ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, September 18, 2020

Mahabharata Tatparya Nirnaya Kannada 1943_1948

 

ಭೀಮೋsಭಯೋsಪಿ ಗುರುಭಿಃ ಸ್ವಮುಖೇನ ಯುದ್ಧಮಪ್ರೀಯಮಾಣ ಉತ ಧರ್ಮ್ಮಜವಾಕ್ಯಹೇತೋಃ ।

ಉಹ್ಯೈವ ತಾನಪಿ ಯಯೌ ದ್ಯುನದೀಂ ಚ ತೀರ್ತ್ತ್ವಾ ಕ್ಷತ್ತ್ರಾsತಿಸೃಷ್ಟಮಧಿರುಹ್ಯ ಜಲಪ್ರಯಾಣಮ್ ॥೧೯.೪೩॥

 

ವಿಶ್ವಾಸಿತಾ ವಿದುರಪೂರ್ವವಚೋಭಿರೇವ ದಾಶೋದಿತಾಭಿರಧಿರುಹ್ಯ ಚ ಭೀಮಪೃಷ್ಠಮ್ ।

ಸರ್ವೇ ಯಯುರ್ವನಮಥಾಭ್ಯುದಿತೇ ಚ ಸೂರ್ಯ್ಯೇ ದೃಷ್ಟ್ವೈವ ಸಪ್ತ ಮೃತಕಾನರುದಂಶ್ಚ ಪೌರಾಃ ॥೧೯.೪೪॥

 

ಭೀಮಸೇನನು ಭಯರಹಿತನಾದರೂ ಕೂಡಾ, ಗುರು-ಹಿರಿಯರ ಜೊತೆಗೆ ಯುದ್ಧವನ್ನು ಬಯಸದೇ,  ಧರ್ಮರಾಜನ ಮಾತಿನಂತೆಯೇ ಅವರೆಲ್ಲರನ್ನು ಹೊತ್ತು, ವಿದುರ ಈಗಾಗಲೇ ಸಿದ್ಧಪಡಿಸಿಟ್ಟಿರುವ ದೋಣಿಯನ್ನು ಏರಿ ಗಂಗಾನದಿಯನ್ನು ದಾಟಿ ತೆರಳಿದ. 

ವಿದುರನು ಮೊದಲು ಹೇಳಿರುವ ಮಾತುಗಳನ್ನೇ[1] ಅಂಬಿಗನು ಹೇಳಲು,  ಅವರು ಅವನ ಮೇಲೆ  ವಿಶ್ವಾಸವಿಟ್ಟು(ಈತ ವಿದುರನೇ ನಿಯೋಜಿಸಿದ ಅಂಬಿಗ ಎನ್ನುವುದನ್ನು ಸಂಕೇತ ಭಾಷೆಯಿಂದ ಖಾತ್ರಿಪಡಿಸಿಕೊಂಡು), ದೋಣಿಯನ್ನು ಏರಿ ಗಂಗಾನದಿಯನ್ನು ದಾಟಿದರು ಮತ್ತು ಕಾಡಿನಲ್ಲಿ ಮುಂದೆ ನಡೆದರು. ಇತ್ತ ಸೂರ್ಯೋದಯವಾಗುತ್ತಿರಲು, ಅರಗಿನ ಮನೆಯಲ್ಲಿ ಏಳು ಜನ ಸತ್ತಿರುವುದನ್ನು ಕಂಡು ಅಲ್ಲಿರುವವರು ಮರುಗಿದರು.

 

ಹಾ ಪಾಣ್ಡವಾನದಹದೇಷ ಹಿ ಧಾರ್ತ್ತರಾಷ್ಟ್ರೋ ಧರ್ಮ್ಮಸ್ಥಿತಾನ್ ಕುಮತಿರೇವ ಪುರೋಚನೇನ ।

ಸೋsಪ್ಯೇಷ ದಗ್ಧ ಇಹ ದೈವವಶಾತ್ ಸುಪಾಪಃ ಕೋ ನಾಮ ಸತ್ಸು ವಿಷಮಃ ಪ್ರಭವೇತ್ ಸುಖಾಯ ॥೧೯.೪೫॥

 

“ಈ ದುರ್ಯೋಧನ ದುಷ್ಟಬುದ್ಧಿಯುಳ್ಳವನು, ಇವನು ಧರ್ಮದಲ್ಲಿದ್ದ ಪಾಂಡವರನ್ನು ಪುರೋಚನನ ಮುಖಾಂತರ ಸುಟ್ಟನು, ಪಾಪಿಷ್ಠನಾದ ಪುರೋಚನನೂ ಕೂಡಾ ದೇವರ ದಯೆಯಿಂದ ಸತ್ತಿದ್ದಾನೆ.(ಸುಡಲ್ಪಟ್ಟಿದ್ದಾನೆ). ಸಜ್ಜನರಲ್ಲಿ ಕೆಟ್ಟದ್ದನ್ನು ಮಾಡುವವರು ಯಾರು ತಾನೇ ಸುಖವನ್ನು ಹೊಂದಿಯಾರು” ಎಂದು ಪ್ರಜೆಗಳು ಮರುಗಿದರು.

