ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, October 2, 2023

Mahabharata Tatparya Nirnaya Kannada 31-52-60

 

ಸೋSಹಂ ವಯೋಗತಶ್ಚೈವ ಪುತ್ರಾಧಿಭಿರಭಿಪ್ಲುತಃ ।

ತತ್ಸಮ್ಬನ್ಧಕೃತಂ ಪಾಪಂ ಸ್ವಕೃತಂ ಚಾತ್ಯಪೇಶಲಮ್ ॥ ೩೧.೫೨ ॥

 

ಪಾಣ್ಡವೇಷು ಸಕೃಷ್ಣೇಶು ತಪಸಾ ಮಾರ್ಷ್ಟುಮುದ್ಯತಃ ।

ತತ್ರ ಮಾಮನುಜಾನೀಧ್ವಂ ಕೃಪಯಾ ಮಿತ್ರವತ್ಸಲಾಃ ॥ ೩೧.೫೩ ॥

 

ಅಂತಹ ನನ್ನ ಮಕ್ಕಳಿಂದ ಮಾಡಲ್ಪಟ್ಟ ಅನಿಷ್ಟದಿಂದ ಪೀಡಿತನಾದ ನಾನು ಮುದುಕನಾಗಿದ್ದೇನೆ. ಅವನ ಸಂಬಂಧದಿಂದ ಉಂಟಾದ ಪಾಪವನ್ನು ಮತ್ತು ನಾನು ಮಾಡಿದ ಪಾಪವನ್ನು, ಶ್ರೀಕೃಷ್ಣ-ಪಾಂಡವರಲ್ಲಿ ಮಾಡಿದ ಪಾಪವನ್ನು ಪರಿಹಾರ ಮಾಡಿಕೊಳ್ಳಲು, ತಪಸ್ಸಿನಿಂದ ಎಲ್ಲವನ್ನೂ ತೊಳೆದುಕೊಳ್ಳಲು ಸಿದ್ಧನಾಗಿದ್ದೇನೆ. ಈ ವಿಚಾರದಲ್ಲಿ ನೀವು ನನ್ನಮೇಲೆ ದಯೆದೋರಿ. ಮಿತ್ರರನ್ನು ಪ್ರೀತಿಸುವ ನೀವು ನನಗೆ ಅನುಜ್ಞೆಕೊಡಿ  ಎಂದು ಧೃತರಾಷ್ಟ್ರ ನೆರೆದ ಪ್ರಜೆಗಳನ್ನು ಬೇಡಿಕೊಂಡನು.

 

ಮತ್ಪ್ರಿಯಾರ್ತ್ಥಮಪಿ ಸ್ನೇಹಃ ಪಾಣ್ಡವೇಷು ಮಹಾತ್ಮಸು ।

ಕ್ರಿಯಮಾಣೋSಪಿ ಕರ್ತ್ತವ್ಯೋ ಭೂಯ ಏವ ಸದಾSಚಲಃ ॥ ೩೧.೫೪ ॥

 

ತೇ ಹಿ ಮೇ ಪುತ್ರಕಾಃ ಸನ್ತ ಇಹಾಮುತ್ರ ಚ ಸೌಖ್ಯದಾಃ ।

ಇತ್ಯುಕ್ತೈಃ ಸ್ವಗುಣಾನುಚ್ಛೈಃ ಕೀರ್ತ್ತಯದ್ಭಿಃ ಸುದುಃಖಿತೈಃ ॥ ೩೧.೫೫ ॥

 

ಪರ್ಯ್ಯಶ್ರುನಯನೈಃ ಕೃಚ್ಛ್ರಾತ್ ಪೌರಜಾನಪದೈಶ್ಚಿರಾತ್ ।

ಅನುಜ್ಞಾತೋ ಯಯೌ ಪಾರ್ತ್ಥೈರನುಯಾತಃ ಸುದೂರತಃ ॥ ೩೧.೫೬ ॥

 

ಮಹಾನುಭಾವರಾದ ಪಾಂಡವರಲ್ಲಿ ನೀವೆಲ್ಲರೂ ಸ್ನೇಹವನ್ನು ಮಾಡುತ್ತಿದ್ದರೂ, ನನ್ನ ಪ್ರೀತಿಗೋಸ್ಕರ ಇನ್ನೂ ಹೆಚ್ಚಾಗಿ ಅವರನ್ನು ಪ್ರೀತಿಸಿ. ಪಾಂಡವರೂ ಕೂಡಾ ನನ್ನ ಮಕ್ಕಳೇ. ಸಜ್ಜನರಾದ ಅವರು ಇಲ್ಲಿಯೂ, ಪರಲೋಕದಲ್ಲಿಯೂ ಕೂಡಾ ಸೌಖ್ಯವನ್ನು ಕೊಡತಕ್ಕವರು. ಈರೀತಿಯಾಗಿ ಧೃತರಾಷ್ಟ್ರನಿಂದ ಹೇಳಲ್ಪಡಲು, ಕಣ್ಣೀರುತುಂಬಿದ ಪ್ರಜೆಗಳಿಂದ ಬಹಳ ಕಷ್ಟಪಟ್ಟು ಅನುಜ್ಞೆಯನ್ನು ಪಡೆದವನಾದ ಧೃತರಾಷ್ಟ್ರನು,  ಪಾಂಡವರಿಂದ ಬಹಳ ದೂರದ ತನಕ ಅನುಸರಿಸಲ್ಪಟ್ಟವನಾಗಿ ಹೋದನು.  

