ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 24, 2022

Mahabharata Tatparya Nirnaya Kannada 22: 12-18

 

    ತಸ್ಮಿನ್ ಗತೇ ಭ್ರಾತೃವಿಯೋಗಕರ್ಶಿತಃ ಪಪಾತ ಭೂಮೌ ಸಹಸೈವ ರಾಜಾ ।

    ಸಙ್ಜ್ಞಾಮವಾಪ್ಯಾSದಿಶದಾಶು ಸಞ್ಜಯಂ ಜೀವಾಮಿ ಚೇದಾಶು ಮಮಾSನಯಾನುಜಮ್ ॥೨೨.೧೨॥

 

ವಿದುರನು ಹೊರಡಲು, ತಮ್ಮನ ಬೇರ್ಪಡೆಯಿಂದ ಸಂಕಟಗೊಂಡ ಧೃತರಾಷ್ಟ್ರನು ನೆಲಕ್ಕೆ ಕುಸಿದ. ಮಧ್ಯದಲ್ಲಿ ಮೂರ್ಛೆ ತಿಳಿದೆದ್ದಾಗ- ಸಂಜಯನನ್ನು ಕುರಿತು ಹೇಳಿದ: ‘ನಾನು ಬದುಕಬೇಕು ಎಂದಿದ್ದರೆ ಕೂಡಲೇ ನನ್ನ ತಮ್ಮನಾದ ವಿದುರನನ್ನು ಕರೆದು ತಾ ಎಂದು.

 

  ಇತೀರಿತಃ ಸಞ್ಜಯಃ ಪಾಣ್ಡವೇಯಾನ್ ಪ್ರಾಪ್ಯಾSನಯದ್ ವಿದುರಂ ಶೀಘ್ರಮೇವ ।

  ಸೋSಪ್ಯಾಗತಃ ಕ್ಷಿಪ್ರಮಪಾಸ್ತದೋಷೋ ಜ್ಯೇಷ್ಠಂ ವವನ್ದೇSಥ ಸ ಚೈನಮಾಶ್ಲಿಷತ್ ।

  ಅಙ್ಕಂ ಸಮಾರೋಪ್ಯ ಸ ಮೂರ್ಧ್ನಿ ಚೈನಮಾಘ್ರಾಯ ಲೇಭೇ ಪರಮಾಂ ಮುದಂ ತದಾ             ॥ ೨೨.೧೩॥

 

ಈರೀತಿಯಾಗಿ ಹೇಳಲ್ಪಟ್ಟ ಸಂಜಯನು ಪಾಂಡವರಿರುವಲ್ಲಿಗೆ ಹೋಗಿ, ಶೀಘ್ರದಲ್ಲಿಯೇ ವಿದುರನನ್ನು ಕರೆತಂದ. ಅವನಾದರೋ, ಬೇಗದಲ್ಲಿಯೇ ಅಣ್ಣನಿಂದ ಆದ ಅಪಕಾರ-ಅವಮಾನಗಳನ್ನು ಮರೆತು, ಅಣ್ಣನನ್ನು ನಮಿಸಿದ. ಧೃತರಾಷ್ಟ್ರ ವಿದುರನನ್ನು ಗಟ್ಟಿಯಾಗಿ ತಬ್ಬಿಕೊಂಡ. ತೊಡೆಯಮೇಲೆ ಏರಿಸಿಕೊಂಡು ವಿದುರನ ನೆತ್ತಿಯನ್ನು ಮೂಸಿ ಆನಂದವನ್ನು ಹೊಂದಿದ.

 

ಕ್ಷತ್ತಾರಮಾಯಾನ್ತಮುದೀಕ್ಷ್ಯ ಸರ್ವೇ ಸಸೌಬಲಾ ಧಾರ್ತ್ತರಾಷ್ಟ್ರಾ ಅಮರ್ಷಾತ್ ।

ಸಮ್ಮನ್ತ್ರ್ಯಹನ್ತುಂ ಪಾಣ್ಡವಾನಾಮುತೈಕಂ ಛನ್ನೋಪಧೇನೈವ ಸಸೂತಜಾ ಯಯುಃ  ॥ ೨೨.೧೪॥

 

ಮರಳಿ ಬಂದಿರುವ ವಿದುರನನ್ನು ಕಂಡು ಶಕುನಿಯಿಂದ ಕೂಡಿದ ದುರ್ಯೋಧನಾದಿಗಳೆಲ್ಲರೂ ಹೊಟ್ಟೆಕಿಚ್ಚಿನಿಂದ, ಸಹಿಸಲಾಗದೇ, ತಾವೆಲ್ಲರೂ ಕೂಡಾ ಮಂತ್ರಾಲೋಚನೆ ಮಾಡುತ್ತಾ, ಪಾಂಡವರಲ್ಲಿ ಕನಿಷ್ಠಪಕ್ಷ ಒಬ್ಬನನ್ನು ಮೋಸದಿಂದ ಕೊಲ್ಲಲು ಕರ್ಣನಿಂದೊಡಗೂಡಿ ತೆರಳಿದರು.

