ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, March 12, 2022

Mahabharata Tatparya Nirnaya Kannada 21: 333-342

 

ಇತ್ಯುಕ್ತಾ ಅಪಿ ಭೀಷ್ಮಾದ್ಯಾಃ ಕಲ್ಯಾವೇಶೇನ ಮೋಹಿತಾಃ ।

ಪೃಚ್ಛ ಧರ್ಮ್ಮಜಮಿತ್ಯುಕ್ತ್ವಾ ತೂಷ್ಣೀಮೇವ ಬಭೂವಿರೇ   ॥೨೧.೩೩೩॥

 

ಈರೀತಿಯಾಗಿ ಹೇಳಲ್ಪಟ್ಟರೂ ಕೂಡಾ ಭೀಷ್ಮ ಮೊದಲಾದವರೆಲ್ಲರೂ ಕಲಿಯ ಪ್ರವೇಶದಿಂದ ಮೊಹಿಸಲ್ಪಟ್ಟವರಾಗಿ  ‘ಧರ್ಮರಾಜನನ್ನೇ ಕೇಳು’  ಎಂದು ಹೇಳಿ ಸುಮ್ಮನಾದರು.

 

ದುರ್ಯ್ಯೋಧನಪ್ರತೀಪಂ ಹಿ ನ ಕಶ್ಚಿದಶಕತ್ ತದಾ ।

ಉವಾಚ ವಿದುರಸ್ತತ್ರ ನ ಧರ್ಮ್ಮೋSಯಮಿತಿ ಸ್ಫುಟಮ್             ॥೨೧.೩೩೪॥

 

ಆಗ ದುರ್ಯೋಧನನಿಗೆ ಎದುರಾಗಿ ಮಾತನಾಡಲು ಯಾರೂ ಕೂಡಾ ಶಕ್ತರಾಗಲಿಲ್ಲ. ಹೀಗಿರುವಾಗ ಆ ಸಭೆಯಲ್ಲಿ ವಿದುರನು ‘ಇದು ಧರ್ಮವಲ್ಲ’ ಎಂದು ಸ್ಪಷ್ಟವಾಗಿ ಹೇಳಿದನು.

 

ನ ತಸ್ಯ ವಾಚಂ ಜಗ್ರಾಹ ಧೃತರಾಷ್ಟ್ರಃ ಸಹಾತ್ಮಜಃ ।

ಊರ್ಧ್ವಬಾಹುಃ ಸ ಚುಕ್ರೋಶ ದೇವಾನಾಂ ಖ್ಯಾಪಯಂಸ್ತದಾ             ॥೨೧.೩೩೫॥

 

ಸ್ವಾಶಕ್ತಿಂ ದ್ರೌಪದೀಂ ಚಾSಹ ಜಿತಾ ನೈವಾಸಿ ಧರ್ಮ್ಮತಃ

ಅಧರ್ಮ್ಮೋ ಹಿ ಮಹಾನೇತಾಂ ಸಭಾಮಾಕ್ರಮ್ಯ ತಿಷ್ಠತಿ             ॥೨೧.೩೩೬॥

 

ಆಗ ಮಕ್ಕಳಿಂದ ಒಡಗೂಡಿದ ಧೃತರಾಷ್ಟ್ರನು ವಿದುರನ ಮಾತನ್ನು ಸ್ವೀಕರಿಸಲಿಲ್ಲ. ವಿದುರನಾದರೋ, ದೇವತೆಗಳಿಗೆ ಹೇಳುತ್ತಾ, ಕೈಗಳನ್ನು ಮೇಲೆತ್ತಿ ತನ್ನ ಅಶಕ್ತಿಯನ್ನು ವ್ಯಕ್ತಪಡಿಸಿದ.

ದ್ರೌಪದಿಯನ್ನು ಕುರಿತು ವಿದುರ - ‘ಧರ್ಮದಿಂದ ನೋಡುವುದಾದರೆ ನೀನು ಸೋತಿಲ್ಲ, ಈ ಸಭೆಯನ್ನು ಅಧರ್ಮವು ಆವರಿಸಿ ನಿಂತಿದೆ’ ಎಂದು ಹೇಳಿದ.

