ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 4, 2020

Mahabharata Tatparya Nirnaya Kannada 19142_19147

 

ಅಗ್ರೇsಶ್ವಿಪುತ್ರಸಹಿತಃ ಸ ತು ಧರ್ಮ್ಮಸೂನುಃ ಪ್ರಾಯಾತ್ ಕುಲಾಲಗೃಹಮನ್ವಪಿ ಭೀಮಪಾರ್ತ್ಥೌ 

ಭಿಕ್ಷೇತಿ ತೈರಭಿಹಿತೇ ಪ್ರಜಗಾದ ಕುನ್ತೀ ಭುಙ್ಗ್ಧ್ವಂ  ಸಮಸ್ತಶ ಇತಿ ಪ್ರ ದದರ್ಶ ಕನ್ಯಾಮ್ ॥೧೯.೧೪೨॥

 

ಆ ಧರ್ಮರಾಜನು ಎಲ್ಲರಿಗಿಂತ ಮೊದಲೇ ನಕುಲ ಸಹದೇವರಿಂದ ಕೂಡಿಕೊಂಡು ಕುಂಬಾರನ ಮನೆಯನ್ನು ಕುರಿತು ತೆರಳಿದನು. ತದನಂತರ ಭೀಮಾರ್ಜುನರೂ ತೆರಳಿದರು. ಅವರಿಂದ ‘ಭಿಕ್ಷೆ’ ಎಂದು ಹೇಳಲ್ಪಡುತ್ತಿರಲು, ಕುಂತಿಯು ‘ಎಲ್ಲರೂ ಸ್ವೀಕರಿಸಿ’ ಎಂದು ಹೇಳಿದಳು. ಹೀಗೆ ಹೇಳಿದಮೇಲೆ ಆಕೆ ಕನ್ಯೆಯನ್ನು ಕಂಡಳು ಕೂಡಾ.   

 

ಪ್ರಾಮಾದಿಕಂ ಚ ವಚನಂ ನ ಮೃಷಾ ತಯೋಕ್ತಂ ಪ್ರಾಯೋ ಹಿ ತೇನ ಕಥಮೇತದಿತಿ ಸ್ಮ ಚಿನ್ತಾ ।

ತೇಷಾಂ ಬಭೂವ ವಸುದೇವಸುತೋ ಹರಿಶ್ಚ ತತ್ರಾsಜಗಾಮ ಪರಮೇಣ ಹಿ ಸೌಹೃದೇನ ॥೧೯.೧೪೩॥

 

ಕುಂತಿ ಪ್ರಮಾದದಿಂದ ಆಡಿದ ಮಾತೂ ಕೂಡಾ ಎಂದೂ ಸುಳ್ಳಾಗುವುದಿಲ್ಲ. ಅದರಿಂದ ಇದು ಹೇಗೆ ಸತ್ಯವಾಗುವುದು(ಒಬ್ಬ ಕನ್ಯೆಯನ್ನು ಐದು ಜನ ಮದುವೆಯಾಗುವುದು ಹೇಗೆ) ಎಂದು ಅವರೆಲ್ಲರಿಗೂ ಚಿಂತೆಯಾಯಿತು. ಅದೇ ಸಮಯದಲ್ಲಿ ಆತ್ಯಂತಿಕವಾದ ಸ್ನೇಹದಿಂದ ಶ್ರೀಕೃಷ್ಣನೂ ಕೂಡಾ ಅಲ್ಲಿಗೆ ಬಂದ.

[ಶ್ರೀಕೃಷ್ಣನಲ್ಲಿ ಯುಧಿಷ್ಠಿರ ‘ನಿನಗೆ ಹೇಗೆ ತಿಳಿಯಿತು’ ಎಂದು ಕೇಳುತ್ತಾನೆ. ಅದಕ್ಕೆ ಶ್ರೀಕೃಷ್ಣ ಹೇಳುತ್ತಾನೆ : ‘ಗೂಢೋಪ್ಯರ್ಗ್ನಿಜ್ಞಾಯಾತ ಎವ ರಾಜನ್’– ‘ಬೆಂಕಿಯನ್ನು ಮುಚ್ಚಿಟ್ಟರೂ ತಿಳಿದೇ ತಿಳಿಯುತ್ತದೆ’ ಎನ್ನುತ್ತಾನೆ].

