ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, May 30, 2018

Mahabharata Tatparya Nirnaya Kannada 7.07-7.09


ಲಙ್ಕಾವನಾಯ ಸಕಲಸ್ಯ ಚ ನಿಗ್ರಹೇsಸ್ಯಾಃ ಸಾಮರ್ತ್ಥ್ಯಮಪ್ರತಿಹತಂ ಪ್ರದದೌ ವಿಧಾತಾ ।
ಛಾಯಾಮವಾಕ್ಷಿಪದಸೌ ಪವನಾತ್ಮಜಸ್ಯ ಸೋsಸ್ಯಾಃ ಶರೀರಮನುವಿಶ್ಯ ಬಿಭೇದ ಚಾsಶು ॥೭.೦೭॥

ಲಂಕೆಯನ್ನು ರಕ್ಷಿಸಲು ‘ಸಿಂಹಿಕೆ’ ಎಂಬ ರಾಕ್ಷಸಿಗೆ  ಎದುರಿಲ್ಲದ ಶಕ್ತಿಯನ್ನು ಬ್ರಹ್ಮನು ವರವಾಗಿ  ನೀಡಿದ್ದನು. ಆ ಪಿಶಾಚಿಯು ಲಂಕೆಯತ್ತ ಸಾಗುತ್ತಿದ್ದ ಹನುಮಂತನ ನೆರಳನ್ನು ಹಿಡಿದುಕೊಂಡಿತು. ಆಗ ಹನುಮಂತನು ಅವಳ ಶರೀರವನ್ನು ಪ್ರವೇಶಿಸಿ, ಆಕೆಯ ದೇಹವನ್ನು ಸೀಳಿದನು.

ನಿಸ್ಸೀಮಮಾತ್ಮಬಲಮಿತ್ಯನುದರ್ಶಯಾನೋ ಹತ್ವೈವ ತಾಮಪಿ ವಿಧಾತೃವರಾಭಿಗುಪ್ತಾಮ್ 
ಲಮ್ಬೇ ಸ ಲಮ್ಬಶಿಖರೇ ನಿಪಪಾತ ಲಙ್ಕಾಪ್ರಾಕಾರರೂಪಕಗಿರಾವಥ ಸಞ್ಚುಕೋಚ ॥೭.೦೮॥

ತನ್ನ ಬಲ ಎಣೆಯಿಲ್ಲದ್ದು ಎಂದು ಲೋಕಕ್ಕೆ ತೋರುತ್ತಾ, ಬ್ರಹ್ಮನ ವರಬಲದಿಂದ ರಕ್ಷಿತಳಾಗಿದ್ದ ‘ಸಿಂಹಿಕೆ’ಯನ್ನು ಕೊಂದ ಹನುಮಂತ, ಲಂಕೆಯ ಪ್ರಾಖಾರ ರೂಪದಲ್ಲಿ ಇರುವ ‘ಲಮ್ಬ’ ಎನ್ನುವ ಎತ್ತರದ ಶಿಖರದ ಮೇಲೆ ಇಳಿದನು. ಈರೀತಿ ಲಂಕೆಯನ್ನು ತಲುಪಿದ ಹನುಮಂತ, ಲಂಕಾ ನಗರವನ್ನು ಪ್ರವೇಶ ಮಾಡಲು ನಿಶ್ಚಯಿಸಿಯಾದಮೇಲೆ ತನ್ನ ರೂಪವನ್ನು ಸಂಕುಚಗೊಳಿಸಿಕೊಂಡನು.

