ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, October 2, 2020

Mahabharata Tatparya Nirnaya Kannada 19113_19117

 

ಪಾರ್ತ್ಥೇನ ಸನ್ಧರ್ಷಿತಃ ಶರಣಂ ಜಗಾಮ ಧರ್ಮ್ಮಾತ್ಮಜಂ ತಮಪಿ ಸೋsಥ ನಿಜಾಸ್ತ್ರಮುಗ್ರಮ್ ।

ಸಞ್ಜಹ್ರ ಏವ ತತ ಆಸ ಚ ನಾಮತೋsಸಾವಙ್ಗಾರವರ್ಣ್ಣ ಇತಿ ವರ್ಣ್ಣವಿಪರ್ಯ್ಯಯೇಣ ॥೧೯.೧೧೩॥

 

ಪಾರ್ಥನಿಂದ ಸೋಲಿಸಲ್ಪಟ್ಟು, ಶಿಕ್ಷಿಸಲ್ಪಟ್ಟ ಚಿತ್ರಸೇನ, ಧರ್ಮರಾಜನಲ್ಲಿ ಶರಣುಹೊಂದಿದ. ಆಗ  ಅರ್ಜುನನೂ ತಾನು ಪ್ರಯೋಗಿಸಿದ ಉಗ್ರವಾಗಿರುವ ಆಗ್ನೇಯಾಸ್ತ್ರವನ್ನು ಉಪಸಂಹಾರ ಮಾಡಿದ ಕೂಡಾ. ಈ ಘಟನೆಯಲ್ಲಿ ಮೈಯ ಬಣ್ಣದ  ಬದಲಾವಣೆಯನ್ನು ಹೊಂದಿದ ಚಿತ್ರಸೇನನು ‘ಅನ್ಗಾರವರ್ಣ’ ಎನ್ನುವ ಹೆಸರಿನವನಾದ.     

[ಮಹಾಭಾರತದಲ್ಲಿ(ಆದಿಪರ್ವ ೧೮೬. ೩೪) ಈ ಘಟನೆಯ ವಿವರ ಕಾಣಸಿಗುತ್ತದೆ. ಯುಧಿಷ್ಠಿರಂ ತಸ್ಯ ಭಾರ್ಯಾ ಪ್ರಪೇದೇ ಶರಣಾರ್ಥಿನೀ । ನಾಮ್ನಾ ಕುಮ್ಭೀನಸೀ ನಾಮ ಪರಿತ್ರಾಣಮಭೀಪ್ಸತೀ’ ಇಲ್ಲಿ ಯುಧಿಷ್ಠಿರನನ್ನು ಚಿತ್ರಸೇನನ ಹೆಂಡತಿಯಾದ  ಕುಮ್ಭೀನಸೀ ಶರಣುಹೊಂದಿದಳು ಎಂದು ಹೇಳಿದ್ದಾರೆ. ಆದರೆ ಆಚಾರ್ಯರು    ಪಾರ್ತ್ಥೇನ ಸನ್ಧರ್ಷಿತಃ ಶರಣಂ ಜಗಾಮ ಧರ್ಮ್ಮಾತ್ಮಜಂ.....’ ಎನ್ನುವ ನಿರ್ಣಯ ನೀಡಿದ್ದಾರೆ. ಇದರ ತಾತ್ಪರ್ಯ ಇಷ್ಟು: ಮೊದಲು ಅವನ ಪತ್ನಿ ಶರಣುಹೊಂದಿದಳು ನಂತರ ಚಿತ್ರಸೇನನೂ ಶರಣುಹೊಂದಿದ. ಹೀಗಾಗಿ ಇಲ್ಲಿ ಯಾವುದೇ ವಿರೋಧವಿಲ್ಲ.]

