ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, May 15, 2018

Mahabharata Tatparya Nirnaya Kannada 6.32-6.35


ಸಸಮ್ಭ್ರಮನ್ತಂ ಪತಿತಂ ಪದಾಬ್ಜಯೋಸ್ತ್ವರನ್ ಸಮುತ್ಥಾಪ್ಯ ಸಮಾಶ್ಲಿಷತ್ ಪ್ರಭುಃ ।
ಸ ಚೋಪವಿಷ್ಟೋ ಜಗದೀಶಸನ್ನಿಧೌ ತದಾಜ್ಞಯೈವಾsದಿಶದಾಶು ವಾನರಾನ್ ॥೬.೩೨॥

ಉದ್ವೇಗದಿಂದ ಕೂಡಿ ಅವಸರ ಮಾಡುತ್ತಾ ತನ್ನ ಪಾದಕಮಲಗಳಿಗೆ ಬಿದ್ದ ಸುಗ್ರೀವನನ್ನು ಮೇಲೆತ್ತಿದ  ಶ್ರೀರಾಮನು, ಅವನನ್ನು ಆಲಿಂಗಿಸುತ್ತಾನೆ. ಸುಗ್ರೀವನಾದರೋ, ರಾಮನ ಸನ್ನಿಧಾನದಲ್ಲಿ  ಕುಳಿತವನಾಗಿ, ರಾಮನ ಅಪ್ಪಣೆಯಂತೆ ತನ್ನ ಕಪಿಗಳಿಗೆ ಆಜ್ಞೆ ಮಾಡುತ್ತಾನೆ:    

ಸಮಸ್ತದಿಕ್ಷು ಪ್ರಹಿತೇಷು ತೇನ ಪ್ರಭುರ್ಹನೂಮನ್ತಮಿದಂ ಬಭಾಷೇ ।
ನ ಕಶ್ಚಿದೀಶಸ್ತ್ವದೃತೇsಸ್ತಿ ಸಾಧನೇ ಸಮಸ್ತಕಾರ್ಯ್ಯಪ್ರವರಸ್ಯ ಮೇsಸ್ಯ ॥೬.೩೩॥

ಸುಗ್ರೀವನಿಂದ ಎಲ್ಲಾ ದಿಕ್ಕುಗಳಿಗೆ ವಾನರರು ಕಳುಹಿಸಲ್ಪಡಲು, ರಾಮಚಂದ್ರನು ಹನುಮಂತನನ್ನು ಕುರಿತು ಹೇಳುತ್ತಾನೆ: “ನನ್ನ ಎಲ್ಲಾ ಕೆಲಸವನ್ನೂ ಸಾಧನೆ ಮಾಡಲು ನಿನ್ನನ್ನು ಬಿಟ್ಟು ಇನ್ನಾರೂ ಕೂಡಾ ಸಮರ್ಥರಲ್ಲ” ಎಂದು.

ಅತಸ್ತ್ವಮೇವ ಪ್ರತಿಯಾಹಿ ದಕ್ಷಿಣಾಂ ದಿಶಂ ಸಮಾದಾಯ ಮದಙ್ಗುಲೀಯಕಮ್ ।
ಇತೀರಿತೋsಸೌ ಪುರುಷೋತ್ತಮೇನ ಯಯೌ ದಿಶಂ ತಾಂ ಯುವರಾಜಯುಕ್ತಃ॥೬.೩೪॥

“ನನ್ನ ಉಂಗುರವನ್ನು ತೆಗೆದುಕೊಂಡು ದಕ್ಷಿಣ ದಿಕ್ಕಿಗೆ ಹೋಗು” ಎಂದು ಶ್ರೀರಾಮನಿಂದ ಹೇಳಲ್ಪಟ್ಟ ಹನುಮಂತನು, ರಾಮಚಂದ್ರನಿಂದ  ಪ್ರಚೋಧಿತನಾಗಿ, ಯುವರಾಜ ಅಂಗದನೊಂದಿಗೆ  ಕೂಡಿಕೊಂಡು, ದಕ್ಷಿಣ ದಿಕ್ಕಿನತ್ತ ತೆರಳುತ್ತಾನೆ.

ಸಮಸ್ತದಿಕ್ಷು ಪ್ರತಿಯಾಪಿತಾ ಹಿ ತೇ ಹರೀಶ್ವರಾಜ್ಞಾಮುಪಧಾರ್ಯ್ಯ ಮಾಸತಃ ।
ಸಮಾಯ ಯುಸ್ತೇSಙ್ಗದಜಾಮ್ಬವನ್ಮುಖಾಃ ಸುತೇನ ವಾಯೋಃ ಸಹಿತಾ ನ ಚಾSಯಯುಃ ॥೬.೩೫॥

ಸುಗ್ರೀವನ ಅಣತಿಯನ್ನು ಹೊತ್ತು ಎಲ್ಲಾ ದಿಕ್ಕುಗಳಿಗೆ ಕಳುಹಿಸಲ್ಪಟ್ಟ ಆ ಕಪಿಗಳು ಕೊಟ್ಟ ಒಂದು ತಿಂಗಳ ಕಾಲಾವಕಾಶದೊಳಗೆ ಮರಳಿ ಬರುತ್ತಾರೆ. ಆದರೆ  ಹನುಮಂತನಿಂದ ಕೂಡಿದ ಅಂಗದ, ಜಾಂಬವಂತನೇ ಮೊದಲಾದವರು ಮರಳಿ ಬರಲಿಲ್ಲ.

No comments:

Post a Comment