ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, September 6, 2021

Mahabharata Tatparya Nirnaya Kannada 20104_20108

 

ಸ ಮನ್ತ್ರಿಭಿರ್ಮ್ಮನ್ತ್ರಿಪುತ್ರೈಃ ಸಮೇತೋ ಜಗಾಮ ಕೃಷ್ಣಾವಜ್ಞಯಾsನ್ಧಂ ತಮಶ್ಚ ।

ತದಾವಿಷ್ಟೋ ವಾಯುರಗಾಚ್ಚ ಕೃಷ್ಣಮನ್ತಃಪುರಂ ಪ್ರಾವಿಶತ್ ಸತ್ಯಯೇಶಃ ॥೨೦.೧೦೪

 

ಕೃಷ್ಣನನ್ನು ತಿರಸ್ಕಾರ ಮಾಡಿದ್ದರಿಂದ ನರಕಾಸುರನು ತನ್ನ ಮಂತ್ರಿಗಳಿಂದಲೂ, ಮಂತ್ರಿಗಳ ಮಕ್ಕಳಿಂದಲೂ ಕೂಡಿದವನಾಗಿ, ಅನ್ಧಂತಮಸ್ಸಿಗೆ ತೆರಳಿದನು. ಅವನಲ್ಲಿ ಆವಿಷ್ಟನಾಗಿದ್ದ ಮುಖ್ಯಪ್ರಾಣನು ಕೃಷ್ಣನನ್ನು ಸೇರಿದ. ಜಗದೊಡೆಯನಾದ ಶ್ರೀಕೃಷ್ಣನು ಸತ್ಯಭಾಮೆಯಿಂದ ಕೂಡಿ ನರಕಾಸುರನ ಅಂತಃಪುರವನ್ನು ಪ್ರವೇಶಮಾಡಿದನು.  

 

ತದಾ ಭೂಮಿಃ ಪಞ್ಚಭೂತಾವರಾ ಯಾ ಯಸ್ಯಾಂ ಜಜ್ಞೇ ನರಕಃ ಶ್ರೀವರಾಹಾತ್ ।

ಮೂಲಪ್ರಕೃತ್ಯೈವ ಭೂಮ್ಯಾ ನಿತಾನ್ತಮಾವಿಷ್ಟಾ ಯಾ ಸಾsಗಮತ್ ಕೃಷ್ಣಪಾದೌ ॥೨೦.೧೦೫॥

 

ನರಕನು ಶ್ರೀವರಾಹನಿಂದ ಯಾರಲ್ಲಿ ಹುಟ್ಟಿದ್ದನೋ, ಮೂಲಪ್ರಕೃತಿ ಲಕ್ಷ್ಮೀದೇವಿಯಿಂದ ಆತ್ಯಂತಿಕವಾಗಿ ಪ್ರವಿಷ್ಟಳಾಗಿರುವ ಭೂಮಿಃ ಎನ್ನುವ ಹೆಸರಿನ, ಪಂಚಭೂತಗಳಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿರುವ ನರಕನ ತಾಯಿ ಕೃಷ್ಣನ ಪಾದದಲ್ಲಿ ಶರಣು ಹೊಂದಿದಳು.

 

ಸಾsದಿತ್ಯಾಸ್ತೇ ಕುಣ್ಡಲೇ ಪಾದಯೋಶ್ಚ ನಿಧಾಯ ಪೌತ್ರಂ ಭಗದತ್ತಸಞ್ಜ್ಞಮ್ ।

ಸಮರ್ಪ್ಪಯಾಮಾಸ ತಸ್ಯಾಭಿಷೇಕಂ ಪ್ರಾಗ್ಜ್ಯೋತಿಷೇ ಕಾರಯಾಮಾಸ ಕೃಷ್ಣಃ ॥೨೦.೧೦೬॥

 

