ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, April 26, 2020

Mahabharata Tatparya Nirnaya Kannada 17117_17123


ಸಮಸ್ತಮಾಧುರಾನ್ ಪ್ರಭುಃ ಕುಶಸ್ಥಲೀಸ್ಥಿತಾನ್ ಕ್ಷಣಾತ್ ।
ವಿಧಾಯ ಬಾಹುಯೋಧಕಃ ಸ ಯಾವನಂ ಸಮಭ್ಯಯಾತ್ ॥೧೭.೧೧೭॥

ಸರ್ವಸಮರ್ಥನಾದ ಕೃಷ್ಣನು ಮಧುರಾಪಟ್ಟಣ ಪ್ರದೇಶದಲ್ಲಿರುವ ಎಲ್ಲಾ ನಾಗರಿಕರನ್ನು ಕ್ಷಣದಲ್ಲಿಯೇ ದ್ವಾರಕಾಪಟ್ಟಣದಲ್ಲಿ ಇರುವವರನ್ನಾಗಿ ಮಾಡಿ, ಕೈಗಳಿಂದಲೇ ಯುದ್ಧ (ಬಾಹುಯುದ್ಧ) ಮಾಡಲು ಬಯಸಿ, ಕಾಲಯವನನನ್ನು  ಎದುರುಗೊಂಡ.

[ಹಾಗಾದರೆ ಶ್ರೀಕೃಷ್ಣ ಮಧುರಾಪಟ್ಟಣದಲ್ಲಿದ್ದ  ಯಾದವರನ್ನು ಕಾಲಯವನ ಹಾಗೂ ಜರಾಸಂಧನಿಂದ ರಕ್ಷಿಸುವ ಶಕ್ತಿ ಇಲ್ಲದೇ ದ್ವಾರಕಾನಗರಿಗೆ ಸ್ಥಳಾಂತರಿಸಿದನೇ ಎಂದರೆ :]

ಅನನ್ತಶಕ್ತಿರಪ್ಯಜಃ ಸುನೀತಿದೃಷ್ಟಯೇ ನೃಣಾಮ್ ।
ವ್ಯವಾಸಯನ್ನಿಜಾನ್ ಜನಾನ್ ಸ ಲೀಲಯೈವ ಕೇವಲಮ್ ॥೧೭.೧೧೮॥

ಎಣೆಯಿರದ ಕಸುವಿನವನಾದ, ಎಂದೂ ಹುಟ್ಟದ ಪರಮಾತ್ಮನು, ಮನುಷ್ಯರಿಗೆ ಆಪತ್ಕಾಲದಲ್ಲಿ ಅನುಸರಿಸಬೇಕಾದ ನೀತಿಯನ್ನು ತೋರಿಸಲೋಸುಗ, ಕೇವಲ ಲೀಲೆಯಿಂದ ತನ್ನವರನ್ನು ಸ್ಥಳಾಂತರ ಮಾಡಿದ.

ಅನಾದ್ಯನನ್ತಕಾಲಕಂ ಸಮಸ್ತಲೋಕಮಣ್ಡಲಮ್ ।
ಯದೀಕ್ಷಯೈವ ರಕ್ಷ್ಯತೇ ಕಿಮಸ್ಯ ವೃಷ್ಣಿರಕ್ಷಣಮ್ ॥೧೭.೧೧೯॥

ಅನಾದಿಕಾಲದಿಂದ, ಅನಂತಕಾಲದವರೆಗೆ ಇಡೀ ಲೋಕಸಮೂಹವು ಯಾರ ನೋಟದಿಂದಲೇ ರಕ್ಷಿಸಲ್ಪಡುತ್ತಿದೆಯೋ, ಅಂತಹ ಪರಮಾತ್ಮನಿಗೆ ಯಾದವರ ರಕ್ಷಣೆ ಯಾವ ಲೆಕ್ಕ?