 

ಸಮ್ಭಾಷ್ಯ ತೈಃ ಸ ಭಗವಾನಮಿತಾತ್ಮಶಕ್ತಿಃ ಪ್ರಾಯಾನ್ನಿಜಾಂ ಪುರಮಮಾ ಯದುಭಿಃ ಸಮಸ್ತೈಃ ।

ಜ್ಞಾತುಂ ಚ ತಾನ್ ನಿಶಿ ಸ ತು ದ್ರುಪದಃ ಸ್ವಪುತ್ರಂ ಪ್ರಾಸ್ಥಾಪಯತ್ ಸ ಚ ವಿಲೀನ ಇಮಾನಪಶ್ಯತ್ ॥೧೯.೧೪೪॥

 

ಎಣಿಯಿರದ ಕಸುವಿನ, ಷಡ್ಗುಣಸಂಪನ್ನನಾದ ಶ್ರೀಕೃಷ್ಣನು ಅವರೊಂದಿಗೆ ಮಾತನಾಡಿ, ತನ್ನೊಂದಿಗೆ ಬಂದಿದ್ದ ಎಲ್ಲಾ ಯದುಗಳಿಂದ ಕೂಡಿಕೊಂಡು ತನ್ನ ಪಟ್ಟಣಕ್ಕೆ ಹಿಂತಿರುಗಿದ. ಇತ್ತ ದ್ರುಪದರಾಜನು ಸ್ವಯಮ್ಬರದಲ್ಲಿ ದ್ರೌಪದಿಯನ್ನು ಗೆದ್ದವರ ಕುರಿತು ತಿಳಿಯಲು ರಾತ್ರಿಯಲ್ಲಿ ತನ್ನ ಮಗನಾದ ಧೃಷ್ಟದ್ಯುಮ್ನನನ್ನು ಅವರಿದ್ದಲ್ಲಿಗೆ  ಕಳುಹಿಸಿದನು. ಅವನಾದರೋ,  ಅಡಗಿದವನಾಗಿ ಪಾಂಡವರನ್ನು ಕಂಡ.

 

ಭಿಕ್ಷಾನ್ನಭೋಜಿನ ಉತೋ ಭಗಿನೀಂ ನಿಜಾಂ ಚ ತತ್ರಾತಿತೃಪ್ತಹೃದಯಾಮಥ ಯುದ್ಧವಾರ್ತ್ತಾಮ್ ।

ತೇಷಾಂ ನಿಶಮ್ಯ ನದತಾಂ ಘನವದ್ ಗಭೀರಾಂ ಕ್ಷತ್ರೋತ್ತಮಾ ಇತಿ ಮತಿಂ ಸ ಚಕಾರ ವೀರಃ ॥೧೯.೧೪೫॥

 

ಭಿಕ್ಷಾನ್ನವನ್ನು ಸ್ವೀಕರಿಸುವ ಅವರನ್ನು, ಜೊತೆಗೆ ಅತ್ಯಂತ ತೃಪ್ತವಾದ  ಮನಸ್ಸಿನಿಂದ ಕೂಡಿದ ತನ್ನ ತಂಗಿಯನ್ನು ಧೃಷ್ಟದ್ಯುಮ್ನ ಅಲ್ಲಿ ನೋಡಿದ. ತದನಂತರ ಮೋಡದಂತೆ ಗಂಭೀರವಾಗಿ ಘರ್ಜಿಸುವ ಧ್ವನಿಯಲ್ಲಿ ಅವರು ಯುದ್ಧದ ಕುರಿತು ಮಾತನಾಡುವುದನ್ನು ಕೇಳಿದ ಅವನು, ‘ಇವರು ಕ್ಷತ್ರಿಯರೇ’ ಎನ್ನುವ ನಿಶ್ಚಯಕ್ಕೆ ಬಂದ.

 

ಪ್ರಾತಸ್ತು ತಸ್ಯ ಜನಿತುರ್ವಚಸಾ ಪುರೋಧಾಸ್ತಾನ್ ಪ್ರಾಪ್ಯ ಮನ್ತ್ರವಿಧಿನಾ ಮರುದಾತ್ಮಜೇನ ।

ಸಮ್ಪೂಜಿತೋsತಿವಿದುಷಾ ಪ್ರತಿಗೃಹ್ಯ ತಾಂಶ್ಚ ಪ್ರಾವೇಶಯನ್ನೃಪತಿಗೇಹಮಮೈವ ಮಾತ್ರಾ ॥೧೯.೧೪೬

 

ಪ್ರಾತಃಕಾಲದಲ್ಲಿ ಧೃಷ್ಟದ್ಯುಮ್ನನ ತಂದೆಯಾದ ದ್ರುಪದನ ಮಾತಿನಂತೆ ಅವರ ಪುರೋಹಿತನು ಪಾಂಡವರನ್ನು ಹೊಂದಿ, ಶಾಸ್ತ್ರಪೂರ್ವಕವಾಗಿ, ಅತಿವಿದುಷನಾದ  ಮರುದಾತ್ಮಜನಿಂದ(ಭೀಮಸೇನನಿಂದ) ಪೂಜಿತನಾಗಿ,  ಅವರನ್ನು ಅವರ ತಾಯಿಯ ಜತೆಗೇ ಕರೆದುಕೊಂಡು ಬಂದು,  ರಾಜನ ಮನೆಯನ್ನು ಪ್ರವೇಶಮಾಡಿಸಿದನು.   