ಅವಳು ನರಕಾಸುರನು ಅದಿತಿಯಿಂದ ಅಪಹರಿಸಿದ ಕುಂಡಲಗಳನ್ನು ಪರಮಾತ್ಮನ ಪಾದಗಳ ಬಳಿ ಇಟ್ಟು, ಭಗದತ್ತ ಎನ್ನುವ ಹೆಸರಿನ ಮೊಮ್ಮಗನನ್ನು ಕೃಷ್ಣನಿಗೆ ಸಮರ್ಪಿಸಿದಳು. ಶ್ರೀಕೃಷ್ಣನು ಭಗದತ್ತನ ಅಭಿಷೇಕವನ್ನು ಪ್ರಾಗ್ಜ್ಯೋತಿಷದಲ್ಲಿ ಮಾಡಿಸಿದನು.   

 

ಸಂಸ್ಥಾಪ್ಯ ತಂ ಸರ್ವಕಿರಾತರಾಜ್ಯೇ ಭೌಮಾಹೃತಂ ವೈಶ್ರವಣಾದ್ ಬಲೇನ ।

ಶಿವೇನ ದತ್ತಂ ಧನದಾಯಾತಿಸತ್ತ್ವಂ ಭಗದತ್ತೇ ನ್ಯದಧಾತ್ ಸುಪ್ರತೀಕಮ್ ॥೨೦.೧೦೭

 

ಭಗದತ್ತನನ್ನು ಸಮಗ್ರ ಪ್ರಾಗ್ಜ್ಯೋತಿಷದ ರಾಜನನ್ನಾಗಿ ಮಾಡಿ, ನರಕಾಸುರನು ಕುಬೇರನಿಂದ ಬಲಾತ್ಕಾರವಾಗಿ ತಂದ, ಕುಬೇರನಿಗಾಗಿ ಸದಾಶಿವನಿಂದ ಕೊಡಲ್ಪಟ್ಟ, ಅತ್ಯಂತ ಬಲವುಳ್ಳ, ಸುಪ್ರತೀಕ ಎನ್ನುವ ಆನೆಯನ್ನು ಶ್ರೀಕೃಷ್ಣ ಭಗದತ್ತನಲ್ಲಿಟ್ಟ.

 

ಕರೀನ್ದ್ರಮೇಕಂ ತಂ ನಿಧಾಯೈವ ತಸ್ಮಿನ್ ಕೃತ್ವಾ ಪ್ರಸಾದಂ ಚ ವಸುನ್ಧರಾಯಾಃ ।

ಚತುರ್ದ್ದನ್ತಾನ್ ಷಟ್ ಸಹಸ್ರಾನ್ ಕರೀನ್ದ್ರಾನ್ ಪಯೋಬ್ಧಿಜಾನ್ ಪ್ರಾಹಿಣೋದ್ ದ್ವಾರವತ್ಯೈ॥೨೦.೧೦೮॥

 

ಶ್ರೇಷ್ಠವಾಗಿರುವ ಆ ಸುಪ್ರತೀಕ ಎನ್ನುವ ಆನೆಯನ್ನು ಅವನಲ್ಲಿ ಇಟ್ಟು, ಭೂದೇವಿಗೆ ಅನುಗ್ರಹವನ್ನು ಮಾಡಿದ ಶ್ರೀಕೃಷ್ಣ, ಕ್ಷೀರಸಾಗರದಿಂದ ಹುಟ್ಟಿರುವ  ನಾಲ್ಕು ಕೋರೆಗಳುಳ್ಳ ಆರು ಸಾವಿರ ಆನೆಗಳನ್ನು ದ್ವಾರಾವತಿಗಾಗಿ ಕಳುಹಿಸಿದನು.

