ ಬೀಳಿಸಲ್ಪಟ್ಟವನಾದರೂ,   ಹೇಗೋ ಕಷ್ಟಪಟ್ಟು ಒಂದುಕಡೆ ನಿಂತ ಅವನು ದುರ್ಯೋಧನನಲ್ಲಿ ಬಾಣಗಳನ್ನು ಬಿಟ್ಟ.

 

ಚಿರಪ್ರಯುದ್ಧೌ ನೃಪರಾಕ್ಷಸಾಧಿಪೌ ಪರಸ್ಪರಾಜೇಯತಮೌ ರಣಾಜಿರೇ ।

ದ್ರೋಣಾದಯೋ ವಿಕ್ಷ್ಯ ರಿರಕ್ಷಿಷನ್ತಃ ಸುಯೋಧನಂ ಪ್ರಾಪುರಮಿತ್ರಸಾಹಾಃ ॥ ೨೫.೯೦॥

 

ರಾಕ್ಷಸಾದಿಪನಾಗಿರುವ ಘಟೋತ್ಕಚ ಹಾಗೂ ರಾಜನಾಗಿರುವ ದುರ್ಯೋಧನ ಬಹಳ ಕಾಲ ಯುದ್ಧಮಾಡುತ್ತಿದ್ದರು ಮತ್ತು ಪರಸ್ಪರವಾಗಿ ಜಯಿಸಲು ಅಶಕ್ಯರಾಗಿದ್ದರು. ಇದನ್ನು ಕಂಡ ದ್ರೋಣಾದಿಗಳು ದುರ್ಯೋಧನನನ್ನು ರಕ್ಷಿಸಲು ಬಯಸಿ ಅವನನ್ನು ಹೊಂದಿದರು.

 

ಸ ದ್ರೋಣಶಲ್ಯೌ ಗುರುಪುತ್ರಗೌತಮೌ ಭೂರಿಶ್ರವಃಕೃತವರ್ಮ್ಮಾದಿಕಾಂಶ್ಚ ।

ವವರ್ಷ ಬಾಣೈರ್ಗ್ಗಗನಂ ಸಮಾಶ್ರಿತೋ ಘಟೋತ್ಕಚಃ ಸ್ಥೂಲತಮೈಃ ಸುವೇಗೈಃ ॥ ೨೫.೯೧॥

 

ಆ ಘಟೋತ್ಕಚನು ಆಕಾಶದಲ್ಲಿಯೇ ಇದ್ದು, ದ್ರೋಣ, ಶಲ್ಯ, ಅಶ್ವತ್ಥಾಮ, ಕೃಪ, ಭೂರಿಶ್ರವಸ್ಸು, ಕೃತವರ್ಮ ಮೊದಲಾದವರ ಮೇಲೆ  ಬಹಳ ದಪ್ಪವಾಗಿರುವ, ಅತ್ಯಂತ ವೇಗದಿಂದ ಕೂಡಿರುವ ಬಾಣಗಳ ಮಳೆಗರೆದನು.

 

ತಮೇಕಮಗ್ರ್ಯೈ ರಥಿಭಿಃ ಪರಿಷ್ಕೃತಂ ನಿರೀಕ್ಷ್ಯ ಭೀಮೋSಭ್ಯಗಮತ್ ಸಮಸ್ತಾನ್ ।

ದ್ರೋಣೋSತ್ರ ಭೀಮಪ್ರಹಿತೈಃ ಶರೋತ್ತಮೈಃ ಸುಪೀಡಿತಃ ಪ್ರಾಪ್ತಮೂರ್ಚ್ಛಃ ಪಪಾತ ॥ ೨೫.೯೨॥

 

ಶ್ರೇಷ್ಠವಾದ ರಥಿಗಳಿಂದ ಘಟೋತ್ಕಚನೊಬ್ಬನೇ ಸುತ್ತುವರಿಯಲ್ಪಟ್ಟಿದ್ದಾನೆ ಎನ್ನುವುದನ್ನು ತಿಳಿದ  ಭೀಮಸೇನನು ಅವರೆಲ್ಲರನ್ನೂ ಎದುರುಗೊಂಡ. ಆ ಯುದ್ಧದಲ್ಲಿ ದ್ರೋಣಾಚಾರ್ಯರು ಭೀಮನ ಬಾಣಗಳಿಂದ ಪೀಡಿತರಾಗಿ ಮೂರ್ಛೆಯನ್ನು ಹೊಂದಿ ಬಿದ್ದರು.

