ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 12, 2020

Mahabharata Tatparya Nirnaya Kannada 1916_1921

 

ತ್ರಿಂಶಚ್ಛತಂ ಪರಮಕಾಃ ಸುರದುರ್ಲ್ಲಭಾಶ್ಚ ದುರ್ವಾಸಸೋ ಹಿ ಮನವೋsದ್ಯ ಮಯಾ ಗೃಹೀತಾಃ ।

ಅನ್ಯತ್ರ ತೇ ಪ್ರವಿಹಿತಾ ನಹಿ ವೀರ್ಯ್ಯವನ್ತಃ ಸ್ಯುರ್ಭೀಮ ಇತ್ಯಹಮಮೂನ್ ನ ನಿಯೋಜಯಾಮಿ ॥೧೯.೧೬॥

 

ದುರ್ವಾಸರಿಂದ ದೇವತೆಗಳಿಗೂ ಲಭ್ಯವಲ್ಲದ, ಶ್ರೇಷ್ಠವಾದ ಮೂವತ್ತುನೂರು(ತ್ರಿಂಶಂ ಶತಮ್) ಮಂತ್ರಗಳು ನನ್ನಿಂದ ಗ್ರಹಿಸಲ್ಪಟ್ಟಿವೆ. ಆ ಮಂತ್ರಗಳನ್ನು ನಾನು ಅನ್ಯತ್ರ ನಿಯೋಜಿಸಿದರೆ ಅವು ವೀರ್ಯವಂತವಾಗುವುದಿಲ್ಲ. ಆಕಾರಣದಿಂದ ಭೀಮನಲ್ಲಿಯೇ ಅವು ಸಂಪೂರ್ಣ ವಿನಿಯೋಗವಾಗಬೇಕು ಎಂದು ಅವುಗಳನ್ನು ಬೇರೆಲ್ಲೂ ನಾನು ಬಳಸುವುದಿಲ್ಲ.

 

ತೇ ವೀರ್ಯ್ಯದಾ ವಿಜಯದಾ ಅಪಿ ವಹ್ನಿವಾರಿಸ್ತಮ್ಭಾದಿದಾಃ ಸಕಲದೇವನಿಕಾಯರೋಧಾಃ ।

ವೃಷ್ಟ್ಯಾದ್ಯಭೀಪ್ಸಿತಸಮಸ್ತಕರಾ ಅಮೂಭಿರ್ಜ್ಜ್ಯೇಷ್ಯಾಮಿ ಭೀಮಮಮುಮೇಕಮಯಾತಯಾಮೈಃ ॥೧೯.೧೭॥

 

ಆ ಮಂತ್ರಗಳು ವೀರ್ಯವನ್ನು ಕೊಡುವಂತಹ ಮಂತ್ರಗಳು. ವಿಶೇಷವಾಗಿ ವಿಜಯವನ್ನು ನೀಡುವವುಗಳು, ಬೆಂಕಿ ಮತ್ತು ನೀರನ್ನೂ ಕೂಡಾ ತಡೆಯುವ ಶಕ್ತಿ ಈ ಮಂತ್ರಗಳಿಗಿದೆ. ಎಲ್ಲಾ ದೇವತೆಗಳನ್ನೂ ಈ ಮಂತ್ರ ತಡೆಯಬಲ್ಲದು. ಮಳೆ ಬೇಕಿದ್ದರೆ ಮಳೆಯನ್ನೂ, ಹೀಗೆ ನಮ್ಮ ಯಾವುದೇ ಅಭೀಷ್ಟವನ್ನೂ ಈ ಮಂತ್ರ ನೆರವೇರಿಸಬಲ್ಲದು. ಮಂತ್ರಗಳನ್ನು ಬಹಳ ದಿನಗಳು ಬಿಟ್ಟು ಮತ್ತೆ ಬಳಸಿದರೆ ಅದು ಫಲವನ್ನು ಕೊಡುವುದಿಲ್ಲ. ಅಂತಹ ಆಯಾತಯಾಮವಾಗಿರುವ  ಈ ಮಂತ್ರಗಳಿಂದ ನಾನು ಭೀಮಸೇನನನ್ನು ಗೆಲ್ಲುತ್ತೇನೆ.

