ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 11, 2021

Mahabharata Tatparya Nirnaya Kannada 20121_20125

 

ತಯಾsಚ್ಯುತೋsಸೌ ಕನಕಾವದಾತಯಾ ಸುಕುಙ್ಕುಮಾದಿಗ್ಧಪಿಶಙ್ಗವಾಸಸಾ ।

ಪೂರ್ಣ್ಣೇನ್ದುಕೋಟ್ಯೋಘಜಯನ್ಮುಖಾಬ್ಜಯಾ ರೇಮೇsಮಿತಾತ್ಮಾ ಜಗದೇಕಸುನ್ದರಃ೨೦.೧೨೧

ಜಗತ್ತಿನಲ್ಲಿಯೇ ಅತ್ಯಂತ ಚೆಲುವನಾದ, ಅನಂತ ರೂಪಗಳುಳ್ಳ, ಚ್ಯುತಿ ಇರದ ಶ್ರೀಕೃಷ್ಣನು, ಬಂಗಾರದಂತಹ ಕಾಂತಿಯ, ಕುಂಕುಮದಿಂದ ಲೇಪಿಸಲ್ಪಟ್ಟ ಪೀತಾಂಬರವುಳ್ಳ, ಪರಿಪೂರ್ಣವಾಗಿರುವ ಚಂದ್ರರ ಕೋಟಿಯ ಸಮೂಹವನ್ನೇ ಗೆಲ್ಲಬಲ್ಲ ಮುಖಕಮಲವುಳ್ಳ ಸತ್ಯಭಾಮೆಯೊಂದಿಗೆ ಆನಂದದಿಂದ ವಿಹರಿಸಿದನು.  

 

ಸರ್ವರ್ತ್ತುನಿತ್ಯೋದಿತಸರ್ವವೈಭವೇ ಸುರತ್ನಚಾಮೀಕರವೃಕ್ಷಸದ್ವನೇ ।

ಸದೈವ ಪೂರ್ಣ್ಣೇನ್ದುವಿರಾಜಿತೇ ಹರಿಶ್ಚಚಾರ ದೇವ್ಯಾ ಪವನಾನುಸೇವಿತೇ ॥ ೨೦.೧೨೨

 

ಎಲ್ಲಾ ಋತುಗಳ, ಎಲ್ಲಾ ತರಹದ ವೈಭವವನ್ನು ಹೊಂದಿರುವ, ಒಳ್ಳೆಯ ರತ್ನ ಮತ್ತು ಬಂಗಾರಮಯ ವೃಕ್ಷವುಳ್ಳ, ಸದಾ ಚಂದ್ರನ ಕಾಂತಿಯಿರುವ, ಮೆಲುಗಾಳಿಯಿಂದ ಕೂಡಿದ ಆ ಉದ್ಯಾನದಲ್ಲಿ ಪರಮಾತ್ಮನು ವಿಹರಿಸಿದ.  

[ಇಲ್ಲಿ ಆಚಾರ್ಯರು ಬಂಗಾರ ಎನ್ನುವುದನ್ನು  ಚಾಮೀಕರ’ ಎನ್ನುವ ವಿಶೇಷ ಶಬ್ದ ಬಳಸಿ ಹೇಳಿರುವುದನ್ನು ಕಾಣುತ್ತೇವೆ. ಈ ರೀತಿ ಹೇಳಲು ವಿಶೇಷ ಕಾರಣವಿದೆ. ಭೂಮಿಯಲ್ಲಿ ಮನುಷ್ಯರು ಬಳಸುವ ಬಂಗಾರ ಹಾಗೂ ದೇವಲೋಕದ ಬಂಗಾರ ಒಂದೇ ಸಮನಾಗಿರುವುದಲ್ಲ. ಬಂಗಾರದಲ್ಲಿಯೂ ತಾರತಮ್ಯ ಇದೆ ಎನ್ನುವ ನಿರೂಪಣೆಯನ್ನು ಬೃಹದಾರಣ್ಯಕ ಭಾಷ್ಯದಲ್ಲಿ(೬.೪.೪) ಆಚಾರ್ಯರು ನೀಡಿರುವುದನ್ನು ಕಾಣಬಹುದು:  ಮಯಂ ತು ಮಾನುಷಂ ಸ್ವರ್ಣಂ ಪೀತಂ ಗಾಂಧರ್ವಮೇವ ಚ ಇಂದ್ರಗೋಪನಿಭಂ ನಾಮ್ನಾ ಜಾಮ್ಬೂನದಮಿತಿ ಸ್ಮೃತಮ್ ದೈವಂ ಚಾಮೀಕರಂ ನಾಮ ಪ್ರೋದ್ಯದಾದಿತ್ಯಸನ್ನಿಭಮ್  ಅಧ್ಯಾತ್ಮವಚನದ ಪ್ರಮಾಣದೊಂದಿಗೆ ಬೃಹದ್ಭಾಷ್ಯದಲ್ಲಿ ಹೇಳಿರುವ ಈ ಮಾತಿನ ಪ್ರಕಾರ-  ಮಾನುಷ ಬಂಗಾರವನ್ನು ‘ಮಯ’ ಎಂದು ಕರೆಯುತ್ತಾರೆ. ಗಂಧರ್ವರ ಬಂಗಾರವನ್ನು ‘ಪೀತ’ ಎಂದು ಕರೆಯುತ್ತಾರೆ. ಇಂದ್ರಗೋಪದಂತೆ ಇರುವ, ಹೆಸರಿನಿಂದ ಜಾಮ್ಬೂನದ ಎಂದು ಕರೆಸಿಕೊಳ್ಳಲ್ಪಟ್ಟ, ‘ಚಾಮೀಕರ’ ಎಂದೂ ಕರೆಸಿಕೊಳ್ಳಲ್ಪಡುವ ಸ್ವರ್ಣ ಏನಿದೆ, ಅದು ದೇವತೆಗಳ ಬಂಗಾರ. ರತ್ನಮಯವಾದ, ಚಾಮೀಕರಮಯವಾಗಿರುವ ವೃಕ್ಷಗಳನ್ನು ಒಳಗೊಂಡ, ರತ್ನ-ಚಾಮೀಕರವನ್ನು ನೀಡುವ ವೃಕ್ಷಗಳುಳ್ಳ ನಂದನೋದ್ಯಾನದಲ್ಲಿ ಶ್ರೀಕೃಷ್ಣ-ಸತ್ಯಭಾಮೆಯರು ವಿಹರಿಸಿದರು].

