ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, January 30, 2023

Mahabharata Tatparya Nirnaya Kannada 25-96-102

ದುರ್ಯ್ಯೋಧನೋSಥ ಸ್ವಜನೈಃ ಸಮೇತಃ ಪುನಃ ಪ್ರಾಯಾದ್ ರಣಭೂಮಿಂ ಸ ಭೀಷ್ಮಮ್ ।

ಜಯೋಪಾಯಂ ಭೈಮಸೇನೇರಪೃಚ್ಛತ್  ಸ್ವಸ್ಯೈವ ಸ ಪ್ರಾಹ ನ ತಂ ವ್ರಜೇತಿ ॥ ೨೫.೯೬॥

 

ಆಮೇಲೆ ತನ್ನವರೊಂದಿಗೆ ಶಿಬಿರದಿಂದ  ರಣರಂಗಕ್ಕೆ ಮರಳಿ ಬಂದ ದುರ್ಯೋಧನನು ಭೀಷ್ಮನನ್ನು ಕುರಿತು ಘಟೋತ್ಕಚನನ್ನು ಗೆಲ್ಲುವ ಉಪಾಯವನ್ನು ಕೇಳಿದನು. ಆಗ ಭೀಷ್ಮಾಚಾರ್ಯರು ‘ಘಟೋತ್ಕಚನನ್ನು ಕುರಿತು ಹೋಗಬೇಡ ಎಂದರು.

 

ಪ್ರಾಗ್ಜೋತಿಷಂ ಚೈವ ಘಟೋತ್ಕಚಾಯಾ ಸಮ್ಪ್ರೇಷಯಾಮಾಸ ಸುರಾಪಗಾಸುತಃ ।

ಸ ಪ್ರಾಪ್ಯ ಹೈಡಿಮ್ಬಮಯೋಧಯದ್ ಬಲೀ ಸ ಚಾರ್ದ್ದಯಾಮಾಸ ಸಕುಞ್ಜರಂ ತಮ್ ॥ ೨೫.೯೭॥

 

ಭೀಷ್ಮಾಚಾರ್ಯರು ಭಗದತ್ತನನ್ನು ಘಟೋತ್ಕಚನಿಗಾಗಿ ಕಳುಹಿಸಿದರು. ಬಲಿಷ್ಠನಾದ ಭಗದತ್ತನು ಹಿಡಿಂಬೆಯ ಮಗನಾದ ಘಟೋತ್ಕಚನನ್ನು ಹೊಂದಿ ಯುದ್ಧಮಾಡಿದನು. ಆಗ ಆನೆಯಿಂದೊಡಗೊಡಿದ ಭಗದತ್ತನನ್ನು ಘಟೋತ್ಕಚ ಚೆನ್ನಾಗಿ ಪೀಡಿಸಿದ.

 

ತೇನಾರ್ದ್ದಿತಃ ಪ್ರಾಹಿಣೋಚ್ಛೂಲಮಸ್ಮೈ ವಿಯತ್ಯಭಿಪ್ಲುತ್ಯ ತದಾ ಘಟೋತ್ಕಚಃ ।

ಪ್ರಗೃಹ್ಯ ಶೂಲಂ ಪ್ರಬಭಞ್ಜ ಜಾನುಮಾರೋಪ್ಯ ದೇವಾ ಜಹೃಷುಸ್ತದೀಕ್ಷ್ಯ ॥ ೨೫.೯೮॥

 

ಘಟೋತ್ಕಚನಿಂದ ಪೀಡಿತನಾದ ಭಗದತ್ತನು ಅವನ ಮೇಲೆ ಶೂಲವನ್ನು ಎಸೆದನು. ಆಗ ಘಟೋತ್ಕಚನು ಆಕಾಶದಲ್ಲಿ ಹಾರಿ ಶೂಲವನ್ನು ಹಿಡಿದು, ಅದನ್ನು ತನ್ನ ಮೊಣಕಾಲಿನ ಮೇಲಿಟ್ಟು ಮುರಿದುಹಾಕಿದನು. ಈರೀತಿಯಾದ ಅವನ ಕರ್ಮವನ್ನು ಕಂಡು ದೇವತೆಗಳು ಸಂತೋಷಪಟ್ಟರು.

 

ತದಾ ಸ ತಸ್ಯೈವ ಪದಾನುಗಾನ್ ನೃಪೋ ಜಘಾನ ತಂ ಮಾರುತಿರಭ್ಯಯಾದ್ ರಣೇ ।

ಸ ಪ್ರಾಹಿಣೋದ್ ಭೀಮಸೇನಾಯ ವೀರೋ ಗಜಂ ತಮಸ್ತಮ್ಭಯದಾಶು ಸಾಯಕೈಃ ॥ ೨೫.೯೯॥

 

ಸಂಸ್ತಮ್ಭಿತೇ ಬಾಣವರೈಸ್ತು ನಾಗೇ ಭೀಮಸ್ಯಾಶ್ವಾನ್ ಸಾಯಕೈರಾರ್ದ್ದಯತ್ ಸಃ ।

ಸೋSಭ್ಯರ್ದ್ದಿತಾಶ್ವೋSಥ ಗದಾಂ ಪ್ರಗೃಹ್ಯ ಹನ್ತುಂ ನೃಪಂ ತಂ ಸಗಜಂ ಸಮಾಸದತ್ ॥ ೨೫.೧೦೦॥

 

