ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, January 28, 2023

Mahabharata Tatparya Nirnaya Kannada 25-72-81

 

ತತಃ ಪರೇದ್ಯುಃ ಪುನರೇವ ಭೀಮಭೀಷ್ಮೌ ಪುರಸ್ಕೃತ್ಯ ಸಮೀಯತುಸ್ತೇ ।

ಸೇನೇ ತದಾ ಸಾರಥಿಹೀನಮಾಶು ಭೀಷ್ಮಂ ಕೃತ್ವಾ ಮಾರುತಿರಭ್ಯಗಾತ್ ಪರಾನ್ ॥ ೨೫.೭೨॥

 

ಮಾರನೇ ದಿವಸ ಮತ್ತೆ ಭೀಮ ಹಾಗೂ ಭೀಷ್ಮಾಚಾರ್ಯರನ್ನು ಮುಂದೆ ಇಟ್ಟುಕೊಂಡು ಆ ಕೌರವ-ಪಾಂಡವ ಸೇನೆಯು ಯುದ್ಧಕ್ಕಾಗಿ ಸೇರಿತು. ಆಗ ಭೀಮಸೇನನು ಶೀಘ್ರದಲ್ಲಿ ಭೀಷ್ಮಾಚಾರ್ಯರನ್ನು ಸಾರಥಿಹೀನನನ್ನಾಗಿ ಮಾಡಿ ಶತ್ರುಗಳನ್ನು ಎದುರಿಸಿದನು.

 

ನಿಪಾತಿತಾಸ್ತೇನ ರಥೇಭವಾಜಿನಃ ಪ್ರದುದ್ರುವುಶ್ಚಾವಶಿಷ್ಟಾಃ ಸಮಸ್ತಾಃ ।

ದುರ್ಯ್ಯೋಧನಾದ್ಯೇಷು ಪರಾಜಿತೇಷು ಭೀಷ್ಮದ್ರೋಣದ್ರೌಣಿಪುರಸ್ಸರೇಷು ॥ ೨೫.೭೩॥

 

ಅಂತಹ ಭೀಮಸೇನನಿಂದ ರಥಗಳು, ಆನೆಗಳು, ಕುದುರೆಗಳು, ಇವುಗಳಲ್ಲಿರುವ ವೀರರು, ಹೀಗೆ  ಎಲ್ಲವೂ ಕೂಡಾ ಕೆಡವಲ್ಪಟ್ಟವು. ಭೀಷ್ಮ, ದ್ರೋಣ, ಅಶ್ವತ್ಥಾಮ, ದುರ್ಯೋಧನ ಮೊದಲಾದವರೂ ಕೂಡಾ ಸೋಲುತ್ತಿರಲು, ಉಳಿದವರೆಲ್ಲರೂ ಕೂಡಾ ಓಡಿಹೋದರು.  

 

ಮಹಾಗಜಸ್ಥೋ ಭಗದತ್ತ ಆಗಾದಾಯನ್ ಬಾಣಂ ಭೀಮಸೇನೇSಮುಚಚ್ಚ ।

ತೇನಾತಿವಿದ್ಧೇ ಭೀಮಸೇನೇSಸ್ಯ ಪುತ್ರ ಉದ್ಯಚ್ಛಮಾನಂ ಪಿತರಂ ನಿವಾರ್ಯ್ಯ ॥ ೨೫.೭೪॥

 

ಘಟೋತ್ಕಚೋSಭ್ಯದ್ರವದಾಶು ವೀರಃ ಸ್ವಮಾಯಯಾ ಹಸ್ತಿಚತುಷ್ಟಯಸ್ಥಃ ।

ಸ ವೈಷ್ಣವಾಸ್ತ್ರಂ ಭಗದತ್ತಸಂಸ್ಥಂ ವಿಜ್ಞಾಯ ವಿಷ್ಣೋರ್ವರತೋ ವಿಶೇಷತಃ ॥ ೨೫.೭೫॥

 

ಅಮೋಘಮನ್ಯತ್ರ ಹರೇರ್ಮ್ಮರುತ್ಸುತಃ ಪುತ್ರೇ ಯಾತೇ ನ ಸ್ವಯಮಭ್ಯಧಾವತ್ ।

ಅನುಗ್ರಹಾದಭ್ಯಧಿಕಾದವದ್ಧ್ಯಂ ಜಾನನ್ನಪಿ ಸ್ವಂ ವಾಸುದೇವಸ್ಯ ನಿತ್ಯಮ್  ॥ ೨೫.೭೬॥

 

