ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, April 16, 2020

Mahabharata Tatparya Nirnaya Kannada 1770_1777



ಅಯಂ ಹಿ ದತ್ತಪುತ್ರಕೋ ಮ ಔರಸಾದ್ ವಿಶಿಷ್ಯತೇ ।
ಅತೋ ನಿವೇಶ್ಯ ಏಷ ಮೇ ಸುರೂಪಿಣೀ ಚ ರುಗ್ಮಿಣೀ ॥೧೭.೭೦॥

ಮುಂದುವರಿದು ಜರಾಸಂಧ ಹೇಳುತ್ತಾನೆ: ‘ಇವನು(ಶಿಶುಪಾಲ) ನನ್ನ ಪುತ್ರ ಸಮಾನ. ನನ್ನ ಸಾಕು ಮಗನೀತ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತಲೂ ನನಗೆ ಇವನೇ ಮಿಗಿಲು. ಆ ಕಾರಣದಿಂದ ಸುರೂಪಿಣಿಯಾದ  ರುಗ್ಮಿಣಿಯು  ಇವನನ್ನು ಮದುವೆಯಾಗಬೇಕು’.
[ಹರಿವಂಶದಲ್ಲಿ(ವಿಷ್ಣುಪರ್ವಣಿ ೫೯.೨೪) ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ ಜ್ಞಾತೇಃ  ಸಮಾನವಂಶಸ್ಯ ಸುನೀಥಂ ಪ್ರದದೌ  ಸುತಮ್ । ಜರಾಸಂಧಃ ಸ್ವಸುತವದ್ ದದರ್ಶೈನಂ  ಜುಗೋಪ ಚ (ಜರಾಸಂಧ ಶಿಶುಪಾಲನನ್ನು ತನ್ನ ಸ್ವಂತ ಮಗ ಎಂಬಂತೆ ಕಾಪಾಡಿದ್ದ)]

ಶಿವಾಗಮೇಷು ಶಿಷ್ಯಕಾಃ ಸರುಗ್ಮಿಸಾಲ್ವಪೌಣ್ಡ್ರಕಾಃ ।
ಮಮಾಖಿಲಾ ನೃಪಾಸ್ತತಃ ಕುರುಧ್ವಮೇತದೇವ ಮೇ ॥೧೭.೭೧॥

ರುಗ್ಮಿ, ಸಾಲ್ವ,  ಪೌಣ್ಡ್ರ, ಇವರಿಂದ ಕೂಡಿದ ಸಮಸ್ತ ರಾಜರೂ ಶೈವಾಗಮದಲ್ಲಿ ನನ್ನ ಶಿಷ್ಯರು. ಆದ್ದರಿಂದ ನನಗೆ  ಗುರುದಕ್ಷಿಣೆಯಾಗಿ ನೀವು ಇದನ್ನೇ ಮಾಡಿರಿ (ನನ್ನ ಈ ಅಭೀಷ್ಠವನ್ನು ನೀವು ಪೂರೈಸಿ):

ಇತೀರಿತೇ ತು ಸೌಭರಾಡ್ ಜಗಾದ ರುಗ್ಮಿಸಂವಿದಾ ।
ಸ್ವಯಂವರೋ ನಿವರ್ತ್ತಿತಃ ಸ್ವಸಾರಮೇಷ ದಾಸ್ಯತಿ ॥೧೭.೭೨॥

ಈರೀತಿಯಾಗಿ ಜರಾಸಂಧ ನುಡಿಯಲು,  ಸಾಲ್ವನು ಹೇಳುತ್ತಾನೆ:  ‘ರುಗ್ಮಿಯ ಅನುಮತಿಯಂತೆ  ‘ಸ್ವಯಂವರ ಬಿಡಲ್ಪಟ್ಟಿದೆ. ಇವನಾದರೋ(ರುಗ್ಮಿಯು) ತನ್ನ ತಂಗಿಯನ್ನು ಶಿಶುಪಾಲನಿಗೆ ಕೊಡುತ್ತಿದ್ದಾನೆ ಅಷ್ಟೇ. (ಸ್ವಯಂವರ ನಡೆಯುವುದಿಲ್ಲ. ನೇರವಾಗಿ ರುಗ್ಮಿ ತನ್ನ ತಂಗಿಯನ್ನು ಶಿಶುಪಾಲನಿಗೆ ಮದುವೆ ಮಾಡಿ ಕೊಡಲಿದ್ದಾನೆ ಅಷ್ಟೇ)


ನಚಾತಿವರ್ತ್ತಿತುಂ ಕ್ಷಮಃ ಪಿತಾsಸ್ಯ ಚೇದಿಪಾಯ ತಾಮ್ ।
ಪ್ರದಾತುಕಾಮಮಾತ್ಮಜಂ ವಯೋಗತಸ್ತಥಾsಬಲಃ ॥೧೭.೭೩॥

ತಂಗಿಯನ್ನು ಶಿಶುಪಾಲನಿಗೆ ಕೊಡಲು ಬಯಸುವ ತನ್ನ ಮಗನನ್ನು ಈ ವಯಸ್ಸಾಗಿರುವ, ದುರ್ಬಲನಾದ ಭೀಷ್ಮಕನು ಮೀರಲಾಗುವುದಿಲ್ಲ.

