ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, January 27, 2022

Mahabharata Tatparya Nirnaya Kannada 21: 278-291

 

ಉಪಾಸಿರೇ ಚ ತಾನ್ ನೃಪಾಃ ಸಮಸ್ತಶಃ ಸುಹೃದ್ಗಣಾಃ ।

ತದಾSSಜಗಾಮ ಖಡ್ಗಭೃತ್  ಸಹಾನುಜಃ ಸುಯೋಧನಃ                       ॥೨೧.೨೭೮॥

 

ಎಲ್ಲಾ ಮಿತ್ರರಾಗಿರುವ ರಾಜರು ಸಮೀಪದಲ್ಲಿಯೇ ಕುಳಿತಿದ್ದರು. ಆಗ  ಖಡ್ಗವನ್ನು ಹಿಡಿದ, ತಮ್ಮಂದಿರಿಂದ ಕೂಡಿದ ದುರ್ಯೋಧನನು ಸಭಾಸ್ಥಳಕ್ಕೆ ಬಂದನು.

[ಇಲ್ಲಿ ದುರ್ಯೋಧನನ ಮನೋಭಾವ ಹೇಗಿತ್ತು ಎನ್ನುವುದನ್ನು  ಖಡ್ಗಭೃತ್’ ಎಂದು ಹೇಳಿದ್ದಾರೆ. ಇದರ ಆಯಾಮಗಳನ್ನೇ ಭಾಗವತದಲ್ಲಿ(೧೦.೮೪.೧) ವಿಸ್ತಾರವಾಗಿ ಕಾಣುತ್ತೇವೆ. ‘ತತ್ರ ದುರ್ಯೋಧನೋ ಮಾನಿ ಪರಿತೋ ಭ್ರಾತೃಭಿಃ ಪ್ರಿಯೈಃ  ಕಿರೀಟಮಾಲಿ ನ್ಯವಿಶದಸಿಹಸ್ತಃ  ಕ್ಷಿಪನ್ ರುಚಾ   ಬಹಳ ಗರ್ವವುಳ್ಳವನಾಗಿ, ತನ್ನೆಲ್ಲಾ ತಮ್ಮನ್ದಿರರಿಂದ ಕೂಡಿಕೊಂಡು, ಕಿರೀಟವನ್ನು ಧರಿಸಿ, ಖಡ್ಗವನ್ನು ಹಿಡಿದು, ತಿರಸ್ಕಾರವನ್ನು ಮುಖದಲ್ಲಿ ತೋರುತ್ತಾ  ದುರ್ಯೋಧನ ಸಭೆಯನ್ನು ಪ್ರವೇಶಿಸಿದ].

 

ದ್ವಾರಂ ಸಭಾಯಾ ಹರಿನೀಲರಶ್ಮಿವ್ಯೂಢಂ ನ ಜಾನನ್ ಸ ವಿಹಾಯ ಭಿತ್ತಿಮ್

ಅಭ್ಯನ್ತರಾಣಾಂ ದೃಶಿ ನೋವಿಘಾತಿನೀಂ ಸಂ ಸ್ಫಾಟಿಕಾಮಾಶು ದೃಢಂ ಚುಚುಮ್ಬೇ ॥೨೧.೨೭೯॥

 

ಇಂದ್ರನೀಲಮಣಿಯ ಪ್ರಕಾಶದಿಂದ ಆಚ್ಛಾದಿತವಾದ ಸಭಾಂಗಣದ ದ್ವಾರವನ್ನು ತಿಳಿಯದ ದುರ್ಯೋಧನ, ಅದನ್ನು ಬಿಟ್ಟು,  ಮಧ್ಯದಲ್ಲಿ ಇರುವ, ಯಾವುದೇ ಪದಾರ್ಥಗಳನ್ನು ಕಾಣುವುದರಲ್ಲಿ ತಡೆಯದ(ಪಾರದರ್ಶಕವಾದ) ಸ್ಫಟಿಕಮಣಿಗಳಿಂದ ಮಾಡಿದ ಗೋಡೆಯನ್ನು ಗಟ್ಟಿಯಾಗಿ ಮುತ್ತಿಕ್ಕಿದ. (ಗೋಡೆಗೆ ಡಿಕ್ಕಿಹೊಡೆದ).

