ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, May 27, 2018

Mahabharata Tatparya Nirnaya Kannada 7.01-7.03


೭. ಹನೂಮತ್ ಪ್ರತಿಯಾನಮ್


ಓಂ॥
ರಾಮಾಯ ಶಾಶ್ವತಸುವಿಸ್ತೃತಷಡ್ಗುಣಾಯ ಸರ್ವೇಶ್ವರಾಯ ಸುಖಸಾರಮಹಾರ್ಣ್ಣವಾಯ।
ನತ್ವಾ ಲಿಲಙ್ಘಯಿಷುರರ್ಣ್ಣವಮುತ್ಪಪಾತ ನಿಷ್ಪೀಡ್ಯತಂ ಗಿರಿವರಂ ಪವನಸ್ಯಸೂನುಃ ॥೦೭-೦೧॥

ಪವನಪುತ್ರ ಹನುಮಂತನು ಎಂದೆಂದೂ ಇರುವ, ಅತ್ಯಂತ ವಿಸ್ತೃತಿಯನ್ನು ಹೊಂದಿರುವ, ಐಶ್ವರ್ಯ-ವೀರ್ಯ ಮೊದಲಾದ ಆರು ಗುಣಗಳನ್ನು ಹೊಂದಿರುವ, ಎಲ್ಲರ ಒಡೆಯನಾದ, ಸುಖದ ಸಾರಕ್ಕೆ ಕಡಲಿನಂತೆ ಇರುವ ರಾಮಚಂದ್ರನಿಗೆ ನಮಸ್ಕರಿಸಿ, ಸಮುದ್ರವನ್ನು ದಾಟಲು ಬಯಸಿದವನಾಗಿ ಗಟ್ಟಿಯಾಗಿ ಮಹೇಂದ್ರ ಪರ್ವತಕ್ಕೆ ಕಾಲನ್ನು ಒತ್ತಿ ಮೇಲಕ್ಕೆ ಹಾರಿದನು.

ಚುಕ್ಷೋಭ ವಾರಿಧಿರನುಪ್ರಯಯೌ ಚ ಶೀಘ್ರಂ ಯಾದೋಗಣೈಃ ಸಹ ತದೀಯಬಲಾಭಿಕೃಷ್ಟಃ ।
ವೃಕ್ಷಾಶ್ಚ  ಪರ್ವತಗತಾಃ ಪವನೇನ ಪೂರ್ವಂ ಕ್ಷಿಪ್ತೋsರ್ಣ್ಣವೇ ಗಿರಿರುದಾಗಮದಸ್ಯ ಹೇತೋಃ॥೦೭.೦೨॥

ಹನುಮಂತನ ಬಲದಿಂದ ಸೆಳೆಯಲ್ಪಟ್ಟ ಸಮುದ್ರವು, ಜಲಚರ ಪ್ರಾಣಿಗಳಿಂದ ಕೂಡಿಕೊಂಡು ಅಲ್ಲೋಲ-ಕಲ್ಲೋಲವಾಗಿ ಹನುಮಂತನನ್ನು ಹಿಂಬಾಲಿಸಿತು. ಹನುಮಂತ ನಿಂತಿದ್ದ ಮಹೇಂದ್ರ ಪರ್ವತದಲ್ಲಿರುವ ವೃಕ್ಷಗಳೂ ಕೂಡಾ ಹನುಮಂತನನ್ನು ಅನುಸರಿಸಿದವು. [ವಾಲ್ಮೀಕಿ ರಾಮಾಯಣದಲ್ಲಿ ಈ ಪ್ರಸಂಗವನ್ನು ವಿವರವಾಗಿ ವಿವರಿಸಿರುವುದನ್ನು ನಾವು ಕಾಣಬಹುದು. ಅಲ್ಲಿ ಈ ದೃಶ್ಯವನ್ನು ಪ್ರಸ್ಥಿತಂ ದೀರ್ಘಮಧ್ವಾನಂ  ಸ್ವಬಂಧುಮಿವ ಬಾಂಧವಾಃ(ಸುಂದರಕಾಂಡ ೧.೪೭)  ಎಂದು ವರ್ಣಿಸಿದ್ದಾರೆ. ಯಾವ ರೀತಿ ಬಹಳ ದೂರ ಹೊರಟಿರುವ ಬಂಧುವನ್ನು ಬೀಳ್ಕೊಡಲು ಬಂಧುಗಳೆಲ್ಲರೂ  ಸ್ವಲ್ಪದೂರ ಜೊತೆಗೆ ಬರುತ್ತಾರೋ ಹಾಗೆ,  ಬುಡಸಹಿತ ಕಿತ್ತುಬಂದ ವೃಕ್ಷಗಳು ಹನುಮಂತನನ್ನು ಹಿಂಬಾಲಿಸಿದವು.]   
ಹನುಮಂತನು ಹೀಗೆ ಲಂಕೆಯತ್ತ ಸಾಗುತ್ತಿರಲು, ಹಿಂದೆ ಮುಖ್ಯಪ್ರಾಣನಿಂದ ಸಮುದ್ರದಲ್ಲಿ ಎಸೆಯಲ್ಪಟ್ಟ ಮೈನಾಕ ಎಂಬ  ಪರ್ವತವು ಮೇಲೆ ಬಂದಿತು(ಹನುಮಂತನ ಕಾರಣದಿಂದ ಮೇಲೆ ಬಂದಿತು).

ಸ್ಯಾಲೋ ಹರಸ್ಯ ಗಿರಿಪಕ್ಷವಿನಾಶಕಾಲೇ ಕ್ಷಿಪ್ತ್ವಾsರ್ಣ್ಣವೇ ಸ ಮರುತೋರ್ವರಿತಾತ್ಮಪಕ್ಷಃ ।
ಹೈಮೋ ಗಿರಿಃ ಪವನಜಸ್ಯ ತು ವಿಶ್ರಮಾರ್ತ್ಥಮುದ್ಭಿದ್ಯ ವಾರಿಧಿಮವರ್ದ್ಧದನೇಕಸಾನುಃ ॥೭.೦೩॥

ಹಿಂದೆ, ಪರ್ವತಗಳಿಗೆ ರೆಕ್ಕೆ ಇದ್ದು, ಇಂದ್ರನು ಎಲ್ಲಾ ಪರ್ವತಗಳ ರೆಕ್ಕೆಯನ್ನು ಛೇದಿಸುವ ಕಾಲದಲ್ಲಿ, ರುದ್ರನ ಹೆಂಡತಿಯ ತಮ್ಮನಾಗಿರುವ ಮೈನಾಕ ಎನ್ನುವ ಪರ್ವತವು, ಮುಖ್ಯಪ್ರಾಣನಿಂದ  ಸಮುದ್ರಕ್ಕೆ ಎಸೆಯಲ್ಪಟ್ಟು, ತನ್ನ ರೆಕ್ಕೆಯನ್ನು ಉಳಿಸಿಕೊಂಡಿತ್ತು. ಬಂಗಾರದ ಬಣ್ಣದ ಈ ಮೈನಾಕ, (ಉಪಕಾರ ಸ್ಮರಣೆಯಿಂದ)ಹನುಮಂತನ ವಿಶ್ರಾಂತಿಗಾಗಿ ಸಮುದ್ರವನ್ನು ಸೀಳಿ ಮೇಲೆ ಬಂದು,  ಬಹಳ ಶಿಖರವುಳ್ಳದ್ದಾಗಿ ಕಾಣಿಸಿಕೊಂಡಿತು.

No comments:

Post a Comment