ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, January 23, 2022

Mahabharata Tatparya Nirnaya Kannada 21: 241-248

 

ತತ್ರ ಸರ್ವಜಗದೇಕಸಙ್ಗಮೇ ತತ್ವನಿರ್ಣ್ಣಯಕಥಾ ಬಭೂವಿರೇ ।

ಪ್ರಾಶ್ನಿಕೋSತ್ರ ಪರಿಪೂರ್ಣ್ಣಚಿದ್ಧನೋ ವ್ಯಾಸ ಏವ ಭಗವಾನ್ ಬಭೂವ ಹ ೨೧.೨೪೧

 

ಎಲ್ಲಾ ಜಗತ್ತೂ ಒಟ್ಟುಗೂಡಿದ ಆ  ಯಜ್ಞಸ್ಥಳದಲ್ಲಿ ತತ್ವದ ಬಗೆಗಿನ ಚರ್ಚೆಯಾಯಿತು. ಅಲ್ಲಿ ಅರಿವೇ ಮೈವೆತ್ತುಬಂದ ವೇದವ್ಯಾಸರೇ ಪ್ರಾಶ್ನಿಕ(ನಿರ್ಣಾಯಕ)ರಾಗಿದ್ದರು.  

 

ತತ್ವನಿರ್ಣ್ಣಯಕಥಾಸು ನಿರ್ಣ್ಣಯೋ ವಾಸುದೇವಗುಣವಿಸ್ತರೋSಭವತ್ ।

ನಾಸ್ತಿ ತತ್ಸದೃಶ ಉತ್ತಮಃ ಕುತಃ ಪಾರ ಏಷ ನ ತತೋSನ್ಯ ಇತ್ಯಪಿ ೨೧.೨೪೨

 

ಈ ತತ್ವನಿರ್ಣಯಕಥಾಪ್ರಸಂಗದಲ್ಲಿ ವಾಸುದೇವನೇ ಸರ್ವಗುಣಪೂರ್ಣನಾಗಿದ್ದಾನೆ ಎನ್ನುವ ನಿರ್ಣಯವಾಯಿತು. ಅವನಿಗೆ ಸದೃಶನಾದವನೇ ಇಲ್ಲಾ, ಇನ್ನು ಮಿಗಿಲಾದವನು ಎಲ್ಲಿಂದ ಬರಬೇಕು? ಎಲ್ಲಕ್ಕೂ ದಡದಂತೆ ಅವನೇ ಇರುವುದು. ಅವನಿಗಿಂತ ವಿಲಕ್ಷಣನಾದ ಸರ್ವೋತ್ತಮನು ಇಲ್ಲಾ  ಎನ್ನುವ ತತ್ವನಿರ್ಣಯ ಆ ಚರ್ಚೆಯಿಂದಾಯಿತು.

 

ಬಾದರಾಯಣಭೃಗೂತ್ಥರಾಮಯೋಃ ಶೃಣ್ವತೋಃ ಪರಮನಿರ್ಣ್ಣಯೇ ಕೃತೇ ।

ಮೋದಮಾನಜನತಾಸಮಾಗಮೇSಪೃಚ್ಛದತ್ರ ನೃಪತಿರ್ಯ್ಯತವ್ರತಮ್             ೨೧.೨೪೩

 

ವೇದವ್ಯಾಸರು ಮತ್ತು ಪರಶುರಾಮ ದೇವರು ಕೇಳುತ್ತಿರಲು, ಉತ್ಕೃಷ್ಟವಾದ ತತ್ವನಿರ್ಣಯವು ಮಾಡಲ್ಪಡುತ್ತಿರಲು, ಸಂತೋಷಪಟ್ಟ ಎಲ್ಲಾ ಸಜ್ಜನರೂ ಕೂಡಿರುವ ಆ ಸಭೆಯಲ್ಲಿ ಧರ್ಮರಾಜನು ಭೀಷ್ಮಾಚಾರ್ಯರನ್ನು ಕುರಿತು ಕೇಳಿದ:  

 

ಜಾನಮಾನೋSಪಿ ನೃಪತಿಃ ಸರ್ವಪೂಜ್ಯತಮಂ ಹರಿಮ್ ।

ಸಂಶಯಂ ಭೂಭೃತಾಂ ಭೇತ್ತುಂ ಭೀಷ್ಮಂ ಪಪ್ರಚ್ಛ ಧರ್ಮ್ಮವಿತ್             ೨೧.೨೪೪

 

ಧರ್ಮರಾಜನಿಗೆ ನಾರಾಯಣನು(ಶ್ರೀಕೃಷ್ಣನು) ಸರ್ವೋತ್ತಮ ಎಂದು ತಿಳಿದಿದ್ದರೂ ಕೂಡಾ, ಅಲ್ಲಿ ನೆರೆದ ರಾಜರ ಸಂಶಯವನ್ನು ಪರಿಹರಿಸಲು ಭೀಷ್ಮಾಚಾರ್ಯರನ್ನು ಪ್ರಶ್ನೆಮಾಡಿದ.

