ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, May 30, 2018

Mahabharata Tatparya Nirnaya Kannada 7.16-7.21

ಕೃತ್ವಾ ಕಾರ್ಯಮಿದಂ ಸರ್ವಂ ವಿಶಙ್ಕಃ ಪವನಾತ್ಮಜಃ ।
ಆತ್ಮಾವಿಷ್ಕರಣೇ ಚಿತ್ತಂ ಚಕ್ರೇ ಮತಿಮತಾಂ ವರಃ ॥೭.೧೬॥

ಯಾವುದೇ ಭಯವಿಲ್ಲದ, ಈ ಎಲ್ಲಾ ಕೆಲಸಗಳನ್ನು ಮಾಡಿದ, ಬುದ್ಧಿವಂತರಲ್ಲೇ ಶ್ರೇಷ್ಠನಾದ ಹನುಮಂತನು, ತನ್ನನ್ನು ತೋರಿಸಿಕೊಳ್ಳಲು ಸಂಕಲ್ಪ ಮಾಡಿದನು[ರಾಮಧೂತನಾಗಿ ಬಂದಿರುವ ತಾನು ಗುಟ್ಟಾಗಿ ಬಂದು ಹೋಗುವುದು ಸರಿಯಲ್ಲ. ತನ್ನ ಪರಾಕ್ರಮದ ರುಚಿಯನ್ನು ರಾವಣನಿಗೆ ತೋರಿಸಿಯೇ ಹೋಗಬೇಕು ಎಂದು ಸಂಕಲ್ಪ ಮಾಡಿದನು].

ಅಥವನಮಖಿಲಂ ತದ್ ರಾವಣಸ್ಯಾವಲುಪ್ಯ ಕ್ಷಿತಿರುಹಮಿಮಮೇಕಂ ವರ್ಜ್ಜಯಿತ್ವಾssಶು ವೀರಃ ।
ರಜನಿಚರವಿನಾಶಂ ಕಾಙ್ಕ್ಷಮಾಣೋsತಿವೇಲಂ ಮುಹುರತಿರವನಾದೀ ತೋರಣಂ ಚಾsರುರೋಹ ॥೭.೧೭॥

ಸೀತೆ ಕುಳಿತಿದ್ದ ಶಿಂಶಪಾವೃಕ್ಷ ಒಂದನ್ನು ಬಿಟ್ಟು, ರಾವಣನ ಆ ಎಲ್ಲಾ  ಕಾಡನ್ನು ನಾಶಮಾಡಿ, ರಾಕ್ಷಸರ ನಾಶವನ್ನು ಉತ್ಕಂಠತೆಯಿಂದ ಮಾಡಲು ಬಯಸಿದ ಹನುಮಂತ, ಮತ್ತೆ ದೊಡ್ಡದಾಗಿ ಶಬ್ದ ಮಾಡುತ್ತಾ ತೋರಣವನ್ನು ಹತ್ತಿ ಕುಳಿತನು.

ಅಥಾಶೃಣೋದ್ ದಶಾನನಃ ಕಪೀನ್ದ್ರಚೇಷ್ಟಿತಂ ಪರಮ್ ।
ದಿದೇಶ ಕಿಙ್ಕರಾನ್ ಬಹೂನ್ ಕಪಿರ್ನ್ನಿಗೃಹ್ಯತಾಮಿತಿ ॥೭.೧೮॥

ತದನಂತರ ರಾವಣನು ಉತ್ಕೃಷ್ಟವಾದ ಕಪಿಯ ಕ್ರಿಯೆಯನ್ನು ಕೇಳಿ, ಬಹುಮಂದಿ ಕಿಂಕರರೆಂಬ ರಾಕ್ಷಸರನ್ನು ಕರೆದು ‘ಕಪಿಯನ್ನು ಹಿಡಿಯಲು’ ಆದೇಶಿಸಿದನು.

ಸಮಸ್ತಶೋ ವಿಮೃತ್ಯವೋ ವರಾದ್ಧರಸ್ಯ ಕಿಙ್ಕರಾಃ ।
ಸಮಾಸದನ್ ಮಹಾಬಲಂ ಸುರಾನ್ತರಾತ್ಮನೋsಙ್ಗಜಮ್ ॥೭.೧೯॥

ಅವರೆಲ್ಲರೂ ಕೂಡಾ ಮರಣ ಇಲ್ಲದ ರಾಕ್ಷಸರು. ಅವರಿಗೆ ರುದ್ರ ದೇವರ ವರವಿತ್ತು. ಆ ಎಲ್ಲಾ ದೈತ್ಯರು  ಮಹಾ ಬಲಿಷ್ಠನಾದ ಹನುಮಂತನನ್ನು ಹೊಂದಿದರು. ಆಚಾರ್ಯರು ಹನುಮಂತನನ್ನು ಇಲ್ಲಿ ‘ಸುರಾನ್ತರಾತ್ಮನಃ ಅಙ್ಗಜಮ್’ ಎನ್ನುವ ವಿಶೇಷಣದಿಂದ ಸಂಬೋಧಿಸಿದ್ದಾರೆ.  ಅಂದರೆ ‘ದೇವತೆಗಳ ಅಂತರ್ಯಾಮಿಯಾಗಿರುವ ಮುಖ್ಯಪ್ರಾಣನ ಮಗ’ ಎಂದರ್ಥ.

ಅಶೀತಿಕೋಟಿಯೂಥಪಂ ಪುರಸ್ಸರಾಷ್ಟಕಾಯುತಮ್ ।
ಅನೇಕಹೇತಿಸಙ್ಕುಲಮ್ ಕಪೀನ್ದ್ರಮಾವೃಣೋದ್ ಬಲಮ್ ॥೭.೨೦॥

ಎಂಬತ್ತೆಂಟು ಕೋಟಿ ಜನ ಯೂಥಪರನ್ನೊಳಗೊಂಡ(ಸೇನಾಧಿಪತಿಗಳನ್ನೊಳಗೊಂಡ), ತರತರದ ಆಯುಧಗಳಿಂದ ಕೂಡಿದ ಸೈನ್ಯ ಹನುಮಂತನನ್ನು ಸುತ್ತುವರಿಯಿತು. 

ಸಮಾವೃತಸ್ತಥಾssಯುಧೈಃ ಸತಾಡಿತಶ್ಚತೈರ್ಭೃಶಮ್ ।
ಚಕಾರ ತಾನ್ ಸಮಸ್ತಶಸ್ತಳಪ್ರಹಾರಚೂರ್ಣ್ಣಿತಾನ್ ॥೭.೨೧॥

ಆಯುಧಗಳಿಂದ ಹೊಡೆಯಲ್ಪಟ್ಟವನಾಗಿ, ಅವರಿಂದ ಆವರಿಸಲ್ಪಟ್ಟವನಾಗಿ ಹನುಮಂತನು ಅವರೆಲ್ಲರನ್ನು ಅಂಗೈಯಿಂದ(ಕೈ ಮುಷ್ಠಿಯೂ  ಮಾಡದೇ) ಪುಡಿಪುಡಿ ಮಾಡಿದನು.  

No comments:

Post a Comment