ತದ್ಭಕ್ತಿವೈಶೇಷ್ಯತ ಏವ ತಸ್ಯ ಸತ್ಯಂ ವಾಕ್ಯಂ ಕರ್ತ್ತುಮರಿಂ ನಚಾಯಾತ್ ।

ಯದಾ ಸ್ವಪುತ್ರೇಣ ಜಿತೋ ಭವೇತ್ ಸ ಕಿಮ್ವಾತ್ಮನೇತ್ಯೇವ ತದಾ ಪ್ರವೇತ್ತುಮ್ ॥ ೨೫.೭೭॥

 

ಆಗ ದೊಡ್ಡ ಆನೆಯಮೇಲೆ ಕುಳಿತ ಭಗದತ್ತನು ಯುದ್ಧಕ್ಕೆಂದು ಬಂದ(ಭಗದತ್ತ ಕುಬೇರನ ಅವತಾರ, ಅವನ ಆನೆ ದಿಗ್ಗಜಗಳಲ್ಲಿ ಒಂದಾದ ಸುಪ್ರತೀಕ. ಅವನು ಮಹಾ ಅಸುರಾವೇಶದಿಂದ ಕೂಡಿದ್ದ).

ಬರುತ್ತಲೇ ಭಗದತ್ತನು ಭೀಮಸೇನನಲ್ಲಿ ಬಾಣಗಳನ್ನು ಬಿಟ್ಟ.  ಭಗದತ್ತನಿಂದ ಭೀಮಸೇನನು ಅತ್ಯಂತ ಉಗ್ರವಾಗಿ ಹೊಡೆಯಲ್ಪಡಲು, ಭೀಮಸೇನನ ಮಗನಾದ ಘಟೋತ್ಕಚನು ಭಗದತ್ತನನ್ನು ಕುರಿತು ಯುದ್ಧ ಮಾಡಲು ಬಂದ. ತಂದೆಯನ್ನು ತಡೆದ ವೀರನಾಗಿರುವ ಘಟೋತ್ಕಚನು ತನ್ನ ಮಾಯೆಯಿಂದ ನಾಲ್ಕು ರೂಪವನ್ನು ಧರಿಸಿ, ನಾಲ್ಕು ಆನೆಗಳಲ್ಲಿ ಒಟ್ಟಿಗೆ ಕುಳಿತು, ಭಗದತ್ತನನ್ನು ಇದಿರುಗೊಂಡ.

(ಏಕೆ ಭೀಮಸೇನ ಭಗದತ್ತನೊಂದಿಗೆ ಯುದ್ಧ ಮುಂದುವರಿಸದೇ ಮಗನಿಗೆ ಅವಕಾಶ ಮಾಡಿಕೊಟ್ಟ ಎಂದರೆ:)  ಭೀಮಸೇನನು ವಿಶೇಷತಃ ಪರಮಾತ್ಮನನ್ನು ಬಿಟ್ಟು ಬೇರೆಯವರಲ್ಲಿ ಎಂದೂ ವ್ಯರ್ಥವಾಗದ, ವಿಷ್ಣುವಿನ ವಿಶೇಷ ವರದಿಂದ ಭಗದತ್ತನು ಪಡೆದಿರುವ ನಾರಾಯಣಾಸ್ತ್ರವಿರುವುದನ್ನು ತಿಳಿದು, ತಾನು ಘಟೋತ್ಕಚನನ್ನು ತಡೆದು ಮುಂದೆ ಹೋಗಲಿಲ್ಲ.