ರಾಜನಾದ ಆ ಭಗದತ್ತನು ಘಟೋತ್ಕಚನ ಬೆಂಗಾವಲು ಪಡೆಯನ್ನು ಸಂಹಾರಮಾಡಿದನು. ಆಗ ಘಟೋತ್ಕಚನಿಗೆ  ಬೆಂಗಾವಲಾಗಿ ಭೀಮಸೇನನು ಭಗದತ್ತನನ್ನು ಎದುರುಗೊಂಡ. ಭಗದತ್ತನು ಭೀಮಸೇನನತ್ತ ತನ್ನ ಆನೆಯನ್ನು ಕಳುಹಿಸಿದ. ವೀರನಾಗಿರುವ ಭೀಮಸೇನನು ಕೂಡಲೇ ತನ್ನ ಬಾಣಗಳಿಂದ ಆ ಆನೆಯನ್ನು ಅಲ್ಲಾಡದಂತೆ ಮಾಡಿದನು. ಭೀಮನ ಬಾಣಗಳ ವರಸೆಯಿಂದ ಆ ಸುಪ್ರತೀಕವು ಚಲನೆ ಇಲ್ಲದಂತೆ ಅವಕ್ಕಾಗಿ ನಿಲ್ಲಲು, ಭಗದತ್ತನು ಭೀಮಸೇನನ ಕುದುರೆಗಳನ್ನು ತನ್ನ ಬಾಣಗಳಿಂದ ಪೀಡಿಸಿದನು. ಕುದುರೆಗಳಿಗೆ ಗಾಯಗಳಾಗಿ ವೇಗ ಕಡಿಮೆಯಾಗಲು, ಭೀಮಸೇನ ಗದೆಯನ್ನು ಹಿಡಿದುಕೊಂಡು ಆನೆಯಿಂದ ಕೂಡಿರುವ ಭಗದತ್ತನನ್ನು ಕೊಲ್ಲುವುದಕ್ಕಾಗಿ ಬಂದನು.   

 

ಸ ಹನ್ತುಕಾಮೇನ ರುಷಾSಭಿಪನ್ನೋ ಭೀಮೇನ ರಾಜಾ ಪುರತಃ ಪೃಷ್ಠತಶ್ಚ ।

ಕೃಷ್ಣೇನಾಸ್ತ್ರಂ ವೈಷ್ಣವಂ ತದ್ ಗೃಹೀತುಂ ಸಹಾರ್ಜ್ಜುನೇನಾಪಯಯೌ ಸುಭೀತಃ ॥ ೨೫.೧೦೧॥

 

ಹೀಗೆ ಎದುರಿನಲ್ಲಿ ಸಿಟ್ಟಿನಿಂದ ಕೊಲ್ಲಲು ಇಷ್ಟಪಟ್ಟು ಮುನ್ನುಗ್ಗಿ ಬರುತ್ತಿರುವ ಭೀಮಸೇನ ಹಾಗು ಹಿಂಭಾಗದಲ್ಲಿ ವೈಷ್ಣವಾಸ್ತ್ರವನ್ನು ಅಪಹರಿಸಲು ಬರುತ್ತಿರುವ ಕೃಷ್ಣನಿಂದೊಡಗೂಡಿದ ಅರ್ಜುನನ್ನು ಕಂಡು ಭಯಗೊಂಡವನಾದ ಭಗದತ್ತ ಪಲಾಯನ ಮಾಡಿದನು.

 

ತಸ್ಮಿನ್ ಗತೇ ಭೀಮಸೇನಾರ್ಜ್ಜುನಾಭ್ಯಾಂ ವಿದ್ರಾವಿತೇ ರಾಜಸಙ್ಘೇ ಸಮಸ್ತೇ ।

ಭೀಷ್ಮಃ ಸೇನಾಮಪಹೃತ್ಯಾಪಯಾತೋ ದುರ್ಯ್ಯೋಧನಸ್ತಂ ನಿಶಿ ಚೋಪಜಗ್ಮಿವಾನ್ ॥ ೨೫.೧೦೨॥

 

ಭಗದತ್ತ ಓಡಿಹೋಗಲು, ಭೀಮಸೇನ ಹಾಗೂ ಅರ್ಜುನರಿಂದ ಎಲ್ಲಾ ರಾಜರ ಸಮೂಹವು ಓಡಿಸಲ್ಪಡುತ್ತಿರಲು, ಭೀಷ್ಮರು ಸೇನೆಯನ್ನು ಉಪಸಂಹಾರಮಾಡಿ ಶಿಬಿರಕ್ಕೆ ಹಿಂತಿರುಗಿದರು. ದುರ್ಯೋಧನನು ಆ ರಾತ್ರಿ ಭೀಷ್ಮಾಚಾರ್ಯರನ್ನು ಹೊಂದಿದನು. 

No comments:

Post a Comment