 

ಗನ್ಧರ್ವ ಉಲ್ಬಣಸುರಕ್ತತನುಃ ಸ ಭೂತ್ವಾ ಸ್ವರ್ಣ್ಣಾವದಾತ ಉತ ಪೂರ್ವಮುಪೇತ್ಯ ಸಖ್ಯಮ್ ।

ಪಾರ್ತ್ಥೇನ ದುರ್ಲ್ಲಭಮಹಾಸ್ತ್ರಮಿದಂ ಯಯಾಚೇ ಜಾನನ್ನಪಿ ಸ್ಮ ನಹಿ ತಾದೃಶಮೇಷ ವೇದ ॥೧೯.೧೧೪ ॥

 

ಗಂಧರ್ವನು ಮೊದಲು ಬಂಗಾರದ ಮೈಬಣ್ಣವುಳ್ಳವನಾಗಿದ್ದ. ಅಂಥವನು ಬೆಂಕಿ ಸುಟ್ಟಿದ್ದರಿಂದ ಕಡುಕೆಂಪು ಮೈಬಣ್ಣದವನಾದ. ಇಂತಹ ಚಿತ್ರಸೇನ ಅರ್ಜುನನೊಂದಿಗೆ ಗೆಳೆತನವನ್ನು ಹೊಂದಿ, ಅವನಲ್ಲಿ  ಆಗ್ನೇಯಾಸ್ತ್ರವನ್ನು ಬೇಡಿದ. ಮೊದಲು ಅವನು ಈ ಅಸ್ತ್ರವನ್ನು ತಿಳಿದಿದ್ದರೂ ಕೂಡಾ, ಈರೀತಿಯಾಗಿ ಅರ್ಜುನ ತಿಳಿದಂತೆ ತಿಳಿದಿರಲಿಲ್ಲ.

[ಇದನ್ನು ಮಹಾಭಾರತದ ಆದಿಪರ್ವದಲ್ಲಿ ಈರೀತಿ ವಿವರಿಸಿದ್ದಾರೆ: ಜಿತೋsಹಂ ಪೂರ್ವಕಂ ನಾಮ ಮುಞ್ಚಾಮ್ಯಙ್ಗಾರಪರ್ಣತಾಮ್ । ಯಶೋಹೀನಂ ನಚ ಶ್ಲಾಘ್ಯಂ ಸ್ವಂ ನಾಮಜನಸಂಸದಿ’ (೧೮೬.೩೮)  ‘ಅಙ್ಗಾರಪರ್ಣಂ ಗನ್ಧರ್ವಂ ವಿತ್ತ ಮಾಂ ಸ್ವಬಲಾಶ್ರಯಮ್ ।   ಅಹಂ ಹಿ ಮಾನಿ ಚೇರ್ಷ್ಯುಶ್ಚ ಕುಬೇರಸ್ಯ ಪ್ರಿಯಃ ಸಖಾ ।  ಅಙ್ಗಾರಪರ್ಣಮಿತ್ಯೇವಂ ಖ್ಯಾತಂ ಚೇದಂ ವನಂ ಮಮ । ಅನುಗಙ್ಗಂ ಚರನ್ ಕಾಮಾಂಶ್ಚಿತ್ರಂ ಯತ್ರ ರಮಾಮ್ಯಹಮ್’ (೧೮೬.೧೩-೧೪)

 

ವಿದ್ಯಾ ಸುಶಿಕ್ಷಿತತಮಾ ಹಿ ಸುರೇಶಸೂನೌ ತಾಮಸ್ಯ ಚಾವದದಸಾವಪಿ ಕಾಲತೋsಸ್ಮೈ ।

ಗನ್ಧರ್ವಗಾಮವದದನ್ವಗದೃಶ್ಯವಿದ್ಯಾಂ ಪಶ್ಚಾದಿತಿ ಸ್ಮ ಪುರುಹೂತಸುತಸ್ಯ ವಾಕ್ಯಾತ್ ॥೧೯.೧೧೫॥

 