(ಹಾಗಿದ್ದರೆ ಭೀಮಸೇನ ತನ್ನ ಜೀವ ಉಳಿಸಿಕೊಳ್ಳಲು ಹೀಗೆ ಮಾಡಿದನೇ ಎಂದರೆ-) ಶ್ರೀಕೃಷ್ಣ ಪರಮಾತ್ಮನ ಅನುಗ್ರಹದಿಂದ, ಭಗವಂತನ ವಿಶೇಷವಾದ ವರದಿಂದ ತಾನು ಅವಧ್ಯ ಎಂದು ತಿಳಿದೂ ಕೂಡಾ, ಅವನು  ಹೋಗಲಿಲ್ಲ. ಏಕೆಂದರೆ ಪರಮಾತ್ಮನಲ್ಲಿರುವ ವಿಶೇಷವಾದ ಭಕ್ತಿಯಿಂದಲೇ, ಪರಮಾತ್ಮನ ಮಾತನ್ನು ಸತ್ಯವನ್ನಾಗಿ ಮಾಡಲು ಮತ್ತು ‘ಒಂದು ವೇಳೆ ಭಗದತ್ತ ಘಟೋತ್ಕಚನಿಂದ ಸೋತರೆ  ಆಗ ತನ್ನಿಂದ ಪರಾಜಿತನಾಗುವನೆಂದು ಏನು ಹೇಳಬೇಕು’ ಎಂದು ತಿಳಿಸಿಕೊಡುವುದಕ್ಕಾಗಿ  ಭೀಮ ಹೀಗೆ ಮಾಡಿದ.

[ಇದು ಭೀಮಸೇನನ ಯುದ್ಧದ ಹಿನ್ನೆಲೆಯ ಮನಸ್ಥಿತಿ. ನಾರಾಯಣಾಸ್ತ್ರ ವ್ಯರ್ಥವಾಯಿತು ಎಂದಾಗಬಾರದು ಎಂದು, ಪರಮಾತ್ಮನ ಮೇಲಿನ ಭಕ್ತಿಯಿಂದ  ಭೀಮ ಹೀಗೆ ಮಾಡಿದ. ಮಹಾಭಾರತದ ದ್ರೋಣಪರ್ವದಲ್ಲಿ ಈ ಮಾತಿಗೆ ಪ್ರಮಾಣ ಕಾಣಸಿಗುತ್ತದೆ: ದೇವಾನಾಂ ದಾನವಾನಾಂ ಚ ಅವಧ್ಯಸ್ತನಯೋSಸ್ತು ಮೇ । ಉಪೇತೋ ವೈಷ್ಣವಾಸ್ತ್ರೇಣ ತನ್ಮೇ ತ್ವಂ ದಾತುಮರ್ಹಸಿ ।  ಏವಂ ವರಮಹಂ ಶ್ರುತ್ವಾ ಜಗತ್ಯಾಸ್ತನಯೇ ತದಾ । ಅಮೋಘಮಸ್ತ್ರಂ ಪ್ರಾಯಚ್ಛಂ ವೈಷ್ಣವಂ ಪರಮಂ ಪುರಾ । ಅವೋಚಂ ಚೈತದಸ್ತ್ರಂ ವೈ ಹ್ಯಮೋಘಂ ಭವತು ಕ್ಷಮೇ । ನರಕಸ್ಯಾಭಿರಕ್ಷಾರ್ಥಂ ನೈನಂ ಕಶ್ಚಿದ್ ಬಧಿಷ್ಯತಿ (೨೯.೩೭-೩೯). ‘ತಸ್ಮಾತ್ ಪ್ರಾಗ್ಜ್ಯೋತಿಷಂ ಪ್ರಾಪ್ತಂ ತದಸ್ತ್ರಂ ಪಾರ್ಥ ಮಾಮಕಮ್ । ನಾಸ್ಯಾವಧ್ಯೋSಸ್ತಿ ಲೋಕೇಷು ಸೇಂದ್ರರುದ್ರೇಷು ಮಾರಿಷ’ (೪೩)]

 

ಸ ವಿಸ್ಮೃತಾಸ್ತ್ರಸ್ತು ಯದಾ ಭವೇತ ತದಾ ಭೀಮೋ ಭಗದತ್ತಂ ಪ್ರಯಾತಿ ।

ಋತೇ ಭೀಮಂ ವಾSರ್ಜ್ಜುನಂ ನಾಸ್ತ್ರಮೇಷ ಪ್ರಮುಞ್ಚತೀತ್ಯೇವ ಹಿ ವೇದ ಭೀಮಃ ॥ ೨೫.೭೮॥

 

ಭಗದತ್ತ ಯಾವಾಗ ಅಸ್ತ್ರಮಂತ್ರವನ್ನು ಮರೆಯುತ್ತಿದ್ದನೋ, ಆಗ ಭೀಮನು ಭಗದತ್ತನ ಜೊತೆ ಯುದ್ಧ ಮಾಡುತ್ತಿದ್ದ. ಭೀಮಸೇನ ಮತ್ತು ಅರ್ಜುನನನ್ನು ಬಿಟ್ಟು ಇತರರ ಮೇಲೆ ಭಗದತ್ತ ವೈಷ್ಣವಾಸ್ತ್ರವನ್ನು ಪ್ರಯೋಗಿಸುವುದಿಲ್ಲ ಎನ್ನುವುದನ್ನು ಭೀಮ ತಿಳಿದಿದ್ದ.