 

ಪ್ರವೇಶಯೇತಾಂ ಚ ಯಮೌ ತಮಾಶು ಸಭಾಂ ಭುಜೌ ಗೃಹ್ಯ ನೃಪೋಪದಿಷ್ಟೌ ।

ತತ್ರೋಪವಿಶ್ಯ ಕ್ಷಣಮನ್ಯತೋSಗಾದಮೃಷ್ಯಮಾಣಃ ಶ್ರಿಯಮೇಷು ದಿವ್ಯಾಮ್ ॥೨೧.೨೮೦॥

 

ಆಗ ಧರ್ಮರಾಜನಿಂದ ಉಪದಿಷ್ಟರಾದ(ಆಜ್ಞಾಪಿಸಲ್ಪಟ್ಟ) ನಕುಲ-ಸಹದೇವರು ದುರ್ಯೋಧನನ ಕೈಗಳನ್ನು ಹಿಡಿದುಕೊಂಡು ಸಭೆಯನ್ನು ಪ್ರವೇಶಮಾಡುವಂತೆ ಮಾಡಿದರು. ಅಲ್ಲಿ ಆ ಸಭೆಯಲ್ಲಿ ಸ್ವಲ್ಪಹೊತ್ತು ಸುಧಾರಿಸಿಕೊಂಡ(ಕುಳಿತುಕೊಂಡ) ದುರ್ಯೋಧನ,  ಪಾಂಡವರಲ್ಲಿರುವ ಅಲೌಕಿಕವಾದ ಸಂಪತ್ತನ್ನು ಸಹಿಸದೇ, ಅಲ್ಲಿಂದ ಬೇರೆಡೆಗೆ ತೆರಳಿದನು.

 

ತತೇನ್ದ್ರನೀಲಭುವಿ ರತ್ನಮಯಾನಿ ದೃಷ್ಟ್ವಾ ಪದ್ಮಾನಿ ನೀರಮನಸಾ ಜಗೃಹೇ ಸ್ವವಸ್ತ್ರಮ್ ।

ರತ್ನೋರುದೀಧಿತಿನಿಗೂಢಜಲಂ ಸ್ಥಲಂ ಚ ಮತ್ವಾ ಪಪಾತ ಸಹಿತೋSವರಜೈರ್ಜ್ಜಲೌಘೇ ॥೨೧.೨೮೧॥

 

ಹೀಗೆ ಹೋಗುವಾಗ ಅಲ್ಲಿ ಇಂದ್ರನೀಲಮಣಿಮಯವಾದ ನೆಲದಲ್ಲಿ (ಅಲಂಕಾರಕ್ಕಾಗಿ ಇಟ್ಟ) ರತ್ನದ ಪದ್ಮಗಳನ್ನು ನೋಡಿ, ಅದನ್ನು ನೀರು ಎನ್ನುವ ಭ್ರಮೆಯಿಂದ ತನ್ನ ಬಟ್ಟೆಗಳನ್ನು ಎತ್ತಿ ಹಿಡಿದುಕೊಂಡ. ನಂತರ ಮುತ್ತು-ರತ್ನಗಳ ಉತ್ಕೃಷ್ಟ ಕಾಂತಿಯಿಂದ  ಆಚ್ಛಾದಿತವಾದ ನೀರನ್ನು ನೆಲವೆಂದು ತಿಳಿದು, ತಮ್ಮಂದಿರಿಂದ ಕೂಡಿಕೊಂಡು ಆ ಜಲದಲ್ಲಿ ಬಿದ್ದ.

 

ತಂ ಪ್ರಾಹಸದ್ ಭಗವತಾ ಕ್ಷಿತಿಭಾರನಾಶಹೇತೋಃ ಸುಸೂಚಿತ ಊರುಸ್ವರತೋSತ್ರ ಭೀಮಃ ।

ಪಾಞ್ಚಾಲರಾಜಸುತಯಾ ಚ ಸಮಂ ತಥಾSನ್ಯೈಃ ಸ್ವೀಯೈಸ್ತಥಾSನು ಜಹಸುರ್ಭಗವನ್ಮಹಿಷ್ಯಃ ॥೨೧.೨೮೨॥

 

