ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, May 25, 2018

Mahabharata Tatparya Nirnaya Kannada 6.56-6.59


ಅಪೂರಿತೇ ತೈಃ ಸಕಲೈಃ ಶತಸ್ಯ ಗಮಾಗಮೇ ಶತ್ರುಬಲಂ ಚ ವೀಕ್ಷ್ಯ ।
ಸುದುರ್ಗ್ಗಮತ್ವಂ ಚ ನಿಶಾಚರೇಶಪುರ್ಯ್ಯಾಃ ಸ ಧಾತುಃ ಸುತ ಆಬಭಾಷೇ ॥೬.೫೬॥

ಅವರೆಲ್ಲರಿಂದಲೂ  ನೂರು ಯೋಜನ ದೂರ ಹಾರಿ ಹೋಗಿ-ಬರುವುದರಲ್ಲಿ ಶಕ್ತಿಯು ಪೂರ್ಣವಾಗಿರದಿರಲು, ಬ್ರಹ್ಮನ ಮಗನಾದ ಜಾಂಬವಂತನು ಲಂಕೆಯಲ್ಲಿರಬಹುದಾದ ಶತ್ರು ಬಲವನ್ನು,  ರಾವಣನ ಪಟ್ಟಣವನ್ನು ಪ್ರವೇಶಿಸಲು ಇರಬಹುದಾದ  ಕಷ್ಟಗಳನ್ನು ವಿಚಾರ ಮಾಡಿ ಮಾತನಾಡುತ್ತಾನೆ: 

ಅಯಂ ಹಿ ಗೃಧ್ರಃ ಶತಯೋಜನಂ ಗಿರಿಂ ತ್ರಿಕೂಟಮಾಹೇತ ಉತಾತ್ರ ವಿಘ್ನಾಃ ।
ಭವೇಯುರನ್ಯೇsಪಿ ತತೋ ಹನೂಮಾನೇಕಃ ಸಮರ್ತ್ಥೋ ನ ಪರೋsಸ್ತಿ ಕಶ್ಚಿತ್ ॥೬.೫೭॥

ಜಾಂಬವಂತ ಹೇಳುತ್ತಾನೆ: “ಸಂಪಾತಿ ಹೇಳುವಂತೆ ಲಂಕಾಪಟ್ಟಣದ ಬಳಿ ಇರುವ ತ್ರಿಕೂಟ ಪರ್ವತ ಸುಮಾರು ನೂರು ಯೋಜನ  ದೂರದಲ್ಲಿದೆ. ಅಲ್ಲಿಗೆ ಕೇವಲ ಹಾರಿ ತಲುಪಿದರೆ ಸಾಲದು. ಅಲ್ಲಿ ಅನೇಕ ವಿಘ್ನಗಳು ಸಂಭವಿಸಬಹುದು. ಅದಲ್ಲದೆ  ಅಲ್ಲಿ ಬೇರೆಬೇರೆ  ಸಮಸ್ಯೆಗಳೂ ಎದುರಾಗಬಹುದು. ಆ ಕಾರಣದಿಂದ ನಮ್ಮಲ್ಲಿ ಈ ಕಾರ್ಯಕ್ಕೆ ಸಮರ್ಥನೆನಿಸಿರುವವನು ಕೇವಲ  ಹನುಮಂತನೊಬ್ಬನೇ.  ಇನ್ನ್ಯಾರಿಂದಲೂ ಈ ಕಾರ್ಯ ಸಾಧ್ಯವಿಲ್ಲಾ”  ಎಂದು.

ಉಕ್ತ್ವಾಸ ಇತ್ಥಂ ಪುನರಾಹ ಸೂನುಂ ಪ್ರಾಣಸ್ಯ ನಿಃಸ್ಸೀಮಬಲಂ ಪ್ರಶಂಸಯನ್ ।
ತ್ವಮೇಕ ಏವಾತ್ರ ಪರಂ ಸಮರ್ತ್ಥಃ ಕುರುಷ್ವ ಚೈತತ್ ಪರಿಪಾಹಿ ವಾನರಾನ್ ॥೬.೫೮॥

ಜಾಂಬವಂತ ‘ಹನುಮಂತನೊಬ್ಬನಿಂದಲೇ ಈ ಕಾರ್ಯ ಸಾಧ್ಯ’ ಎಂದು ಹೇಳಿ, ಆತನ  (ಮುಖ್ಯಪ್ರಾಣನ) ಸೀಮೆ ಇಲ್ಲದ ಬಲವನ್ನು ಪ್ರಶಂಸೆ ಮಾಡುತ್ತಾ ಸ್ತೋತ್ರ ಮಾಡುತ್ತಾನೆ. “ನೀನೊಬ್ಬನೇ ಈ ವಿಷಯದಲ್ಲಿ ಸಮರ್ಥನಾಗಿರುವುದರಿಂದ ಈ ಕಾರ್ಯವನ್ನು ನೀನು ಮಾಡಿ ಎಲ್ಲಾ ಕಪಿಗಳನ್ನು ರಕ್ಷಿಸು” ಎನ್ನುತ್ತಾನೆ ಜಾಂಬವಂತ.

ಇತೀರಿತೋsಸೌ ಹನುಮಾನ್ ನಿಜೇಪ್ಸಿತಂ ತೇಷಾಮಶಕ್ತಿಂ ಪ್ರಕಟಾಂ ವಿಧಾಯ ।
ಅವರ್ದ್ಧತಾsಶು ಪ್ರವಿಚಿನ್ತ್ಯ ರಾಮಂ ಸುಪೂರ್ಣ್ಣಶಕ್ತಿಂ ಚರಿತೋಸ್ತದಾಜ್ಞಾಮ್ ॥೬.೫೯॥

ಈ ರೀತಿಯಾಗಿ ತನಗೆ ಇಷ್ಟವಾದ ಕೆಲಸದ ಕುರಿತೇ ಹೇಳಲ್ಪಟ್ಟವನಾದ ಹನುಮಂತನು, ಆ ಎಲ್ಲಾ ಕಪಿಗಳ ಅಸಾಮರ್ಥ್ಯವನ್ನು ಎಲ್ಲರಿಗೂ ಸ್ಪಷ್ಟವಾಗಿ ತೋರುವ ಹಾಗೆ ಮಾಡಿ, ಪೂರ್ಣಬಲವುಳ್ಳ ಶ್ರೀರಾಮನನ್ನು ಚಿಂತಿಸಿ, ಅವನ ಆಜ್ಞೆಯನ್ನು ನೆರವೇರಿಸುವುದಕ್ಕಾಗಿ ಬೆಳೆದು ನಿಂತನು.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಚರಿತೇ ಸಮುದ್ರತರಣನಿಶ್ಚಯೋನಾಮ ಷಷ್ಠೋsಧ್ಯಾಯಃ ॥


*********

No comments:

Post a Comment