 

ಚತುರ್ಗ್ಗಜಾತ್ಮೋಪರಿಗಾತ್ಮಕಶ್ಚ ಘಟೋತ್ಕಚಃ ಸುಪ್ರತೀಕಂ ಚ ತಂ ಚ ।

ನಾನಾಪ್ರಹಾರೈರ್ವಿತುದಂಶ್ಚಕಾರ ಸನ್ದಿಗ್ಧಜೀವೌ ಜಗತಾಂ ಸಮಕ್ಷಮ್ ॥ ೨೫.೭೯॥

 

ಘಟೋತ್ಕಚನು ನಾಲ್ಕು ಗಜಗಳ ಮೇಲೆ ಇರತಕ್ಕ ನಾಲ್ಕು ರೂಪವುಳ್ಳವನಾಗಿ, ಸುಪ್ರತೀಕ ಆನೆಯನ್ನೂ, ಭಗದತ್ತನನ್ನೂ, ಅನೇಕ ತರದ ಹೊಡೆತಗಳಿಂದ ಪೀಡಿಸುತ್ತಾ, ಜಗತ್ತೆಲ್ಲಾ ನೋಡುತ್ತಿರುವಂತೆ, ಅವರು ಬದುಕಿದ್ದಾರೋ ಇಲ್ಲವೋ ಎಂಬ ಸಂದೇಹ ಬರುವಂತೆ ಮಾಡಿದ.

 

ಗಜಾರ್ತ್ತನಾದಂ ತು ನಿಶಮ್ಯ ಭೀಷ್ಮಮುಖಾಃ ಸಮಾಪೇತುರಮುಂ ಚ ದೃಷ್ಟ್ವಾ ।

ಮಹಾಕಾಯಂ ಭೀಮಮಮುಷ್ಯ ಪೃಷ್ಠಗೋಪಂ ಚ ವಾಯ್ವಾತ್ಮಜಮತ್ರಸನ್ ಭೃಶಮ್  ॥ ೨೫.೮೦॥

 

ಸುಪ್ರತೀಕ ಆನೆಯ ಆರ್ತನಾದವನ್ನು ಕೇಳಿ, ಭೀಷ್ಮ ಮೊದಲಾದವರೆಲ್ಲರೂ ಭಗದತ್ತನ ರಕ್ಷಣೆಗಾಗಿ ಓಡೋಡಿ ಬಂದರು. ಆದರೆ ಮಹಾಕಾಯನಾದ ಘಟೋತ್ಕಚ ಹಾಗೂ ಅವನ ಬೆಂಬಲಿಗನಾಗಿ ನಿಂತು ಯುದ್ಧಮಾಡುತ್ತಿರುವ ಭೀಮಸೇನನನ್ನು ಕಂಡು ಭಯಗೊಂಡರು.

 

ತೇ ಭೀತಭೀತಾಃ ಪೃತನಾಪಹಾರಂ ಕೃತ್ವಾSಪಜಗ್ಮುಃ ಶಿಬಿರಾಯ ಶೀಘ್ರಮ್ ।

ದಿನೇ ಪರೇ ಚೈವ ಪುನಃ ಸಮೇತಾಃ ಪರಸ್ಪರಂ ಪಾಣ್ಡವಕೌರವಾಸ್ತೇ ॥ ೨೫.೮೧॥

 

ಭೀಷ್ಮಾದಿಗಳೆಲ್ಲರೂ ಭಯಗೊಂಡು ಯುದ್ಧವಿರಾಮವನ್ನು ಮಾಡಿ ಶೀಘ್ರದಲ್ಲಿ ಶಿಬಿರಕ್ಕೆ ಓಡಿಹೋದರು(ಹೀಗೆ ಆರನೇ ದಿನದ ಯುದ್ಧ ಮುಗಿಯಿತು). ಮಾರನೇದಿನ ಮತ್ತೆ ಪಾಂಡವರು ಹಾಗೂ ಕೌರವರು ಯುದ್ಧಕ್ಕೆಂದು ಸೇರಿದರು.

No comments:

Post a Comment