ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, September 17, 2021

Mahabharata Tatparya Nirnaya Kannada 20149_20153

 

ತಂ ದ್ವ್ಯಷ್ಟಸಾಹಸ್ರಗೃಹೇಷು ದೃಷ್ಟ್ವಾ ತಾವತ್ಸ್ವರೂಪೈರ್ವಿಹರನ್ತಮೇಕಮ್ ।

ಸುವಿಸ್ಮಿತಃ ಪ್ರಯಯೌ ತಂ ಪ್ರಣಮ್ಯ ಶಕ್ರಪ್ರಸ್ಥಂ ಪೂಜಿತಶ್ಚಾತ್ರ ಪಾರ್ತ್ಥೈಃ  ॥೨೦.೧೪೯॥

 

೧೬,೧೦೮ ಮನೆಗಳಲ್ಲಿ ೧೬,೧೦೮ ರೂಪಗಳಿಂದ ವಿಹರಿಸುವ ಒಬ್ಬನೇ ಆಗಿರುವ ಶ್ರೀಕೃಷ್ಣನನ್ನು ಕಂಡು ಅತ್ಯಂತ ಅಚ್ಚರಿಗೆ ಒಳಗಾದ ನಾರದರು ಕೃಷ್ಣನಿಗೆ ನಮಸ್ಕರಿಸಿ, ಇಂದ್ರಪ್ರಸ್ಥಕ್ಕೆ ತೆರಳಿದರು. ಅಲ್ಲಿ ಪಾಂಡವರಿಂದ ಪೂಜಿಸಲ್ಪಟ್ಟರು ಕೂಡಾ.

[೧೬,೧೦೮ ಮನೆಗಳಲ್ಲಿ ಅಷ್ಟು ರೂಪಗಳಿಂದ ಭಗವಂತ ವಿಹಾರ ಮಾಡುತ್ತಿದ್ದುದನ್ನು ನೋಡಿ ನಾರದರು  ಅಚ್ಚರಿಗೊಳಗಾದರು ಎನ್ನುವುದನ್ನು ಭಾಗವತ ವಿವರಿಸಿದರೆ, ಅವರು  ಪಾಂಡವರ ಬಳಿ ಬಂದ ವಿವರವನ್ನು ಮಹಾಭಾರತದ ಆದಿಪರ್ವದಲ್ಲಿ ವಿವರಿಸಿದ್ದಾರೆ. ಇಲ್ಲಿ ಆಚಾರ್ಯರು ಎಲ್ಲವನ್ನೂ ಕಾಲಕ್ರಮದಲ್ಲಿ ನಮಗೆ ನೀಡಿದ್ದಾರೆ].

 

ಸ ಆಜ್ಞಯಾ ಬ್ರಹ್ಮಣ ಆಹ ಕೃಷ್ಣಾಂ ಕ್ರಮಾತ್ ಕರ್ತ್ತುಂ ಭೀಮ ಏವೈಕಸಂಸ್ಥಾಮ್ ।

ಅನ್ಯಾ ದೇವೀಃ ಸ್ವಾಪಯಿತ್ವಾ ಶರೀರೇ  ತಸ್ಯಾ ಭಾರತ್ಯಾಃ ಪೂರ್ಣ್ಣಭೋಗಾರ್ತ್ಥಮೇವ ॥೨೦.೧೫೦

 

ಬ್ರಹ್ಮದೇವರ ಆಜ್ಞೆಯಂತೆ,  ಭಾರತೀದೇವಿಯ ಪೂರ್ಣಭೋಗಕ್ಕಾಗಿ,  ದ್ರೌಪದಿ ಭೀಮನಿಗೆ ಮಾತ್ರ ಸೀಮಿತವಾಗಿರಬೇಕು ಮತ್ತು ಉಳಿದ ದೇವಿಯರು ಆಕೆಯ ಶರೀರದಲ್ಲಿಯೇ ಮಲಗಿರಬೇಕು  ಎನ್ನುವ ಉದ್ದೇಶದಿಂದ, ಅದಕ್ಕಾಗಿ ಒಂದು ನಿಯಮನ  ಮಾಡಲು, ನಾರದರು ಪಾಂಡವರನ್ನು ಕುರಿತು ಹೀಗೆ ಹೇಳುತ್ತಾರೆ:

 

[ಲೋಕದಲ್ಲಿ ಹೆಣ್ಣಿನ ವಿಷಯದಲ್ಲಿ ಜಗಳ ಬರುವುದು ಸಾಮಾನ್ಯ. ಅದಕ್ಕೆ ಸಂಬಂಧಿಸಿದ   ಕಥೆಯೊಂದನ್ನು ನಾರದರು ಪಾಂಡವರಿಗೆ ಹೇಳುತ್ತಾರೆ:]

 

ಸುನ್ದೋಪಸುನ್ದೌ ಭ್ರಾತರೌ ಬ್ರಹ್ಮವಾಕ್ಯಾತ್ ಪರಸ್ಪರಾದನ್ಯತೋ ನೈವ ವದ್ಧ್ಯೌ ।

ತಿಲೋತ್ತಮಾರ್ತ್ಥೇ ನಿಹತೌ ಪರಸ್ಪರಂ ತಯೋರ್ವದಾರ್ತ್ಥೇ ಸೃಷ್ಟಯಾ ತೇನ ದೈತ್ಯೌ॥೨೦.೧೫೧॥

 

