ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 17, 2022

Mahabharata Tatparya Nirnaya Kannada 21: 374-382

 

ನಿಮಿತ್ತಾನ್ಯತಿಘೋರಾಣಿ ಕುಪಿತೇ ಮಾರುತಾತ್ಮಜೇ ।

ದೃಷ್ಟ್ವಾSSಮ್ಬಿಕೇಯೋ ವಿದುರಂ ಪಪ್ರಚ್ಛೈಷಾಂ ಫಲಂ ದ್ರುತಮ್             ॥೨೧.೩೭೪॥

 

ಭೀಮಸೇನನು ಕೋಪಗೊಳ್ಳುತ್ತಿರಲು, ಅತ್ಯಂತ ಘೋರವಾಗಿರುವ ಶಕುನಗಳಾದುದನ್ನು ಕೇಳಿದ ಧೃತರಾಷ್ಟ್ರನು ವಿದುರನನ್ನು ಕುರಿತು  ‘ಈ ನಿಮಿತ್ತಗಳ ಫಲಗಳೇನು’ ಎಂದು ಕೇಳಿದ.

 

ಆಹ ತಂ ವಿದುರೋ ಜ್ಯೇಷ್ಠಂ ಕ್ಷಣೇSಸ್ಮಿಂಸ್ತವ ಪುತ್ರಕಾಃ ।

ಸಾನುಬನ್ಧಾ ನಶಿಷ್ಯನ್ತಿ ವೃಕೋದರಬಲಾಹತಾಃ                        ॥೨೧.೩೭೫॥

 

ಆಗ ವಿದುರನು ಅಣ್ಣನನ್ನು ಕುರಿತು: ‘ಈ ಕ್ಷಣದಲ್ಲಿ ನಿನ್ನ ಮಕ್ಕಳು ವೃಕೋದರನ ಬಲದಿಂದ, ಅವರ ಮಂತ್ರಿಗಳು, ಅವರ ಪರಿವಾರದೊಂದಿಗೆ ಸಾಯುತ್ತಾರೆ’.

 

ಕ್ರೀಡಸೇSರ್ಭಕವತ್ ತ್ವಂ ಹಿ ಕಿಂ ಜಿತಂ ಕಿಂ ಜಿತಂ ತ್ವಿತಿ ।

ಅಧರ್ಮ್ಮೇಣ ಜಿತಾನತ್ರ ಜಿತಾನ್ ಪಶ್ಯಸಿ ಪಾಣ್ಡವಾನ್             ॥೨೧.೩೭೬॥

 

ನೀನಾದರೋ, ಬಾಲಿಷವಾಗಿ ನಡೆದುಕೊಳ್ಳುತ್ತಿದ್ದೀಯ. ಬಾಲಕನಂತೆ ಏನು ಗೆದ್ದರು - ಏನು ಗೆದ್ದರು ಎಂದು ಕೇಳುತ್ತಾ ಸಂತೋಷಪಡುತ್ತಿದ್ದೀಯ. ವಸ್ತುತಃ ಅಧರ್ಮದಿಂದ ಪಾಂಡವರು ಸೋತಿದ್ದಾರೆ, ಆದರೆ ನೀನು ಪಾಂಡವರು ನಿಜವಾಗಿಯೂ ಸೋತಿದ್ದಾರೆ ಎಂದುಕೊಳ್ಳುತ್ತಿದ್ದೀಯ.

 

ಸ್ತ್ರೀಷು ದ್ಯೂತೇಷು ವಾ ದತ್ತಂ ಮದಾನ್ಧೇನ ನರೇಣ ವಾ ।

ನ ದತ್ತಮಾಹುರ್ವಿದ್ವಾಂಸಸ್ತಸ್ಯ ಬನ್ಧುಭಿರೇವ ಚ                       ॥೨೧.೩೭೭॥

 

ಆಹಾರ್ಯ್ಯಂ ಪುನರಾಹುಶ್ಚ ತಥಾSಪಿ ನತು ಪಾಣ್ಡವೈಃ 

ತತ್ ಕೃತಂ ತವ ಪುತ್ರಾಣಾಂ ಖ್ಯಾಪಯದ್ಭಿರಶಿಷ್ಟತಾಮ್                      ॥೨೧.೩೭೮॥

 

ಸ್ತ್ರೀಯರಲ್ಲಿ ಕೊಟ್ಟದ್ದು, ಜೂಜಿನಲ್ಲಿ ಕೊಟ್ಟಿದ್ದು, ಕುಡಿದು ಮತ್ತನಾಗಿ ಕೊಟ್ಟಿರುವುದನ್ನು-ಜ್ಞಾನಿಗಳು ಕೊಡಲ್ಪಟ್ಟದ್ದನ್ನಾಗಿ ಹೇಳುವುದಿಲ್ಲ. 

