ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, September 13, 2023

Mahabharata Tatparya Nirnaya Kannada 30-107-116

 

ಮೂರ್ಚ್ಛಿತಂ ತಂ ಗುರುಂ ದೃಷ್ಟ್ವಾ ತದ್ಭಕ್ತ್ಯಾ ಭೃಶದುಃಖಿತಃ ।

ಪ್ರಾಯೋಪವಿಷ್ಟಸ್ತನ್ಮಾತಾ ವಿಲಲಾಪಾತಿದುಃಖಿತಾ ॥ ೩೦.೧೦೭ ॥

 

ಹೀಗೆ ಎಚ್ಚರತಪ್ಪಿ ಬಿದ್ದ ತಂದೆಯನ್ನು ಕಂಡು, ತಂದೆಯಮೇಲಿನ ಭಕ್ತಿಯಿಂದ, ಅತ್ಯಂತ ದುಃಖಕ್ಕೀಡಾದ ಬಭ್ರುವಾಹನ ಆಮರಣ ಉಪವಾಸಕ್ಕೆ ಕುಳಿತ. ಅವನ ತಾಯಿ ಚಿತ್ರಾಂಗದೆಯು ಅತ್ಯಂತ ದುಃಖಿತಳಾಗಿ ಅತ್ತಳು.

 

ವಿಜಗರ್ಹ ತದೋಲೂಪೀಂ ಧಿಗ್ ಜಗತ್ತ್ರಯಪೂಜಿತಮ್ ।

ಅಜೀಘನೋ ಮೇ ಭರ್ತ್ತಾರಂ ಪುತ್ರೇಣೈವಾವಿಜಾನತಾ ॥ ೩೦.೧೦೮॥

 

ಚಿತ್ರಾಂಗದೆ ಉಲೂಪಿಯನ್ನು ಬೈದಳು. ‘ಮೂರು ಲೋಕಕ್ಕೂ ಪೂಜಿತನಾಗಿರುವ ನನ್ನ ಗಂಡನನ್ನು, ಏನೂ ಅರಿಯದ ಮಗನಾದ ಬಭ್ರುವಾಹನನ ಮೂಲಕ ಕೊಂದೆಯಲ್ಲವೇ? ನಿನಗೆ ಧಿಕ್ಕಾರವಿರಲಿ.’

 

ಲೋಕವೀರಂ ಪತಿಂ ಹಿತ್ವಾ ನ ಮೇ ಕಾರ್ಯಂ ಸುತೇನ ಚ ।

ಪತಿಲೋಕಮಹಂ ಯಾಸ್ಯೇ ತೃಪ್ತಾ ಭವ ಕಲಿಪ್ರಿಯೇ ॥ ೩೦.೧೦೯ ॥

 

‘ಲೋಕದಲ್ಲಿಯೇ ವೀರನಾಗಿರುವ ನನ್ನ ಗಂಡನನ್ನು ಬಿಟ್ಟು, ಮಗನಿಂದ ನನಗೆ ಯಾವುದೇ ಪ್ರಯೋಜನವಿಲ್ಲ. ನಾನು ಗಂಡನನ್ನು ಅನುಸರಿಸಿ ಅವನ ಜೊತೆಗೇ ಹೊರಟುಬಿಡುತ್ತೇನೆ. ಜಗಳ ಹಚ್ಚುವುದರಲ್ಲಿ ಪ್ರಿಯಳಾದವಳೇ, ತೃಪ್ತಳಾಗು (ಈಗ ನಿನಗೆ ಸಂತೋಷವಾಯಿತೇ).’