ಸುನ್ದ ಮತ್ತು ಉಪಸುನ್ದರು ಅಣ್ಣತಮ್ಮಂದಿರು. ಬ್ರಹ್ಮದೇವರ ವರದಿಂದಾಗಿ ಅವರು ಇನ್ನೊಬ್ಬರಿಂದ ವದ್ಯರಾಗಿರಲಿಲ್ಲ. ಆದರೆ ಅವರು ಪರಸ್ಪರ ವದ್ಯರು. (ಅಂದರೆ ಒಬ್ಬನನ್ನು ಇನ್ನೊಬ್ಬ ಕೊಲ್ಲಬಹುದಾಗಿತ್ತು, ಆದರೆ ಬೇರೊಬ್ಬರು ಅವರನ್ನು ಕೊಲ್ಲಲು ಸಾಧ್ಯವಿರಲಿಲ್ಲ). ಅವರ ಸಾವಿಗಾಗಿಯೇ ಸೃಷ್ಟಿಮಾಡಲ್ಪಟ್ಟ ತಿಲೋತ್ತಮೆಯಿಂದ ಆ ಇಬ್ಬರು ದೈತ್ಯರು ಪರಸ್ಪರ ಹೊಡೆದಾಡಿಕೊಂಡು ಸತ್ತರು.

 

[ಹೆಂಡತಿಯ ವಿಷಯದಲ್ಲಿ ನಿಮ್ಮಲ್ಲಿ ಜಗಳವಾಗಬಾರದು, ಅದಕ್ಕೆ ಒಂದು ವ್ಯವಸ್ಥೆ ಆಗಬೇಕು. ಇದಕ್ಕಾಗಿ ನೀವು ಒಂದು ಕ್ರಮವನ್ನು ಆಶ್ರಯಿಸಬೇಕು ಎಂದ ನಾರದರು ಉಪಾಯವೊಂದನ್ನು ಹೇಳುತ್ತಾರೆ:].  

 

ಅತಃ ಪೃಥಗ್  ವತ್ಸರತೋ ಭವತ್ಸು ಕ್ರಮಾತ್ ಕೃಷ್ಣಾ ತಿಷ್ಠತಾಂ ಯೋsನ್ಯಯುಕ್ತಾಮ್ ।

ಪಶ್ಯೇದ್ ವೋsಸೌ ವತ್ಸರಂ ತೀರ್ತ್ಥಯಾತ್ರಾಂ ಕುರ್ಯ್ಯಾದಿತಿ ಸ್ಮಾಥ ಚಕ್ರುಸ್ತಥಾ ತೇ ॥೨೦.೧೫೨॥

 

‘ಒಂದೊಂದು ವರ್ಷಗಳಲ್ಲಿ ಕ್ರಮವಾಗಿ ನಿಮ್ಮಲ್ಲಿ ದ್ರೌಪದಿಯು ಇರಲಿ. ಯಾರು ಇನ್ನೊಬ್ಬನೊಂದಿಗೆ ಕೂಡಿರುವ ದ್ರೌಪದಿಯನ್ನು ಕಾಣುತ್ತಾನೋ, ಅವನು ಒಂದು ವರ್ಷಕಾಲ ತೀರ್ಥಯಾತ್ರೆಯನ್ನು ಮಾಡಲೀ’ ಎಂದು ನಾರದರು ಹೇಳಿದಾಗ, ಪಾಂಡವರು ‘ಹಾಗೇ ಆಗಲೀ’ ಎಂದು ಒಪ್ಪಂದವನ್ನು ಮಾಡಿಕೊಂಡರು.

 

ತತಃ ಕದಾಚಿತ್ ಧರ್ಮ್ಮರಾಜೇನ ಯುಕ್ತಾಂ ಶಸ್ತ್ರಾಗಾರೇ ವಿಪ್ರಗೋರಕ್ಷಣಾರ್ತ್ಥಮ್ ।

ಶಸ್ತ್ರಾದಿತ್ಸುಃ ಫಲ್ಗುನೋsದ್ರಾಕ್ ಸ ಶಸ್ತ್ರೈರ್ದ್ದಸ್ಯೂನ್ ಹತ್ವಾ ತೀರ್ತ್ಥಯಾತ್ರೋನ್ಮುಖೋsಭೂತ್ ॥೨೦.೧೫೩॥

 

ತದನಂತರ ಯಾವುದೋ ಒಂದು ದಿನ, ಬ್ರಾಹ್ಮಣನೊಬ್ಬನ ಹಸುಗಳ ರಕ್ಷಣೆಗಾಗಿ ಶಸ್ತ್ರವನ್ನು ತೆಗೆದುಕೊಳ್ಳಲು ಆಯುಧಶಾಲೆಗೆ ಬಂದ ಪಲ್ಗುಣನು(ಅರ್ಜುನನು), ಧರ್ಮರಾಜನಿಂದ ಕೂಡಿರುವ ದ್ರೌಪದಿಯನ್ನು ಕಂಡ. ಶಸ್ತ್ರಗಳಿಂದ ಕಳ್ಳರನ್ನು ಕೊಂದ ಅರ್ಜುನ ತೀರ್ಥಯಾತ್ರೆಗೆ ತೆರಳಲು ಸಿದ್ಧನಾದ.

No comments:

Post a Comment