ಇದನ್ನ್ಯಾವುದನ್ನೂ ದಾನವೆಂದಾಗಲೀ, ಸೋಲು ಎಂದಾಗಲೀ ಹೇಳುವುದಿಲ್ಲ. ಒಂದು ವೇಳೆ ಹಾಗೆ ಒಬ್ಬ ಕೊಟ್ಟಿದ್ದರೆ, ಅವನ ಬಂಧುಗಳು ಅದನ್ನು ಮರಳಿ ಪಡೆಯಬಹುದು. ಆದರೆ ಪಾಂಡವರು ಆರೀತಿ ಮಾಡಲಿಲ್ಲ. ನಿನ್ನ ಮಕ್ಕಳ ದುಷ್ಟತನವನ್ನು ಲೋಕಕ್ಕೆ ತೋರಿಸಲೆಂದು ಅವರು ಹಾಗೆ ಮಾಡಲಿಲ್ಲ. 

 

ಇತ್ಯುಕ್ತ ಆಹಾSಮ್ಬಿಕೇಯೋ ನಿಮಿತ್ತಾನಾಂ ಫಲಂ ಕಥಮ್ ।

ನ ಭವೇದಿತಿ ಸ ಪ್ರಾಹ ದ್ರುತಂ ಕೃಷ್ಣಾ ವಿಮುಚ್ಯತಾಮ್             ॥೨೧.೩೭೯॥

 

ಈರೀತಿಯಾಗಿ ಹೇಳಲ್ಪಟ್ಟ ಧೃತರಾಷ್ಟ್ರನು ‘ಈ ದುರ್ನಿಮಿತ್ತಗಳ ಫಲವು ಆಗದೇ ಇರಬೇಕಾದರೆ ಏನು ಮಾಡಬೇಕು’ ಎಂದು ಕೇಳಿದ. ಆಗ ವಿದುರನು ‘ಶೀಘ್ರದಲ್ಲಿ ದ್ರೌಪದಿಯನ್ನು ಬಿಡುಗಡೆ ಮಾಡು’ ಎಂದನು.

 

ತೋಷಯಸ್ವ ವರೈಶ್ಚೈನಾಮನ್ಯಥಾ ತೇ ಸುತಾನ್ ಮೃತಾನ್ ।

ವಿದ್ಧಿ ಭೀಮೇನ ನಿಷ್ಪಿಷ್ಟಾನ್ ಮಾSತ್ರ ತೇ ಸಂಶಯೋ ಭವೇತ್             ॥೨೧.೩೮೦॥

 

‘ವರಗಳಿಂದ ಇವರನ್ನು ಸಂತೋಷಗೊಳಿಸು. ಇಲ್ಲದಿದ್ದರೆ ನಿನ್ನ ಮಕ್ಕಳು ಭೀಮನಿಂದ ಸತ್ತರು ಎಂದೇ ತಿಳಿ. ಈ ವಿಚಾರದಲ್ಲಿ ನಿನಗೆ ಲವಲೇಶವೂ ಸಂಶಯ ಉಳಿಯದಿರಲಿ.

 

ಕೃಷ್ಣಾ ಚ ಪಾಣ್ಡವಾಶ್ಚೈವ ತಪೋವೃದ್ಧಿಮಭೀಪ್ಸವಃ ।

ತಪಸಾ ನೈವ ಧಕ್ಷ್ಯನ್ತಿ ತೇನ ಜೀವನ್ತಿ ತೇ ಸುತಾಃ                      ॥೨೧.೩೮೧॥

 

ದ್ರೌಪದಿಯಾಗಲೀ, ಪಾಂಡವರಾಗಲೀ, ತಪಸ್ಸು ಉಳಿಯಬೇಕು ಎನ್ನುವ ಬಯಕೆಯವರಾಗಿ ತಪೋಬಲದಿಂದ ನಿನ್ನ ಮಕ್ಕಳನ್ನು ಸುಡುತ್ತಿಲ್ಲ. ಅವರ ಸಹನೆಯ ಫಲವಾಗಿ ನಿನ್ನ ಮಕ್ಕಳು ಬದುಕಿದ್ದಾರೆ.

 

ತಥಾSಪಿ ಯದಿ ಕೃಷ್ಣಾಂ ತ್ವಂ ನ ಮೋಚಯಸಿ ತೇ ಸುತಾನ್ ।

ಹನಿಷ್ಯತಿ ನ ಸನ್ದೇಹೋ ಬಲೇನೈವ ವೃಕೋದರಃ                     ॥೨೧.೩೮೨॥

 

(ಅವರಿಗೆ ಸಹನೆ ಇದೆ ಎಂದು) ಒಂದು ವೇಳೆ ದ್ರೌಪದಿಯನ್ನು ನೀನು ಬಿಡುಗಡೆ ಮಾಡದೇ ಹೋದರೆ, ನಿನ್ನ ಮಕ್ಕಳನ್ನು ಭೀಮಸೇನನು ಕೇವಲ ತನ್ನ ತೋಳ್ಬಲದಿಂದ ಕೊಲ್ಲುತ್ತಾನೆ. ಇದರಲ್ಲಿ ಸಂದೇಹವಿಲ್ಲ’.

No comments:

Post a Comment