ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, September 19, 2020

Mahabharata Tatparya Nirnaya Kannada 1949_1956

 

[ಯಾರು ಈ ಹಿಡಿಮ್ಬೀ? ಅವಳ ಹಿನ್ನೆಲೆಯ ಕುರಿತು ವಿವರಿಸುತ್ತಾರೆ]

 

ಸಾ ರಾಕ್ಷಸೀತನುಮವಾಪ ಸುರೇನ್ದ್ರಲೋಕಶ್ರೀರೇವ ಶಕ್ರದಯಿತಾ ತ್ವಪರೈವ ಶಚ್ಯಾಃ ।

ಶಾಪಾತ್ ಸ್ಪೃಧಾ ಪತಿಮವಾಪ್ಯ ಚ ಮಾರುತಂ ಸಾ ಪ್ರಾಪ್ತುಂ ನಿಜಾಂ ತನುಮಯಾಚತ ಭೀಮಸೇನಮ್ ॥೧೯.೪೯ ॥

 

ಅವಳು ಅಮರಾವತಿಯ (ಇಂದ್ರನಲೋಕದ ) ಸಂಪತ್ತಿನ ಅಭಿಮಾನಿನಿ ದೇವತೆ,. ಆಕೆಯ ಹೆಸರು ಶ್ರೀ. ಇಂದ್ರಪತ್ನಿ. ಆದರೆ ಇವಳು ಶಚಿಯಲ್ಲ(ಶಚಿಯಿಂದ ಭಿನ್ನಳಾಗಿದ್ದಾಳೆ). ಅವಳು ಶಚಿಯಮೇಲಿನ ಸ್ಪರ್ಧೆಯಿಂದ ಗಂಡನನ್ನು ಹೊಂದಿ, ಶಚಿಯ ಶಾಪದಿಂದ ರಾಕ್ಷಸಿಯಾಗಿ ಹುಟ್ಟಿದ್ದಳು. ಅವಳು ವಾಯುದೇವರನ್ನು ಗಂಡನನ್ನಾಗಿ ಹೊಂದಿ ಅದರಿಂದ ತನ್ನ ನಿಜಶರೀರವನ್ನು ಹೊಂದುವುದಕ್ಕಾಗಿ(ಶಾಪ ವಿಮೋಚನೆಗಾಗಿ) ಇಲ್ಲಿ  ಭೀಮಸೇನನನ್ನು ಬೇಡಿದಳು. 

 

ತಾಂ ಭೀಮ ಆಹ ಕಮನೀಯತನುಂ ನ ಪೂರ್ವಂ ಜ್ಯೇಷ್ಠಾದುಪೈಮಿ ವನಿತಾಂ ನಹಿ ಧರ್ಮ್ಮ ಏಷಃ ।

ಸಾ ಚಾsಹ ಕಾಮವಶಗಾ ಪುನರೇತದೇವ  ಸ್ವಾವೇಶಯುಗ್ಘಿ  ಮರುದಗ್ರ್ಯಪರಿಗ್ರಹಸ್ಯ ॥೧೯.೫೦॥

 

ಅತ್ಯಂತ ಸುಂದರಿಯಾದ ಅವಳನ್ನು ಕುರಿತು ಭೀಮಸೇನನು,  ಅಣ್ಣನಿಗಿಂತ ಮೊದಲು ಹೆಂಡತಿಯನ್ನು ಹೊಂದುವುದಿಲ್ಲ, ಇದು ಧರ್ಮವಲ್ಲಎನ್ನುತ್ತಾನೆ. ಆದರೆ ಕಾಮವಶಳಾದ ಅವಳಾದರೋ, ಮತ್ತೆಮತ್ತೆ ಅದನ್ನೇ ಬೇಡಿದಳು. ಅವಳು ಭಾರತೀದೇವಿಯ ಒಳ್ಳೆಯ ಆವೇಶವುಳ್ಳವಳಷ್ಟೇ ?

