ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, October 26, 2023

Mahabharata Tatparya Nirnaya Kannada 32-48-58

 

ತದಾ ಕುರುಕ್ಷೇತ್ರಗತಂ ಜಗದ್ಗುರುಂ ಸುಪೂರ್ಣ್ಣವಿಜ್ಞಾನಬಲರ್ದ್ಧಿಸತ್ಸುಖಮ್ ।

ತಮೇವ ವಾಸಿಷ್ಠಕುಲೋದ್ವಹಂ ಹರಿಂ ನಿರೀಕ್ಷ್ಯ ದುಃಖೇನ ಪಪಾತ ಪಾದಯೋಃ ॥ ೩೨.೪೮ ॥

 

ಅರ್ಜುನನು ಕುರುಕ್ಷೇತ್ರಕ್ಕೆ ಬಂದವನೇ ಅಲ್ಲಿದ್ದ, ಪೂರ್ಣವಾಗಿರುವ ವಿಜ್ಞಾನ ಹಾಗೂ ಬಲವೆಂಬ ಸಂಪತ್ತಿನಿಂದ ಕೂಡಿರುವ, ವಾಸಿಷ್ಠರ ಕುಲದಲ್ಲಿ ಬಂದಿರುವ, ಎಲ್ಲರಿಗೂ ಉಪದೇಶಕರಾಗಿರುವ ವೇದವ್ಯಾಸರನ್ನು ಕಂಡ ಮತ್ತು ಉಮ್ಮಳಿಸುವ ದುಃಖದಿಂದ ಅವರ ಪಾದಗಳಿಗೆ ಬಿದ್ದ.

 

ಸ ತೇನ ಪುಂಸಾಂ ಪ್ರವರೇಣ ಹೇತುಭಿಃ ಸಮ್ಬೋಧಿತೋSಜ್ಞಾನತಮೋಂಶುಮಾಲಿನಾ ।

ಸಂಸ್ಥಾಪ್ಯ ಚೇತಃ ಪುನರೇವ ತಸ್ಮಿನ್ ಜಹೌ ಶುಚಃ ಪ್ರಾಯಶ ಏವ ಧೈರ್ಯ್ಯಾತ್ ॥ ೩೨.೪೯ ॥

 

ಅಜ್ಞಾನವೆಂಬ ಕತ್ತಲಿಗೆ ನೇಸರನಂತಿರುವ, ಪುರುಷೋತ್ತಮ ವೇದವ್ಯಾಸರಿಂದ ಅನೇಕ ಯುಕ್ತಿಗಳಿಂದ ಬೋಧನೆಗೆ ಒಳಗಾದ ಅರ್ಜುನನು, ತನ್ನ ಮನಸ್ಸನ್ನು ಶ್ರೀಕೃಷ್ಣನಲ್ಲಿಯೇ ಇಟ್ಟು, ಬಹಳ ಮಟ್ಟಿಗೆ ದುಃಖವನ್ನು ಬಿಟ್ಟನು.  

 

ಸ್ತ್ರಿಯೋ ಮ್ಲೇಚ್ಛಹೃತಾಃ ಕೃಷ್ಣಪ್ರೇಷಿತಾದ್ ದಾಲ್ಬ್ಯತಃ ಪುನಃ ।

ಗೋವಿನ್ದೈಕಾದಶೀಂ ಶ್ರುತ್ವಾ ಕೃತ್ವಾ ಸಾರಸ್ವತೇ ಜಲೇ ॥ ೩೨.೫೦ ॥             

 

ನಿಮಜ್ಜ್ಯ ವಾಯೋರ್ವಚನಾತ್  ತ್ಯಕ್ತದೇಹಾ ದಿವಂ ಯಯುಃ ।

ಅರ್ಜ್ಜುನಸ್ತು ಕುರುಕ್ಷೇತ್ರೇ ಹಾರ್ದ್ದಿಕ್ಯಯುಯುಧಾನಯೋಃ ॥ ೩೨.೫೧ ॥

 

ಸುತೌ ಸಾರಸ್ವತೇ ಚೈವ ದೇಶೇ ರಾಜ್ಯೇSಭ್ಯಷೇಚಯತ್ ।

ಅನಿರುದ್ಧಸುತಂ ವಜ್ರಂ ಪ್ರಿಯಂ ಕೃಷ್ಣಸ್ಯ ಸದ್ಗುಣಮ್ ॥ ೩೨.೫೨ ॥

 

