ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, April 11, 2020

Mahabharata Tatparya Nirnaya Kannada 1743_1750


(ಜರಾಸಂಧ ಏಕೆ ಶ್ರೀಕೃಷ್ಣನಿಗೆ ಅಭಿಷೇಕ ಮಾಡಲು ಹೋಗಲಿಲ್ಲ? ಜರಾಸಂಧ ಹೋಗದೇ ಇದ್ದರೂ  ಕೂಡಾ  ಇಂದ್ರನೇಕೆ ಕೋಪಿಸಿಕೊಳ್ಳಲಿಲ್ಲ  ಎಂದರೆ: )

ಸಮಸ್ತಶೋ ಜರಾಸುತಾದಿಭಿಃ ಕೃತೇsಭಿಷೇಚನೇ ।
ಅತೀವ ಭಗ್ನಮಾನಕಾನ್ ನಚಾನುಯಾತಿ ಕಶ್ಚನ ॥೧೭.೪೩॥

‘ಒಂದು ವೇಳೆ ಜರಾಸಂಧಾದಿಗಳೆಲ್ಲರೂ ಸೇರಿ ಶ್ರೀಕೃಷ್ಣನ ಅಭಿಷೇಕ ಮಾಡಿದರೆ, ಅವರು ತಮ್ಮ ಅಭಿಮಾನವನ್ನು ಕಳೆದುಕೊಳ್ಳುತ್ತಾರೆ ಮತ್ತು ಆಗ ಯಾರೂ ಕೂಡಾ ಅವರನ್ನು ಅನುಸರಿಸುವುದಿಲ್ಲ.

ಸಮಾಶ್ರಯಂ ಚ ಕೇಶವಂ ತದೈವ ಜೀವನಾರ್ತ್ಥಿನಃ ।
ಪ್ರಕುರ್ಯ್ಯುರಾಸುರಾ ಅಪೀತಿ ದೇವಕಾರ್ಯ್ಯಸಙ್ಕ್ಷಯಃ ॥೧೭.೪೪॥

ಹೀಗಾದರೆ ಬದುಕಬೇಕು ಎಂದು ಬಯಸುವ ಎಲ್ಲಾ ಅಸುರ ಸ್ವಭಾವದ ರಾಜರುಗಳು ಕೃಷ್ಣನನ್ನೇ ಆಶ್ರಯಿಸಿಯಾರು. ಹೀಗಾದರೆ ದೇವತಾಕಾರ್ಯದ ನಾಶವಾಗುತ್ತದೆ’.

ಇತೀಕ್ಷ್ಯ ಪಾಕಶಾಸನೋsವದಜ್ಜರಾಸುತಾದಿಕಾನ್ ।
ಸರುಗ್ಮಿಚೇದಿಸಾಲ್ವಪೋ ನ ಯಾತು ಮಾಗಧೋ ಹರಿಮ್ ॥೧೭.೪೫॥

ಈರೀತಿಯಾಗಿ ಚಿಂತಿಸಿದ ಇಂದ್ರನು, ಜರಾಸಂಧಾದಿಗಳನ್ನು ಕುರಿತು ‘ರುಗ್ಮಿ, ಚೇದಿ(ಶಿಶುಪಾಲ), ಸಾಲ್ವ, ಇವರಿಂದ ಕೂಡಿಕೊಂಡ ಜರಾಸಂಧನು ಪರಮಾತ್ಮನ ಬಳಿ ಹೋಗುವುದು ಬೇಡ’ ಎನ್ನುವ ಆದೇಶವನ್ನಿತ್ತನು.

ತತಸ್ತು ತಾನ್ ವಿನಾsಪರೇsಧಿರಾಜರಾಜ ಇತ್ಯಮುಮ್ ।
ತದಾsಭಿಷೇಕ್ತುಮುದ್ಯತಾ ನೃಪಾಃ ಸುರೇಶಶಾಸನಾತ್ ॥೧೭.೪೬॥

ಆ ಕಾರಣದಿಂದ, ಇಂದ್ರನ ಶಾಸನದಂತೆ ಈ ನಾಲ್ಕು ಜನರನ್ನು ಬಿಟ್ಟು ಉಳಿದ ಎಲ್ಲರೂ ಕೂಡಾ, ‘ಚಕ್ರವರ್ತಿ’ ಎಂದು ಶ್ರೀಕೃಷ್ಣನನ್ನು ಅಭಿಷೇಕ ಮಾಡಲು ಸಿದ್ಧರಾದರು.