 

ಇತ್ಯುಕ್ತ್ವಾ ಮರಣಾಯೈವ ತಾಂ ವಿನಿಶ್ಚಿತಮಾನಸಾಮ್ ।

ಧರಾಯಾಂ ವಿಲುಠನ್ತೀಂ ಚ ದೃಷ್ಟ್ವಾ ಭುಜಗನನ್ದಿನೀ ॥ ೩೦.೧೧೦ ॥

 

ನಾಗಲೋಕಾತ್ ಸಮಾದಾಯ ವಿಶಲ್ಯಕರಣೀಂ ಕ್ಷಣಾತ್ ।

ಉತ್ಥಾಪಯಾಮಾಸ ಪತಿಂ ತ್ರಿಲೋಕಾತಿರಥಂ ತಯಾ ॥ ೩೦.೧೧೧ ॥

 

ಈರೀತಿಯಾಗಿ ಹೇಳಿ, ಸಾಯಬೇಕೆಂದು ಮನಸ್ಸನ್ನು ಗಟ್ಟಿಮಾಡಿಕೊಂಡು ಭೂಮಿಯಲ್ಲಿ ಹೊರಳಾಡುತ್ತಿರುವ ಚಿತ್ರಾಂಗದೆಯನ್ನು ಕಂಡ ಉಲೂಪಿಯು, ಕ್ಷಣದಲ್ಲಿ, ನಾಗಲೋಕದಿಂದ ವಿಶಲ್ಯಕರಣಿಯನ್ನು(ಚಿಕಿತ್ಸೆಮಾಡುವ ಸಸ್ಯವನ್ನು) ತಂದು,  ಮೂರುಲೋಕದಲ್ಲಿಯೇ ಅತ್ಯಂತ ವೀರನಾಗಿರುವ ಗಂಡನನ್ನು ಎಬ್ಬಿಸಿದಳು.

 

 

ಪ್ರಹಸ್ಯೋವಾಚ ಚ ತದಾ ಶ್ರುತಂ ವಾಕ್ಯಂ ಪುರಾ ಮಯಾ ।

ಸುರಲೋಕೇ ಸುರೈಃ ಪ್ರೋಕ್ತಂ ಭೀಷ್ಮಾದ್ಯಾ ನಾತಿಧರ್ಮ್ಮತಃ ॥ ೩೦.೧೧೨ ॥

 

ಯದ್ಧತಾಸ್ತೇನ ದೋಷೇಣ ಪಾರ್ತ್ಥಸ್ತೇನಾತಿವೇದನಾಮ್ ।

ರಣೇ ವ್ರಜೇದಿತಿ ನ ತತ್ ಪರತಃ ಸ್ಯಾದಿತಿ ಹ್ಯಹಮ್ ॥ ೩೦.೧೧೩ ॥

 

ವಚನಾದೇವ ದೇವಾನಾಂ ಯುದ್ಧ್ಯೇತ್ಯಾತ್ಮಜಮಬ್ರವಮ್ ।

ದೇವಾನಾಮೇವ ಸಙ್ಕಲ್ಪಾನ್ಮೂರ್ಚ್ಛಿತಶ್ಚಾರ್ಜ್ಜುನೋSಭವತ್ ॥ ೩೦.೧೧೪ ॥

 