ನಿರಾಯುಧಂ ಚ ಮಾಮಯಂ ವರಾಚ್ಛಿವಸ್ಯ ನ ಕ್ಷಮಃ ।
ಸಮಸ್ತಸೇನಯಾ ಯುತೋsಪಿ ಯೋದ್ಧುಮಿತ್ಯದರ್ಶಯತ್ ॥೧೭.೧೨೦॥

‘ಯಾವುದೇ ಆಯುಧವನ್ನು ಇಟ್ಟುಕೊಳ್ಳದ ನನ್ನನ್ನು, ಇವನು ಸದಾಶಿವನ ವರವಿದ್ದೂ ಗೆಲ್ಲಲಾರ’. ಕೇವಲ ಅವನೊಬ್ಬನೇ ಅಲ್ಲ, ಸಮಸ್ತ ಸೇನೆಯೊಂದಿಗೆ ಕೂಡಿದರೂ ಕೂಡಾ, ಅವನು ಕೃಷ್ಣನೊಂದಿಗೆ   ಯುದ್ಧಮಾಡಲು  ಸಮರ್ಥನಲ್ಲ  ಎಂಬುವುದನ್ನು  ಭಗವಂತ ತೋರಿಸಿದ.


[ಕಾಲಯವನನನ್ನು ಯುದ್ಧಭೂಮಿಯಲ್ಲಿ ಕೃಷ್ಣ ಎದುರುಗೊಳ್ಳುವುದಕ್ಕೂ ಮೊದಲು ಒಂದು ಘಟನೆ ನಡೆದಿತ್ತು. ಆ ಘಟನೆಯ ವಿವರವನ್ನು ಇಲ್ಲಿ ಹೇಳುತ್ತಾರೆ:]

ಸ ಕೃಷ್ಣಪನ್ನಗಂ ಘಟೇ ನಿಧಾಯ ಕೇಶವೋsರ್ಪ್ಪಯತ್ ।
ನಿರಾಯುಧೋsಪ್ಯಹಂ ಕ್ಷಮೋ ನಿಹನ್ತುಮಪ್ರಿಯಾನಿತಿ ॥೧೭.೧೨೧॥

ಕೃಷ್ಣನು ಕಪ್ಪುಸರ್ಪವೊಂದನ್ನು(ಘಟಸರ್ಪವೊಂದನ್ನು) ಮಡಿಕೆಯಲ್ಲಿಟ್ಟು, ಕಾಲಯವನನಿಗೆ ಕಳುಹಿಸಿದ. ಅದರ ಹಿಂದಿನ ಸಂದೇಶ ಏನು ಎಂದರೆ: ನಾನು ಆಯುಧವಿಲ್ಲದೇ, ನನಗೆ ಅಪ್ರಿಯರಾದವರನ್ನು ಕೊಲ್ಲಲು ಸಮರ್ಥನು.(ಹೇಗೆ ಹಾವು ಯಾವುದೇ ಆಯುಧವಿಲ್ಲದೆ ತನ್ನ ಶತ್ರುವನ್ನು ಕೊಲ್ಲಬಲ್ಲದೋ, ಹಾಗೆ).

ಘಟಂ ಪಿಪೀಲಿಕಾಗಣೈಃ ಪ್ರಪೂರ್ಯ್ಯ ಯಾವನೋsಸ್ಯ ಚ ।
ಬಹುತ್ವತೋ ವಿಜೇಷ್ಯ ಇತ್ಯಹಿಂ ಮೃತಂ ವ್ಯದರ್ಶಯತ್ ॥೧೭.೧೨೨॥

ಕಾಲಯವನನು ಇರುವೆಗಳ ಸಮೂಹಗಳಿಂದ ಆ ಸರ್ಪವಿರುವ ಮಡಿಕೆಯನ್ನು ತುಂಬಿಸಿ, ಸತ್ತ ಹಾವನ್ನು ಕೃಷ್ಣನಿಗೆ ತೋರಿಸಿಕೊಟ್ಟ. ಅದರರ್ಥ: ‘ಬಹಳ ಜನ ಇರುವುದರಿಂದ ನಾನೇ ಗೆಲ್ಲುತ್ತೇನೆ ಎಂದು.

