ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, October 11, 2023

Mahabharata Tatparya Nirnaya Kannada 32-41-47

 

ವಸುದೇವಃ ಪಾರ್ತ್ಥಮುಖಾಚ್ಛ್ರುತ್ವೈತದ್ ಯೋಗಮಾಸ್ಥಿತಃ ।

ತ್ಯಕ್ತ್ವಾ ದೇಹಂ ಕಶ್ಯಪತ್ವಂ ಪ್ರಾಪ ಕೃಷ್ಣಾನುರಾಗತಃ ॥ ೩೨.೪೧ ॥

 

ವಸುದೇವನು ಪ್ರಭಾಸದಿಂದ ದ್ವಾರಕೆಗೆ ಬಂದ ಅರ್ಜುನನ ಮುಖದಿಂದ ಯಾದವೀ-ಕಲಹದ ಸುದ್ದಿಯನ್ನು ಕೇಳಿ, ಧ್ಯಾನವನ್ನು ಹೊಂದಿ ತನ್ನ ಶರೀರವನ್ನು ಬಿಟ್ಟನು. ಕೃಷ್ಣನ ಮೇಲಿನ ಭಕ್ತಿಯಿಂದ ಅವನು ತನ್ನ ಮೂಲರೂಪವಾದ ಕಶ್ಯಪತ್ವವನ್ನು ಹೊಂದಿದನು.

 

ತಸ್ಯಾರ್ಜ್ಜುನೋSಶ್ವಮೇಧಾಗ್ನಾವನ್ತ್ಯಕರ್ಮ್ಮಾಕರೋತ್ ತದಾ ।

ತ್ಯಕ್ತದೇಹಾಸ್ತಸ್ಯ ಭಾರ್ಯ್ಯಾ ವಹ್ನೌ ಪ್ರಾಪುಸ್ತಮೇವ ಚ ॥ ೩೨.೪೨ ॥

 

ಅರ್ಜುನನು ಅಶ್ವಮೇಧದಲ್ಲಿ ಪೂಜಿಸಿದ ಅಗ್ನಿಯಿಂದ ವಸುದೇವನ ಅಂತ್ಯಕ್ರಿಯೆಯನ್ನು ಮಾಡಿದನು. ವಸುದೇವನ ಹೆಂಡಂದಿರೆಲ್ಲರೂ ಕೂಡಾ ಬೆಂಕಿಯಲ್ಲಿಯೇ ದೇಹವನ್ನು ಬಿಟ್ಟು, ಕಶ್ಯಪನನ್ನೇ ಹೊಂದಿದರು.

  

ಸ್ತ್ರಿಯೋ ಬಾಲಾಂಸ್ತಥಾSSದಾಯ ಧನಂ ಚೈವ ಧನಞ್ಜಯಃ ।

ವಿನಿರ್ಯ್ಯಯೌ ದ್ವಾರವತ್ಯಾಸ್ತಾಂ ಜಗ್ರಾಸ ಚ ಸಾಗರಃ ॥ ೩೨.೪೩ ॥

 

ಅರ್ಜುನನು ಹೆಣ್ಣುಮಕ್ಕಳನ್ನೂ, ಮಕ್ಕಳನ್ನೂ, ಹಾಗೆಯೇ ಧನವನ್ನೂ ತೆಗೆದುಕೊಂಡು, ದ್ವಾರಕೆಯಿಂದ ಹೊರನಡೆದನು. ಸಮುದ್ರವು ದ್ವಾರಕೆಯನ್ನು ನುಂಗಿತು. (ದ್ವಾರಕಾನಗರವು ಸಮುದ್ರದಲ್ಲಿ ಮುಳುಗಿಹೋಯಿತು)

 

ಸ್ತ್ರೀಬಾಲಸಹಿತೇ ಪಾರ್ತ್ಥ ಏಕಸ್ಮಿನ್ ಪಥಿ ಗಚ್ಛತಿ ।

ಶಾಪಾತ್ ಸುಪಾಪಾ ಆಭೀರಾಃ ಸ್ತ್ರೀಜನಾನ್ ಜಹ್ರುರುದ್ಧತಾಃ ॥ ೩೨.೪೪ ॥

 

ಸ್ತ್ರೀ ಹಾಗೂ ಬಾಲಕರಿಂದ ಕೂಡಿರುವ ಅರ್ಜುನನೊಬ್ಬನೇ ನಡೆಯುತ್ತಿರಲು, ಅತ್ಯಂತ ಪಾಪಿಷ್ಠರಾದ ಬೇಡರು, ಬಲದಿಂದ ಉದ್ಧತರಾಗಿ ಶಾಪಗ್ರಸ್ತರಾಗಿದ್ದ ಸ್ತ್ರೀಯರನ್ನು ಅಪಹರಿಸಿದರು.

