ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, September 29, 2021

Mahabharata Tatparya Nirnaya Kannada 20: 207 - 214

 

ತತೋsರ್ಜ್ಜುನೋ ಯತ್ರ ತಿಷ್ಠನ್ ನ ಕಶ್ಚಿತ್ ಪರಾಜಯಂ ಯಾತಿ ಕೃಷ್ಣಾಜ್ಞಯೈವ ।

ರಥೇನ ತೇನೈವ ಯಯೌ ಸಭಾರ್ಯ್ಯಃ ಶಕ್ರಪ್ರಸ್ಥಂ ಚಾವಿಶದ್ ಭ್ರಾತೃಗುಪ್ತಮ್ ॥೨೦.೨೦೭॥

 

 ‘ಎಲ್ಲಿ ನಿಂತು ಯಾರೂ ಕೂಡಾ ಪರಾಜಯವನ್ನು ಹೊಂದುವುದಿಲ್ಲವೋ, ಅಂತಹ ಕೃಷ್ಣನ ರಥವನ್ನು ಏರಿದ ಅರ್ಜುನನು ಸುಭದ್ರೆಯೊಂದಿಗೆ ಭೀಮಸೇನನಿಂದ ರಕ್ಷಿತವಾದ ಇಂದ್ರಪ್ರಸ್ಥವನ್ನು ಪ್ರವೇಶಿಸಿದನು.

 

ಸಮ್ಭಾವಿತೋ ಭ್ರಾತೃಭಿಶ್ಚಾತಿತುಷ್ಟೈರೂಚೇsಥ ಸರ್ವಂ ತೇಷು ಯಚ್ಚಾsತ್ಮವೃತ್ತಮ್ ।

ಶಾನ್ತೇಷು ವಾಕ್ಯಾದಾತ್ಮನೋ ಯಾದವೇಷು ಕೃಷ್ಣೋ ಯುಕ್ತೋ ಹಲಿನಾsಗಾಚ್ಚ ಪಾರ್ತ್ಥಾನ್ ॥೨೦.೨೦೮॥

 

ಅತ್ಯಂತ ಸಂತುಷ್ಟರಾದ ಸಹೋದರರಿಂದ ಬಹುಮಾನಿತನಾದ ಅರ್ಜುನನು  ತನ್ನ ವೃತ್ತಾಂತವೆಲ್ಲವನ್ನೂ ಅವರಿಗೆ ಹೇಳಿದನು. ಇತ್ತ, ತನ್ನ ಮಾತಿನ ಮೋಡಿಯಿಂದ ಯುದ್ಧದ ಪ್ರಯತ್ನವನ್ನು ಕೈಬಿಟ್ಟ ಯಾದವರಿರಲು, ಬಲರಾಮನಿಂದ ಕೂಡಿ, ಪಾಂಡವರನ್ನು ಕುರಿತು ಶ್ರೀಕೃಷ್ಣ ತೆರಳಿದನು. 

  

ಸಾರ್ದ್ಧಂ ಯಯೌ ಶಕಟೈ ರತ್ನಪೂರ್ಣ್ಣೈಃ ಶಕ್ರಪ್ರಸ್ಥಂ ಪೂಜಿತಸ್ತತ್ರ ಪಾರ್ತ್ಥೈಃ ।

ದದೌ ತೇಷಾಂ ತಾನಿ ರಾಮೇಣ ಯುಕ್ತಸ್ತಥಾ ಕೃಷ್ಣಾಯೈ ಭೂಷಣಾನಿ ಸ್ವಸುಶ್ಚ ॥೨೦.೨೦೯॥

 

ಕೃಷ್ಣ ರತ್ನಗಳಿಂದ ತುಂಬಿದ ಗಾಡಿಗಳೊಂದಿಗೆ ಇಂದ್ರಪ್ರಸ್ಥಕ್ಕೆ ಬಂದು, ಅಲ್ಲಿ ಪಾಂಡವರಿಂದ ಪೂಜಿತನಾಗಿ, ಬಲರಾಮನಿಂದ ಕೂಡಿಕೊಂಡು ದ್ರೌಪದಿಗೂ ಹಾಗೂ  ತಂಗಿ ಸುಭದ್ರೆಗೂ ಆಭರಣಗಳನ್ನು ಕೊಟ್ಟನು.