 

ಏವಂ ತು ವಿದುರೇಣೋಕ್ತೇ ವಿಕರ್ಣ್ಣಃ ಪಾಪಕೋSಪಿ ಸನ್ ।

ಆಹ ಡಮ್ಭಾರ್ತ್ಥಮೇವಾತ್ರ ಧರ್ಮ್ಮವಿತ್ತ್ವಂ ಪ್ರಕಾಶಯನ್ ।

ಅಧರ್ಮ್ಮ ಏವಾಯಮಿತಿ ಕರ್ಣ್ಣೋSಥೈನಮಭತ್ಸಯತ್             ॥೨೧.೩೩೭॥

 

ಈರೀತಿಯಾಗಿ ವಿದುರನಿಂದ ಹೇಳಲ್ಪಡಲು, ಅತ್ಯಂತ ಪಾಪಿಷ್ಠನಾದ ದುರ್ಯೋಧನನ ತಮ್ಮನಾದ ವಿಕರ್ಣನು  ಡಂಭಾಚಾರವನ್ನು ಪ್ರದರ್ಶಿಸುತ್ತಾ, ತನ್ನನ್ನು ಧಾರ್ಮಿಕ ಎಂದು ತೋರ್ಪಡಿಸಲು, ‘ಇದು ಸರ್ವಥಾ ಅಧರ್ಮ’ ಎಂದು ಹೇಳಿದನು. ಆಗ ಕರ್ಣ ಅವನನ್ನು ಕುರಿತು ಗದರಿದನು.

 

   ದೃಷ್ಟ್ವಾ ಭೀಮಃ ಕ್ಲಿಶ್ಯಮಾನಾಂ ತು ಕೃಷ್ಣಾಂ ಧರ್ಮ್ಮಾತ್ಯಯಂ ಧರ್ಮ್ಮರಾಜೇ ಚ ದೃಷ್ಟ್ವಾ ।

   ರಾಜಾ ಶಾಸ್ಯೋ ಯುವರಾಜೇನ ಧರ್ಮ್ಮಾಚ್ಚಲನ್ ಯಸ್ಮಾದ್ ವಾಕ್ಯಮಿದಂ ಬಭಾಷೇ ॥೨೧.೩೩೮॥

 

ಭೀಮಸೇನನು ದ್ರೌಪದಿಯನ್ನು ಕಷ್ಟಪಡುತ್ತಿರುವವಳನ್ನಾಗಿ ನೋಡಿ ಹಾಗೂ ಧರ್ಮರಾಜನಿಂದ ಧರ್ಮದ ಮೀರುವಿಕೆಯನ್ನು ಕಂಡು, ಧರ್ಮದಿಂದ ಹಿಂದೆ ಸರಿಯುವ ರಾಜನು ಯುವರಾಜನಿಂದ ನಿಗ್ರಹಿಸಲ್ಪಡಬೇಕು (ಶಿಕ್ಷಿಸಲು ಯೋಗ್ಯನು) ಎನ್ನುವುದನ್ನು  ತೋರಿಸುತ್ತಾ- ಈ ಮಾತನ್ನು ಹೇಳಿದ:

 

ಇಮಾಂ ನ್ಯಸ್ತವತೋ ದ್ಯೂತೇ ಧಕ್ಷಣೀಯೌ ಹಿ ತೇ ಭುಜೌ ।

ನೈವಮಿತ್ಯರ್ಜ್ಜುನೋSವಾದೀತ್ ತಮಾಹಾಥ ವೃಕೋದರಃ             ॥೨೧.೩೩೯॥

 

ವಕ್ತವ್ಯಂ ನತು ಕರ್ತ್ತವ್ಯಂ ತಸ್ಮಾನ್ನಹಿ ಮಯಾ ಕೃತಮ್ ।

ಉತ್ತಮೇ ವಚಸಾ ಶಿಕ್ಷಾ ಮದ್ಧ್ಯಮೇSರ್ತ್ಥಾಪಹಾರಣಮ್            ॥೨೧.೩೪೦॥

 