 

ನಾಸ್ತಿ ನಾರಾಯಣಸಮಮಿತಿ ವಾದೇನ ನಿರ್ಣ್ಣಯೇ ।

ಕೃತೇ ಬ್ರಹ್ಮಾದಿಭಿರಪಿ ಕೃಷ್ಣಂ ಮರ್ತ್ತ್ಯಂ ಹಿ ಮೇನಿರೇ                 ೨೧.೨೪೫

 

ನೃಪಾಸ್ತಸ್ಮಾದಯಂ ಕೃಷ್ಣೋ ನಾರಾಯಣ ಇತಿ ಸ್ಮ ಹ ।

ಸಮ್ಯಗ್ ಜ್ಞಾಪಯಿತುಂ ಧರ್ಮ್ಮಸೂನುರ್ಭೀಷ್ಮಮಪೃಚ್ಛತ             ೨೧.೨೪೬

 

ನಾರಾಯಣನಿಗೆ ಎಣೆಯಾದವನು ಇಲ್ಲಾ ಎಂದು ಈ ತನಕದ ವಾದ-ವಾಕ್ಯಾರ್ಥಗಳಿಂದ ಬ್ರಹ್ಮಾದಿಗಳು ನಿರ್ಣಯಮಾಡಿದ್ದರೂ ಕೂಡಾ, ಜನರು ಶ್ರೀಕೃಷ್ಣನನ್ನು ಮಾತ್ರ ಮನುಷ್ಯ ಎಂದು ಯಾವ ಕಾರಣದಿಂದ ತಿಳಿದರೋ, ಆ ಕಾರಣದಿಂದ ಶ್ರೀಕೃಷ್ಣನು ನಾರಾಯಣನೇ ಆಗಿದ್ದಾನೆ ಎಂದು ನಿದರ್ಶನಪೂರ್ವಕವಾಗಿ ನೆನಪಿಸಲು ಧರ್ಮರಾಜನು ಭೀಷ್ಮಾಚಾರ್ಯರನ್ನು ಪ್ರಶ್ನಿಸಿದ.

 

[ಅಲ್ಲಿ ಬ್ರಹ್ಮಾದಿ ದೇವತೆಗಳು ನೆರೆದಿದ್ದರೂ ಕೂಡಾ ಧರ್ಮರಾಜ ಭೀಷ್ಮಾಚಾರ್ಯರನ್ನೇ ಏಕೆ ಪ್ರಶ್ನಿಸಿದ ಅಂದರೆ: ]

ಬ್ರಹ್ಮಾದಯಃ ಸುರಾ ಯಸ್ಮಾದ್ ದೃಶ್ಯನ್ತೇ ಮರ್ತ್ತ್ಯವನ್ನೃಭಿಃ ।

ನಚೈವಾತಿತರಾಭ್ಯಾಸೋ ನೃಣಾಮಸ್ತಿ ಮುನಿಷ್ವಪಿ                   ೨೧.೨೪೭

 

ಅಲ್ಲಿ ಬ್ರಹ್ಮಾದಿ ದೇವತೆಗಳು ಸೇರಿದ್ದರೂ ಕೂಡಾ, ಯಾವಕಾರಣದಿಂದ ಅವರು ಸಾಮಾನ್ಯ ಜನರಿಗೆ ಮನುಷ್ಯರಂತೆಯೇ  ಕಾಣಲ್ಪಡುತ್ತಾರೋ,   ಹಾಗೆಯೇ ಜನರಿಗೆ ಋಷಿ ಮುನಿಗಳನ್ನು ನೋಡಿ  ಅಭ್ಯಾಸವಿಲ್ಲದ ಕಾರಣ, ಧರ್ಮರಾಜ ಬ್ರಹ್ಮಾದಿ ದೇವತೆಗಳಲ್ಲಾಗಲೀ, ಮುನಿಗಳಲ್ಲಾಗಲೀ ಪ್ರಶ್ನಿಸಲಿಲ್ಲ.

 

ಸರ್ವಶಾಸ್ತ್ರವಿದಂ ಭೀಷ್ಮಂ ಜಾನನ್ತ್ಯೇತೇ ನೃಪಾ ಅಪಿ ।

ತಸ್ಮಾದ್ ಭೀಷ್ಮಮಪೃಚ್ಛತ್ ಸ ಕುಲವೃದ್ಧತ್ವತಸ್ತಥಾ                  ೨೧.೨೪೮

 

ಎಲ್ಲಾ ರಾಜರೂ ಕೂಡಾ ಭೀಷ್ಮಾಚಾರ್ಯರನ್ನು ಎಲ್ಲಾ ಶಾಸ್ತ್ರವನ್ನು ಬಲ್ಲವ ಎಂದು ತಿಳಿದಿದ್ದಾರೋ, ಆ ಕಾರಣದಿಂದಲೂ, ಕುಲದ ಹಿರಿಯ ಎನ್ನುವ ಕಾರಣಕ್ಕೂ, ಯುಧಿಷ್ಠಿರ  ಭೀಷ್ಮಾಚಾರ್ಯರನ್ನೇ ಪ್ರಶ್ನಿಸಿದ.

No comments:

Post a Comment