 

ಮಾಸಾನುಷಿತ್ವಾ ಕತಿಚಿದ್ ರೌಹಿಣೇಯೋ ಯಯೌ ಪುರೀಂ ಸ್ವಾಂ ಕೇಶವೋsತ್ರಾವಸಚ್ಚ ।

ಬಹೂನ್ ವರ್ಷಾನ್ ಪಾಣ್ಡವೈಃ ಪೂಜ್ಯಮಾನಃ ಪ್ರೀತಿಂ ತೇಷಾಮಾದಧಾನೋsಧಿಕಾಂ ಚ ॥೨೦.೨೧೦॥

 

ಬಲರಾಮನು ಕೆಲವು ತಿಂಗಳುಗಳ ಕಾಲ ಇಂದ್ರಪ್ರಸ್ಥದಲ್ಲಿ ವಾಸಮಾಡಿ ದ್ವಾರಕೆಗೆ ಹಿಂತಿರುಗಿದನು. ಶ್ರೀಕೃಷ್ಣ ಇಂದ್ರಪ್ರಸ್ಥದಲ್ಲಿಯೇ ಬಹಳ ವರ್ಷಗಳ ಕಾಲ ಪಾಂಡವರಿಂದ ಪೂಜಿಸಲ್ಪಡುವವನಾಗಿ, ಅವರಿಗೆ ಉತ್ಯುಕ್ತವಾದ ಪ್ರೀತಿಯನ್ನು ಕೊಡುತ್ತಾ ಅಲ್ಲೇ ಆವಾಸ ಮಾಡಿದನು.

 

[ದ್ರೌಪದೀ ಪುತ್ರರ ಮೂಲಸ್ವರೂಪವನ್ನು ಪರಿಚಯಿಸುತ್ತಾರೆ:]

ಆಸನ್ ಕೃಷ್ಣಾಯಾಃ ಪಞ್ಚ ಸುತಾ ಗುಣಾಢ್ಯಾ ವಿಶ್ವೇ ದೇವಾಃ ಪಞ್ಚ ಗನ್ಧರ್ವಮುಖ್ಯೈಃ

ಆವಿಷ್ಟಾಸ್ತೇ ಚಿತ್ರರಥಾಭಿತಾಮ್ರಕಿಶೋರಗೋಪಾಲಬಲೈಃ ಕ್ರಮೇಣ ॥೨೦.೨೧೧॥

 

ದ್ರೌಪದಿಗೆ ಪಾಂಡವರಿಂದ ಐದು ಜನ ಗುಣಭರಿತರಾದ ಮಕ್ಕಳಾದರು. ಸ್ವರೂಪತಃ ಅವರು ಐದುಮಂದಿ ವಿಶ್ವೇದೇವತೆಗಳು. ಗಂಧರ್ವಮುಖ್ಯರಾದ ಚಿತ್ರರಥ, ಅಭಿತಾಮ್ರ, ಕಿಶೋರ, ಗೋಪಾಲ, ಬಲ ಎನ್ನುವ ಗಂಧರ್ವರಿಂದ ಆವಿಷ್ಟರಾಗಿ ಇಲ್ಲಿ ಹುಟ್ಟಿದರು.