ಅಧಮೇ ದೇಹದಣ್ಡಶ್ಚ ತಸ್ಮಾದ್ ವಾಚ್ಯೋ ಯುಧಿಷ್ಠಿರಃ ।

ಅಥ ಕರ್ಣ್ಣೋSಬ್ರವೀತ್ ಕೃಷ್ಣಾಮಪತಿರ್ಹ್ಯಸಿ ಶೋಭನೇ             ॥೨೧.೩೪೧॥

 

                    ಧಾರ್ತ್ತರಾಷ್ಟ್ರಗೃಹಂ ಯಾಹೀತ್ಯಥ ದುರ್ಯ್ಯೋಧನೋSವದತ್ ।

ಪರಸ್ಪರವಿರೋಧಾರ್ತ್ಥಂ ಪಾಣ್ಡವಾನಾಮಿದಂ ವಚಃ      ॥೨೧.೩೪೨॥

 

‘ಈ ದ್ರೌಪದಿಯನ್ನು ಜೂಜಿನಲ್ಲಿ ಪಣವಾಗಿ ಇಟ್ಟ ನಿನ್ನ ಎರಡೂ ಕೈಗಳು ಸುಡಲ್ಪಡಲು ಯೋಗ್ಯ’ ಎಂದ ಭೀಮಸೇನನ ಮಾತನ್ನು ಕೇಳಿದ ಅರ್ಜುನನು ‘ಈ ರೀತಿ ಹೇಳಬಾರದಲ್ಲವೇ’ ಎಂದು ಹೇಳಿದ. ಆಗ ವೃಕೋದರನು - ‘ಹೇಳಬೇಕು, ಆದರೆ ಮಾಡಬಾರದು. ಆ ಕಾರಣದಿಂದ ನನ್ನಿಂದ ಮಾಡಲ್ಪಡಲಿಲ್ಲ. ನಮಗಿಂತ ದೊಡ್ಡವರು ತಪ್ಪು ಮಾಡಿದರೆ ಮಾತಿನಿಂದ ಶಿಕ್ಷೆ ಕೊಡಬೇಕು. ನಮಗೆ ಸಮಾನರು ತಪ್ಪು ಮಾಡಿದಾಗ ಅವರ ಸಂಪತ್ತನ್ನು ಅಪಹರಿಸಬೇಕು. ಯಾರು ನಮಗಿಂತ ಅಧಮನೋ ಅವನಿಗೆ ದೇಹ ದಂಡನೆ ಕೊಡಬೇಕು. ಆ ಕಾರಣದಿಂದ ನಮಗಿಂತ ಹಿರಿಯನಾದ ಯುಧಿಷ್ಠಿರನಿಗೆ ನಮ್ಮಿಂದ  ಹೇಳಲ್ಪಡಬೇಕು’ ಎಂದನು.

ತದನಂತರ ಕರ್ಣನು ದ್ರೌಪದಿಯನ್ನು ಕುರಿತು - ‘ಚೆಲುವೆಯೇ, ನೀನು ಗಂಡನಿಲ್ಲದವಳಾಗಿ ನಿನ್ನೆಲ್ಲಾ ರಕ್ಷಕರನ್ನೂ ಕಳೆದುಕೊಂಡಿದ್ದೀಯ. ನೀನು ದುರ್ಯೋಧನನ ಮನೆಗೆ ಹೋಗು’ ಎಂದನು. ಆಗ ದುರ್ಯೋಧನನು ಪಾಂಡವರು ಪರಸ್ಪರ ಹೊಡೆದಾಡಿಕೊಳ್ಳಲೀ ಎನ್ನುವ ಉದ್ದೇಶದಿಂದ ಈ ಮಾತನ್ನು ಹೇಳಿದ:

No comments:

Post a Comment