[ಇಲ್ಲಿ ಜನಿತುಃ  ಎನ್ನುವ ಪ್ರಯೋಗವನ್ನು ಕಾಣುತ್ತೇವೆ. ಜನಯಿತುಃ ಎಂದು ರೂಪವಾಗಬೇಕು ಆದರೆ  ಜನಿತುಃ ಎನ್ನುವ ಪ್ರಯೋಗ ಹೇಗೆ ಎನ್ನುವ ಪ್ರಶ್ನೆ ಇಲ್ಲಿ ಸಹಜ.  ಯೋ ನಃ ಪಿತಾ ಜನಿತಾ’ ಎಂದು ವೇದಲ್ಲಿ ಹೇಳಿರುವುದನ್ನು ಗಮನಿಸಿದಾಗ, ಅಲ್ಲಿಯೂ ಜನಿತಾ ಎನ್ನುವ ಪ್ರಯೋಗವಿರುವುದು ಕಾಣಸಿಗುತ್ತದೆ.  ಹೀಗಾಗಿ, ಜನಯಿತ್ರಿ-ಜನಿತ್ರಿ ಎಂದಾಗುತ್ತದೆ, ಜನಯಿತಾ ಎನ್ನುವುದು  ಜನಿತಾ ಎಂದಾಗುತ್ತದೆ. ಅಂದರೆ ಹುಟ್ಟಿಸಿದವ(ಜನಕ) ಎಂದರ್ಥವೇ ಹೊರತು ಹುಟ್ಟಿದವ ಎಂದರ್ಥವಲ್ಲ.

ರಾತ್ರಿ ಧೃಷ್ಟದ್ಯುಮ್ನ ಅಡಗಿಕುಳಿತು ಪಾಂಡವರು ಕ್ಷತ್ರಿಯರಂತೆ ಯುದ್ಧದ ಕುರಿತಾಗಿ ಮಾತನಾಡುವುದನ್ನು ಕಂಡರೆ, ಬೆಳಿಗ್ಗೆ ಪುರೋಹಿತರನ್ನು ಅವರು ಮಂತ್ರಪೂರ್ವಕ ವಿಧಿ-ವಿಧಾನದಿಂದ ಸ್ವಾಗತ ಮಾಡಿದರು. ಹೀಗಾಗಿ ಅವರು ಕ್ಷತ್ರಿಯ ವೈದಿಕರು ಎನ್ನುವುದು ದ್ರುಪದನಿಗೆ ಖಾತ್ರಿಯಾಯಿತು].

 

ತಾನಾಗತಾನ್ ಸಮಭಿಪೂಜ್ಯ ನಿಜಾತ್ಮಜಾಂ ಚ ವಿಪ್ರಾದಿಯೋಗ್ಯಪೃಥಗುಕ್ತಪದಾರ್ತ್ಥಜಾತೈಃ ।

ಪೂರ್ಣ್ಣಾನ್ ಗೃಹಾಂಶ್ಚತುರ ಏವ ದಿದೇಶ ರಾಜಾ ತತ್ರಾsಯುಧಾದಿಪರಿಪೂರ್ಣ್ಣಗೃಹಂ ಚ ತೇsಗುಃ ॥೧೯.೧೪೭॥

 

ಬಂದಿರುವ ಅವರನ್ನೂ, ತನ್ನ ಮಗಳನ್ನೂ ಪೂಜಿಸಿದ(ಸತ್ಕರಿಸಿದ) ದ್ರುಪದ, ಬ್ರಾಹ್ಮಣ ಮೊದಲಾದ ನಾಲ್ಕು ವರ್ಣದವರಿಗೆ ಯೋಗ್ಯವಾಗಿರುವ ಪ್ರತ್ಯೇಕಪ್ರತ್ಯೇಕವಾಗಿಟ್ಟ ಪದಾರ್ಥಗಳಿಂದ ಕೂಡಿರುವ ನಾಲ್ಕು ಮನೆಗಳನ್ನು  ಅವರಿಗೆ ತೋರಿಸಿದ. ಅವುಗಳಲ್ಲಿ ಅವರು ಆಯುಧಗಳಿಂದ ತುಂಬಿರುವ(ಕ್ಷತ್ರಿಯ ವರ್ಣದವರಿಗೆ ಯೋಗ್ಯವಾಗಿದ್ದ) ಮನೆಯನ್ನು ಹೊಂದಿದರು.

No comments:

Post a Comment