 

ವಿದೋಷಸಂವಿತ್ತನುರತ್ರ ಸತ್ತರುಂ ದದರ್ಶ ಸತ್ಯಾsಮೃತಮನ್ಥನೋದ್ಭವಮ್ ।

ಸ ಪಾರಿಜಾತಂ ಮಣಿಕಾಞ್ಚನಾತ್ಮಕಂ ಸಮಸ್ತಕಾಮಪ್ರದಮಾರ್ತ್ತಿಹಾರಿಣಮ್ ॥ ೨೦.೧೨೩

 

ಈ ಉದ್ಯಾನದಲ್ಲಿ, ಯಾವುದೇ ದೋಷವಿಲ್ಲದ, ಜ್ಞಾನವೇ ಮೈವೆತ್ತು ಬಂದಿರುವ ಮೈಯುಳ್ಳ ಸತ್ಯಭಾಮೆಯು, ಅಮೃತಮಥನದಲ್ಲಿ ಹುಟ್ಟಿದ ಬಂಗಾರ ಹಾಗೂ ಮುತ್ತಿನಿಂದ ಕೂಡಿರುವ, ಎಲ್ಲಾ ಕಾಮನೆಗಳನ್ನೀಯುವ, ಸಂಕಟವನ್ನು ಪರಿಹರಿಸುವ ಪಾರಿಜಾತ ಎನ್ನುವ ವೃಕ್ಷವನ್ನು ಕಂಡಳು.

 

ದೃಷ್ಟ್ವೈವ ತಂ ಸುಸ್ಮಿತಚನ್ದ್ರಿಕಾಸ್ಫುರನ್ಮುಖಾರವಿನ್ದಾsಸಿತಲೋಲಲೋಚನಾ ।

ಕಪೋಲನಿರ್ಭಾತಚಲತ್ಸುಕುಣ್ಡಲಾ ಜಗಾದ ದೇವಾಧಿಪತಿಂ ಪತಿಂ ಸತೀ ॥ ೨೦.೧೨೪

 

ಮುಗುಳುನಗೆಯಿಂದ ಬೆಳದಿಂಗಳಿನಂತೆ ತೋರುವ ಮುಖಕಮಲವುಳ್ಳ, ಕಪ್ಪಾಗಿರುವ ಚಂಚಲವಾದ ಕಣ್ಣುಗಳುಳ್ಳ, ಕುಂಡಲಗಳ ಬಿಂಬ ಕಾಣುವ ಕೆನ್ನೆಗಳುಳ್ಳ ಸತ್ಯಭಾಮೆಯು, ಪಾರಿಜಾತ ವೃಕ್ಷವನ್ನು ಕಂಡು,  ದೇವತೆಗಳಿಗೆ ದೊರೆಯಾಗಿರುವ ಶ್ರೀಕೃಷ್ಣನನ್ನು ಕುರಿತು ಹೀಗೆ ಹೇಳಿದಳು:

 

ತರುರ್ಜ್ಜಗಜ್ಜೀವದ ಮೇ ಗೃಹಾಙ್ಗಣೇ ಸಂಸ್ಥಾಪನೀಯೋsಯಮಚಿನ್ತ್ಯಪೌರುಷ ।

ಇತೀರಿತಸ್ತಾಂ ಕಲಶೋಪಮಸ್ತನೀಮಾಲಿಙ್ಗ್ಯ ದೇವಸ್ತರುಮುದ್ಬಬರ್ಹ ॥ ೨೦.೧೨೫

 

‘ಜಗತ್ತಿಗೆ ಜೀವನವನ್ನೀಯುವ, ಚಿಂತಿಸಲು ಅಸಾಧ್ಯವಾದ ಪೌರುಷವುಳ್ಳ ಶ್ರೀಕೃಷ್ಣನೇ, ನನ್ನ ಮನೆಯ ಮುಂಭಾಗದಲ್ಲಿ  ಈ ಮರವು ಇರಿಸಲ್ಪಡಬೇಕು’.  ಈರೀತಿಯಾಗಿ ಕೇಳಿಕೊಂಡ ತುಂಬು ಎದೆಯ ಸತ್ಯಭಾಮೆಯನ್ನು ಆಲಂಗಿಸಿದ ಶ್ರೀಕೃಷ್ಣ, ಆ ಪಾರಿಜಾತ ವೃಕ್ಷವನ್ನು ಕಿತ್ತನು. 

No comments:

Post a Comment