ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, October 6, 2023

Mahabharata Tatparya Nirnaya Kannada 32--07-13

 

ದ್ವಾದಶಾಬ್ದಂ ಮಹಾಸತ್ರಮೇವಮೇತಾದೃಶಂ ಹರಿಃ ।

ಸಮಾಪ್ಯಾವಭೃಥಸ್ನಾತಃ ಪೂಜಯಿತ್ವಾSಖಿಲಾನ್ ಜನಾನ್ ॥ ೩೨.೦೭ ॥

 

ಶ್ರೀಕೃಷ್ಣ ಪರಮಾತ್ಮನು ಈರೀತಿಯಾದ ವೈಭವದಿಂದ ಕೂಡಿರುವ, ಹನ್ನೆರಡು ವರ್ಷಗಳ ಕಾಲ ನಡೆದ ಮಹಾಯಾಗವನ್ನು ಮುಗಿಸಿ, ಎಲ್ಲರನ್ನೂ ಸತ್ಕರಿಸಿ, ಅವಭೃಥಸ್ನಾನವನ್ನು ಮಾಡಿದನು.

 

ಅನುಜಜ್ಞೇ ಕ್ರಮೇಣೈವ ವತ್ಸರೇಣ ಸಮಾಗತಾನ್ ।

ಸ್ವಕುಲಂ ಸಞ್ಜಿಹೀರ್ಷುಃ ಸ ವಿಪ್ರಶಾಪಮಜೀಜನತ್ ॥ ೩೨.೦೮ ॥

 

ಯಾಗ ಮುಗಿದ ನಂತರ ಅಲ್ಲಿ ನೆರೆದಿದ್ದ ಜನರೆಲ್ಲರನ್ನೂ, ಶ್ರೀಕೃಷ್ಣನು ಗೌರವಪೂರ್ವಕವಾಗಿ (ಒಬ್ಬೊಬ್ಬರಾಗಿ) ಒಂದು ವರ್ಷದ ಅವಧಿಯಲ್ಲಿ ತೆರಳಲು ಅನುಜ್ಞೆಕೊಟ್ಟನು. ತದನಂತರ ತನ್ನ ವಂಶವನ್ನು ಸಂಹಾರಮಾಡಲು ಇಚ್ಛಿಸಿದ ಶ್ರೀಕೃಷ್ಣನು ಬ್ರಾಹ್ಮಣರ ಶಾಪವನ್ನು ಹುಟ್ಟಿಸಿದನು. (ಕೃಷ್ಣನ ಮಗನಾದ ಸಾಂಬನ ಹೊಟ್ಟೆಯಲ್ಲಿ ಹುಟ್ಟಿದ ಮುಸಲದಿಂದ ಯಾದವರ ನಾಶವಾಗಲಿದೆ ಎನ್ನುವ ವಿಪ್ರಶಾಪ).

 

 

ಉಪದಿಶ್ಯ ಪರಂ ಜ್ಞಾನಮುದ್ಧವಾಯಾಮುಮಾಶ್ರಮಮ್ ।

ಬದರ್ಯ್ಯಾಖ್ಯಂ ಪ್ರಾಪಯಿತ್ವಾ ಸಪ್ತಮಾಬ್ದಂ ಶತೋತ್ತರಮ್ ॥ ೩೨.೦೯ ॥

 

ಪ್ರತೀಕ್ಷನ್ ಪಾಲಯಾಮಾಸ ಪಾರ್ತ್ಥೈಃ ಸಹ ಭುವಂ ಪ್ರಭುಃ ।

ಸಮಾರಬ್ಧಂ ಕಲಿಯುಗಂ ಯದಾ ದುರ್ಯ್ಯೋಧನೋSಪತತ್ ॥ ೩೨.೧೦ ॥

 

