ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, December 4, 2019

Mahabharata Tatparya Nirnaya Kannada 1476_1480


ದುರ್ಯ್ಯೋಧನೇನ ಪೃಥುಮನ್ತ್ರಬಲೋಪಹೂತಾಂಸ್ತತ್ಸಾರಥಿಃ ಫಣಿಗಣಾನ್ ಪವನಾತ್ಮಜಸ್ಯ
ಸುಪ್ತಸ್ಯ ವಿಸ್ತೃತ ಉರಸ್ಯಮುಚದ್ ವಿಶೀರ್ಣ್ಣದನ್ತಾ ಬಭೂವುರಮುಮಾಶು ವಿದಶ್ಯ ನಾಗಾಃ ೧೪.೭೬

ದುರ್ಯೋಧನನಿಂದ ಉಗ್ರವಾದ ಮಂತ್ರದ ಬಲದಿಂದ ಕರೆಯಲ್ಪಟ್ಟ ಆ ಹಾವುಗಳ ಸಮೂಹವನ್ನು ದುರ್ಯೋಧನನ ಸಾರಥಿಯು ಮಲಗಿರುವ ಪವನಾತ್ಮಜನ(ಭೀಮಸೇನನ) ಅಗಲವಾದ ಎದೆಯಮೇಲೆ ಬಿಟ್ಟನು. ಈರೀತಿ ಬಿಟ್ಟ ತಕ್ಷಣ ಆ  ಉರನಾಗಗಳು ಭೀಮನನ್ನು ಕಚ್ಚಿದವು ಮತ್ತು ಕಚ್ಚಿ ತಮ್ಮ ಹಲ್ಲುಗಳನ್ನು ಮುರಿದುಕೊಂಡವು.

ಕ್ಷಿಪ್ತ್ವಾ ಸುದೂರಮುರುನಾಗವರಾನಥಾಷ್ಟೌ ತದ್ವಂಶಜಾನ್ ಸ ವಿನಿಹತ್ಯ ಪಿಪೀಲಿಕಾವತ್
ಜಘ್ನೇ ಚ ಸೂತಮಪಹಸ್ತತ ಏವ ಭೀಮಃ ಸುಷ್ವಾಪ ಪೂರ್ವವದನುತ್ಥಿತ ಏವ ತಲ್ಪಾತ್ ೧೪.೭೭

ಭೀಮಸೇನನು ಹಾಸಿಗೆಯಿಂದ ಏಳದೇ, ಹೇಗೆ ಮಲಗಿದ್ದನೋ ಹಾಗೆಯೇ ಎಂಟು ಉತ್ಕೃಷ್ಟವಾದ ನಾಗಗಳ ಸಮೂಹವನ್ನು ಬಹಳ ದೂರಕ್ಕೆ ಎಸೆದು, ಆ ನಾಗ ವಂಶದಲ್ಲಿ ಬಂದಿರುವ ಹಾವುಗಳನ್ನು ಇರುವೆಗಳೋ ಎಂಬಂತೆ ಕೊಂದನು. ನಂತರ ತನ್ನಮೇಲೆ ಹಾವುಗಳನ್ನು ಹರಿಬಿಟ್ಟ ದುರ್ಯೋಧನನ ಸಾರಥಿಯನ್ನು ಕೊಂದು, ಹಾಗೆಯೇ ನಿದ್ರೆ ಮಾಡಿದ ಕೂಡಾ.
[ಈ ಘಟನೆಯ ವಿವರವನ್ನು ನಾವು ಮಹಾಭಾರತದ ಆದಿಪರ್ವದಲ್ಲಿ(೧೩೭.೪೫) ಕಾಣಬಹುದು. ‘ಪ್ರಬುದ್ಧೋ ಭೀಮಸೇನಸ್ತಾನ್  ಸರ್ವಾನ್ ಸರ್ಪಾನಪೋಥಯತ್  ಸಾರಥಿಂ ಚಾಸ್ಯ  ದಯಿತಪಹಸ್ತೇನ ಜಘ್ನಿವಾನ್’ ಭೀಮ ಆ ಎಲ್ಲಾ ಹಾವುಗಳನ್ನು ಮತ್ತು ಸಾರಥಿಯನ್ನು ತನ್ನ ಕೈಯ ಹಿಂಬದಿಯಿಂದಲೇ ಹೊಡೆದು ಕೊಂದ]

ತತ್ ತಸ್ಯ ನೈಜಬಲಮಪ್ರಮಯಂ ನಿರೀಕ್ಷ್ಯ ಸರ್ವೇ ಕ್ಷಿತೀಶತನಯಾ ಅಧಿಕಂ ವಿಷೇದುಃ
ನಿಶ್ವಾಸತೋ ದರ್ಶನಾದಪಿ ಭಸ್ಮ ಯೇಷಾಂ ಭೂಯಾಸುರೇವ ಭುವನಾನಿ ಚ ತೇ ಮೃಷಾssಸನ್ ೧೪.೭೮

ಭೀಮಸೇನನ ಸಹಜವಾಗಿರುವ ಬಲವನ್ನು ತಾವು ದಾಟಲಾಗದೆಂದು ತಿಳಿದ ದ್ವೇಷಿಗಳಾದ ಆ ಎಲ್ಲಾ ರಾಜಕುಮಾರರೂ ಕೂಡಾ ಆತ್ಯಂತಿಕವಾಗಿ ದುಃಖಕ್ಕೆ ಒಳಗಾದರು. ಯಾವ ಹಾವುಗಳ ನಿಟ್ಟುಸಿರಿನಿಂದಲೂ, ದರ್ಶನದಿಂದಲೂ ಕೂಡಾ ಇಡೀ ಲೋಕಗಳೇ ಸ್ಮವಾಗುತ್ತವೋ,  ಅಂತಹ ಹಾವುಗಳೂ ಕೂಡಾ ಭೀಮಸೇನನ ಮುಂದೆ ವ್ಯರ್ಥವೆನಿಸಿದವು.  