 

ಸಾ ಭಾರತೀ ವರಮಿಮಂ ಪ್ರದದಾವಮುಷ್ಯೈ ಸ್ವಾವೇಶಮಾತ್ಮದಯಿತಸ್ಯ ಚ ಸಙ್ಗಮೇನ ।

ಶಾಪಾದ್ ವಿಮುಕ್ತಿಮತಿತೀವ್ರತಪಃಪ್ರಸನ್ನಾ  ತೇನಾsಹ ಸಾ ನಿಜತನುಂ ಪವಮಾನಸೂನೋಃ ॥೧೯.೫೧॥

 

ಭಾರತೀದೇವಿ ಆಕೆಗೆ ‘ನನ್ನ ಆವೇಶ ನಿನ್ನಲ್ಲಿರುತ್ತದೆ ಮತ್ತು ನನ್ನ ಗಂಡನಾದ ಭೀಮಸೇನನ ಸಂಗಮದಿಂದ ನೀನು ಶಾಪದಿಂದ ವಿಮುಕ್ತಳಾಗುತ್ತೀಯೇ’ ಎಂದು ವರವನ್ನು ನೀಡಿದ್ದಳು. ಈ ವರವನ್ನು ಹೊಂದಿಯೇ ಆಕೆ  ಇಲ್ಲಿ ಬಂದಿದ್ದಳು. ಇದೇ ಕಾರಣದಿಂದ ಮುಖ್ಯಪ್ರಾಣನ ಅವತಾರವಾಗಿರುವ ಭೀಮಸೇನನ ಕುರಿತು ಆಕೆ ಬೇಡಿಕೊಂಡಳು.

[ಶಾಪಗ್ರಸ್ಥಳಾದ ‘ಶ್ರೀ’ ನಾಮಕ ಅಪ್ಸರೆಯು ವಾಯುದೇವರ ಪತ್ನಿಯಾಗಿ ಶಾಪಮುಕ್ತಿ ಪಡೆಯಬೇಕೆಂದು ಬಯಸುತ್ತಾಳೆ. ವಾಯುದೇವರ ಸಂಗವನ್ನು ಪಡೆದ ಯಾರೇ ಆದರೂ ಕೂಡಾ ಪರಿಶುದ್ಧರಾಗುತ್ತಾರಷ್ಟೇ. ಇದಕ್ಕಾಗಿ ಆಕೆ ಭಾರತೀದೇವಿಯನ್ನು ಕುರಿತು ತಪಸ್ಸನ್ನು ಮಾಡುತ್ತಾಳೆ ಮತ್ತು ಭಾರತೀದೇವಿಯ ಪತಿಯ ಸಂಗಮದಿಂದ ಶಾಪದಿಂದ ಮುಕ್ತಿಯನ್ನು ಬೇಡುತ್ತಾಳೆ. ಹೀಗೆ ಶಾಪದಿಂದ ರಾಕ್ಷಸಿಯಾಗಿ ಹುಟ್ಟಿ ಹಿಡಿಮ್ಬೀಯಾಗಿದ್ದ ಆಕೆ ಇಲ್ಲಿ  ಕಾಮವಶಳಾಗಿ ಭೀಮಸೇನನನ್ನು ಬಯಸಿದರೂ ಕೂಡಾ, ಅದರ ಹಿಂದೆ ತಾನು ಪರಿಶುದ್ಧಳಾಗಿ ಶಾಪದಿಂದ ಮುಕ್ತಿಯನ್ನು ಹೊಂದಬೇಕು ಎನ್ನುವ ಮೂಲ ಬಯಕೆ ಅಡಗಿತ್ತು].

