ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, September 4, 2020

Mahabharata Tatparya Nirnaya Kannada 18158_18169

                                    ಭೀಮಾರ್ಜ್ಜುನಾಭ್ಯಾಂ ಬದ್ಧಂ ತಂ ಶ್ರುತ್ವಾ ಪಾಞ್ಚಾಲಭೂಪತಿಮ್ ।

ಪ್ರಾಹಿಣೋತ್ ಕೃತವರ್ಮ್ಮಾಣಂ ಪಾಣ್ಡವಾನಾಂ ಜನಾರ್ದ್ದನಃ ॥೧೮.೧೫೮॥

 

ಪಾಣ್ಡವೇಷ್ವತುಲಾಂ ಪ್ರೀತಿಂ ಲೋಕೇ ಖ್ಯಾಪಯಿತುಂ ಪ್ರಭುಃ ।

ಸಮಾನ್ಯ ಪಾಣ್ಡವಾನ್  ಸೋsಪಿ ಶೂರಾನುಜಸುತಾಸುತಃ ॥೧೮.೧೫೯॥

 

ತೈರ್ಮ್ಮಾನಿತಃ ಕೃಷ್ಣಭಕ್ತ್ಯಾಭ್ರಾತೃತ್ವಾಚ್ಚ ಹರಿಂ ಯಯೌ ।   

ತತಃ ಪ್ರಭೃತಿ ಸನ್ತ್ಯಜ್ಯ ದೇವಪಕ್ಷಾ ಜರಾಸುತಮ್ ॥೧೮.೧೬೦॥

 

ಪಾಣ್ಡವಾನಾಶ್ರಿತಾ ಭೂಪಾ ಜ್ಞಾತ್ವಾ ಭೈಮಾರ್ಜ್ಜುನಂ ಬಲಮ್ ।

ವಿಶೇಷತಶ್ಚ ಕೃಷ್ಣಸ್ಯ ವಿಜ್ಞಾಯ ಸ್ನೇಹಮೇಷು ಹಿ ॥೧೮.೧೬೧॥

 

 

ಭೀಮಸೇನ ಹಾಗೂ ಅರ್ಜುನರಿಂದ ದ್ರುಪದನು ಬಂಧಿಸಲ್ಪಟ್ಟಿದ್ದನ್ನು ಕೇಳಿದ ಶ್ರೀಕೃಷ್ಣನು, ಪಾಂಡವರಲ್ಲಿ  ತನ್ನ ಎಣೆಯಿರದ ಪ್ರೀತಿಯನ್ನು ತೋರಿಸಲೆಂದೇ, ಪಾಂಡವರ ಬಳಿಗೆ ‘ಕೃತವರ್ಮ’ ಎನ್ನುವವನನ್ನು ಕಳುಹಿಸಿದನು.

ಶೂರನ ಅನುಜನ(ವಸುದೇವನ ಚಿಕ್ಕಪ್ಪನ) ಮಗಳ ಮಗನಾದ ಆ ಕೃತವರ್ಮನು, ಪಾಂಡವರನ್ನು ಬಹುಮಾನಿಸಿದ. ಪಾಂಡವರಿಂದ, ಕೃಷ್ಣಭಕ್ತಿ ಪುರಸ್ಸರವಾಗಿಯೂ,  ಅಣ್ಣಾ ಎಂಬುವುದರಿಂದಲೂ,  ಕೃತವರ್ಮ ಸತ್ಕೃತನಾಗಿ ಮತ್ತೆ ಮರಳಿ ಶ್ರೀಕೃಷ್ಣನಿದ್ದಲಿಗೆ ತೆರಳಿದ. ಅಂದಿನಿಂದ ಆರಂಭಿಸಿ, ದೇವತೆಗಳ ಪಕ್ಷದಲ್ಲಿರತಕ್ಕ ಸಮಸ್ತ ರಾಜರುಗಳು, ಜರಾಸಂಧನನ್ನು ಬಿಟ್ಟು, ಪಾಂಡವರನ್ನೇ ಆಶ್ರಯಿಸಿದರು. ಭೀಮಾರ್ಜುನರ ಬಲವನ್ನು ತಿಳಿದವರಾಗಿ. ವಿಶೇಷವಾಗಿ ಕೃಷ್ಣನ ಸ್ನೇಹವನ್ನು ಪಾಂಡವರಲ್ಲಿ ತಿಳಿದು, ಅವರೆಲ್ಲರೂ ಈರೀತಿ ಮಾಡಿದರು.