[ಈ ಮಂತ್ರಗಳು ಫಲವನ್ನು ಕೊಡುವ ಶ್ರೇಷ್ಠ ಮಂತ್ರಗಳು ಎನ್ನುವುದನ್ನು  ಮನವಃ  ಎಂದು ಪುಲ್ಲಿಂಗ ಪ್ರಯೋಗದಿಂದ ಇಲ್ಲಿ ತೋರಿಸಿದ್ದಾರೆ. ಆದರೆ ದುರ್ಯೋಧನ ಜಂಭಕೊಚ್ಚಿಕೊಂಡಿದ್ದರಿಂದ ಭೀಮನಲ್ಲಿ ಅದು ನಿಶ್ಫಲವಾಗುವವು ಎನ್ನುವುದನ್ನು ‘ಅಮೂಭಿಃ’ ಎಂದು ನಪುಂಸಕ ಲಿಂಗ ಪ್ರಯೋಗದಿಂದ ಇಲ್ಲಿ ಸೂಚನೆ ನೀಡಿದ್ದಾರೆ]

 

ಸೌಹಾರ್ದ್ದಮೇಷು ಯದಿವಾsತಿತರಾಂ ಕರೋಷಿ ತತ್ರಾಪಿ ನೈವ ಹಿ ಮಯಾ ಕ್ರಿಯತೇ ವಿರೋಧಃ ।

ವತ್ಸ್ಯನ್ತು ವಾರಣವತೇ ಭವತು ಸ್ಮ ರಾಷ್ಟ್ರಂ ತೇಷಾಂ ತದೇವ ಮಮ ನಾಗಪುರಂ ತ್ವದರ್ತ್ಥೇ ॥೧೯.೧೮॥

 

ಒಂದುವೇಳೆ ನೀನು ನಿನ್ನ ತಮ್ಮನ ಮಕ್ಕಳಾದ ಪಾಂಡವರಲ್ಲಿ ಆತ್ಯಂತಿಕವಾಗಿ ಗೆಳೆತನವನ್ನು ಮಾಡುವೆಯಾದರೆ, ಅಲ್ಲಿಯೂ ಕೂಡಾ ನನ್ನಿಂದ ವಿರೋಧವು ಮಾಡುಲ್ಪಡುವುದಿಲ್ಲ. ಆದರೆ ಅವರು  ವಾರಣವತದಲ್ಲಿ ವಾಸಮಾಡಲಿ. ಅದೇ ಅವರ ರಾಷ್ಟ್ರವಾಗಲಿ. ಹಸ್ತಿನಾವತಿ ನಮ್ಮ ದೇಶವಾಗಲಿ. [ಅಂದರೆ ‘ನಾನು ಯುದ್ಧಕ್ಕೆ ಸಿದ್ಧ, ಆದರೆ ನಿನಗೆ ಮನಸ್ಸಿಲ್ಲದೇ ಹೋದರೆ ಬೇರೆಯೇ ರೀತಿಯಿಂದ ನಿಭಾಯಿಸಬೇಕು’ ಎನ್ನುತ್ತಾ ದುರ್ಯೋಧನ ದೇಶ ವಿಭಾಗ ಆಗಲೇಬೇಕು ಎನ್ನುವ ಪ್ರತಿಪಾದನೆ ಮಾಡಿದ].

 

ಏವಂ ಸ್ವಪುತ್ರಪರಿಪಾಲನತೋ ಯಶಸ್ತೇ ಭೂಯಾದ್ ವಿನಶ್ಯತಿ ಪರಪ್ರಸವಾತಿಪುಷ್ಟೌ ।

ಜಾತೇ ಬಲೇ ತವ ವಿರೋಧಕೃತಶ್ಚ ತೇ ಸ್ಯುಃ ಸ್ವಾರ್ತ್ಥಂ ಹಿ ತಾವದನುಯಾನ್ತ್ಯಪಿ ಕೇವಲಂ ತ್ವಾಮ್ ॥೧೯.೧೯॥

 