ಭೂತ್ವಾಬಿಲಾಳಸಮಿತೋ ನಿಶಿತಾಂ ಪುರೀಂ ಚ ಪ್ರಾಪ್ಸ್ಯನ್ ದದರ್ಶ ನಿಜರೂಪವತೀಂ ಸ ಲಙ್ಕಾಮ್ ।

ರುದ್ಧೋsನಯಾssಶ್ವಥ ವಿಜಿತ್ಯ ಚ ತಾಂ ಸ್ವಮುಷ್ಟಿಪಿಷ್ಟಾಂ ತಯಾsನುಮತ ಏವ ವಿವೇಶ ಲಙ್ಕಾಮ್ ॥೭.೦೯॥


ಬೆಕ್ಕಿಗೆ ಸಮವಾದ ಪರಿಮಾಣದ ದೇಹವನ್ನು ಹೊಂದಿ, ರಾತ್ರಿಯಲ್ಲಿ ಆ ಪಟ್ಟಣವನ್ನು ಹೊಂದುತ್ತಾ, ಲಂಕಾಭಿಮಾನಿ ದೇವತೆಯೇ ಎದ್ದು ಬಂದದ್ದನ್ನು ಹನುಮಂತ ಕಂಡನು. ಅವಳಿಂದ ತಡೆಯಲ್ಪಟ್ಟವನಾಗಿ, ಕೂಡಲೇ ತನ್ನ ಎಡಗೈ ಹೊಡೆತದಿಂದ ಅವಳನ್ನು ಗೆದ್ದು, ಅವಳಿಂದ ಅನುಮತಿಯನ್ನು ತೆಗೆದುಕೊಂಡೇ ಲಂಕೆಯನ್ನು ಪ್ರವೇಶಿಸಿದನು.


[ವಾಲ್ಮೀಕಿ ರಾಮಾಯಣದಲ್ಲಿ (ಸುಂದರಕಾಂಡ ೩.೪೭-೫೦)  ಈ ಕುರಿತಾದ ವಿವರಣೆ ಕಾಣಸಿಗುತ್ತದೆ: ‘ಸ್ವಯಂಭುವಾ ಪುರಾ ದತ್ತಂ ವರದಾನಂ ಯಥಾ ಮಮ । ಯದಾ ತ್ವಾಂ ವಾನರಃ  ಕಶ್ಚಿದ್ ವಿಕ್ರಮಾದ್  ವಶಮಾನಯೇತ್ ।  ತದಾ ತ್ವಯಾ ಹಿ ವಿಜ್ಞೇಯಂ ರಕ್ಷಸಾಂ ಭಯಮಾಗತಂ’. ಲಂಕಾಭಿಮಾನಿ ದೇವತೆಯನ್ನು ಹನುಮಂತ ಪರಾಕ್ರಮದಿಂದ ಜಯಿಸಿದಾಗ ಆಕೆ ಹೇಳುತ್ತಾಳೆ:  “ಹಿಂದೆ ನನಗೆ ಬ್ರಹ್ಮದೇವರು ಒಂದು ವರವನ್ನು ನೀಡಿದ್ದರು. ‘ಒಬ್ಬ ಕಪಿ ಪರಾಕ್ರಮದಿಂದ ನನ್ನನ್ನು ವಶಪಡಿಸಿಕೊಂಡರೆ ಆಗ ರಾಕ್ಷಸರಿಗೆ ಮಹಾ ವಿಪತ್ತು ಬಂದಿದೆ ಎಂದು ತಿಳಿಯತಕ್ಕದ್ದು’ ಎನ್ನುವುದು ಬ್ರಹ್ಮದೇವರ ಮಾತಾಗಿದೆ.  ತತ್ ಪ್ರವಿಶ್ಯ ಹರಿಶ್ರೇಷ್ಠ ಪುರೀಂ ರಾವಣಪಾಲಿತಾಮ್ ವಿಧಸ್ತ್ವ ಸರ್ವಕಾರ್ಯಾಣಿ  ಯಾನಿಯಾನೀಹ ವಾಂಛಸಿ . ಆದ್ದರಿಂದ ಆ ಕಾಲ ಈಗ ಕೂಡಿ ಬಂದಿದೆ ಎನ್ನುವುದು ನನಗೆ ಅರ್ಥವಾಗಿದೆ. ಹಾಗಾಗಿ ನೀನು ಲಂಕೆಯನ್ನು ಪ್ರವೇಶಿಸಬಹುದು”  ಎಂದು ಹೇಳಿ ಅವಳು ಹನುಮಂತನಿಗೆ  ಲಂಕೆಯನ್ನು ಪ್ರವೇಶಿಸಲು ಅನುಮತಿಯನ್ನು ನೀಡುತ್ತಾಳೆ.]

No comments:

Post a Comment