[ಮಹಾಭಾರತದಲ್ಲಿ (ಆದಿಪರ್ವ ೬೮.೧೨೭) ಈ ಕುರಿತ ವಿವರ ಕಾಣಸಿಗುತ್ತದೆ: ‘ದ್ರೌಪದೇಯಾಶ್ಚ  ಯೇ ಪಞ್ಚ ಬಭೂವುರ್ಭರತರ್ಶಭ । ವಿಶ್ವಾನ್ ದೇವಗಣಾನ್  ವಿದ್ಧಿ ಸಞ್ಜಾತಾನ್ ಭರತರ್ಷಭಾನ್’ ದ್ರೌಪದಿಯ ಐದು ಜನ ಮಕ್ಕಳು ಯಾರು ಎಂದರೆ- ಅವರು ವಿಶ್ವೇದೇವತೆಗಳು. ಇಲ್ಲಿ  ಸಞ್ಜಾತಾನ್’ ಎನ್ನುವ ಪದ ಪ್ರಯೋಗ  ಅವರು ಐದು ಮಂದಿ ಗಂಧರ್ವರ ಜೊತೆಗೆ ಕೂಡಿಕೊಂಡು  ಹುಟ್ಟಿರುವುದನ್ನು ಸೂಚಿಸುತ್ತದೆ ಎನ್ನುವುದು ಆಚಾರ್ಯರ ನಿರ್ಣಯದಿಂದ ತಿಳಿಯುತ್ತದೆ.

ದ್ರೌಪದಿಯ ಐದು ಮಂದಿ ಮಕ್ಕಳ ಮೂಲರೂಪ ಹಾಗೂ ಅವರ ಈ ಜನ್ಮಕ್ಕೆ ಕಾರಣವಾದ ಘಟನೆಯನ್ನು   ಮಾರ್ಕಂಡೇಯ ಪುರಾಣದಲ್ಲಿ(೭.೬೨-೬೮) ವಿವರಿಸಿರುವುದನ್ನು ಕಾಣಬಹುದು. ಒಮ್ಮೆ ವಿಶ್ವೇದೇವತೆಗಳು ಮತ್ತು ವಿಶ್ವಾಮಿತ್ರರ ನಡುವೆ ಯಾವುದೋ ಸಣ್ಣ ಕಾರಣಕ್ಕಾಗಿ ಘರ್ಷಣೆ ಉಂಟಾಯಿತು. ಆ ಸಂದರ್ಭದಲ್ಲಿ ವಿಶ್ವೇದೇವತೆಗಳು ವಿಶ್ವಾಮಿತ್ರರನ್ನು ಹೀಗಳೆದು- ‘ವಿಶ್ವಾಮಿತ್ರಃ  ಸುಪಾಪೋsಯಂ ಲೋಕಾನ್ ಕಾನ್ ಸಮವಾಪ್ಸ್ಯತಿ’ – ‘ಪಾಪಿಷ್ಟನಾದ ವಿಶ್ವಾಮಿತ್ರನು ಯಾವಲೋಕವನ್ನು ಹೊಂದುತ್ತಾನೆ’ ಎಂಬುದಾಗಿ ಮಾತನಾಡಿದರು. ಆಗ ಕೋಪಗೊಂಡ ವಿಶ್ವಾಮಿತ್ರರು ‘ಶಶಾಪ ತಾನ್ ಮನುಷ್ಯತ್ವಂ ಸರ್ವೇ ಯೋಯಮವಾಪ್ಸ್ಯಾಥ’ - ನೀವೆಲ್ಲರೂ ಕೂಡಾ ಮನುಷ್ಯರಾಗಿ ಹುಟ್ಟಿ ಎಂದು ಶಾಪ ಕೊಟ್ಟರು. ನಂತರ ಬೇಡಿಕೊಂಡ ವಿಶ್ವೇದೇವತೆಗಳಿಗೆ ವಿಶ್ವಾಮಿತ್ರರು ‘ಮಾನುಷತ್ವೇsಪಿ ಭವತಾಂ ಭವಿತ್ರಿ ನೈವ ಸನ್ತತಿಃ’  ‘ದ್ರೌಪದಿಯ ಗರ್ಭದಿಂದ ಮನುಷ್ಯರಾಗಿ ಹುಟ್ಟಿ, ಆದರೆ ಅಲ್ಲಿ ನಿಮ್ಮ ಸಂತತಿ ಮುಂದುವರಿಯದಿರಲಿ’ ‘ನ ದಾರಸಙ್ಗ್ರಹಶ್ಚೈವ  ಭವಿತಾ ನಚ ಮತ್ಸರಃ’ ನಿಮಗೆ ಮದುವೆಯಾಗುವುದಿಲ್ಲ ಹಾಗೂ  ನಿಮ್ಮಲ್ಲಿ ಮತ್ಸರ ಬರುವುದಿಲ್ಲ. ಕಾಮ-ಕ್ರೋಧ ವಿನಿರ್ಮುಕ್ತರಾಗಿ ಮತ್ತೆ ದೇವತೆಗಳಾಗಿ ಬರುತ್ತೀರಿ’ ಎಂದು ಶಾಪ ವಿಮೋಚನೆಯ ಮಾರ್ಗವನ್ನು ಹೇಳಿದರು].

