ಅಸಾಧಾರಣಹೇತುಶ್ಚ ಭೀಮ
ಏವ ಪ್ರಕೀರ್ತ್ತಿತಃ ।
ಯಜ್ಞಸ್ಯಾಸ್ಯ
ಜರಾಸನ್ಧವದಾತ್ ಕರ್ಣ್ಣಜಯಾದಪಿ ॥೨೧.೧೮೦॥
ಜಯಾಚ್ಚ ಕೀಚಕಾದೀನಾಮನ್ಯೈರ್ಜ್ಜೇತುಮಶಕ್ಯತಃ
।
ದ್ವಿತೀಯಃ
ಫಲ್ಗುನಶ್ಚೈವ ತೃತೀಯಸ್ತು ಯುಧಿಷ್ಠಿರಃ ॥೨೧.೧೮೧॥
ಪಾಂಡವರು ಮಾಡುತ್ತಿರುವ ಈ ಯಜ್ಞಕ್ಕೆ ಭೀಮಸೇನನೇ ಅಸಾಧಾರಣ
ಕಾರಣ. ಏಕೆಂದರೆ ಜರಾಸಂಧನನ್ನು ಕೊಂದುದರಿಂದ, ಕರ್ಣನನ್ನು ಜಯಿಸಿರುವುದರಿಂದ, ಇನ್ನ್ಯಾರಿಂದಲೂ
ಗೆಲ್ಲಲು ಸಾಧ್ಯವಿರದ ಕೀಚಕ ಮೊದಲಾದವರನ್ನು ಗೆದ್ದುದರಿಂದ.
ಇನ್ನು ಎರಡನೇ ಕಾರಣ ಅರ್ಜುನ ಹಾಗೂ ಮೂರನೇ ಕಾರಣ ಯುಧಿಷ್ಠಿರ.
ತಸ್ಮಾದ್
ಬ್ರಹ್ಮಪದಾವಾಪ್ತ್ಯೈ ವ್ಯಾಸೋ ಭೀಮಸ್ಯ ತಂ ಕ್ರತುಮ್ ।
ಅನನ್ಯಕೃತಮಾದಿಶ್ಯ
ದಿಶಾಂ ವಿಜಯಮಾದಿಶತ್ ॥೨೧.೧೮೨॥
ಹೀಗೆ ಭೀಮಸೇನನ ಬ್ರಹ್ಮಪದವಿಪ್ರಾಪ್ತಿಗಾಗಿ ವೇದವ್ಯಾಸರು ಇತಿಹಾಸದಲ್ಲಿ
ಯಾರೂ ಮಾಡಿರದ ಅಶ್ವಮೇಧಯಾಗದಿಂದ ಕೂಡಿರುವ ರಾಜಸೂಯ ಯಾಗವನ್ನು ಆಜ್ಞೆಮಾಡಿ, ದಿಕ್ಕುಗಳ
ವಿಜಯವನ್ನು(ದಿಗ್ವಿಜಯಕ್ಕೆ) ಅಪ್ಪಣೆ ಮಾಡಿದರು.
ಅಥಾsಬ್ರವೀದ್ ಧನಞ್ಜಯೋ ಧನುರ್ಧ್ವಜೋ ರಥೋ ವರಃ ।
ಮಮಾಸ್ತಿ ತದ್ದಿಶಾಂ
ಜಯೋ ಮಮೈವ ವಾಞ್ಛಿತಃ ಪ್ರಭೋ ॥೨೧.೧೮೩॥
ತದನಂತರ ಅರ್ಜುನ ಹೇಳುತ್ತಾನೆ: ಸರ್ವಸಮರ್ಥರಾದ ವೇದವ್ಯಾಸರೇ, ಒಳ್ಳೆಯ ಬಿಲ್ಲು, ಧ್ವಜ, ಶ್ರೇಷ್ಠವಾಗಿರುವ ರಥ ನನ್ನಲ್ಲಿದೆ. ಹಾಗಾಗಿ ನನಗೇ ದಿಕ್ಕುಗಳ ಜಯ ಯೋಗ್ಯ(ದಿಗ್ವಿಜಯವನ್ನು
ನಾನೊಬ್ಬನೇ ಮಾಡುತ್ತೇನೆ).
ಇತೀರಿತೋsಖಿಲಪ್ರಭುರ್ಜ್ಜಗಾದ ಸತ್ಯಮಸ್ತಿತೇ ।
ಸಮಸ್ತಸಾಧನೋನ್ನತಿರ್ಮ್ಮಹಚ್ಚ
ವೀರ್ಯ್ಯಮಸ್ತಿತೇ ॥೨೧.೧೮೪॥
ತಥಾsಪಿ ಕೀಚಕಾದಯೋ ವೃಕೋದರಾದೃತೇ ವಶಮ್ ।
ನ ಯಾನ್ತಿ ನಾಪಿ ತೇ
ವಶಂ ಪ್ರಯಾತಿ ಕರ್ಣ್ಣ ಏವ ಚ ॥೨೧.೧೮೫॥
ಈರೀತಿಯಾಗಿ ಅರ್ಜುನ ಹೇಳಿದಾಗ ಎಲ್ಲರಿಗೂ ಒಡೆಯರಾಗಿರುವ
ವೇದವ್ಯಾಸ ದೇವರು ಹೇಳುತ್ತಾರೆ: ಧನಂಜಯ, ನಿನ್ನಲ್ಲಿ
ಖಂಡಿತವಾಗಿ ಒಳ್ಳೆಯ ವೀರ್ಯವಿದೆ. ಸಮಸ್ತ ಸಾಧನ ಸಂಪತ್ತಿದೆ. ಇಷ್ಟೆಲ್ಲಾ ಇದ್ದರೂ, ಕೀಚಕಾದಿಗಳು ಭೀಮಸೇನನಲ್ಲದೆ
ಇತರರಿಗೆ ವಶರಾಗುವುದಿಲ್ಲ. ಮುಖ್ಯವಾಗಿ ಕರ್ಣ ನಿನ್ನ ವಶವನ್ನು ಹೊಂದುವುದಿಲ್ಲ.