 

[ಯಾವ ಶಾಪ ಎನ್ನುವುದನ್ನು ವಿವರಿಸುತ್ತಾರೆ-]

 

ಯಾಸ್ತಾಃ ಷೋಡಶಸಾಹಸ್ರವನಿತಾಃ ಶತಸಂಯುತಾಃ 

ಕೃಷ್ಣಶಾಪಾನ್ಮ್ಲೇಚ್ಛವಶಂ ಯಯುರ್ದ್ದರ್ಪ್ಪನಿಮಿತ್ತತಃ ॥ ೩೨.೪೫ ॥

 

ಯಾವ ಹದಿನಾರುಸಾವಿರದ ನೂರು ಮಂದಿ ಶ್ರೀಕೃಷ್ಣನ ಸ್ತ್ರೀಯರಿದ್ದರೋ, ಅವರೆಲ್ಲರೂ ಶ್ರೀಕೃಷ್ಣನ ಕುರಿತು ಹಿಂದೆ ತೋರಿದ್ದ ವಿಪರೀತ ಅಹಂಕಾರ ನಿಮಿತ್ತ ಕೃಷ್ಣನ ಶಾಪಕ್ಕೆ ಒಳಗಾಗಿ, ಮ್ಲೇಚ್ಛರ ವಶವಾದರು.

 

ಹ್ರೀಯಮಾಣೇ ಧನೇ ಚೈವ ವನಿತಾಸು ಚ ವಾಸವಿಃ ।

ಯುಯುತ್ಸುರ್ಗ್ಗಾಣ್ಡಿವಂ ಸಜ್ಯಂ ಕೃಚ್ಛ್ರೇಣೈವ ಚಕಾರ ಹ ॥ ೩೨.೪೬ ॥

 

ಹಣವು ಅಪಹರಿಸಲ್ಪಡಲು, ಸ್ತ್ರೀಯರು ಕೂಡಾ ಅಪಹರಿಸಲ್ಪಡಲು, ಅರ್ಜುನನು ಯುದ್ಧಮಾಡಲು ಬಯಸಿ, ಕಷ್ಟಪಟ್ಟು ಗಾಂಡೀವದ ದಾರವನ್ನು  ಬಿಗಿದನು.

 

ಕ್ಷೀಣಾಸ್ತಸ್ಯ ಶರಾ ದೈವಾನ್ನಾಸ್ತ್ರಾಣಿ ಸ್ಮೃತಿಮಾಯಯುಃ ।

ಸ ತದ್ ದೈವಕೃತಂ ಜ್ಞಾತ್ವಾ ಸಂಸ್ಮರನ್ ಪುರುಷೋತ್ತಮಮ್ ।

ನಿಘ್ನಞ್ಛತ್ರೂನ್ ಗಾಣ್ಡಿವೇನ ಶೇಷಂ ರಕ್ಷನ್ ಕುರೂನಗಾತ್ ॥ ೩೨.೪೭ ॥

 

ಅರ್ಜುನನ ಬತ್ತಳಿಕೆಯಲ್ಲಿರುವ ಬಾಣಗಳು ಕ್ಷಯಗೊಂಡವು. ದೈವಸಂಕಲ್ಪದಿಂದಾಗಿ ಅವನಿಗೆ ಅಸ್ತ್ರಗಳ  ನೆನಪೇಬರಲಿಲ್ಲ. ಆಗ ಅರ್ಜುನನು ‘ಇದು ದೈವದ ಸಂಕಲ್ಪ’ ಎಂದು ತಿಳಿದು, ಕೃಷ್ಣನನ್ನು ಸ್ಮರಣೆ ಮಾಡುತ್ತಾ, ಗಾಂಡೀವದ ದಂಡದಿಂದ ಶತ್ರುಗಳನ್ನು ಹೊಡೆಯುತ್ತಾ, ಉಳಿದವರನ್ನು ರಕ್ಷಿಸುತ್ತಾ, ಕುರುಕ್ಷೇತ್ರವನ್ನು ತಲುಪಿದನು.

No comments:

Post a Comment