ಈರೀತಿಯಾಗಿ ನಿನ್ನ ಮಕ್ಕಳನ್ನು ನೀನು ಗೌರವಿಸುವುದರಿಂದ ನಿನಗೆ ಯಶಸ್ಸು ಬರುತ್ತದೆ. ಇದಲ್ಲದೇ ಬೇರೊಬ್ಬರ ಮಕ್ಕಳನ್ನು ನೀನು ಗೌರವಿಸಿದೆಯೆಂದಾದರೆ ನಿನ್ನ ಯಶಸ್ಸು ನಾಶವಾಗುತ್ತದೆ. ಅಷ್ಟೇ ಅಲ್ಲಾ, ಇಂದು ಪಾಂಡವರಿಗೆ ಬಲ ಬಂದಿಲ್ಲ. ಹಾಗಾಗಿ ಅವರು ನಿನಗೆ ತಗ್ಗಿ ನಡೆಯುತ್ತಿದ್ದಾರೆ. ಬಲ ಬಂದಮೇಲೆ ಖಂಡಿತವಾಗಿ ಅವರು ಎದುರು ನಿಲ್ಲುತ್ತಾರೆ. ಈಗ ನಿನ್ನನ್ನು ಅವರು ತಮ್ಮ ಸ್ವಾರ್ಥಕ್ಕಾಗಿ ಅನುಸರಿಸುತ್ತಿದ್ದಾರೆ ಅಷ್ಟೇ.

 

ಕ್ಷತ್ತೈಕ ಏವ ಸತತಂ ಪರಿಪೋಷಕೋsಲಂ ತೇಷಾಂ ಮಮ ದ್ವಿಡಥ ಮನ್ತ್ರಬಲಾದಮುಷ್ಯ ।

ಪೌರಾಶ್ಚ ಜಾನಪದಕಾಃ ಸತತಂ ದ್ವಿಷನ್ತಿ ಮಾಂ ತೇಷ್ವತೀವ ದೃಢಸೌಹೃದಚೇತಸಶ್ಚ ॥೧೯.೨೦॥

 

ಆದರೆ ಒಬ್ಬನನ್ನು ಮಾತ್ರ ನಾನು ವಶಮಾಡಿಕೊಳ್ಳಲು ಆಗಲಿಲ್ಲ. ಅವನೇ ವಿದುರ. ಅವನೊಬ್ಬನೇ ಪಾಂಡವರನ್ನು ಪೋಷಣೆ ಮಾಡುತ್ತಿದ್ದಾನೆ ಮತ್ತು ನನ್ನನ್ನು ದ್ವೇಷಮಾಡುತ್ತಿದ್ದಾನೆ. ಅವನ ಮಂತ್ರಬಲದಿಂದ ಪಟ್ಟಣದಲ್ಲಿರುವವರು, ಹಳ್ಳಿಗರು ನನ್ನನ್ನು ದ್ವೇಷ ಮಾಡುತ್ತಾರೆ ಮತ್ತು ಪಾಂಡವರಲ್ಲಿ ಅತ್ಯಂತ ದೃಢವಾದ  ಸ್ನೇಹವನ್ನು ಹೊಂದಿದ್ದಾರೆ.

 

ತೇ ತೇಷು ದೂರಗಮಿತೇಷು ನಿರಾಶ್ರಯತ್ವಾನ್ಮಾಮೇವ ದುರ್ಬಲತಯಾ ಪರಿತಃ ಶ್ರಯನ್ತೇ ।

ಭೀಷ್ಮಾದಯಶ್ಚ ನಹಿ ತನ್ನಿಕಟೇ ವಿರೋಧಂ ಕುರ್ಯ್ಯುರ್ವಿನಶ್ಯತಿ ಗತೇಷು ಹಿ ಸೌಹೃದಂ ತತ್ ॥೧೯.೨೧॥

 

ಅವರೆಲ್ಲರೂ ಕೂಡಾ ಪಾಂಡವರು ದೂರ ತೆರಳಿದಮೇಲೆ ಆಶ್ರಯ ಇಲ್ಲದಿರುವುದರಿಂದ ದುರ್ಬಲತೆಯಿಂದ ನನ್ನನ್ನೇ ಆಶ್ರಯಿಸುತ್ತಾರೆ. ಭೀಷ್ಮಾದಿಗಳೂ ಕೂಡಾ ಪಾಂಡವರು ಇಲ್ಲಿದ್ದರೆ  ವಿರೋಧವನ್ನು ಮಾಡಿಯಾರು. ಆದರೆ ಅವರು ದೂರ ಹೋಗಲು ಸೌಹಾರ್ದವು ನಾಶವಾಗುತ್ತದಷ್ಟೇ.


No comments:

Post a Comment