ಬಲಾಧಿಕೋsಸಿ ಕರ್ಣ್ಣತಸ್ತಥಾsಪಿ ನಾಮೃತಃ ಕರಮ್ ।
ದದಾತಿ ತೇ
ಹ್ಯತಿಸ್ಪೃಧಾ ನ ವದ್ಧ್ಯ ಏಷ ತೇsದ್ಯ ಚ ॥೨೧.೧೮೬॥
ಸವರ್ಮ್ಮಕುಣ್ಡಲತ್ವತೋ
ನ ವದ್ಧ್ಯ ಏಷ ಯತ್ ತ್ವಯಾ ।
ತತೋ ವೃಕೋದರೋ ದಿಶಂ
ಪ್ರಯಾತು ತೇ ಪಿತುಃ ಪ್ರಿಯಾಮ್ ॥೨೧.೧೮೭॥
ಕರ್ಣನಿಗಿಂತ ನೀನು ಬಲಶಾಲಿಯಾಗಿರುವುದೇನೋ ನಿಜ. ಆದರೂ ಕೂಡಾ ಅತ್ಯಂತ
ಸ್ಪರ್ಧಾ-ಮನೋವೃತ್ತಿಯುಳ್ಳ ಅವನು ಸಾಯದೇ ನಿನಗೆ ಕಪ್ಪ ಸಿಗುವುದಿಲ್ಲ. ಆದರೆ ಅವನನ್ನು ಈಗ
ಕೊಲ್ಲುವಂತಿಲ್ಲ.
ಅಷ್ಟೇ ಅಲ್ಲದೆ, ಕವಚ ಕುಂಡಲಗಳಿರುವುದರಿಂದ ಅವನನ್ನು
ಕೊಲ್ಲಬಾರದು. ಆ ಕಾರಣದಿಂದ ಭೀಮಸೇನನು ನಿನ್ನ ತಂದೆಯಾಗಿರುವ ಇಂದ್ರನಿಗೆ ಪ್ರಿಯವಾಗಿರುವ
ಪೂರ್ವದಿಕ್ಕನ್ನು ಕುರಿತು ತೆರಳಲಿ.
ಜೀವಗ್ರಾಹಭಯಾತ್ ಕರ್ಣ್ಣೋ
ದದಾತಿ ಕರಮಞ್ಜಸಾ ।
ಭೀಮಾಯ ನಾತ್ರ ಸನ್ದೇಹೋ
ಜಿತೋsನೇನ ಚ ಸಂಯುಗೇ ॥೨೧.೧೮೮॥
ಭೀಮಸೇನ ತನ್ನನ್ನು ಜೀವಂತವಾಗಿ ಹಿಡಿಯುತ್ತಾನೆ ಎನ್ನುವ
ಭಯದಿಂದ ಕರ್ಣನು ಚೆನ್ನಾಗಿ ಕರವನ್ನು ಕೊಡುತ್ತಾನೆ. ಇದರಲ್ಲಿ ಯಾವುದೇ ಸಂಶಯವಿಲ್ಲ.
ಅಜೇಯೌ ಶರ್ವವಚನಾದ್
ರಣೇ ಕೀಚಕಪೌಣ್ಡ್ರಕೌ ।
ವಶಂ ಪ್ರಯಾತೋ ಭೀಮಸ್ಯ
ತಥಾsವದ್ಧ್ಯೋsಪಿ ಚೇದಿಪಃ ॥೨೧.೧೮೯॥
ರುದ್ರದೇವರ ವರದಿಂದಾಗಿ ಕೀಚಕ ಮತ್ತು ಪೌಂಡ್ರಕರು
ಅಜೇಯರಾಗಿದ್ದಾರೆ. ಅವರೂ ಕೂಡಾ ಭೀಮಸೇನನ ಬಲಕ್ಕೆ ಬಾಗುತ್ತಾರೆ. ಹಾಗೆಯೇ ಅವಧ್ಯನಾಗಿರುವ ಶಿಶುಪಾಲ
ಕೂಡಾ ಭೀಮನ ವಶವನ್ನು ಹೊಂದುತ್ತಾನೆ.
ಜೀವಗ್ರಾಹಭಯಂ ಹ್ಯೇಷಾಂ
ಭೀಮಾನ್ಮಾಗಧಪಾತನಾತ್ ।
ತಸ್ಮಾತ್ ಕರಂ
ಪ್ರಯಚ್ಛನ್ತಿ ಜಿತಾ ವಾ ಪೂರ್ವಮೇವ ವಾ ॥೨೧.೧೯೦॥
ಭೀಮಸೇನ ಜರಾಸಂಧನನ್ನು ಮಣಿಸಿರುವುದರಿಂದ ಇವರೆಲ್ಲರಿಗೂ
ಭೀಮನಿಂದ ಜೀವಂತ ಸೆರೆಯ ಭಯವಿದೆ. ಅದರಿಂದಾಗಿ ಯುದ್ಧದಲ್ಲಿ ಸೋತು ಕರವನ್ನು ನೀಡುತ್ತಾರೆ ಅಥವಾ ಯುದ್ಧವನ್ನು ಮಾಡುವ ಮೊದಲೇ ಕರನೀಡುತ್ತಾರೆ.
No comments:
Post a Comment