[ಇಲ್ಲಿ ಹೇಳಿದ ಆನೆಗಳ ಲೆಕ್ಕದ ಕುರಿತು ಮಹಾಭಾರತ, ವಿಷ್ಣುಪುರಾಣ ಮತ್ತು ಭಾಗವತದಲ್ಲಿ ಬೇರೆಬೇರೆ ವಿವರಣೆಗಳನ್ನು ಕಾಣುತ್ತೇವೆ. ವಿಷ್ಣುಪುರಾಣದಲ್ಲಿ (೫.೨೯.೩೨) ‘ಚತುರ್ದನ್ತಾನ್ ಗಜಾಂಶ್ಚಾಗ್ರ್ಯಾನ್ ಷಟ್ ಸಹಸ್ರಾನ್ ಸ ದೃಷ್ಟವಾನ್’ ಎಂದಿದೆ.   (ನಾಲ್ಕು ಕೋರೆ ಹಲ್ಲುಗಳುಳ್ಳ ಆರು ಸಾವಿರ ಆನೆಗಳನ್ನು ಕಂಡ). ಭಾಗವತದಲ್ಲಿ(೧೦.೬೪.೩೨.-೩೩) ಐರಾವತಕುಲೇಭಾಂಶ್ಚ ಚತುರ್ದನ್ತಾನ್  ಮದೋತ್ಕಟಾನ್ ಭಗದತ್ತಾಯ ದತ್ವೈಕಂ  ಸುಪ್ರತೀಕಂ ತತೋsಪರಾನ್ । ಪಾಣ್ಡುರಾಭಾಂಶ್ಚತುಃ ಷಷ್ಟಿಂ ಪ್ರೇಷಯಾಮಾಸ ಕೇಶವಃ’ ಎಂದು ಹೇಳಿದ್ದಾರೆ. (ಅರವತ್ತನಾಲ್ಕು ಬಿಳಿ ಆನೆಗಳನ್ನು ಕಳುಹಿಸಿದ ಎನ್ನುವುದು ಇಲ್ಲಿ ತಿಳಿಯುತ್ತದೆ). ಇನ್ನು ಮಹಾಭಾರತದಲ್ಲಿ(ಸಭಾಪರ್ವ ೫೬.೯) ‘ ಭೀಮರೂಪಾಶ್ಚ ಮಾತಙ್ಗಾಃ ಪ್ರವಾಳವಿಕೃತಾಃ ಕುಥಾಃ ತೇ ಚ ವಿಂಶತಿಸಾಹಸ್ರಾ ದ್ವಿಸ್ತಾವತ್ಯಃ ಕರೇಣವಃ’ ಎಂದಿದೆ. (ಇಪ್ಪತ್ತು ಸಾವಿರ ಆನೆಗಳು, ಅಷ್ಟೇ ಆಗಿರತಕ್ಕಂತಹ ಹೆಣ್ಣಾನೆಗಳನ್ನು ಕಳುಹಿಸಿದ)..  ಈ ಎಲ್ಲವನ್ನು ಸಮಷ್ಟಿಯಾಗಿ ನೋಡಿದಾಗ, ಮಹಾಭಾರತ ಒಟ್ಟು ಆನೆಗಳ ಸಂಖ್ಯೆಯನ್ನು ಹೇಳುತ್ತದೆ, ವಿಷ್ಣುಪುರಾಣ ನಾಲ್ಕು ದಂತಗಳಿರುವ, ಕ್ಷೀರಸಾಗರದಿಂದ ಬಂದಿರುವ ಆರು ಸಾವಿರ ಆನೆಗಳ ಕುರಿತು ಹೇಳುತ್ತದೆ. ಈ ಆರುಸಾವಿರ ಆನೆಗಳಲ್ಲಿ ೬೪ ಬಿಳಿ ಆನೆಗಳಿದ್ದವು ಎನ್ನುವುದು ಭಾಗವತದಿಂದ ತಿಳಿಯುತ್ತದೆ. ಈ ಎಲ್ಲಾ ಆನೆಗಳನ್ನು ಶ್ರೀಕೃಷ್ಣ ದ್ವಾರಾವತಿಗೆ ಕಳುಹಿಸಿದ].

No comments:

Post a Comment