ಸ್ವಯಂ ತು ಕೃಷ್ಣ ಏತ್ಯ ನೋ ವಿಜಿತ್ಯ ಕನ್ಯಕಾಂ ಹರೇತ್ ।
ತತೋsಸ್ಯ ಪೂರ್ವಮೇವ ನೋ ಹ್ಯಭಾವತಾ ಕೃತಾ ಶುಭಾ ॥೧೭.೭೪॥

ಆದರೆ ಕೃಷ್ಣನು ತಾನೇ ಬಂದು, ನಮ್ಮೆಲ್ಲರನ್ನು ಗೆದ್ದು, ಕನ್ಯೆಯನ್ನು ಅಪಹರಿಸಿಯಾನು. ಆ ಕಾರಣದಿಂದ ಅದಕ್ಕೂ ಮೊದಲು ನಾವು ಕೃಷ್ಣನನ್ನು ಇಲ್ಲವಾಗಿಸಬೇಕು.

[ಹೇಗೆ ಎಂದರೆ: ಅದಕ್ಕೊಂದು ಉಪಾಯವನ್ನು ಹೇಳುತ್ತಾನೆ ಸಾಲ್ವ: ]

ಉಪಾಯ ಏಷ ಚಿನ್ತಿತೋ ಮಯಾsತ್ರ ಮಾಗಧೇಶ್ವರ ।
ಮುನಿಂ ಹಿ ಗರ್ಗ್ಗನಾಮಕಂ ಹ್ಯಮುಷ್ಯ ಸಾಲ ಆಕ್ಷಿಪತ್ ॥೧೭.೭೫॥

ಮಾಗದೇಶ್ವರ, ಈ ಉಪಾಯವು ನನ್ನಿಂದ ಚಿಂತಿಸಲ್ಪಟ್ಟಿದೆ: (ಎಂದು ಹಿಂದೆ ನಡೆದ ಘಟನೆಯೊಂದನ್ನು ಉಲ್ಲೇಖಿಸುತ್ತಾನೆ).  ಗರ್ಗ ಎಂಬ ಹೆಸರಿನ ಮುನಿಯನ್ನು ಒಮ್ಮೆ ಅವನ ಹೆಂಡತಿಯ ತಮ್ಮನು ನಿಂದಿಸಿ ಮಾತನಾಡಿದ.

ಯದಾsಸ್ಯ ಷಣ್ಡತೋದಿತಾ ಮುನೇಃ ಪುರೋಹಿತಸ್ಯ ಚ ।
ಪರೇಣ ವೃಷ್ಣಯೋsಹಸಂಶ್ಚುಕೋಪ ಗರ್ಗ್ಗ ಏಷು ಹ ॥೧೭.೭೬॥

ಯಾವಾಗ ಅವನು ಇವನನ್ನು ಷಣ್ಡ ಎಂದು ಬೈದನೋ,  ಆಗ ಅಲ್ಲಿದ್ದ ಯಾದವರೆಲ್ಲಾ ಜೋರಾಗಿ ನಕ್ಕರು. ಆಗ  ಗರ್ಗನಿಗೆ ಸಿಟ್ಟು ಬಂದಿತು.

[ಹರಿವಂಶದಲ್ಲಿ ಈ ಘಟನೆಯ ಕುರಿತಾದ ವಿವರ ಕಾಣಸಿಗುತ್ತದೆ: ವೃಷ್ಣೀನಾಮನ್ಧಕಾನಾಂ    ಗುರುರ್ಗರ್ಗೋ  ಮಹಾಮನಾಃ । ಬ್ರಹ್ಮಚಾರೀ ಪುರಾ ಭೂತ್ವಾ ನ ಸ್ಮ ದಾರಾನ್ ಸ ವಿನ್ದತಿ । ತಥಾಹಿ ವರ್ತಮಾನಂ  ತಮೂರ್ಧ್ವರೇತಸಮವ್ಯಯಮ್  । ಸ್ಯಾಲೋsಭಿಶಸ್ತವಾನ್ ಗರ್ಗಮಪುಮಾನಿತಿ ಭೂಪತೇ’ (ವಿಷ್ಣುಪರ್ವಣಿ ೫೭.೭-೮)   ಗರ್ಗಂ ಗೊಷ್ಠ್ಯಾಂ ದ್ವಿಜಂ ಸ್ಯಾಲಃ  ಷಣ್ಡ ಇತ್ಯುಕ್ತವಾನ್ ದ್ವಿಜ । ಯದೂನಾಂ ಸನ್ನಿಧೌ ಸರ್ವೇ ಜಹಸುರ್ಯಾದವಾಸ್ತದಾ’ (ವಿಷ್ಣುಪರ್ವಣಿ ೫.೨೩.೧)].

ಚಕಾರ ಚ ಪ್ರತಿಶ್ರವಂ ಸಮಾರ್ಜ್ಜಯೇ ಸುತಂ ದ್ರುತಮ್ ।
ಅಕೃಷ್ಣತಾಂ ಯ ಆನಯೇದ್ ಭುವೋsಪಿ ವೃಷ್ಣಿನಾಶಕಃ ॥೧೭.೭೭॥

ಕೋಪಗೊಂಡ ಗರ್ಗಾಚಾರ್ಯರು ‘ಅತಿಶೀಘ್ರದಲ್ಲಿಯೇ ಒಬ್ಬ ಮಗನನ್ನು ಪಡೆಯುತ್ತೇನೆ. ಅವನು ಈ ಭೂಮಿಯಲ್ಲಿ ಕೃಷ್ಣ ಇಲ್ಲದಂತೆ ಮಾಡುತ್ತಾನೆ. ಕೇವಲ ಕೃಷ್ಣನಷ್ಟೇ ಅಲ್ಲ, ಸಮಸ್ತ ಯಾದವರನ್ನೇ ಇಲ್ಲವಾಗಿಸುತ್ತಾನೆ’ ಎಂದು ಪ್ರತಿಜ್ಞೆಯನ್ನು ಮಾಡಿದರು.

No comments:

Post a Comment