ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 26, 2021

Mahabharata Tatparya Nirnaya Kannada 20: 189 - 195

 

ತತಃ ಸ ಆಬದ್ಧತಳಾಙ್ಗುಲಿತ್ರಃ ಸತೂಣೀರಶ್ಚಾಪಮಾಯಮ್ಯ ಬಾಣೈಃ ।

ಚಕ್ರೇsನ್ತರಿಕ್ಷಮ್ ಪ್ರದಿಶೋ ದಿಶಶ್ಚ ನಿರನ್ತರಂ ಶಿಕ್ಷಯಾ ವಿದ್ಯಯಾ ಚ ॥೨೦.೧೮೯

 

ಅಂಗೈ ಹಾಗೂ ಬೆರಳುಗಳ ಕವಚ ತೊಟ್ಟ ಅರ್ಜುನನು, ಬತ್ತಳಿಕೆಯಿಂದ ಸಹಿತನಾಗಿ, ಬಿಲ್ಲನ್ನು ಹೆದೆಯೇರಿಸಿ, ದಿಕ್ಕು-ವಿದಿಕ್ಕುಗಳನ್ನು ತನ್ನ ಅಭ್ಯಾಸದಿಂದಲೂ, ವಿದ್ಯೆಯಿಂದಲೂ, ಬಾಣಗಳಿಂದ ನಿಬಿಡವನ್ನಾಗಿ ಮಾಡಿದನು. (ಅಂದರೆ: ಎಲ್ಲೆಡೆ ಬಾಣಗಳ ಮಳೆಗರೆದನು).  

 

ಚಕ್ರೇ ಸಾರತ್ಥ್ಯಂ ಕೇಶವೇನೈತದರ್ತ್ಥೇ ಸುಶಿಕ್ಷಿತಾ ತಸ್ಯ ಸಮ್ಯಕ್ ಸುಭದ್ರಾ ।

ತಯಾ ಪಾರ್ತ್ಥೋ ವಾರಿತೋ ನೈವ ಕಞ್ಚಿದ್ ಭಿನ್ನತ್ವಚಂ ಕೃತವಾನ್ ಕ್ರೀಡಮಾನಃ ॥೨೦.೧೯೦॥

 

ಕೃಷ್ಣನಿಂದ ಇದಕ್ಕಾಗಿಯೇ ಶಿಕ್ಷಣವನ್ನು ಹೊಂದಿದ್ದ ಸುಭದ್ರೆಯು, ನುರಿತ ಸಾರಥಿಯ ತರದಲ್ಲಿ ಸಾರಥ್ಯವನ್ನು ಮಾಡಿದಳು. ಅವಳಿಂದ (ಯಾರನ್ನೂ ಘಾಸಿಗೊಳಿಸಬಾರದು ಎಂದು) ತಡೆಯಲ್ಪಟ್ಟ ಅರ್ಜುನನು ಯಾರೊಬ್ಬನನ್ನೂ ಕೂಡಾ ಗಾಯಗೊಳಿಸಲಿಲ್ಲ. 

 

ಸ ಶಿಕ್ಷಯಾ ತ್ವದ್ಭುತಯಾ ಶರೌಘೈರ್ವಿದ್ರಾಪ್ಯ ತಾನ್ ಭೀಷಯಿತ್ವೈವ ಸರ್ವಾನ್

ನಿರ್ಗ್ಗತ್ಯ ಪುರ್ಯ್ಯಾ ವಿಪೃಥುಂ ದದರ್ಶ ರಾಮೇಣ ಪುರ್ಯ್ಯಾರಕ್ಷಣೇ ಸನ್ನಿಯುಕ್ತಮ್ ೨೦.೧೯೧

 

ಅರ್ಜುನನು ತನ್ನ ಅದ್ಭುತವಾಗಿರುವ ಅಭ್ಯಾಸಬಲದಿಂದ, ಬಾಣಗಳ ಸಮೂಹದಿಂದ ಅವರೆಲ್ಲರನ್ನೂ  ಹೆದರಿಸಿ(ಓಡಿಸಿ), ಪಟ್ಟಣದಿಂದ ಹೊರಬಂದು, ಬಲರಾಮನಿಂದ ಪಟ್ಟಣದ ರಕ್ಷಣೆಯಲ್ಲಿ ನೇಮಕವಾಗಿರುವ ವಿಪೃಥುವನ್ನು ಕಂಡ.

 

ಪ್ರಿಯಂ ಕುರ್ವನ್ನಿವ ರಾಮಸ್ಯ ಸೋsಪಿ ವ್ಯಾಜೇನ ಪಾರ್ತ್ಥಂ ಸೇನಯೈವಾsವೃಣೋತ್ ತಮ್ ।

ಕೃಷ್ಣಾದೇಶಾನ್ನೈವ ಪಾರ್ತ್ಥಸ್ಯ ಚಕ್ರೇ ಸಮ್ಯಗ್ರೋಧಂ ಯುಯುಧೇ ಚ ಚ್ಛಲೇನ ॥೨೦.೧೯೨॥

 

ಆ ವಿಪೃಥುವಾದರೋ, ಬಲರಾಮನಿಗೆ ಪ್ರಿಯವನ್ನು ಮಾಡುವನೋ ಎಂಬಂತೆ, ನೆಪಮಾತ್ರದಿಂದ ಅರ್ಜುನನನ್ನು ಸೇನೆಯೊಂದಿಗೆ ತಡೆದ. ಆದರೆ ಕೃಷ್ಣನ ಆದೇಶವಿರುವುದರಿಂದ ಚೆನ್ನಾಗಿ ಯುದ್ಧ ಮಾಡಲಿಲ್ಲ. ಕೇವಲ ಯುದ್ಧಮಾಡಿದವನಂತೆ ತೋರಿದ. 