 

ಜ್ಞಾನಂ ಚ ನೈಜಮಭಿದರ್ಶಯಿತುಂ ಪುನಶ್ಚ ಪ್ರಾಹೇಶ್ವರೋsಖಿಲಜಗದ್ಗುರುರಿನ್ದಿರೇಶಃ ।

ವ್ಯಾಸಸ್ವರೂಪ ಇಹ ಚೇತ್ಯ ಪರಶ್ವ ಏವ ಮಾಂ ತೇ ಪ್ರದಾಸ್ಯತಿ ತದಾ ಪ್ರಕರೋಷಿ ಮೇsರ್ತ್ಥ್ಯಮ್ ॥೧೯.೫೨॥

 

ಹಿಡಿಮ್ಬೀಯು ತನ್ನ ಸ್ವಾಭಾವಿಕವಾದ ಭವಿಷ್ಯತ್ ಜ್ಞಾನವನ್ನು ಜಗತ್ತಿಗೆ ತೋರಿಸಲು ಹೇಳುತ್ತಾಳೆ: ‘ವ್ಯಾಸಸ್ವರೂಪನಾದ, ಅಖಿಲಜಗದ್ಗುರು, ಲಕ್ಷ್ಮೀಪತಿ ಇಲ್ಲಿಗೆ ಬಂದು ನಾಡಿದ್ದೇ ನನ್ನನ್ನು ನಿಮಗೆ ಕೊಡುತ್ತಾನೆ. ಆಗ ನನ್ನ ಬೇಡಿಕೆಯನ್ನು ನೀವು ಈಡೇರಿಸುತ್ತೀರಿ’ ಎಂದು. 

 

 

ಕಾಲೇ ತದೈವ ಕುಪಿತಃ ಪ್ರಯಯೌ ಹಿಡಿಮ್ಬೋ ಭೀಮಂ ನಿಹನ್ತುಮಪಿ ತಾಂ ಚ ನಿಜಸ್ವಸಾರಮ್ ।

ಭಕ್ಷಾರ್ತ್ಥಮೇವ ಹಿ ಪುರಾ ಸ ತು ತಾಂ ನ್ಯಯುಙ್ಕ್ತ ನೇತುಂ ಚ ತಾನಥ ಸಮಾಸದದಾಶು ಭೀಮಮ್ ॥೧೯.೫೩॥

 

ಹಿಂದೆ ಭಕ್ಷಣೆಗಾಗಿ  ‘ಅವರನ್ನು ತಾ’ ಎಂದು ಹಿಡಿಮ್ಬೀಯನ್ನು ನಿಯೋಗಿಸಿದ್ದ ಹಿಡಿಮ್ಬ, ತಂಗಿ ಹಿಂತಿರುಗಿ ಬಾರದೇ ಇದ್ದಾಗ ಕೋಪಗೊಂಡು ಅಲ್ಲಿಗೆ ಬರುತ್ತಾನೆ. ಅವನು ತನ್ನ ತಂಗಿಯನ್ನು ಮತ್ತು ಭೀಮಸೇನನನ್ನು ಕೊಲ್ಲುವುದಕ್ಕಾಗಿ ಮುನ್ನುಗ್ಗುತ್ತಾನೆ. ತದನಂತರ ಶೀಘ್ರದಲ್ಲೇ  ಭೀಮಸೇನನನ್ನು ಹಿಡಿಮ್ಬ ಹೊಂದುತ್ತಾನೆ.  

 

ಸಾ ಭೀಮಮೇವ ಶರಣಂ ಪ್ರಜಗಾಮ ತಾಂ ಚ  ಭ್ರಾತೄಂಶ್ಚ ಮಾತರಮಥಾವಿತುಮಭ್ಯಯಾತ್ ತಮ್।

ಭೀಮಃ ಸುದೂರಮಪಕೃಷ್ಯ ಸಹೋದರಾಣಾಂ ನಿದ್ರಾಪ್ರಭಙ್ಗಭಯತೋ ಯುಯುಧೇsಮುನಾ ಚ ॥೧೯.೫೪॥

 