 

ಪೌರೇಭ್ಯ ಏವ ನಿಖಿಲೇನ ಚ ಭೀಷ್ಮಮುಖ್ಯಾ ವೈಚಿತ್ರವೀರ್ಯ್ಯಸಹಿತಾಸ್ತು ನಿಶಮ್ಯ ಹೇತಿ ।

ಉಚುಃ ಸುದುಃಖಿತಧಿಯೋsಥ ಸುಯೋಧನಾದ್ಯಾಃ ಕ್ಷತ್ತಾ ಮೃಷೈವ ರುರುದುರ್ಯ್ಯುಯುಜುಶ್ಚ ಕರ್ಮ್ಮ ॥೧೯.೪೬॥

 

ಪ್ರಜೆಗಳಿಂದಲೇ ಎಲ್ಲವನ್ನೂ ಕೇಳಿ ತಿಳಿದ ಧೃತರಾಷ್ಟ್ರ, ಭೀಷ್ಮಾಚಾರ್ಯರೇ ಮೊದಲಾದ ಕುಲದ ಹಿರಿಯರು ಅತ್ಯಂತ ದುಃಖಿತರಾಗಿ ‘ಹಾ ಎಂದು ಮರುಗಿದರು. ತದನಂತರ ದುರ್ಯೋಧನಾದಿಗಳು ದುಃಖವಿಲ್ಲದೇ ತೋರ್ಪಡಿಕೆಗಾಗಿ ಮರುಗಿದರು. ಪಾಂಡವರು ಬದುಕಿರುವ ವಿಷಯ ತಿಳಿದ ವಿದುರನೂ ಕೂಡಾ ದುಃಖವಿಲ್ಲದಿದ್ದರೂ ಮರುಗಿದನು. ತದನಂತರ ಅವರು ತಿಲಾಂಜಲಿಯಾದಿ ಕ್ರಿಯೆಗಳನ್ನು ಮಾಡಿದರು.

 

ಭೀಮೋsಪ್ಯುದೂಹ್ಯ ವನಮಾಪ ಹಿಡಿಮ್ಬಕಸ್ಯ ಭ್ರಾತೄನ್ ಪೃಥಾಂ ಚ ತೃಷಿತೈರಭಿಯಾಚಿತಶ್ಚ ।

ಪಾನೀಯಮುತ್ತರಪಟೇsಮ್ಬುಜಪತ್ರನದ್ಧಂ ದೂರಾದುದೂಹ್ಯ ದದೃಶೇ ಸ್ವಪತೋsಥ ತಾಂಶ್ಚ ॥೧೯.೪೭॥

 

ಇತ್ತ ಭೀಮಸೇನನು ಅಣ್ಣ-ತಮ್ಮಂದಿರನ್ನು ಮತ್ತು  ಕುಂತಿಯನ್ನು ಹೊತ್ತು ಹಿಡಿಮ್ಬಕನಿರುವ ಕಾಡನ್ನು ಹೊಂದಿದನು. ಆಗ ಬಾಯಾರಿದ ಅವರೆಲ್ಲರಿಂದ ನೀರುಬೇಕೆಂದು ಬೇಡಲ್ಪಟ್ಟವನಾಗಿ, ತಾವರೆಯ ಎಲೆಯನ್ನು ಕಟ್ಟಿ ಅದಕ್ಕೆ ನೀರನ್ನು ತುಂಬಿ, ಅದನ್ನು  ತನ್ನ ಉತ್ತರೀಯದಲ್ಲಿ ಹಿಡಿದುಕೊಂಡು ತಂದ ಭೀಮ, ಆಗಲೇ  ಗಾಢವಾಗಿ ನಿದ್ರೆಗೆ ಒಳಗಾಗಿರುವ ಅವರನ್ನು ದೂರದಿಂದಲೇ ನೋಡಿದನು. 

 

ರಕ್ಷಾರ್ತ್ಥಮೇವ ಪರಿ ಜಾಗ್ರತಿ ಭೀಮಸೇನೇ ರಕ್ಷಃ ಸ್ವಸಾರಮಭಿಯಾಪಯತೇ ಹಿಡಿಮ್ಬೀಮ್ ।

ಸಾ ರೂಪಮೇತ್ಯ ಶುಭಮೇವ ದದರ್ಶ ಭೀಮಂ ಸಾಕ್ಷಾತ್ ಸಮಸ್ತಶುಭಲಕ್ಷಣಸಾರಭೂತಮ್ ॥೧೯.೪೮॥

 

ಅವರೆಲ್ಲರ ರಕ್ಷಣೆಗಾಗಿಯೇ ಭೀಮಸೇನನು ಎಚ್ಚರವಾಗಿರಲು, ಹಿಡಿಮ್ಬಾಸುರನು ತನ್ನ ತಂಗಿಯಾಗಿರುವ ಹಿಡಿಮ್ಬೀಯನ್ನು ಅಲ್ಲಿಗೆ ಕಳುಹಿಸಿದನು(‘ಮನುಷ್ಯರ ವಾಸನೆ ಬರುತ್ತಿದೆ, ಭಕ್ಷಣಾರ್ಥವಾಗಿ ಹೋಗಿ ನೋಡಿಕೊಂಡು ಬಾ’ ಎಂದು ತಂಗಿಯನ್ನು ಹಿಡಿಮ್ಬಕ ಅಲ್ಲಿಗೆ ಕಳುಹಿಸಿದ್ದ). ಸುಂದರ  ರೂಪವನ್ನು ಹೊಂದಿ ಅಲ್ಲಿಗೆ ಬಂದ ಆ ಹಿಡಿಮ್ಬೀ, ಸಮಸ್ತ ಶುಭಲಕ್ಷಣಸಾರಭೂತನಾದ  ಭೀಮಸೇನನನ್ನು ಕಂಡಳು. 



[1] ಆಲೋಹಂ ನಿಶಿತಂ ಶಸ್ತ್ರಂ ಶರೀರಪರಿಕರ್ತನಮ್... ಇತ್ಯಾದಿಯಾಗಿ ವಿದುರ ಹೇಳಿದ ಮಾತು

No comments:

Post a Comment