[ಈ ಎಲ್ಲಾ ಅಂಶಗಳನ್ನು ಹರಿವಂಶದಲ್ಲಿ(ವಿಷ್ಣುಪರ್ವಣಿ ೫೭.೩೨-೩೭) ವಿವರಿಸಲಾಗಿದೆ: ‘ತತಃ ಕುಮ್ಭೇ ಮಹಾಸರ್ಪಂ ಭಿನ್ನಾಞ್ಜನಚಯೋಪಮಮ್ ಘೋರಮಾಶೀವಿಷಂ ಕೃಷ್ಣಂ ಕೃಷ್ಣಃ  ಪ್ರಾಕ್ಷೇಪಯತ್  ತದಾ । ತತಸ್ತಂ ಮುದ್ರಯಿತ್ವಾ ತು ಸ್ವೇನ ದೂತೇನ ಹಾರಯತ್ । (ಅಂಜನದಂತೆ ಕಪ್ಪಗಿರುವ,  ದಂತದಲ್ಲಿ ವಿಷವಿರುವ(ಆಶೀವಿಷ) ಹಾವನ್ನು ಕುಮ್ಭದಲ್ಲಿಟ್ಟು, ಅದನ್ನು ಮುಚ್ಚಿ (ಮುದ್ರೆಮಾಡಿ), ದೂತನ ಮುಖೇನ ಶ್ರೀಕೃಷ್ಣ ಕಳುಹಿಸಿದ).  ನಿದರ್ಶನಾರ್ಥಂ  ಗೋವಿಂದೋ  ಭೀಶಯಾಮಾಸ  ತಂ ನೃಪಮ್ । ಸ ದೂತಃ ಕಾಲಯವನೇ ದರ್ಶಯಾಮಾಸ ತಂ ಘಟಮ್ । ಕಾಳಸರ್ಪೋಪಮಃ ಕೃಷ್ಣ ಇತ್ಯುತ್ತ್ವಾ ಭರತರ್ಷಭ । (ಕಾಲಯವನನನ್ನು ಕಂಡ ದೂತ, ‘ಈ ಮಡಿಕೆಯ ಒಳಗಡೆ ಇರುವ ಹಾವಿನಷ್ಟೇ ಭಯಂಕರ ಶ್ರೀಕೃಷ್ಣ’  ಎಂದ) ತತ್ಕಾಲಯವನೋ ಬುದ್ಧ್ವಾ ತ್ರಾಸನಂ ಯಾದವೈಃ ಕೃತಮ್ । ಪಿಪೀಲಿಕಾನಾಂ ಚನ್ಡಾನಾಂ ಪೂರಯಾಮಾಸ ತಂ ಘಟಮ್ ।  ಸ ಸರ್ಪೋ ಬಹುಭಿಸ್ತೀಕ್ಷ್ಣೈಃ ಸರ್ವತಸ್ತೈಃ ಪಿಪೀಲಿಕೈಃ  । ಭಕ್ಷ್ಯಮಾಣಃ  ಕಿಲಾಙ್ಗೇಷು ಭಸ್ಮೀಭೂತೋsಭವತ್ ತದಾ ।  ತಂ ಮುದ್ರಯಿತ್ವಾsಥ ಘಟಂ ತಥೈವ  ಯವನಾಧಿಪಃ । ಪ್ರೇಶಯಾಮಾಸ ಕೃಷ್ಣಾಯ ಬಾಹುಲ್ಯಮುಪವರ್ಣಯನ್’ (ಕಾಲಯವನ ಬಹಳ ಪಿಪೀಲಿಕಗಳ  ಗಣವನ್ನು ಮಡಿಕೆಯೊಳಗೆ ಬಿಟ್ಟ. ಆಗ ಹಾವು ಸತ್ತಿತು. ಹೀಗೆ,  ನಾವು ಬಹಳ ಜನರಿದ್ದೇವೆ ಎಂಬ ಸಂದೇಶವನ್ನು ಆತ ಹಿಂದೆ ಕಳುಹಿಸಿದ)].

ಕಿಮತ್ರ ಸತ್ಯಮಿತ್ಯಹಂ ಪ್ರದರ್ಶಯಿಷ್ಯ ಇತ್ಯಜಃ ।
ಉದೀರ್ಯ ದೂತಮಭ್ಯಯಾತ್ ಸ ಯಾವನಂ ಪ್ರಬಾಧಿತುಮ್ ॥೧೭.೧೨೩॥

‘ಈವಿಚಾರದಲ್ಲಿ ಯಾವುದು ಸತ್ಯವಾಗುವುದು ಎಂದು ತೋರಿಸುತ್ತೇನೆ’ ಎಂದು ದೂತನನ್ನು ಕುರಿತು ಹೇಳಿದ ಶ್ರೀಕೃಷ್ಣ,  ಕಾಲಯವನನನ್ನು ಪೀಡಿಸಲು ತೆರಳಿದ.

No comments:

Post a Comment