ದದ್ಭಿರ್ವಿದಶ್ಯ ನ ವಿಕಾರಮಮುಷ್ಯ ಕರ್ತುಂ ಶೇಕುರ್ಭುಜಙ್ಗಮವರಾ ಅಪಿ ಸುಪ್ರಯತ್ನಾಃ
ಕಸ್ಯಾಪಿ ನೇದೃಶಬಲಂ ಶ್ರುತಪೂರ್ವಮಾಸೀತ್ ದೃಷ್ಟಂ ಕಿಮು ಸ್ಮ ತನಯೇsಪಿ ಹಿರಣ್ಯಕಸ್ಯ ೧೪.೭೯

ಆ ಹಾವುಗಳು ತಮ್ಮ ಹಲ್ಲುಗಳಿಂದ ಕಚ್ಚಿಯೂ ಕೂಡಾ ಭೀಮನಿಗೆ ವಿಕಾರವನ್ನು ಮಾಡಲು ಸಮರ್ಥವಾಗಲಿಲ್ಲ. ಯಾರಲ್ಲೂ ಕೂಡಾ ಈರೀತಿಯಾಗಿರುವ ಬಲವನ್ನು ಹಿಂದೆ ನಾವು ಕೇಳಿಯೇ ಇಲ್ಲಾ, ಇನ್ನು ನೋಡಲಿಲ್ಲಾ ಎಂದು ಏನು ಹೇಳತಕ್ಕದ್ದು? ಹಿರಣ್ಯಕಶಿಪುವಿನ ಪುತ್ರನಾದ ಪ್ರಹ್ಲಾದನಲ್ಲಿಯೂ ಕೂಡಾ ಈ ರೀತಿಯ ಬಲವನ್ನು ನಾವು ಕೇಳಿಲ್ಲ.
(ಭೀಮನಂತೆ ಹಾವುಗಳಿಂದ ತನ್ನನ್ನು ರಕ್ಷಿಸಿಕೊಂಡ ಪ್ರಹ್ಲಾದನ ಬಲಕ್ಕೂ ಮತ್ತು ಭೀಮಸೇನನ ಬಲಕ್ಕೂ ಇರುವ ವ್ಯೆತ್ಯಾಸವೇನು ಎನ್ನುವುದನ್ನು ವಿವರಿಸುತ್ತಾರೆ- )


ಸ್ವಾತ್ಮಾವನಾರ್ತ್ಥಮಧಿಕಾಂ ಸ್ತುತಿಮೇವ ಕೃತ್ವಾ ವಿಷ್ಣೋಃ ಸ ದೈತ್ಯತನಯೋ ಹರಿಣಾsವಿತೋsಭೂತ್
ನತ್ವೌರಸಂ ಬಲಮಮುಷ್ಯ ಸ ಕೃಷ್ಯತೇ ಹಿ ಭೃತ್ಯೈರ್ಬಲಾತ್ ಸ್ವಪಿತುರೌರಸಮಸ್ಯ ವೀರ್ಯ್ಯಮ್ ೧೪.೮೦

ದೈತ್ಯನಾದ ಹಿರಣ್ಯಕಶಿಪುವಿನ ಮಗನಾದ  ಪ್ರಹ್ಲಾದನು ತನ್ನನ್ನು ರಕ್ಷಿಸಿಕೊಳ್ಳಲು ಭಗವಂತನನ್ನು ಸ್ತೋತ್ರಮಾಡಿದನು ಮತ್ತು ನಾರಾಯಣನಿಂದ ರಕ್ಷಿಸಲ್ಪಟ್ಟನು.  ಅವನಿಗೆ ಸಹಜವಾದ ದೈಹಿಕ ಸಾಮರ್ಥ್ಯ ಇರಲಿಲ್ಲ. ಹಾಗಾಗಿ ಅವನು ಭೃತ್ಯರಿಂದ ಬಲಾತ್ಕಾರವಾಗಿ ಎಳೆಯಲ್ಪಟ್ಟನು. ಇವನಿಗಾದರೋ, ತನ್ನ ತಂದೆಯಾದ ಮುಖ್ಯಪ್ರಾಣನ ಸಹಜವಾದ ವೀರ್ಯವಿದೆ.(ಅಂದರೆ: ಯಾವುದೇ ವರ, ಮಂತ್ರ ಬಲವಲ್ಲ, ಸಹಜವಾದ ಬಲದಿಂದಲೇ ಭೀಮ ಎಲ್ಲವನ್ನೂ ಮಾಡುತ್ತಿದ್ದ)

No comments:

Post a Comment