ಸಶೂರಸೇನೇನ್ದ್ರಪ್ರಸ್ಥರಾಜಾನಮಕರೋದ್ ವಶೀ ।

ಸ್ತ್ರೀಬಾಲಾಂಶ್ಚ ಧನಂ ಚೈವ ತಸ್ಮಿನ್ ಸಂಸ್ಥಾಪ್ಯ ಫಲ್ಗುನಃ ॥ ೩೨.೫೩ ॥

 

ಯಯೌ ಭ್ರಾತೄನಶೇಷಂ ಚ ವೃತ್ತಂ ತೇಷಾಮವರ್ಣ್ಣಯತ್ ।

ತೇ ಚಾವಿಯೋಗಸಮಯಂ ಸ್ಮರನ್ತೋ ಮುರವೈರಿಣಾ ॥ ೩೨.೫೪ ॥

 

ಅಭ್ಯಷಿಞ್ಚನ್ ಭಾಗವತಂ ಮಾಹಾರಾಜ್ಯೇ ಪರೀಕ್ಷಿತಮ್ ।

ಸ್ತ್ರೀಹಾರಿಣಾಂ ಚ ಮ್ಲೇಚ್ಛಾನಾಂ ವಧಾಯೈನಮಯೋಜಯನ್  ॥ ೩೨.೫೫ ॥

 

ಮ್ಲೇಚ್ಛರಿಂದ ಅಪಹರಿಸಲ್ಪಟ್ಟ ಸ್ತ್ರೀಯರೆಲ್ಲರೂ ಕೂಡಾ, ಶ್ರೀಕೃಷ್ಣ ಕಳುಹಿಸಿದ ದಾಲ್ಬ್ಯಮುನಿಗಳಿಂದ, ಗೋವಿಂದ ಏಕಾದಶಿಯನ್ನು ಕೇಳಿ, ಆ ಏಕಾದಶಿಯನ್ನು ಆಚರಿಸಿ, ಸರಸ್ವತೀ ನದಿಯಲ್ಲಿ ಮುಳುಗಿ, ಮುಖ್ಯಪ್ರಾಣನ ಮಾತಿನಂತೆ ದೇಹವನ್ನು ಬಿಟ್ಟು, ಸ್ವರ್ಗವನ್ನು ಹೊಂದಿದರು.

ಅರ್ಜುನನಾದರೋ, ಕುರುಕ್ಷೇತ್ರದಲ್ಲಿದ್ದುಕೊಂಡು, ಕೃತವರ್ಮ- ಸಾತ್ಯಕಿಯರ ಮಕ್ಕಳನ್ನು ಸರಸ್ವತೀ ದಡದ ಕುರುಕ್ಷೇತ್ರ ಹಾಗೂ ಸಾರಸ್ವತ ರಾಜ್ಯದ ಅಧಿಪತಿಗಳಾಗಿ ವಿಧಿಬದ್ಧವಾಗಿ ಅಭಿಷೇಕ ಮಾಡಿದನು. ಕೃಷ್ಣನಿಗೆ ಪ್ರಿಯನಾಗಿರುವ, ಸದ್ಗುಣನಾದ ಅನಿರುದ್ಧನ ಮಗನಾಗಿರುವ ವಜ್ರನನ್ನು ಶೂರಸೇನ ರಾಜ್ಯದ ಸಹಿತವಾದ ಇಂದ್ರಪ್ರಸ್ಥದ ರಾಜನಾಗಿ ಮಾಡಿದನು. ಆ ವಜ್ರನ ಸುಪರ್ದಿಯಲ್ಲಿ ಸ್ತ್ರೀಯರು, ಮಕ್ಕಳು ಹಾಗೂ  ಹಣವನ್ನೂ ಕೂಡಾ ನೆಲೆಗೊಳಿಸಿದ ಅರ್ಜುನನು ಹಸ್ತಿನಪುರಕ್ಕೆ ತೆರಳಿದನು ಮತ್ತು ಅಣ್ಣಂದಿರನ್ನು ಕುರಿತು, ನಡೆದ ಎಲ್ಲಾ ಘಟನೆಗಳನ್ನು ವಿವರಿಸಿದನು. ಅವರೂ ಕೂಡಾ ಕೃಷ್ಣನೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಸ್ಮರಣೆಮಾಡುತ್ತಾ, ಭಗವದ್ಭಕ್ತನಾದ ಪರೀಕ್ಷಿತನನ್ನು ಮಹಾಸಾಮ್ರಾಜ್ಯದಲ್ಲಿ ಅಭಿಷೇಕ ಮಾಡಿದರು.  ಸ್ತ್ರೀಯರನ್ನು ಅಪಹರಿಸಿದ ಮ್ಲೇಚ್ಛರ ನಾಶಕ್ಕೆಂದು ಪರೀಕ್ಷಿತರಾಜನನ್ನು ಪಾಂಡವರು ನೇಮಿಸಿದರು.

