ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, June 3, 2018

Mahabharata Tatparya Nirnaya Kannada 7.22-7.29


ಪುನಶ್ಚ ಮನ್ತ್ರಿಪುತ್ರಕಾನ್ ಸ ರಾವಣಪ್ರಚೋದಿತಾನ್ ।
ಮಮರ್ದ್ಧ ಸಪ್ತ ಪರ್ವತಪ್ರಭಾನ್ ವರಾಭಿರಕ್ಷಿತಾನ್ ॥೭.೨೨॥

ಬಲಾಗ್ರಗಾಮಿನಸ್ತಥಾ ಸ ಶರ್ವವಾಕ್ಸುಗರ್ವಿತಾನ್ ।
ನಿಹತ್ಯ ಸರ್ವರಕ್ಷಸಾಂ ತೃತೀಯಭಾಗಮಕ್ಷಿಣೋತ್ ॥೭.೨೩॥

ಮತ್ತೂ ಕೂಡಾ  ಹನುಮಂತನು ರಾವಣನಿಂದ ಕಳುಹಿಸಲ್ಪಟ್ಟ,  ಪರ್ವತ ಸದೃಶರಾದ, ರುದ್ರನ ವರ ಬಲದಿಂದ ಅತ್ಯಂತ ಗರ್ವಿಷ್ಠರಾಗಿದ್ದ, ಏಳು ಮಂದಿ  ಮಂತ್ರಿಯ ಮಕ್ಕಳನ್ನು ಕೊಂದನು. ಅವರೆಲ್ಲರೂ ಕೂಡಾ ಸೇನೆಯ ಮುಂದೆ ನಿಂತು ಯುದ್ಧ ಮಾಡುವ ಮುಂದಾಳುಗಳಾಗಿದ್ದರು. ಅವರೆಲ್ಲರನ್ನೂ ಕೊಂದು, ರಾಕ್ಷಸ ಸೇನೆಯ ಮೂರನೇ ಒಂದು ಭಾಗವನ್ನುಹನುಮಂತ  ನಾಶ ಮಾಡಿದನು.

ಅನೌಪಮಂ ಹರೇರ್ಬಲಂ ನಿಶಮ್ಯ ರಾಕ್ಷಸಾಧಿಪಃ ।
ಕುಮಾರಮಕ್ಷಮಾತ್ಮನಃ ಸಮಂ ಸುತಂ ನ್ಯಯೋಜಯತ್ ॥೭.೨೪॥

ಕಪಿಯ ಬಲವು ಎಣಿಕೆಗೆ ನಿಲುಕದ್ದು ಎನ್ನುವುದನ್ನು ಕೇಳಿ ತಿಳಿದ  ರಾವಣನು, ಹನುಮಂತನನ್ನು ಎದುರಿಸಲು, ಬಲದಲ್ಲಿ ತನಗೆ ಸಮನಾಗಿರುವ, ತನ್ನ ಮಗನಾದ  ಅಕ್ಷಕುಮಾರನನ್ನು  ನಿಯೋಗಿಸಿದನು. 

ಸ ಸರ್ವಲೋಕಸಾಕ್ಷಿಣಃ ಸುತಂ ಶರೈರ್ವವರ್ಷ ಹ ।
ಶಿತೈರ್ವರಾಸ್ತ್ರಮನ್ತ್ರಿತೈರ್ನ್ನಚೈನಮಭ್ಯಚಾಲಯತ್ ॥೭.೨೫॥

ಅಕ್ಷಕುಮಾರನು ಎಲ್ಲಾ ಲೋಕಗಳಿಗೂ ಅಂತರ್ಯಾಮಿಯಾಗಿ ಸಾಕ್ಷಿಯಾಗಿರುವ, ಮುಖ್ಯಪ್ರಾಣನ ಮಗನಾಗಿರುವ ಹನುಮಂತನನ್ನು ಚೂಪಾಗಿರುವ ಅಸ್ತ್ರದಿಂದ, ಅಭಿಮಂತ್ರಿತ ಬಾಣಗಳಿಂದ ಪೀಡಿಸಲು ಪ್ರಯತ್ನಿಸಿದನು. ಆದರೆ ಅವನಿಂದ ಹನುಮಂತನನ್ನು ಆಲುಗಾಡಿಸಲಾಗಲಿಲ್ಲಾ.