ಆಗ ಹಿಡಿಮ್ಬೀಯು ಭೀಮಸೇನನನ್ನೇ ರಕ್ಷಕನನ್ನಾಗಿ ಹೊಂದಿದಳು. ಅವಳನ್ನು, ತನ್ನ ಅಣ್ಣ-ತಮ್ಮಂದಿರನ್ನು ಮತ್ತು  ತಾಯಿಯನ್ನು ರಕ್ಷಿಸಲು ಭೀಮ ಹಿಡಿಮ್ಬನನ್ನು ಎದುರುಗೊಂಡ. ಭೀಮನು ತನ್ನ ಅಣ್ಣ-ತಮ್ಮಂದಿರರ ನಿದ್ರೆಯು ಭಂಗವಾದೀತು ಎಂಬ ಭಯದಿಂದ ಹಿಡಿಮ್ಬನನ್ನು ದೂರಕ್ಕೆ ಎಳೆದುಕೊಂಡುಹೋಗಿ,  ಅವನೊಂದಿಗೆ ಯುದ್ಧಮಾಡಿದನು.

 

ತೌ ಮುಷ್ಟಿಭಿಸ್ತರುಭಿರಶ್ಮಭಿರದ್ರಿಭಿಶ್ಚ ಯುಧ್ವಾ ನಿತಾನ್ತರವತಃ  ಪ್ರತಿಬೋಧಿತಾಂಸ್ತಾನ್ ।

ಸಞ್ಚಕ್ರತುಸ್ತದನು ಸೋದರಸಮ್ಭ್ರಮಂ ತಂ ದೃಷ್ಟ್ವೈವ ಮಾರುತಿರಹನ್ನುರಸಿ ಸ್ಮ ರಕ್ಷಃ ॥೧೯.೫೫॥

 

ಅವರಿಬ್ಬರೂ ಮುಷ್ಟಿಗಳಿಂದಲೂ, ಮರಗಳಿಂದಲೂ, ಬಂಡೆಗಳಿಂದಲೂ, ಗುಡ್ಡಗಳಿಂದಲೂ ಯುದ್ಧಮಾಡಿ, ದೊಡ್ಡ ಸದ್ದಿನಿಂದ ನಿದ್ರಿಸುತ್ತಿದ್ದ ಎಲ್ಲರೂ ಎಚ್ಚರಗೊಂಡವರನ್ನಾಗಿ ಮಾಡಿದರು. ತದನಂತರ ತನ್ನ ಅಣ್ಣ-ತಮ್ಮನ್ದಿರರ ಉದ್ವೇಗವನ್ನು ನೋಡಿದ ಭೀಮಸೇನನು, ರಾಕ್ಷಸನ ಎದೆಯಮೇಲೆ ಪ್ರಹಾರ ಮಾಡಿದನು.  

 

ತದ್ ಭೀಮಬಾಹುಬಲತಾಡಿತಮೀಶವಾಕ್ಯಾತ್ ಸರ್ವೈರಜೇಯಮಪಿ ಭೂಮಿತಳೇ ಪಪಾತ ।

ವಕ್ತ್ರಸ್ರವದ್ಬಹುಲಶೋಣಿತಮಾಪ ಮೃತ್ಯುಂ ಪ್ರಾಯಾತ್ ತಮೋsನ್ಧಮಪಿ ನಿತ್ಯಮಥಕ್ರಮೇಣ ॥೧೯.೫೬॥

 

ರುದ್ರನ ವರದಿಂದ ಅಜೇಯನಾದ್ದ ಆ ರಾಕ್ಷಸನು, ಭೀಮನ ತೋಳ್ಬಲದಿಂದ ಹೊಡೆಯಲ್ಪಟ್ಟವನಾಗಿ ಮುಖದಿಂದ ಬಹಳ ರಕ್ತವನ್ನು ಕಾರುತ್ತಾ ಭೂಮಿಯಲ್ಲಿ ಬಿದ್ದು ಸಾವನ್ನಪ್ಪಿದ. ತದನಂತರ ಕ್ರಮೇಣ ಅನ್ಧನ್ತಮಸ್ಸನ್ನೂ ಕೂಡಾ ಹೊಂದಿದನು. 

No comments:

Post a Comment