ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 6, 2022

Mahabharata Tatparya Nirnaya Kannada 21: 315-320

 

ವಿದುರಸ್ತು ತತೋ ಗತ್ವಾ ಧರ್ಮ್ಮರಾಜಮಥಾSಹ್ವಯತ್ ।

ಭ್ರಾತೃಭಿರ್ವಾರ್ಯ್ಯಮಾಣೋsಪಿ ಕೃಷ್ಣಯಾ ಚ ಸ ಧರ್ಮ್ಮರಾಟ್ ।

ಸಾರ್ದ್ಧಂ ಮಾತ್ರಾ ಭ್ರಾತೃಭಿಶ್ಚ ಕೃಷ್ಣಯಾ ಚ ಯಯೌ ದ್ರುತಮ್ ॥೨೧.೩೧೫॥

 

ಈರೀತಿ ಧೂತನಾಗಿ ಬಂದ ವಿದುರ ಧರ್ಮರಾಜನನ್ನು ಕುರಿತು ಆಹ್ವಾನ ಮಾಡಿದನು. ತದನಂತರ ಸಹೋದರರಿಂದಲೂ, ತಾಯಿಯಿಂದಲೂ ತಡೆಯಲ್ಪಟ್ಟರೂ ಕೂಡಾ ಧರ್ಮರಾಜ, ತಾಯಿ, ತಮ್ಮಂದಿರು ಮತ್ತು ದ್ರೌಪದಿಯೊಂದಿಗೆ ದ್ಯೂತಕ್ಕಾಗಿ ಹಸ್ತಿನಪುರಕ್ಕೆ ಹೊರಟನು.

 

ಜ್ಯೇಷ್ಠಾಜ್ಞಯೈವ ವಿದುರ ಆಹ್ವಯನ್ನಪಿ ಧರ್ಮ್ಮಜಮ್ ।

ನಾSಗನ್ತವ್ಯಮಿತಿ ಪ್ರಾಹ ದೋಷಾನುಕ್ತ್ವಾSಕ್ಷಜಾನ್ ಬಹೂನ್ ॥೨೧.೩೧೬॥

 

ವಿದುರನು ಧೃತರಾಷ್ಟ್ರನ ಆಜ್ಞೆಯಂತೇ ಧರ್ಮರಾಜನನ್ನು ಕುರಿತು ಆಹ್ವಾನ ಮಾಡಿದ್ದರೂ ಕೂಡಾ, ದ್ಯೂತದಿಂದಾಗುವ ಅನರ್ಥಗಳನ್ನು ಧರ್ಮರಾಜನಿಗೆ ವಿವರಿಸಿ, ಬರಬೇಡ ಎಂದು ಹೇಳಿದ.

[ಮೊದಲು ವಿದುರ ಧರ್ಮರಾಜನಲ್ಲಿಗೆ ಬಂದು- ‘ಅಣ್ಣ ನಿನ್ನನ್ನು ಜೂಜಿಗಾಗಿ ಕರೆದಿದ್ದಾನೆ, ಎಲ್ಲರೂ ಸೇರುವುದಕ್ಕಾಗಿ ಈ ಆಮಂತ್ರಣ. ಇಲ್ಲಿ ಯಾವುದೇ ದುರುದ್ದೇಶವಿಲ್ಲ’ ಎಂದು ರಾಜಧೂತನಾಗಿ ಧೃತರಾಷ್ಟ್ರನ  ಮಾತನ್ನು ಹೇಳಿದ.  ನಂತರ ಧರ್ಮರಾಜನ ಹಿತೈಷಿಯಾಗಿ, ಎಲ್ಲಾ ರೀತಿಯ ಜೂಜೂ ಕೂಡಾ  ಕೆಟ್ಟದ್ದೇ.  ಹಾಗಾಗಿ ‘ನೀನು ಬರಬಾರದು’ ಎಂದು ತನ್ನ ವೈಯಕ್ತಿಕ  ಅಭಿಪ್ರಾಯವನ್ನೂ ಹೇಳಿದ].

 

ಇತೀಹ ದೋಷಸಞ್ಚಯಸ್ತಥಾ ಚ ತೇ ಪಿತುರ್ವಚಃ ।

ಸಮೀಕ್ಷ್ಯ ತದ್ ದ್ವಯಂ ಸ್ವಯಂ ಕುರುಷ್ವ ಕಾರ್ಯ್ಯಮಾತ್ಮನಃ ॥೨೧.೩೧೭॥

 

ಹಿಂದೆ ಹೇಳಿದಂತೆ  ಜೂಜು ದೋಷಗಳ ಗಣಿ ಇದ್ದಂತೆ. ಆದರೂ ಇದು ನಿನ್ನ ದೊಡ್ಡಪ್ಪನ ಮಾತು. ಇವೆರಡನ್ನೂ ಪರಾಮರ್ಶಿಸಿ ಯೋಗ್ಯವಾದ ಕರ್ಮವನ್ನು ಮಾಡು ಎನ್ನುತ್ತಾನೆ ವಿದುರ.