 

ವಿಜ್ಞಾಯ ತೇಷಾಂ ಗಮನಂ ಸಮಸ್ತಲೋಕಾನ್ತರಾತ್ಮಾ ಪರಮೇಶ್ವರೇಶ್ವರಃ ।

ವ್ಯಾಸೋSಭಿಗಮ್ಯಾವದದಾಮ್ಬಿಕೇಯಂ ನಿವಾರಯಾSಶ್ವೇವ ಸುತಂ ತವೇತಿ ॥ ೨೨.೧೫॥

 

ಈ ದುರ್ಯೋಧನಾದಿಗಳ ತೆರಳುವಿಕೆಯನ್ನು ತಿಳಿದು, ಎಲ್ಲಾ ಜನರ ಅಂತರ್ಯಾಮಿಯಾಗಿರುವ,  ಬ್ರಹ್ಮರುದ್ರಾದಿಗಳಿಗೂ ಒಡೆಯನಾಗಿರುವ ವೇದವ್ಯಾಸರು ಆಗಮಿಸಿ, ಧೃತರಾಷ್ಟ್ರನ ಕುರಿತು ‘ನಿನ್ನ ಮಗನನ್ನು ಕೂಡಲೇ ತಡೆಹಿಡಿ’ ಎಂದು ಹೇಳಿದರು.

 

ಅವಾಪ್ಯ ಪಾರ್ತ್ಥಾನಯಮದ್ಯ ಮೃತ್ಯುಂ ಸಹಾನುಬನ್ಧೋ ಗಮಿತಾ ಹ್ಯಸಂಶಯಮ್ ।

ಇತೀರಿತೇ ತೇನ ನಿವಾರಯೇತಿ ಪ್ರೋಕ್ತೋ ಹರಿಃ ಪ್ರಾಹ ನ ಸಂವದೇ ತೈಃ ॥ ೨೨.೧೬॥

 

 ‘ಈ ದುರ್ಯೋಧನನು ಈಗಲೇ ಪಾಂಡವರನ್ನು ಹೊಂದಿ ಅವನ ಎಲ್ಲಾ ಬಂಧುಗಳ ಜೊತೆಗೆ ನಾಶವಾಗುತ್ತಾನೆ. ಇದರಲ್ಲಿ ಸಂಶಯವಿಲ್ಲ’. ಎಂದು ವೇದವ್ಯಾಸರು ಹೇಳುತ್ತಿರಲು, ‘ನೀವೇ ತಡೆಯಬಹುದಲ್ಲ’ ಎನ್ನುತ್ತಾನೆ ಧೃತರಾಷ್ಟ್ರ. ಆಗ ವ್ಯಾಸರು ‘ನಾನು ಅವರೊಂದಿಗೆ ಮಾತನಾಡುವುದಿಲ್ಲ’ ಎನ್ನುತ್ತಾರೆ.

 

ಮೈತ್ರೇಯ ಆಯಾಸ್ಯತಿ ಸೋSಪಿ ವಾಚಂ ಶಿಕ್ಷಾರ್ತ್ಥಮೇತೇಷ್ವಭಿಧಾಸ್ಯತೀಹ ।

ತಾಂ ಚೇದ್ ಕರೋತ್ಯೇಷ ಸುತಸ್ತವಾಸ್ಯ ಭದ್ರಂ ತದಾ ಸ್ಯಾಚ್ಛಪ್ಸ್ಯತಿ ತ್ವನ್ಯಥಾ ಸಃ ॥ ೨೨.೧೭॥

 

‘ಮೈತ್ರೇಯನು ಬರುತ್ತಾನೆ, ಅವನೂ ಕೂಡಾ ತಿದ್ದುವ ಸಲುವಾಗಿ ದುರ್ಯೋಧನಾದಿಗಳಲ್ಲಿ ನೀತಿಯನ್ನು ಉಪದೇಶ ಮಾಡುತ್ತಾನೆ. ಅದನ್ನು ಪಾಲಿಸಿದರೆ ಇವನಿಗೆ ಮಂಗಳ ಉಂಟಾಗುತ್ತದೆ. ಇಲ್ಲದಿದ್ದರೆ ಮೈತ್ರೇಯನು ಶಾಪ ಕೊಡುತ್ತಾನೆ’.  

 

 ಉಕ್ತ್ವೇತಿ ರಾಜಾನಮನನ್ತಶಕ್ತಿರ್ವ್ಯಾಸೋ ಯಯೌ ತತ್ರಗತೇಷು ತೇಷು ।

ಸುಯೋಧನಾದ್ಯೇಷು ಹತೇಷು ಪಾರ್ತ್ಥೈರ್ಭೂಭಾರಹಾನಿರ್ನ್ನ ಭವೇದಿತಿ ಪ್ರಭುಃ ॥ ೨೨.೧೮॥

 

ಈರೀತಿಯಾಗಿ ಧೃತರಾಷ್ಟ್ರನಿಗೆ ಹೇಳಿದ, ಎಣೆಯಿರದ ಕಸುವಿನ ವೇದವ್ಯಾಸರು ಅಲ್ಲಿಂದ ತೆರಳಿದರು. ದುರ್ಯೋಧನಾದಿಗಳು ಕಾಡಿಗೆ ಹೋದರೆ ಬೇಗ ಸಾಯುತ್ತಾರೆ. ಆಗ ಭೂಭಾರ ನಾಶವಾಗುತ್ತಿರಲಿಲ್ಲ’ ಈ ಎಲ್ಲಾ ಕಾರಣದಿಂದ ವೇದವ್ಯಾಸರು ಸ್ವಯಂ ದುರ್ಯೋಧನನನ್ನು ಮಾತನಾಡಿಸಲಿಲ್ಲ.

No comments:

Post a Comment