 

ಏಕೋ ಹ್ಯಸೌ ಮರುತಾಂ ಸೌಮ್ಯನಾಮಾ ಶುಶ್ರೂಷಾರ್ಥಂ ವಾಸುದೇವಸ್ಯ ಜಾತಃ ।

ತಂ ಯಾದವಂ ಶರವರ್ಷೈರ್ವವರ್ಷ ಯಥಾ ಕ್ಷತಂ ನ ಭವೇತ್ ಸವ್ಯಸಾಚೀ ॥೨೦.೧೯೩

 

ಮೂಲತಃ ಸೌಮ್ಯ ಎನ್ನುವ ಮರುತ್ ದೇವತೆಯಾದ ವಿಪೃಥು ಪರಮಾತ್ಮನ ಶುಶ್ರೂಷೆಗಾಗಿಯೇ ಹುಟ್ಟಿದ್ದ. ಆ ಯಾದವನ ಮೇಲೆ ಅರ್ಜುನನು ಯಾವುದೇ ಗಾಯವಾಗದಂತೆ ಬಾಣಗಳ ಮಳೆಗರೆದ.

 

ನಿರಾಯುಧಂ ವಿರಥಂ ಚೈವ ಚಕ್ರೇ ಪಾರ್ತ್ಥಃ ಸೇನಾಂ ತಸ್ಯ ನೈವಾಹನಚ್ಚ ।

ದೃಷ್ಟ್ವಾ ಶರಾಂಸ್ತಸ್ಯತೀಕ್ಷ್ಣಾಂಸ್ತ್ವಚೋsಪಿ ನಚ್ಛೇದಕಾನ್ ವಿಪೃಥುಃ ಸನ್ತುತೋಷ ॥೨೦.೧೯೪॥

 

ಯುದ್ಧದಲ್ಲಿ ಅರ್ಜುನನು ವಿಪೃಥುವನ್ನು ಆಯುಧಹೀನನನ್ನಾಗಿಯೂ, ರಥಹೀನನನ್ನಾಗಿಯೂ ಮಾಡಿದ. ಆದರೆ ಅವನ ಸೇನೆಯನ್ನು ಕೊಲ್ಲಲಿಲ್ಲ. ಅರ್ಜುನನ ತೀಕ್ಷ್ಣವಾಗಿರುವ ಬಾಣಗಳು ತನ್ನ ಚರ್ಮವನ್ನೂ ಕೂಡಾ ಭೇದಿಸದಿರುವುದನ್ನು ಕಂಡ ವಿಪೃಥು ಬಹಳ ಸಂತೋಷಪಟ್ಟ.

 

ಶಿಕ್ಷಾಂ ಪಾರ್ತ್ಥಸ್ಯಾಧಿಕಂ ಮಾನಯಾನ ಉಪೇತ್ಯ ಪಾರ್ತ್ಥಂ ಚ ಶಶಂಸ ಸರ್ವಮ್ ।

ಆಜ್ಞಾಂ ವಿಷ್ಣೋಃ ಸನ್ನಿಯುದ್ಧ್ಯನ್ನಿವಾಸ್ಮೈ ಕೃತ್ತಾಯುಧಃ ಫಲ್ಗುನೇನೈವ ಪೂರ್ವಮ್ ॥೨೦.೧೯೫॥

 

ಅರ್ಜುನನಿಂದ ಆಯುಧಹೀನನೂ, ರಥಹೀನನೂ ಆದ ವಿಪೃಥುವು ತನ್ನ ಬಾಹುಗಳಿಂದಲೇ ಅರ್ಜುನನೊಂದಿಗೆ ಯುದ್ಧಮಾಡಲು ಧಾವಿಸುತ್ತಿರುವಂತೆ ತೋರುತ್ತಾ, ಅರ್ಜುನನ ಬಳಿ ಬಂದು,   ಅರ್ಜುನನ ನಿರಂತರವಾದ ಅಭ್ಯಾಸವನ್ನು ಶ್ಲಾಘಿಸುವವನಾಗಿ, ಕೃಷ್ಣನ ಆಜ್ಞೆ ಏನಿದೆ, ಅದರಂತೆ ನಾನು ಕಾರ್ಯ ನಿರ್ವಹಿಸಿದೆ ಎಂದು ಎಲ್ಲವನ್ನೂ ಅರ್ಜುನನಿಗೆ ಹೇಳಿದನು.   

No comments:

Post a Comment