ಆಗ ಶ್ರೀಕೃಷ್ಣನಿಂದ ಭೂಭಾರನಾಶವಾಗಲಿ ಎನ್ನುವ ಕಾರಣಕ್ಕಾಗಿ ಕಣ್ಸನ್ನೆಯಿಂದ ಹೇಳಲ್ಪಟ್ಟ ಭೀಮನು, ದ್ರೌಪದಿಯಿಂದ ಒಡಗೂಡಿ, ಸಾತ್ಯಕಿಯಿಂದ ಒಡಗೂಡಿ ಗಟ್ಟಿಯಾಗಿ ನಕ್ಕನು. ಅವನನ್ನು ಅನುಸರಿಸಿ ಪರಮಾತ್ಮನ ಮಹಿಷಿಯರೂ ನಕ್ಕರು.

 

ಮನ್ದಸ್ಮಿತೇನ ವಿಲಸದ್ವದನೇನ್ದುಬಿಮ್ಬೋ ನಾರಾಯಣಸ್ತು ಮುಖಮೀಕ್ಷ್ಯ ಮರುತ್ಸುತಸ್ಯ ।

ನೋವಾಚ ಕಿಞ್ಚಿದಥ ಧರ್ಮ್ಮಸುತೋ ನಿವಾರ್ಯ್ಯ ಪ್ರಾಸ್ಥಾಪಯದ್ ವಸನಮಾಲ್ಯವಿಲೇಪನಾನಿ ॥೨೧.೨೮೩॥

 

ಶೋಭಿಸುವ ಮುಖಚಂದ್ರವುಳ್ಳವನಾದ ನಾರಾಯಣನಾದರೋ, ಮಂದಹಾಸದಿಂದ ಭೀಮಸೇನನ ಮುಖವನ್ನು ನೋಡಿದ ಆದರೆ ಏನನ್ನೂ ಹೇಳಲಿಲ್ಲ. ಆಗ ಧರ್ಮರಾಜನು ನಗುವನ್ನು ತಡೆದು, ದುರ್ಯೋಧನನಿಗಾಗಿ ವಸ್ತ್ರಗಳೂ, ಪುಷ್ಪಗಳೂ, ಗಂಧಗಳನ್ನೂ ಕಳುಹಿಸಿದ.

 

ಕೃಷ್ಣಾವೃಕೋದರಗತಂ ಬಹಳಂ ನಿಧಾಯ ಕ್ರೋಧಂ ಯಯೌ ಸಶಕುನಿರ್ದ್ಧೃತರಾಷ್ಟ್ರಪುತ್ರಃ ।

ಸಮ್ಬ್ರೀಳಿತೋ ನೃಪತಿದತ್ತವರಾಮ್ಬರಾದೀನ್  ನ್ಯಕ್ಕೃತ್ಯ ಮಾರ್ಗ್ಗಗತ ಆಹ ಸ ಮಾತುಲಂ ಸ್ವಮ್ ॥೨೧.೨೮೪॥

 

ಆಗ ದುರ್ಯೋಧನನು ಬಹಳ ಲಜ್ಜಿತನಾಗಿ,  ದ್ರೌಪದಿ ಭೀಮಸೇನರಲ್ಲಿ ಬಹಳ ಕೋಪವನ್ನಿಟ್ಟುಕೊಂಡು,  ಧರ್ಮರಾಜ ಕೊಟ್ಟ ಬಟ್ಟೆ ಮೊದಲಾದವುಗಳನ್ನು ತಿರಸ್ಕರಿಸಿ, ಶಕುನಿ ಹಾಗೂ ತನ್ನ ತಮ್ಮಂದಿರಿಂದ ಕೂಡಿಕೊಂಡು ಹಸ್ತಿನಾವತಿಯತ್ತ ತೆರಳಿದ. ದಾರಿಯಲ್ಲಿ ದುರ್ಯೋಧನನು  ತನ್ನ ಸೋದರಮಾವನಾದ ಶಕುನಿಯನ್ನು ಕುರಿತು ಮಾತನಾಡಿದ.  