[ಮಹಾಭಾರತದ ಭೀಷ್ಮಪರ್ವದಲ್ಲಿ ಈ ಕುರಿತು ಹೀಗೆ ಹೇಳಿದ್ದಾರೆ: ‘ತಂ ಪ್ರತ್ಯವಿಧ್ಯದ್ ದಶಭಿರ್ಭಿಮಸೇನಃ ಶಿಲೀಮುಖೈಃ’ (೯೪.೧೮),  ಸ ಗಾಢವಿದ್ಧೋ ವ್ಯಥಿತೋ  ವಯೋವೃದ್ಧಶ್ಚ ಭಾರತ  ಪ್ರನಷ್ಟಸಞ್ಜ್ಞಃ  ಸಹಸಾ ರಥೋಪಸ್ಥ ಉಪಾವಿಶತ್’ (೧೯) ಹತ್ತು ಬಾಣಗಳಿಂದ ಭೀಮಸೇನ ಹೊಡೆದಾಗ ವಯೋವೃದ್ಧನಾದ ದ್ರೋಣ  ಬಹಳ ಖತಿಗೊಂಡು ರಥದ ಕಂಬಕ್ಕೆ ಒರಗಿ ಕುಸಿದು ಕುಳಿತ].

 

ದ್ರೌಣಿಂ ಕೃಪಾದ್ಯಾನ್ ಸಸುಯೋಧನಾಂಶ್ಚ ಚಕಾರ ಭೀಮೋ ವಿರಥಾನ್ ಕ್ಷಣೇನ ।

ನಿವಾರ್ಯ್ಯಮಾಣಾಂಸ್ತು ವೃಕೋದರೇಣ ಘಟೋತ್ಕಚಸ್ತಾನ್ ಪ್ರವವರ್ಷ ಸಾಯಕೈಃ ॥ ೨೫.೯೩॥

 

ಮತ್ತೆ ಅಶ್ವತ್ಥಾಮ, ಕೃಪ, ದುರ್ಯೋಧನ, ಮೊದಲಾದವರನ್ನು ಭೀಮಸೇನನು ಕ್ಷಣದಲ್ಲಿ ರಥಹೀನರನ್ನಾಗಿ ಮಾಡಿದ. ವೃಕೋದರನಿಂದ ವೇಗವನ್ನು ತಗ್ಗಿಸಿಕೊಂಡ ಅವರೆಲ್ಲರನ್ನೂ ಘಟೋತ್ಕಚ ಹೊಡೆದ.  

 

ತೇನಾಮ್ಬರಸ್ಥೇನ ತರುಪ್ರಮಾಣೈರಭ್ಯರ್ದ್ದಿತಾಃ ಕುರವಃ ಸಾಯಕೌಘೈಃ ।

ಭೂಮೌ ಚ ಭೀಮೇನ ಶರೌಘಪೀಡಿತಾಃ ಪೇತುರ್ನ್ನೇದುಃ ಪ್ರಾದ್ರವಂಶ್ಚಾತಿಭೀತಾಃ ॥ ೨೫.೯೪॥

 

ಆಕಾಶದಲ್ಲಿರುವ ಘಟೋತ್ಕಚ ಬಿಟ್ಟ ದೊಡ್ಡ ಮರದಂತೆ ಇರುವ ಬಾಣಗಳಿಂದ ಕೌರವರು ಗಾಯಗೊಂಡರು. ಭೂಮಿಯಲ್ಲಿ ಭೀಮಸೇನನ ಬಾಣಗಳಿಂದ ಅವರು ಪೀಡಿತರಾಗಿ ಬಿದ್ದರು. ಅವರು  ಕಿರುಚುತ್ತಾ ಓಡಿದರು ಕೂಡಾ.

 

ಸರ್ವಾಂಶ್ಚ ತಾಞ್ಚಿಬಿರಂ ಪ್ರಾಪಯಿತ್ವಾ ವಿನಾ ಭೀಷ್ಮಂ ಕೌರವಾನ್ ಭೀಮಸೇನಃ ।

ಘಟೋತ್ಕಚಶ್ಚಾನದತಾಂ ಮಹಾಸ್ವನೌ ನಾದೇನ ಲೋಕಾನಭಿಪೂರಯನ್ತೌ ॥ ೨೫.೯೫॥

 

ಹೀಗೆ ಭೀಷ್ಮನನ್ನು ಬಿಟ್ಟು ಇತರರೆಲ್ಲರನ್ನೂ ಶಿಬಿರಕ್ಕೆ ಕಳುಹಿಸಿದ ಭೀಮಸೇನ ಮತ್ತು ಘಟೋತ್ಕಚರಿಬ್ಬರೂ ತಮ್ಮ ಮಹತ್ತಾದ ಧ್ವನಿಯಿಂದ ಇಡೀ ರಣಭೂಮಿ ತುಂಬುವಂತೆ ಗರ್ಜಿಸಿದರು.

No comments:

Post a Comment