ಸ ಮಣ್ಡಮಧ್ಯಕಾಸುತಂ ಸಮೀಕ್ಷ್ಯ ರಾವಣೋಪಮಮ್ ।
ತೃತೀಯ ಏಷ ಚಾಂಶಕೋ ಬಲಸ್ಯ ಹೀತ್ಯಚಿನ್ತಯತ್ ॥೭.೨೬॥

ಹನುಮಂತನು ಬಲದಲ್ಲಿ ರಾವಣನಿಗೆ ಸಮನಾದ ಮಂಡೋದರಿಯ ಮಗನನ್ನು ನೋಡಿ, ಇವನು ಬಲದಲ್ಲಿ ರಾವಣನ ಒಟ್ಟು ಬಲದ  ಮೂರನೇ ಒಂದು ಭಾಗಕ್ಕೆ ಸಮನಾಗಿರುವವನು ಎಂದು ಚಿಂತಿಸಿದನು. [ಉಳಿದ ಎರಡು ಭಾಗ ಇಂದ್ರಜಿತ್ ಮತ್ತು ರಾವಣ]

ನಿದಾರ್ಯ್ಯ ಏವ ರಾವಣಃ ಸ ರಾಘವಸ್ಯ ನಾನ್ಯಥಾ ।
ಯದೀನ್ದ್ರಜಿನ್ಮಯಾ ಹತೋ ನಚಾಸ್ಯ ಶಕ್ತಿರೀಕ್ಷ್ಯತೇ ॥೭.೨೭ ॥

ರಾವಣ ರಾಘವನ ಭಾಗವೆಂದು ನಿರ್ಧರಿಸಲ್ಪಡಬೇಕಾದವನು(ಅಂದರೆ ರಾವಣನಿಗೆ ತಕ್ಕ ಶಾಸ್ತಿಯನ್ನುಶ್ರೀರಾಮನೇ ಮಾಡಬೇಕು). ಇದು ಬೇರೆ ರೀತಿಯಾಗಿ ಆಗಲು ಸಾಧ್ಯವಿಲ್ಲ. ಆದ್ದರಿಂದ ನಾನು ಅವನನ್ನು ನಿಗ್ರಹಿಸಬಾರದು. ಇಂದ್ರಜಿತುವನ್ನು ನಾನು ಕೊಂದರೆ ಅವನ ಶಕ್ತಿಯು(ಆತನ ಅಸ್ತ್ರ-ಶಸ್ತ್ರ ಕೌಶಲ) ಯಾರಿಗೂ ಕಾಣಸಿಗುವುದಿಲ್ಲ.

ಅತಸ್ತಯೋಃ ಸಮೋ ಮಯಾ ತೃತೀಯ ಏಷ ಹನ್ಯತೇ ।
ವಿಚಾರ್ಯ್ಯ ಚೈವಮಾಶು ತಂ ಪದೋಃ ಪ್ರಗೃಹ್ಯ ಪುಪ್ಲುವೇ ॥೭.೨೮॥

‘ಅದರಿಂದ ಅವರಿಬ್ಬರಿಗೆ ಬಲದಲ್ಲಿ ಸಮನಾದ ಈ ಮೂರನೆಯವನನ್ನು ನಾನು ಕೊಲ್ಲುತ್ತೇನೆ’ ಎಂಬುದಾಗಿ ಚಿಂತಿಸಿದ ಹನುಮಂತನು, ಅಕ್ಷಕುಮಾರನನ್ನು  ತನ್ನ ಪಾದಗಳಲ್ಲಿ ಹಿಡಿದು ಮೇಲೆ  ಹಾರಿದನು.

ಸ ಚಕ್ರವದ್ ಭ್ರಮಾತುರಂ ವಿಧಾಯ ರಾವಣಾತ್ಮಜಮ್ ।
ಅಪೋಥಯದ್ ಧರಾತಳೇ ಕ್ಷಣೇನ ಮಾರುತೀ ತನುಃ ॥೭.೨೯॥

ಹನುಮಂತನು ರಾವಣನ ಮಗನಾದ ಅಕ್ಷಕುಮಾರನನ್ನು ಗಾಳಿಯಲ್ಲಿ ಚಕ್ರದಂತೆ ಗಿರಗಿರನೆ ತಿರುಗಿಸಿ, ಕೆಲವೇ ಕ್ಷಣಗಳಲ್ಲಿ  ಭೂಮಿಗೆ ಅಪ್ಪಳಿಸಿದನು. 

No comments:

Post a Comment