ಏಕೆ ಈ ಘಟನೆ ನಡೆಯಿತು ಎನ್ನುವುದನ್ನು ಉಲೂಪಿಕೆಯು ನಕ್ಕು ಹೇಳುತ್ತಾಳೆ- ‘ಹಿಂದೆ ನನ್ನಿಂದ ದೇವಲೋಕದಲ್ಲಿ ದೇವತೆಗಳಿಂದ ಹೇಳಿದ ಮಾತು ಕೇಳಲ್ಪಟ್ಟಿದೆ. (ಆ ಮಾತು ಏನೆಂದರೆ) “ಭೀಷ್ಮಾಚಾರ್ಯರೇ ಮೊದಲಾದವರೆಲ್ಲರು, ಧರ್ಮದಿಂದ ಸಾಯಿಸಲ್ಪಡಲಿಲ್ಲ(ಬಲವಿದ್ದರೂ ಕೂಡಾ ನೇರವಾಗಿ ಅರ್ಜುನನ ಬಲದಿಂದ ಅವರು ಸಾಯಿಸಲ್ಪಡಲಿಲ್ಲ).  ಆ ಕಾರಣದಿಂದ ಬಂದ ದೋಷದಿಂದಾಗಿ ಅರ್ಜುನನು ಆತ್ಯಂತಿಕವಾಗಿರುವ ನೋವನ್ನು ಯುದ್ಧದಲ್ಲಿ ಹೊಂದುವನು.” ಈ ವಿಷಯವನ್ನು ತಿಳಿದ ನಾನು, ಅರ್ಜುನನಿಗೆ ಇನ್ನೊಬ್ಬರಿಂದ ನೋವುಂಟಾಗಬಾರದು ಎಂದು, ಯುದ್ಧಮಾಡೆಂದು ಮಗನಾದ ಬಭ್ರುವಾಹನನಿಗೆ ಹೇಳಿದೆ. ದೇವತೆಗಳ ಸಂಕಲ್ಪ ಇರುವುದರಿಂದಲೇ ಅರ್ಜುನನು ಮೂರ್ಛೆಹೊಂದಿದ.

 

ಭುಕ್ತದೋಷಫಲಶ್ಚಾಯಂ ಪುನರ್ಭೋಕ್ಷ್ಯತಿ ನಾನ್ಯತಃ ।

ಅನ್ಯೇನ ಪಾತಿತಸ್ಯಾಸ್ಯ ಯಶೋ ನಶ್ಯೇತ್ ತ್ರಿಲೋಕಗಮ್ ॥ ೩೦.೧೧೫ ॥

 

ದೋಷದಿಂದ ಬಂದ ನೋವು ಇದೀಗ ಸ್ವೀಕೃತವಾಗಿದೆ. ಅದರಿಂದ ಇನ್ನೊಬ್ಬರಿಂದ ಮತ್ತೆ ಈ ತರದ ದುಃಖವನ್ನು ಅರ್ಜುನ ಹೊಂದುವುದಿಲ್ಲ. ಮಗನಲ್ಲದೇ ಬೇರೊಬ್ಬರು ಇವನನ್ನು ಬೀಳಿಸಿದ್ದರೆ, ಇವನ ಯಶಸ್ಸು, ಕೀರ್ತಿ, ನಾಶವಾಗುತ್ತಿತ್ತು. (ಗುರುವನ್ನು/ತಂದೆಯನ್ನು ಶಿಷ್ಯ/ಮಗ ಸೋಲಿಸಿದರೆ, ಅದರಿಂದ ಗುರು/ತಂದೆ ಸಂತೋಷಪಡುತ್ತಾರೆ ಮತ್ತು ಕೀರ್ತಿಯನ್ನು ಹೊಂದುತ್ತಾರೆ).

 

ನಾರ್ಜ್ಜುನಸ್ಯ ಯಶೋ ನಶ್ಯೇದಿತಿ ದೈವೈರಿದಂ ಕೃತಮ್ ।

ಇತ್ಯುಕ್ತಃ ಪ್ರೀತಿಮಾಪೇದೇ ಪುತ್ರಭಾರ್ಯ್ಯಾಯುತೋSರ್ಜ್ಜುನಃ ॥ ೩೦.೧೧೬ ॥

 

ಅರ್ಜುನನ ಕೀರ್ತಿ ನಾಶವಾಗಬಾರದು ಎಂದು ದೇವತೆಗಳಿಂದಲೇ ಇದು(ಅರ್ಜುನ ಮೂರ್ಛೆಹೊಂದುವಂತೆ) ಮಾಡಲ್ಪಟ್ಟಿತು.  ಈರೀತಿಯಾಗಿ ಉಲೂಪಿಯಿಂದ ಹೇಳಲ್ಪಟ್ಟ ಅರ್ಜುನನು ಹೆಂಡತಿ ಮಗನೊಡಗೂಡಿ  ಬಹಳ ಸಂತೋಷ ಹೊಂದಿದನು.

No comments:

Post a Comment