 

ಪರಾಜಿತಾಶ್ಚ ಬಹುಶಃ ಕೃಷ್ಣೇನಾಚಿನ್ತ್ಯಕರ್ಮ್ಮಣಾ ।

ಪ್ರತಾಪಾದ್ಧ್ಯೇವ ತೇ ಪೂರ್ವಂ ಜರಾಸನ್ಧವಶಂ ಗತಾಃ ॥೧೮.೧೬೨॥

 

ನ ಸ್ನೇಹಾತ್ ತದ್ ಬಲಂ ಜ್ಞಾತ್ವಾ ಪಾರ್ತ್ಥಾನಾಂ ಕೇಶವಸ್ಯ ಚ ।

ಜನ್ಮಾನ್ತರಾಭ್ಯಾಸವಶಾತ್ ಸ್ನಿಗ್ಧಾಃ ಕೃಷ್ಣೇ ಚ ಪಾಣ್ಡುಷು  ॥೧೮.೧೬೩॥

 

ಆ ರಾಜರೆಲ್ಲರೂ, ಎಣಿಸಲಸಾಧ್ಯವಾದ ಕರ್ಮವುಳ್ಳ ಶ್ರೀಕೃಷ್ಣನಿಂದ ಬಹಳ ಬಾರಿ ಜರಾಸಂಧ  ಪರಾಜಿತನಾಗಿದ್ದರೂ ಕೂಡಾ, ಈಮೊದಲು ಭಯದಿಂದ ಜರಾಸಂಧನ ವಶಕ್ಕೆ ತೆರಳಿದ್ದರು. (ಭಯದಿಂದ ದ್ರುಪದ, ವಿರಾಟ, ಶಲ್ಯ, ಬಾಹ್ಲೀಕ, ಇತ್ಯಾದಿ ರಾಜರುಗಳು ಜರಾಸಂಧನನ್ನು ಅನುಸರಿಸುತ್ತಿದ್ದರು).  ಭಯದಿಂದ ಹೊರತು ಸ್ನೇಹದಿಂದಲ್ಲ. ಆ ಕಾರಣದಿಂದ, ಇದೀಗ, ಭೀಮಾರ್ಜುನರ ಹಾಗೂ ಕೇಶವನ ಬಲವನ್ನು ತಿಳಿದ ಅವರೆಲ್ಲರೂ ಕೂಡಾ, ಜರಾಸಂಧನಿಂದ ವಿಮುಖರಾದರು. ಜನ್ಮ-ಜನ್ಮಾನ್ತರಗಳಲ್ಲಿ ಅವರಲ್ಲಿ ಯಾವ ಭಕ್ತಿಯ ಅಭ್ಯಾಸವಿತ್ತೋ, ಅದರಿಂದಾಗಿ ಅವರು ಕೃಷ್ಣಾ ಹಾಗೂ ಪಾಂಡವರಲ್ಲಿ ಸಹಜವಾದ ಸ್ನೇಹವುಳ್ಳವರಾಗಿದ್ದರು. (ಸ್ಫುಟವಾಗಿ ಎಲ್ಲವನ್ನು ತಿಳಿದೇನೂ ಅಲ್ಲ)

 

ಜರಾಸನ್ಧಭಯಂ ತ್ಯಕ್ತ್ವಾ ತಾನೇವ ಚ ಸಮಾಶ್ರಿತಾಃ ।

ಅಪಿ ತಂ ಬಹುಶಃ ಕೃಷ್ಣವಿಜಿತಂ ನೈವ ತತ್ಯಜುಃ ॥೧೮.೧೬೪॥

 

ಆಸುರಾಃ ಪೂರ್ವಸಂಸ್ಕಾರಾತ್ ಸಂಸ್ಕಾರೋ ಬಲವಾನ್ ಯತಃ ।

ದೇವಾ ಹಿ ಕಾರಣಾದನ್ಯಾನಾಶ್ರಯನ್ತೋsಪಿ ನಾsನ್ತರಮ್ ॥೧೮.೧೬೫॥

 

ಸ್ನೇಹಂ ತ್ಯಜನ್ತಿ ದೈವೇಷು ತಥಾsನ್ಯೇsನ್ಯೇಷ್ವಪಿ ಸ್ಫುಟಮ್ ।

ಧೃತರಾಷ್ಟ್ರೋ ಬಲಂ ಜ್ಞಾತ್ವಾ ಬಹುಶೋ ಭೀಮಪಾರ್ತ್ಥಯೋಃ ॥೧೮.೧೬೬॥

 

ದೈವತ್ವಾಚ್ಚ ಸ್ವಭಾವೇನ ಜ್ಯೇಷ್ಠತ್ವಾದ್ ಧರ್ಮ್ಮಜಸ್ಯ ಚ ।

ಸುಪ್ರೀತ ಏವ ತಂ ಚಕ್ರೇ ಯೌವರಾಜ್ಯಾಭಿಷೇಕಿಣಮ್ ॥೧೮.೧೬೭॥

 

ಇದರಿಂದಾಗಿ ಜರಾಸಂಧನ ಭಯವನ್ನು ಬಿಟ್ಟ ರಾಜರುಗಳು, ಪಾಂಡವರು ಮತ್ತು ಶ್ರೀಕೃಷ್ಣನನ್ನು  ಆಶ್ರಯಿಸಿದರು. ಬಹಳಬಾರಿ ಕೃಷ್ಣನಿಂದ ಸೋಲಿಸಲ್ಪಟ್ಟಿದ್ದರೂ ಕೂಡಾ, ಅಸುರಪಕ್ಷಕ್ಕೆ ಸಂಬಂಧಪಟ್ಟ ರಾಜರುಗಳು ಜರಾಸಂಧನನ್ನು ಬಿಡಲಿಲ್ಲ.