 

ಸಞ್ಜಯೋ ವಿದುರಶ್ಚೈನಂ ಸಭಾರ್ಯ್ಯಮನುಜಗ್ಮತುಃ ।

ಅನುವವ್ರಾಜ ತಂ ಕುನ್ತೀ ವನಾಯ ಕೃತನಿಶ್ಚಯಾ ॥ ೩೧.೫೭ ॥

 

ಸಂಜಯ ಹಾಗೂ ವಿದುರನೂ ಕೂಡಾ ಗಾಂಧಾರಿಯಿಂದ ಕೂಡಿದ ಧೃತರಾಷ್ಟ್ರನನ್ನು ಅನುಸರಿಸಿದರು. ಅಂತಹ ಧೃತರಾಷ್ಟ್ರನನ್ನು, ತಾನೂ ಕೂಡಾ ಕಾಡಿನಲ್ಲಿ ವಾಸಮಾಡಬೇಕೆಂದು ನಿಶ್ಚಯಿಸಿದ ಕುಂತಿಯು ಅನುಸರಿಸಿದಳು. 

 

ವಾರ್ಯ್ಯಮಾಣಾSಪಿ ತನಯೈಃ ಸಭಾರ್ಯ್ಯೈರ್ಭೃಶದುಃಖಿತೈಃ ।

ಸಂಸ್ಥಾಪ್ಯ ತಾನ್ ಸುಕೃಚ್ಛ್ರೇಣ ಯಯೌ ಸಾSನ್ವೇವ ತಂ ನೃಪಮ್ ॥ ೩೧.೫೮ ॥

 

ದ್ರೌಪದಿ ಮೊದಲಾದವರಿಂದೊಡಗೂಡಿದ ತನ್ನ ಮಕ್ಕಳಿಂದ ತಡೆಯಲ್ಪಟ್ಟರೂ, ಕುಂತಿಯು ತನ್ನ ಮಕ್ಕಳನ್ನು, ಸೊಸೆಯಂದಿರನ್ನು ಬಹಳ ಕಷ್ಟಪಟ್ಟು ತಡೆದು, ಅವರನ್ನು ಅಲ್ಲಿಯೇ ಇರಿಸಿ, ಧೃತರಾಷ್ಟ್ರನನ್ನು ಅನುಸರಿಸಿ ಹೊರಟಳು.

 

ಸನ್ದರ್ಶಿತಪಥೋ ರಾಜಾ ಕುನ್ತೀವಿದುರಸಞ್ಜಯೈಃ ।

ಗಾನ್ಧಾರೀಸಹಿತಃ ಪ್ರಾಪ ಕುರುಕ್ಷೇತ್ರೇ ಜಗದ್ಗುರೋಃ ।

ಕ್ರಮೇಣೈವಾSಶ್ರಮಂ ವ್ಯಾಸದೇವಸ್ಯ ಸುರಪೂಜಿತಮ್ ॥ ೩೧.೫೯ ॥

 

ಕುಂತಿ-ವಿದುರ ಹಾಗೂ ಸಂಜಯರಿಂದ ತೋರಲ್ಪಟ್ಟ ದಾರಿಯುಳ್ಳವನಾದ ಧೃತರಾಷ್ಟ್ರನು, ಗಾಂಧಾರಿಯಿಂದ ಕೂಡಿಕೊಂಡು ಕುರುಕ್ಷೇತ್ರವನ್ನು ತಲುಪಿದನು. ಕ್ರಮೇಣ ಅವನು  ಜಗತ್ತಿಗೇ ಉಪದೇಶಕರಾದ, ಸಮಸ್ತ ದೇವತೆಗಳಿಂದ ಪೂಜಿಸಲ್ಪಡುವ, ಜಗದ್ಗುರು ವೇದವ್ಯಾಸರ ಆಶ್ರಮವನ್ನು ಹೊಂದಿದನು.

 

ತ್ರಿವತ್ಸರಾದಸ್ಯ ನಿಜಸ್ಯ ಲೋಕಸ್ಯಾSಪ್ತಿಂ ಸಭಾರ್ಯ್ಯಸ್ಯ ಜಗಾದ ತತ್ರ ।

ಬ್ರಹ್ಮಾಙ್ಕಜಸ್ತೇನ ಭೃಶಂ ಪ್ರತೀತೋ ವ್ಯಾಸೋಪದಿಷ್ಟಂ ವ್ಯಚರತ್ ತಪೋSಗ್ರ್ಯಮ್ ॥ ೩೧.೬೦ ॥

 

ಆ ಆಶ್ರಮದಲ್ಲಿ ಬ್ರಹ್ಮಪುತ್ರ ನಾರದರು, ಹೆಂಡತಿಯಿಂದ ಸಹಿತನಾದ ಧೃತರಾಷ್ಟ್ರನಿಗೆ ಮೂರು ವರ್ಷ ಕಳೆದ ನಂತರ ತನ್ನ ಲೋಕದ ಹೊಂದುವಿಕೆಯನ್ನು ಹೇಳಿದರು. ಹೀಗೆ ನಾರದರಿಂದ ಇದೆಲ್ಲವನ್ನೂ ತಿಳಿದುಕೊಂಡ ಧೃತರಾಷ್ಟ್ರನು ಉತ್ಕೃಷ್ಟವಾದ ತಪಸ್ಸನ್ನು ವೇದವ್ಯಾಸರ ಉಪದೇಶದಂತೆ ಮಾಡಿದನು.

No comments:

Post a Comment