 

ಪ್ರತಿವಿನ್ಧ್ಯಃ ಸುತಸೋಮಃ ಶ್ರುತಾಖ್ಯಕೀರ್ತ್ತಿಃ ಶತಾನೀಕ ಉತ ಶ್ರುತಕ್ರಿಯಃ ।

ಯುಧಿಷ್ಠಿರಾದ್ಯೈಃ ಕ್ರಮಶಃ ಪ್ರಜಾತಾಸ್ತೇಷಾಂ ದ್ವಯೋಶ್ಚಾವರಜೋsಭಿಮನ್ಯುಃ ॥೨೦.೨೧೨

 

ದ್ರೌಪದಿಯಲ್ಲಿ ಧರ್ಮರಾಜನಿಂದ ಹುಟ್ಟಿದವನು ಪ್ರತಿವಿನ್ಧ್ಯ. ಅದೇ ರೀತಿ ಭೀಮಸೇನನಿಂದ ಸುತಸೋಮ, ಅರ್ಜುನನಿಂದ ಶ್ರುತಕೀರ್ತಿ, ನಕುಲನಿಂದ ಶತಾನೀಕ ಮತ್ತು ಸಹದೇವನಿಂದ ಹುಟ್ಟಿದವನು ಶ್ರುತಕರ್ಮಾ. ಅಭಿಮನ್ಯು ಕ್ರಮವಾಗಿ ಪ್ರತಿವಿನ್ಧ್ಯ ಮತ್ತು  ಸುತಸೋಮನ ನಂತರ ಹುಟ್ಟಿದವನು (ಶ್ರುತಕೀರ್ತಿ, ಶತಾನೀಕ ಮತ್ತು ಶ್ರುತಕರ್ಮಾ ಅಭಿಮನ್ಯುಗಿಂತ ಚಿಕ್ಕವರು)


[ಅಭಿಮನ್ಯುವಿನ ಮೂಲಸ್ವರೂಪವನ್ನು ಪರಿಚಯಿಸುತ್ತಾರೆ:]

ಚನ್ದ್ರಾಂಶಯುಕ್ತೋsತಿತರಾಂ ಬುಧೋsಸೌ ಜಾತಃ ಸುಭದ್ರಾಜಠರೇsರ್ಜ್ಜುನೇನ ।

ಧರ್ಮ್ಮೇರಶಕ್ರಾಂಶಯುತೋsಶ್ವಿನೋಶ್ಚ ತಥೈವ ಕೃಷ್ಣಸ್ಯ ಸ ಸನ್ನಿಧಾನಯುಕ್ ॥೨೦.೨೧೩॥

 