ಷಟ್-ತ್ರಿಂಶಾಬ್ದಂ ಪುನಃ ಕೃಷ್ಣಃ ಕೃತಮೇವಾನ್ವವರ್ತ್ತಯತ್ ।

ಕೃದಾದಪಿ ವಿಶೇಷೋSಯಂ ಯತ್ ಪುಣ್ಯಸ್ಯಾಧಿಕಂ ಫಲಮ್ ॥ ೩೨.೧೧ ॥

 

ಅಲ್ಪಮೇವ ಚ ಪಾಪಸ್ಯ ಕಾಲಾತ್ ಕೃಷ್ಣಾಜ್ಞಯಾ ತಥಾ ।

ಏವಂ ಸುಧಾರ್ಮ್ಮಿಕೇ ಲೋಕೇ ಹರಿಭಕ್ತಿಪರಾಯಣೇ ॥ ೩೨.೧೨ ॥

 

ನಷ್ಟೇಷು ಕಲಿಲಿಙ್ಗೇಷು ಯುಗವೃತ್ತಿಮಭೀಪ್ಸವಃ ।

ಬ್ರಹ್ಮರುದ್ರಾದಯೋ ದೇವಾಃ ಸ್ತುತ್ವಾ ಕೇಶವಮವ್ಯಯಮ್ ॥ ೩೨.೧೩ ॥

 

ಶ್ರೀಕೃಷ್ಣನು ಉದ್ಧವನಿಗೆ ಉತ್ಕೃಷ್ಟವಾಗಿರುವ ಜ್ಞಾನವನ್ನು ಉಪದೇಶಿಸಿ, ಅವನನ್ನು ಬದರಿ ಎನ್ನುವ ಆಶ್ರಮಕ್ಕೆ ಕಳುಹಿಸಿ, ನೂರ ಏಳನೆಯ ವರ್ಷವನ್ನು(ಅವತಾರ ಸಮಾಪ್ತಿ ಕಾಲವನ್ನು) ನಿರೀಕ್ಷಿಸುತ್ತಾ, ಪಾಂಡವರ ಜೊತೆಗೆ ಭೂಮಿಯನ್ನಾಳಿದನು.

ದುರ್ಯೋಧನನು ತೊಡೆಮುರಿದು ಬಿದ್ದಾಗಲೇ ಕಲಿಯುಗ ಆರಂಭವಾಗಿತ್ತು. ಕಲಿಯುಗ ಆರಂಭವಾದ ನಂತರ ಮೂವತ್ತಾರು ವರ್ಷಗಳ ಕಾಲ ಶ್ರೀಕೃಷ್ಣನು ಕಲಿಯುಗವನ್ನು ಕೃತಯುಗವಾಗಿ ಪ್ರವೃತ್ತಿಸಿದನು.

ಈ ಕಲಿಯುಗವು ಕೃತಯುಗಕ್ಕಿಂತಲೂ ಕೂಡಾ ವಿಶೇಷವಾಗಿದ್ದು, ಇಲ್ಲಿ ಮಾಡಿದ ಪುಣ್ಯಕ್ಕೆ ಅಧಿಕವಾಗಿರುವ ಫಲವಾದರೆ, ಪಾಪಕ್ಕೆ ಅತ್ಯಂತ ಅಲ್ಪಫಲ. ಈರೀತಿಯಾಗಿ ಪರಮಾತ್ಮನ ಭಕ್ತಿಯಲ್ಲೇ ರತವಾಗಿರುವ ಲೋಕವೆಲ್ಲವೂ ಧರ್ಮದಿಂದ ಕೂಡಿರಲು, ಕಲಿಯುಗದ ಗುರುತುಗಳೆಲ್ಲವೂ ನಾಶವಾಗುತ್ತಿರಲು, ಯುಗದ ಪ್ರವೃತ್ತಿಯನ್ನು ಬಯಸಿದ ಬ್ರಹ್ಮ-ರುದ್ರ ಮೊದಲಾದ ದೇವತೆಗಳೆಲ್ಲರೂ, ನಾಶವಿರದ ಕೇಶವನನ್ನು ಸ್ತೋತ್ರಮಾಡಿದರು.

No comments:

Post a Comment