[ಈ ಘಟನೆಯನ್ನು ಭಾಗವತದಲ್ಲಿ(೧೦.೮೪.೪) ವಿವರಿಸಲಾಗಿದೆ: ‘ಜಹಾಸ ಭೀಮಸ್ತಂ ದೃಷ್ಟ್ವಾ ಸ್ತ್ರೀಯೋ ಭೂಪಾಶ್ಚ ಕೇಚನ । ನಿವಾರ್ಯಮಾಣಾ ಅಪ್ಯಙ್ಗ ರಾಜ್ಞಾ ಕೃಷ್ಣಾನುಮೋದಿತಾಃ ಯುಧಿಷ್ಠಿರ ತಡೆದರೂ ಅವರೆಲ್ಲರೂ ನಕ್ಕರು]

 

ಯೌ ಮಾಮಹಸತಾಂ ಕೃಷ್ಣಾಭೀಮೌ ಕೃಷ್ಣಸ್ಯ ಸನ್ನಿಧೌ ।

ತಯೋರಕೃತ್ವಾ ಸನ್ತಾಪಂ ನಾಹಂ ಜೀವಿತುಮುತ್ಸಹೇ             ॥೨೧.೨೮೫॥

 

‘ಯಾವ ದ್ರೌಪದೀಭೀಮರು ಶ್ರೀಕೃಷ್ಣನ ಎದುರಿನಲ್ಲೇ ನನ್ನನ್ನು ಕುರಿತು ನಕ್ಕರೋ(ಅಪಹಾಸ ಮಾಡಿದರೋ), ಅವರಿಗೆ ಸಂಕಟವನ್ನು ಮಾಡದೇ ನಾನು ಬದುಕಬಯಸುವುದಿಲ್ಲ.

 

ಯದಿ ಮೇ ಶಕ್ತಿರತ್ರ ಸ್ಯಾದ್ ಘಾತಯೇಯಂ ವೃಕೋದರಮ್ ।

ಅಗ್ರಪೂಜಾಂ ಚ ಕೃಷ್ಣಸ್ಯ ವಿಲುಮ್ಪೇಯಂ ನ ಸಂಶಯಃ             ॥೨೧.೨೮೬॥

 

ಒಂದು ವೇಳೆ ನನಗೆ ಶಕ್ತಿ ಇದ್ದಿದ್ದರೆ ಇಲ್ಲಿ ಈ ಪ್ರಸಂಗದಲ್ಲಿ ಭೀಮಸೇನನನ್ನು ಕೊಂದು ಹಾಕುತ್ತಿದ್ದೆ. ಕೃಷ್ಣನ ಅಗ್ರಪೂಜೆಯನ್ನೂ ಕೂಡಾ ಹಾಳುಮಾಡುತ್ತಿದ್ದೆ. ಈ ವಿಷಯದಲ್ಲಿ ಸಂಶಯವಿಲ್ಲ.(ಆದರೆ ಶಕ್ತಿ ಇಲ್ಲದೇ ಇರುವ ಕಾರಣ ಏನೂ ಮಾಡಲಾಗಲಿಲ್ಲ ಎನ್ನುವ ಧ್ವನಿ)

 

ಈದೃಶಂ ಪಾಣ್ಡವೈಶ್ವರ್ಯಂ ದೃಷ್ಟ್ವಾ ಕೋ ನಾಮ ಜೀವಿತಮ್ ।

ಇಚ್ಛೇತ ಕರದಾ ಯೇಷಾಂ ವೈಶ್ಯವತ್ ಸರ್ವಭೂಮಿಪಾಃ                       ॥೨೧.೨೮೭॥

 

ಯಾವ ಪಾಂಡವರಿಗೆ ವೈಶ್ಯರಂತೆ ಎಲ್ಲಾ ರಾಜರು ಕರವನ್ನು ನಮ್ರರಾಗಿ ಸಲ್ಲಿಸುತ್ತಿದ್ದರೋ, ಹೀಗಿರುವ ಪಾಂಡವರ ವೈಭವವನ್ನು ಕಂಡು ಯಾರುತಾನೆ ಬದುಕಲು ಇಚ್ಛಿಸಿಯಾನು.(ಯಾರೂ ಬದುಕಿರಲು ಇಚ್ಛಿಸಲಾರರು ಎನ್ನುವ ಧ್ವನಿ)’

 