ಹರಿವಂಶದಲ್ಲಿ (ವಿಷ್ಣುಪರ್ವ ೫೦.೫೬) ಇಂದ್ರನ ಶಾಸನದ ವಿವರ ಕಾಣಸಿಗುತ್ತದೆ: ಜರಾಸಂಧಶ್ಚ ಚೈಧ್ಯಶ್ಚ ರುಗ್ಮೀ  ಚೈವ  ಮಹಾರಥಃ । ಸಾಲ್ವಃ ಸೌಭಪತಿಶ್ಚೈವ ಚತ್ವಾರೋ  ರಾಜಸತ್ತಮಾಃ । ರಙ್ಗಸ್ಯಾಶೂನ್ಯತಾಹೇತೋಸ್ತಿಷ್ಠಂತ್ವತ್ರೈವ ಪಾರ್ಥಿವಾಃ ‘ಎಲ್ಲರೂ ಹೋದರೆ ರಾಜಸಭೆಯಲ್ಲಿ ಯಾರೂ ಇಲ್ಲವಾಗುತ್ತಾರೆ. ಹಾಗಾಗಿ ಈ ನಾಲ್ವರು ಇಲ್ಲೇ ಇರಲಿ’ ಎನ್ನುತ್ತಾನೆ ಇಂದ್ರ.

ಅತಃ ಶಚೀಪತಿರ್ನ್ನಿಜಂ ವರಾಸನಂ ಹರೇರದಾತ್ ।
ವಿವೇಶ ತತ್ರ ಕೇಶವೋ ನಭಸ್ತಳಾವತಾರಿತೇ ॥೧೭.೪೭॥

ತದನಂತರ ಇಂದ್ರನು ಶ್ರೀಕೃಷ್ಣನಿಗೆ ತನ್ನ ಶ್ರೇಷ್ಠವಾದ ಆಸನವನ್ನು ಕಳುಹಿಸಿಕೊಟ್ಟನು. ಆಕಾಶದಿಂದ ಇಳಿದುಬಂದ ಆ ಉತ್ಕೃಷ್ಟವಾದ ಆಸನದಲ್ಲಿ ಶ್ರೀಕೃಷ್ಣನು ಕುಳಿತನು.

ಕರೇ ಪ್ರಗೃಹ್ಯ ಕೇಶವೋ ನ್ಯವೇಶಯತ್ ಸಹಾsಸನೇ ।
ಪತತ್ರಿಪುಙ್ಗವಂ ಚ ತೌ ಸ ಭೀಷ್ಮಕಾನುಜೌ ಪ್ರಭುಃ ॥೧೭.೪೮॥

ಭೀಷ್ಮಕನ ಅನುಜರಾದ ಕ್ರಥ ಹಾಗೂ ಕೈಶಿಕರು ಪರಮಾತ್ಮನ ಹಾಗೂ ಗರುಡನ ಕೈಯನ್ನು ಹಿಡಿದು, ಅವರನ್ನು ಶ್ರೇಷ್ಠವಾದ ಆಸನದಲ್ಲಿ ಕುಳ್ಳಿರಿಸಿದರು. 

ಅಥಾಖಿಲಾ ನರೇಶ್ವರಾ ಮುನೀನ್ದ್ರಸಂಯುತಾ ಹರಿಮ್ ।
ಸುಶಾತಕೌಮ್ಭಕುಮ್ಭಕೈಃ ಪ್ರಚಕ್ರುರಾಭಿಷೇಕಿಣಮ್ ॥೧೭.೪೯॥

ತದನಂತರ ಎಲ್ಲಾ ರಾಜರೂ ಕೂಡಾ, ಮುನೀನ್ದ್ರರಿಂದ ಕೂಡಿಕೊಂಡು, ಪರಮಾತ್ಮನನ್ನು, ಬಂಗಾರದ ಕೊಡಗಗಳಲ್ಲಿ ತುಂಬಿರುವ ಶ್ರೇಷ್ಠ ಜಲದಿಂದ ಅಭಿಷೇಕ ಮಾಡಿದರು.

ವಿರಿಞ್ಚಶರ್ವಪೂರ್ವಕೈರಭಿಷ್ಟುತಃ ಸುರಾದಿಭಿಃ ।
ಸಮಸ್ತದೇವಗಾಯಕೈಃ ಪ್ರಗೀತ ಆಸ ಕೇಶವಃ ॥೧೭.೫೦॥

ಬ್ರಹ್ಮ-ರುದ್ರ ಮೊದಲಾದ ಶ್ರೇಷ್ಠ ದೇವತೆಗಳಿಂದಲೂ ಕೂಡಿರುವ, ಸಮಸ್ತ ದೇವ-ಗಂಧರ್ವರಿಂದ ಸ್ತೋತ್ರಮಾಡಲ್ಪಟ್ಟವನಾದ ಶ್ರೀಕೃಷ್ಣ ವೈಭವದಿಂದ ಆಸೀನನಾಗಿದ್ದ.

No comments:

Post a Comment