ಅರ್ಜುನನಲ್ಲಿ ಅತ್ಯಂತ ಶಿಕ್ಷಿತವಾದ ಅಸ್ತ್ರವಿದ್ಯೆ ಇದ್ದುದರಿಂದ ಅದನ್ನು ಅವನು ಗಂಧರ್ವನಿಗೆ ಕೊಟ್ಟ. ಹಾಗೆಯೇ, ಅರ್ಜುನನ ವಾಕ್ಯದಂತೇ, ಆ ಗಂಧರ್ವನು ತನ್ನಲ್ಲಿರುವ ಅದೃಶ್ಯವಿದ್ಯೆಯನ್ನು ಕಾಲಾಂತರದಲ್ಲಿ (ಅನುಕೂಲವಾದ ಕಾಲದಲ್ಲಿ) ಅರ್ಜುನನಿಗೆ ನೀಡಿದ.  

 

[ಅರ್ಜುನ ಒಂದು ವಿದ್ಯೆಯನ್ನು ಚಿತ್ರಸೇನನಿಗೆ ಕೊಟ್ಟ. ಅದಕ್ಕೆ ಪ್ರತಿಯಾಗಿ ಚಿತ್ರಸೇನ ಒಂದು ವಿದ್ಯೆಯನ್ನು ಅರ್ಜುನನಿಗೆ ಕೊಟ್ಟ. ಚಿತ್ರಸೇನನಿಗೆ ಅಭಿಮಾನ ಅಡ್ಡ ಬಂದು ಹೀಗೆ ಮಾಡಿರಬಹುದು. ಆದರೆ ಅರ್ಜುನ ಈ ವಿನಿಮಯವನ್ನು ಏಕೆ ಒಪ್ಪಿಕೊಂಡ ಎಂದರೆ:]

 

ಆಧಿಕ್ಯತಃ ಸ್ವಗತಸಂವಿದ ಏವ ಸಾಮ್ಯೇ ನೈವೇಚ್ಛತಿ ಸ್ಮ ನಿಮಯಂ ಸ ಧನಞ್ಜಯೋsತ್ರ ।

ಧರ್ಮಾರ್ತ್ಥಮೇವ ಸ ತು ತಾಂ ಪರಿದಾಯ ತಸ್ಮೈ ಕಾಲೇನ ಸಂವಿದಮಮುಷ್ಯ ಚ ಧರ್ಮ್ಮತೋsಯಾತ್ ॥೧೯.೧೧೬॥

 

ತನ್ನಲ್ಲಿ ಜ್ಞಾನದ ಆಧಿಕ್ಯವಿರಲು, ಸಮಾನವಾದ ಪಕ್ಷದಲ್ಲಿ ಮಾತ್ರ ವಿನಿಮಯ ಸಾಧ್ಯವಿರುವುದರಿಂದ, ಅರ್ಜುನ ಈ ವಿನಿಮಯವನ್ನು ಬಯಸಿರಲಿಲ್ಲ. ಅವನು ಕೇವಲ ಸೌಜನ್ಯಕ್ಕಾಗಿ ಅಥವಾ ಪುಣ್ಯಕ್ಕಾಗಿ ಗಂಧರ್ವನಿಗೆ ಆ ವಿದ್ಯೆಯನ್ನು ಕೊಟ್ಟು, ಕೆಲವು ಕಾಲವಾದಮೇಲೆ, ಧರ್ಮದಿಂದಲೇ ಗಂಧರ್ವವಿದ್ಯೆಯನ್ನು ಪಡೆದ.