[ಧೃತರಾಷ್ಟ್ರನ ಆಹ್ವಾನ ಹಾಗೂ ಜೂಜಿನ ಹಿಂದಿರುವ ದೋಷ ಎರಡನ್ನೂ ವಿದುರ ತಟಸ್ಥವಾಗಿ ಧರ್ಮರಾಜನ ಮುಂದೆ ಹೇಳಿ, ‘ನೀನು ಯಾವುದನ್ನು ನಿಶ್ಚಯಿಸುತ್ತೀಯೋ ಅದನ್ನು ಮಾಡು’ ಎನ್ನುತ್ತಾನೆ].

 

ಇತೀರಿತೋsಪಿ ಪಾಣ್ಡವೋ ಯಯೌ ಕಲಿಪ್ರವೇಶಿತಃ ।

ವಿಚಿತ್ರವೀರ್ಯ್ಯಜಂ ಚ ತಂ ಸಮಾಸದತ್ ಸಸೈನಿಕಃ ॥೨೧.೩೧೮॥

 

ಈರೀತಿಯಾಗಿ ಎಲ್ಲವೂ ಹೇಳಲ್ಪಟ್ಟರೂ ಕೂಡಾ ಕಲಿ ಪ್ರವೇಶಕ್ಕೊಳಗಾಗಿದ್ದ ಧರ್ಮರಾಜನು, ಸೈನಿಕರಿಂದ ಕೂಡಿಕೊಂಡು ವಿಚಿತ್ರವೀರ್ಯ ಪುತ್ರನಾದ ದೊಡ್ಡಪ್ಪನ ಬಳಿಗೆ ತೆರಳಿದನು. 

 

[ಧರ್ಮರಾಜನು ಯಾರ ಮಾತನ್ನೂ ಕೇಳದೇ, ಯಾರೊಂದಿಗೂ ಪರಾಮರ್ಶಿಸದೇ ಹೊರಡಲು ಕಾರಣವಾದ ಹಿನ್ನೆಲೆಯನ್ನು ಹೇಳುತ್ತಾರೆ:]

 

ಕಲ್ಯಾವೇಶಾನ್ನೃಪತಿಃ ಪ್ರತಿಜಜ್ಞೇ ಪೂರ್ವಮೇವ ಧರ್ಮ್ಮಾತ್ಮಾ ।

ಆಹೂತೋ ದ್ಯೂತರಣಾನ್ನಿವರ್ತ್ತೇಯಂ ನೈವ ವಾರಿತೋSಪೀತಿ ॥೨೧.೩೧೯॥

 

ಧರ್ಮಾತ್ಮನಾದ ಯುಧಿಷ್ಠಿರನು  ಕಲಿಯ ಆವೇಶದಿಂದ ಹಿಂದೆ (ವಿದ್ಯಾಭ್ಯಾಸ ಮುಗಿದ ಒಡನೆಯೇ) ‘ಆಹ್ವಾನ ಮಾಡಿದರೆ ದ್ಯೂತವೆಂಬ ಯುದ್ಧದಿಂದ ಹಿಂದಿರುಗಲಾರೆ, ತಡೆದರೂ ಕೂಡಾ’ ಎಂದು ಪ್ರತಿಜ್ಞೆ ಮಾಡಿದ್ದನು.

 

ತೇನಾSಯಾತ್ ಸ್ವಸುಹೃದ್ಭಿರ್ನ್ನಿವಾರ್ಯ್ಯಮಾಣೋSಪಿ ನಾಗಪುರಮಾಶು ।

ನಹಿ ಧರ್ಮ್ಮೋ ದ್ಯೂತಕೃತೋ ವಿಶೇಷತಃ ಕ್ಷತ್ರಿಯಸ್ಯ ಲೋಕಗುರೋಃ ॥೨೧.೩೨೦॥

 

ಆ ಕಾರಣದಿಂದ ಭೀಮಸೇನ ಮೊದಲಾದವರಿಂದ ತಡೆಯಲ್ಪಟ್ಟರೂ ಕೂಡಾ, ಕೇಳಿದ ಒಡನೆಯೇ ಶೀಘ್ರದಲ್ಲಿ ಧರ್ಮರಾಜ ಹಸ್ತಿನಪುರಕ್ಕೆ ಬಂದ. ವಿಶೇಷವಾಗಿ ಲೋಕವನ್ನಾಳುವ, ಲೋಕಕ್ಕೆ ಮಾರ್ಗದರ್ಶನ ಮಾಡುವ ಕ್ಷತ್ರಿಯನಿಗೆ ದ್ಯೂತ ಸಲ್ಲದು.

[ಧರ್ಮರಾಜ ನೇರವಾಗಿ ಆಹ್ವಾನವನ್ನು ತಿರಸ್ಕರಿಸಬಹುದಿತ್ತು. ಆದರೆ ಕಲಿ ಪ್ರವೇಶದಿಂದಾಗಿ ಆ ರೀತಿ ಮಾಡಲಿಲ್ಲ].

No comments:

Post a Comment