ಇದೆಲ್ಲವುದಕ್ಕೂ ಪೂರ್ವಸಂಸ್ಕಾರವೇ ಕಾರಣ. ಅದೇ ಬಲಿಷ್ಠ.  ದೇವತೆಗಳು ಯಾವುದೋ ಒಂದು ಪರಿಸ್ಥಿತಿಯ ಒತ್ತಡದಿಂದ ದೈತ್ಯರನ್ನು ಆಶ್ರಯಿಸಬೇಕಾಗಿ ಬಂದರೂ ಕೂಡಾ, ಮಾನಸಿಕವಾಗಿ ಅವರಲ್ಲಿ  ದೇವತೆಗಳಿಗೆ ಸಂಬಂಧಪಟ್ಟವರಲ್ಲಿ ಸ್ನೇಹ ಇದ್ದೇ ಇರುತ್ತದೆ. ಅದೇ ರೀತಿ ಅಸುರರೂ ಕೂಡಾ. ಅವರು ಸದಾ ಆಸುರರಲ್ಲೇ ಸ್ನೇಹವನ್ನು ಹೊಂದಿರುತ್ತಾರೆ.

ಇತ್ತ ಧೃತರಾಷ್ಟ್ರನು, ಬಹಳಬಾರಿ ಭೀಮಾರ್ಜುನರ ಬಲದ ಕುರಿತು ತಿಳಿದವನಾಗಿ, ಅವರ ದೈವಿಕ ಸ್ವಾಭಾವವನ್ನು ತಿಳಿದವನಾಗಿ, ಜೊತೆಗೆ ಧರ್ಮರಾಜ ಜ್ಯೇಷ್ಠನಾಗಿರುವುದರಿಂದ (ಅನುಪೇಕ್ಷಣೀಯ ಬಲ, ದೈವಿಕ ಸ್ವಭಾವ ಮತ್ತು ಹಿರಿಯ ಎನ್ನುವ ಎಲ್ಲಾ ಕಾರಣಗಳಿಂದ) ಅತ್ಯಂತ ಪ್ರೀತನಾಗಿಯೇ, ಧರ್ಮರಾಜನನ್ನು   ಯುವರಾಜನನ್ನಾಗಿ ರಾಜ್ಯಾಭಿಷೇಕ ಮಾಡಿದನು.

 

ಭೀಮಾರ್ಜ್ಜುನಾವಥೋ ಜಿತ್ವಾ ಸರ್ವದಿಕ್ಷು ಚ ಭೂಪತೀನ್ ।

ಚಕ್ರತುಃ ಕರದಾನ್ ಸರ್ವಾನ್ ಧೃತರಾಷ್ಟ್ರಸ್ಯ ದುರ್ಜ್ಜಯೌ ॥೧೮.೧೬೮॥

 

ತದನಂತರ ಭೀಮಾರ್ಜುನರು, ಎಲ್ಲಾ ದಿಕ್ಕುಗಳಲ್ಲಿರುವ ರಾಜರುಗಳನ್ನು ಗೆದ್ದು, ಅವರೆಲ್ಲರನ್ನೂ ಧೃತರಾಷ್ಟ್ರನಿಗೆ ಕರವನ್ನು ನೀಡುವವರನ್ನಾಗಿ ಮಾಡಿದರು. 

 

ತಯೋಃ ಪ್ರೀತೋsಭವತ್ ಸೋsಪಿ ಪೌರಜಾನಪದಾಸ್ತಥಾ ।

ಭೀಷ್ಮದ್ರೋಣಮುಖಾಃ ಸರ್ವೇsಪ್ಯತಿಮಾನುಷಕರ್ಮ್ಮಣಾ ॥೧೮.೧೬೯॥

 

ಧೃತರಾಷ್ಟ್ರ, ಭೀಷ್ಮಾಚಾರ್ಯರು, ದ್ರೋಣಾಚಾರ್ಯರೇ ಮೊದಲಾದ ಪಟ್ಟಣದಲ್ಲಿರುವವರು, ಹಳ್ಳಿಗರು ಹೀಗೆ  ಎಲ್ಲರೂ, ಮನುಷ್ಯರಿಗೆ ಮೀರಿದ ಭೀಮಾರ್ಜುನರ  ಕೆಲಸಗಳಿಂದ ಪ್ರೀತರಾದರು.

 

॥ ॥ ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಭೀಮಾರ್ಜ್ಜುನದಿಗ್ವಿಜಯೋ ನಾಮ ಅಷ್ಟಾದಶೋsಧ್ಯಾಯಃ ॥

 

*********


No comments:

Post a Comment