 

ಕೃತಂ ಚ ತೇನ ತತ್ ಕರ್ಮ್ಮ ವೋಢ್ರಾ ಪೈತಾಮಹಂ ಧುರಮ್ ।

ಸಮಯಂ ಪರಿರಕ್ಷದ್ಭಿರ್ನ್ನ ಪಾರ್ತ್ಥೈರೇವ ಯತ್ ಕೃತಮ್ ॥ ೩೨.೫೬ ॥

 

ತಾತನ ರಾಜ್ಯವನ್ನು ಹೊತ್ತಿರುವ ಪರೀಕ್ಷಿತನಿಂದ ತಾತ ಒಪ್ಪಿಸಿದ ಕೆಲಸವು ಮಾಡಲ್ಪಟ್ಟಿತು ಕೂಡಾ. ಯಾವ ಕೆಲಸವು ಒಪ್ಪಂದವನ್ನು ಪಾಲಿಸುವಂತಹ ಅರ್ಜುನಾದಿಗಳಿಂದ ಮಾಡಲಿಲ್ಲವೋ, ಅಂತಹಾ ಕರ್ಮವನ್ನು ಪರೀಕ್ಷಿತ ಮಾಡಿದ.

 

[ಇಲ್ಲಿ ಹೇಳಿರುವ ಒಪ್ಪಂದ ಯಾವುದು ಎನ್ನುವುದನ್ನು ಹೇಳುತ್ತಾರೆ-]

 

ವಾಸುದೇವಪದಾ ಸ್ಪೃಷ್ಟಭೂಕಣ್ಟಕಸಮುದ್ಧೃತಿಃ ।

ಸಮಯಃ ಪಾಣ್ಡವಾನಾಂ ಹಿ ತಸ್ಯೈವಾನುಗತಿಃ ಪರಮ್ ॥ ೩೨.೫೭ ॥

 

 

ಅನುವ್ರಜದ್ಭಿರ್ವಿಶ್ವೇಶಂ ನಾಸ್ಮಾಭಿರ್ಭೂಸ್ತದುಜ್ಝಿತಾ ।

ಭೋಜ್ಯಾ ರಕ್ಷ್ಯಾSಪಿ ವಾ ತೇಷಾಮಿತ್ಯೇವ ಸಮಯಃ ಪುರಾ ॥ ೩೨.೫೮ ॥

 

ಶ್ರೀಕೃಷ್ಣನ ಪಾದದಿಂದ ಮುಟ್ಟಲ್ಪಟ್ಟ ಭೂಮಿಯ ಮುಳ್ಳುಗಳ ಕೀಳುವಿಕೆಯು(ಅಂದರೆ ಕೃಷ್ಣನ ಪಾದಗಳಿಂದ ಮುಟ್ಟಲ್ಪಟ್ಟ ಭೂಮಿಗೆ ಕಂಟಕರೆನಿಸಿದ ಅಸುರರನ್ನು ಸಂಹಾರಮಾಡುವುದು),  ಶ್ರೀಕೃಷ್ಣನು ಪರಂಧಾಮಕ್ಕೆ  ತೆರಳಿದಮೇಲೆ ಅವನನ್ನೇ ಅನುಸರಿಸುವ ತಾವು ಕೃಷ್ಣನಿಲ್ಲದ  ಭೂಮಿಯನ್ನು ಆಳಲು ಅಥವಾ ಪಾಲಿಸಲು ಅರ್ಹರಲ್ಲದಿರುವುದರಿಂದ ಅವನ ಹಿಂದೆಯೇ ಹೋಗುವುದು ಎನ್ನುವುದೇ ಅವರ ಒಪ್ಪಂದವಾಗಿತ್ತು. (ಈ ಕಾರಣದಿಂದ ಪಾಂಡವರು ಮ್ಲೇಚ್ಛರ ನಾಶಕ್ಕೆಂದು ಪರೀಕ್ಷಿತರಾಜನನ್ನು ನೇಮಿಸಿದರೇ ಹೊರತು ತಾವು ಆ ಕಾರ್ಯವನ್ನು ಮಾಡಲಿಲ್ಲ ಮತ್ತು ಅಧಿಕಾರದಲ್ಲಿ ಮುಂದುವರಿಯಲಿಲ್ಲ)  

No comments:

Post a Comment