ಇತ್ಯುಕ್ತಃ ಶಕುನಿರ್ವೈರಂ ದೃಢೀಕರ್ತ್ತುಂ ವಚೋSಬ್ರವೀತ್ ।

ಕಿಂ ತೇ ವೈರೇಣ ರಾಜೇನ್ದ್ರ ಬಲಿಭಿರ್ಭ್ರಾತೃಭಿಃ ಪುನಃ                 ॥೨೧.೨೮೮॥

 

ಅನುಜೀವಸ್ವ ತಾನ್ ವೀರಾನ್ ಗುಣಜ್ಯೇಷ್ಠಾನ್ ಬಲಾಧಿಕಾನ್ ।

ಇತೀರಿತೋSತಿಸಂವೃದ್ಧಕೋಪ ಆಹ ಸುಯೋಧನಃ                 ॥೨೧.೨೮೯॥

 

ಈರೀತಿಯಾಗಿ ಹೇಳಲ್ಪಟ್ಟ ಶಕುನಿಯು ದುರ್ಯೋಧನನ ಪಾಂಡವರಮೇಲಿನ ಶತ್ರುತ್ವವನ್ನು ಇನ್ನಷ್ಟು ಗಟ್ಟಿಮಾಡಲು, ಹೀಗೆ ಹೇಳಿದ: ‘ಎಲೋ ರಾಜರುಗಳಲ್ಲಿ ಹಿರಿಯನಾದ ದುರ್ಯೋಧನನೇ, ಬಲಿಷ್ಠರಾದ ಅಣ್ಣ-ತಮ್ಮಂದಿರ ಜೊತೆಗೆ ನೀನು ವೈರವನ್ನಿಟ್ಟುಕೊಂಡು ಎನು ಪ್ರಯೋಜನ? ಗುಣದಿಂದ ಹಿರಿಯರಾದ, ಬಲದಿಂದ ಮಿಗಿಲಾದ ಆ ವೀರರನ್ನು ಅನುಸರಿಸಿ ಜೀವಿಸು ಎಂದು.  ಈರೀತಿಯಾಗಿ ಹೇಳಲ್ಪಟ್ಟವನಾಗಿ ಕೋಪದಿಂದ ಬೆಂದುಹೋದ ದುರ್ಯೋಧನನು ಹೇಳಿದ.

 

ಯದಿ ತೇಷಾಂ ತದೈಶ್ವರ್ಯಂ ನ ಮಾಂ ಗಚ್ಛೇದಶೇಷತಃ ।

ಸರ್ವಥಾ ನೈವ ಜೀವೇಯಮಿತಿ ಸತ್ಯಂ ಬ್ರವೀಮಿ ತೇ               ॥೨೧.೨೯೦॥

 

‘ಒಂದುವೇಳೆ ಅವರ ಸಿರಿವಂತಿಕೆಯನ್ನು ಸಂಪೂರ್ಣವಾಗಿ ನಾನು ಹೊಂದದ ಪಕ್ಷದಲ್ಲಿ, ನಿಶ್ಚಯವಾಗಿ ಬದುಕಲಾರೆನು. ಇದು ಪೊಳ್ಳು ಮಾತಲ್ಲ, ಇದು ಸತ್ಯ’.  

 

ನಚ ಬಾಹುಬಲಾಚ್ಛಕ್ಷ್ಯ ಆದಾತುಂ ತಾಂ ಶ್ರಿಯಂ ಕ್ವಚಿತ್ ।

ನೇನ್ದ್ರೋSಪಿ ಸಮರೇ ಶಕ್ತಸ್ತಾನ್ ಜೇತುಂ ಕಿಮು ಮಾನುಷಾಃ               ॥೨೧.೨೯೧॥

 

ಆದರೆ ನನ್ನ ತೋಳ್ಬಲದಿಂದ ಆ ಸಂಪತ್ತನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಇಂದ್ರನೂ ಕೂಡಾ ಯುದ್ಧದಲ್ಲಿ ಅವರನ್ನು ಗೆಲ್ಲಲು ಶಕ್ತನಲ್ಲ. ಇನ್ನು ಮನುಷ್ಯರು ಶಕ್ತರಲ್ಲವೆಂದು ಏನು ಹೇಳಬೇಕು.’

No comments:

Post a Comment