[ಅರ್ಜುನನಿಗೆ ಅದೃಶ್ಯ ವಿದ್ಯೆ ಬೇಕಿರಲಿಲ್ಲ. ಅಲ್ಲದೇ, ಅರ್ಜುನನಲ್ಲಿದ್ದ ಅಸ್ತ್ರವಿದ್ಯೆ  ಗಂಧರ್ವನಲ್ಲಿದ್ದ ಅದೃಶ್ಯ ವಿದ್ಯೆಗಿಂತ ಶ್ರೇಷ್ಠವಾಗಿತ್ತು. ಹಾಗಾಗಿ ಅವನಿಗೆ ವಿನಿಮಯ ಇಷ್ಟವಿರಲಿಲ್ಲ. ಆದರೂ ಏಕೆ ಕಾಲಾಂತರದಲ್ಲಿ ಗಂಧರ್ವನಿಂದ ಪಡೆದ ಎಂದರೆ: ವಿದ್ಯೆಯನ್ನು ಪಡೆಯುವವನು ಗುರುಗಳಿಗೆ ಎನನ್ನಾದರೂ ಕೊಡಬೇಕು.  ಕ್ಷತ್ರಿಯನಾದ್ದರಿಂದ ಅರ್ಜುನ ವಿದ್ಯೋಪ ಜೀವನ ಮಾಡುವಂತಿಲ್ಲ. ಆ ಕಾರಣದಿಂದ ವಿದ್ಯಾ ವಿನಿಮಯವನ್ನೇ ಮಾಡಿಕೊಳ್ಳೋಣ ಎಂದು ಚಿಂತನೆ ನಡೆಸಿ, ಆ ಸೌಜನ್ಯಕ್ಕಾಗಿಯೇ ಕಾಲಾಂತರದಲ್ಲಿ ಅರ್ಜುನ ಪಡೆದ ಹೊರತು, ಅದರ ಬಯಕೆ ಅವನಿಗಿರಲಿಲ್ಲ]. 

 

ಪಾರ್ತ್ಥೇನ ಸೋsಪಿ ಬಹುಲಾಶ್ಚ ಕಥಾಃ ಕಥಿತ್ವಾ ಧೌಮ್ಯಸ್ಯ ಸಙ್ಗ್ರಹಣಮಾಹ ಪುರೋಹಿತತ್ವೇ ।

ದಾಸ್ಯಾಮಿ ದಿವ್ಯತುರಗಾನಿತಿ ಸೋsರ್ಜ್ಜುನಾಯಾ ವಾಚಂ ನಿಗದ್ಯ ದಿವಮಾರುಹದಪ್ಯಗುಸ್ತೇ ॥೧೯.೧೧೭॥

 

ಈರೀತಿ ಅರ್ಜುನನ ಜೊತೆಗೆ ಗೆಳೆತನ ಬೆಳೆಸಿದ ಗನ್ಧರ್ವ, ಅವನಿಗೆ ಅನೇಕ ಕಥೆಗಳನ್ನು ಹೇಳಿದ.(ಆದಿಪರ್ವದಲ್ಲಿ ಈ ಕಥೆಗಳ ವಿವರವನ್ನು ನಾವು ಕಾಣಬಹುದು)  ಧೌಮ್ಯ ಎಂಬುವವನ ಪೌರೋಹಿತ್ಯಕ್ಕಾಗಿ ಗ್ರಹಿಕೆಯನ್ನೂ ಕೂಡಾ ಅವನು ಹೇಳಿದ.(ಬ್ರಾಹ್ಮಣ ರಹಿತರಾಗಿ ಕ್ಷತ್ರಿಯರಿರಬಾರದು. ಅದಕ್ಕಾಗಿ ಧೌಮ್ಯರನ್ನು ರಾಜಗುರುವಾಗಿ ಪರಿಗ್ರಹಿಸಿ.  ಅವರು ಇಲ್ಲೇ ಸ್ವಲ್ಪ ದೂರದಲ್ಲಿದ್ದಾರೆ ಎನ್ನುವ ಸಲಹೆಯನ್ನೂ ಚಿತ್ರಸೇನ ನೀಡಿದ) . ಅವನು ಅರ್ಜುನನಿಗಾಗಿ ‘ದೇವಲೋಕದ ಕುದುರೆಗಳನ್ನು ಕೊಡುತ್ತೇನೆ’ ಎನ್ನುವ ಮಾತನ್ನು ಹೇಳಿ ಅಂತರಿಕ್ಷವನ್ನೇರಿದ. ತದನಂತರ ಪಾಂಡವರು ಅಲ್ಲಿಂದ ಮುಂದೆ ನಡೆದರು.

No comments:

Post a Comment