ಚಂದ್ರನ ಅಂಶದಿಂದ ಕೂಡಿದ ಬುಧನು ಅರ್ಜುನನಿಂದ ಸುಭದ್ರೆಯಲ್ಲಿ ಹುಟ್ಟಿದನು. ಇವನು ಧರ್ಮರಾಜ, ಮುಖ್ಯಪ್ರಾಣ ಮತ್ತು ಇಂದ್ರ ಇವರ ಅಂಶದಿಂದಲೂ, ಅಶ್ವೀದೇವತೆಗಳ ಆವೇಶದಿಂದಲೂ, ಕೃಷ್ಣನ ಸನ್ನಿಧಾನದಿಂದಲೂ ಕೂಡಿದ್ದನು.

[ಅಭಿಮನ್ಯು ನಾಮದ ನಿರ್ವಚನವನ್ನು ಮಹಾಭಾರತದಲ್ಲಿ(ಆದಿಪರ್ವ:೨೪೭.೬೩)   ಹೀಗೆ ವಿವರಿಸಿದ್ದಾರೆ: ‘ಅಭೀಶ್ಚ ಮನ್ಯುಮಾಂಶ್ಚೈವ ತತಸ್ತಮರಿಮರ್ದನಮ್ । ಅಭಿಮನ್ಯುರಿತಿ ಪ್ರಾಹುರಾರ್ಜುನಿಂ ಪುರುಷರ್ಷಭಮ್’- ಭಯ ಇಲ್ಲದ, ಶತ್ರುಗಳೆಡೆಗೆ ದೊಡ್ಡ ಮುನಿಸನ್ನುಳ್ಳವನು ಅಭಿಮನ್ಯು. ಚಂದ್ರಾಂಶಯುಕ್ತನಾದ ಅಭಿಮನ್ಯುವನ್ನು ವರ್ಚಾ(ಕಾಂತಿ ಉಳ್ಳವನು) ಎಂದೂ ಕರೆಯುತ್ತಾರೆ – ‘ಯಸ್ತು ವರ್ಚಾ ಇತಿ ಖ್ಯಾತಃ ಸೋಮಪುತ್ರಃ ಪ್ರತಾಪವಾನ್ । ಸೊsಭಿಮನ್ಯುರ್ಬೃಹತ್ಕೀತಿರರ್ಜುನಸ್ಯ ಸುತೋsಭವತ್’(ಆದಿಪರ್ವ ೬೮.೧೧೨)]

 

ಸರ್ವೇsಪಿ ತೇ ವೀರ್ಯ್ಯವನ್ತಃ ಸುರೂಪಾ ಭಕ್ತಾ ವಿಷ್ಣೋಃ ಸರ್ವಶಾಸ್ತ್ರೇಷ್ವಭಿಜ್ಞಾಃ ।

ಮೋದಂ ಯಯುಃ ಪಾಣ್ಡವಾಸ್ತೈಃ ಸುತೈಶ್ಚ ವಿಶೇಷತಃ ಸಾತ್ತ್ವತೀನನ್ದನೇನ ೨೦.೨೧೪

 

ಈ ಆರೂ ಜನರು ಒಳ್ಳೆಯ ವೀರ್ಯವುಳ್ಳವರು, ಒಳ್ಳೆಯ ರೂಪವುಳ್ಳವರು, ಪರಮಾತ್ಮನ ಭಕ್ತರು ಹಾಗೂ ಎಲ್ಲಾ ಶಾಸ್ತ್ರಗಳನ್ನೂ ಬಲ್ಲವರಾಗಿದ್ದರು. ಪಾಂಡವರು ತಮ್ಮ ಮಕ್ಕಳಿಂದ, ವಿಶೇಷವಾಗಿ (ಗುಣಾಧಿಕ್ಯನಾದ್ದರಿಂದ) ಅಭಿಮನ್ಯುವಿನಿಂದ ಸಂತೋಷವನ್ನು ಹೊಂದಿದರು. 


No comments:

Post a Comment