ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, August 21, 2018

Mahabharata Tatparya Nirnaya Kannada 9.108-9.112


ಯೇ ತು ದೇವಾ ಇಹೋದ್ಭೂತಾ ನೃವಾನರಶರೀರಿಣಃ
ತೇ ಸರ್ವೇ ಸ್ವಾಂಶಿತಾಮಾಪುಸ್ತನ್ಮೈನ್ದವಿವಿದಾವೃತೇ                ೯.೧೦೮

ಮೈನ್ದ ಮತ್ತು ವಿವಿದರನ್ನು ಹೊರತು ಪಡಿಸಿ,  ಶ್ರಿರಾಮನೊಂದಿಗೆ ಭೂಮಿಯಲ್ಲಿ  ಅವತರಿಸಿದ್ದ  ಇತರ ದೇವತೆಗಳು ತಮ್ಮ ತಮ್ಮ ಮೂಲರೂಪವನ್ನು ಸೇರಿದರು. 

ಅಸುರಾವೇಶತಸ್ತೌ ತು ನ ರಾಮಮನುಜಗ್ಮತುಃ
ಪೀತಾಮೃತೌ ಪುರಾ ಯಸ್ಮಾನ್ಮಮ್ರತುರ್ನ್ನಚ ತೌ ತದಾ             ೯.೧೦೯

ಮೈನ್ದ ಮತ್ತು ವಿವಿದರು ಅಸುರಾವೇಶದಿಂದ  ರಾಮಚಂದ್ರನನ್ನು ಅನುಸರಿಸಲಿಲ್ಲ. ಅವರು  ಹಿಂದೆ ಅಮೃತಮಥನ ಕಾಲದಲ್ಲಿ ಅಮೃತ ಸೇವನೆ ಮಾಡಿದ್ದರಿಂದ ಸಾಯಲೂ ಇಲ್ಲಾ.

ತಯೋಶ್ಚ ತಪಸಾ ತುಷ್ಟಶ್ಚಕ್ರೇ ತಾವಜರಾಮರೌ
ಪುರಾ ಸ್ವಯಮ್ಭುಸ್ತೇನೋಭೌ ದರ್ಪ್ಪಾದಮೃತಮನ್ಥನೇ          ೯.೧೧೦

ಪ್ರಸ̐ಹ್ಯಾಪಿಬತಾಂ ದೇವೈರ್ದ್ದೇವಾಂಶತ್ವಾದುಪೇಕ್ಷಿತೌ
ಪೀತಾಮೃತೇಷು ದೇವೇಷು ಯುದ್ಧ್ಯಮಾನೇಷು ದಾನವೈಃ         ೯.೧೧೧

ತೈರ್ದ್ದತ್ತಮಾತ್ಮಹಸ್ತೇ ತು ರಕ್ಷಾಯೈ ಪೀತಮಾಶು ತತ್
ತಸ್ಮಾದ್ ದೋಷಾದಾಪತುಸ್ತಾವಾಸುರಂ ಭಾವಮೂರ್ಜ್ಜಿತಮ್    ೯.೧೧೨

ಆಶ್ವೀದೇವತೆಗಳ ಅವತಾರವಾದ ಮೈನ್ದ–ವಿವಿದರು ಅಮೃತಮಥನ ಕಾಲಕ್ಕೂ ಮೊದಲು^  ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿ  ಅವಧ್ಯರಾಗುವ ವರವನ್ನು ಪಡೆದಿದ್ದರು.
ಅವತಾರ ರೂಪದಲ್ಲಿ ಅವರಿಗೆ ಅಮೃತ ಸಲ್ಲಬೇಕಾಗಿರಲಿಲ್ಲಾ. ಆದರೂ ಕೂಡಾ ಬಲಾತ್ಕಾರವಾಗಿ ಅವರು ಅಮೃತಪಾನ ಮಾಡಿದರು. ದೇವತಾರೂಪವಾಗಿರುವುದರಿಂದ ಇತರ ದೇವತೆಗಳು ಅದನ್ನು ಉಪೇಕ್ಷೆ ಮಾಡಿದರು(ವಿರೋಧಿಸಲಿಲ್ಲಾ).
(ಆದರೆ ಮೈನ್ದ–ವಿವಿದರಿಗೆ ಅಮೃತ ಹೇಗೆ ದೊರೆಯಿತು ಎಂದರೆ) ದೇವತೆಗಳೆಲ್ಲರು ಅಮೃತಪಾನ ಮಾಡಿ, ದೈತ್ಯರೊಂದಿಗೆ ಯುದ್ಧಕ್ಕೆಂದು ಹೊರಡುವಾಗ, ಅಮೃತಪಾತ್ರೆಯನ್ನು  ಮೈನ್ದ–ವಿವಿದರಲ್ಲಿ ಕೊಟ್ಟಿದ್ದರು. ಆಗ ಅವರು ಭಗವಂತನ ಅನುಮತಿ ಇಲ್ಲದೇ ಅಮೃತ ಸೇವನೆ ಮಾಡಿದರು.  ಈ ರೀತಿ, ಅನುಮತಿ ಇಲ್ಲದೇ ಕುಡಿದ ದೋಷದಿಂದಾಗಿ ಅಸುರ ಚಿತ್ತ ಪ್ರವೇಶವನ್ನು ಅವರು ಹೊಂದಿದರು.

[^ಅಶ್ವೀದೇವತೆಗಳ ಅವತಾರವಾದ  ಮೈನ್ದ–ವಿವಿದರು ರಾಮಾವತಾರ ಕಾಲದಲ್ಲಿ ಅವತರಿಸಿರುವುದಲ್ಲ. ಅವರು ಅಮೃತ ಮಥನ ಕಾಲಕ್ಕೂ ಮೊದಲೇ ಆ ರೂಪದಲ್ಲಿದ್ದರು. ಅಮೃತ ಮಥನಕಾಲದಲ್ಲಿ ಮೂಲರೂಪದಲ್ಲಿ ಅಶ್ವೀದೇವತೆಗಳ ಜೊತೆಗೆ ಮೈನ್ದ–ವಿವಿದರೂ ಅಲ್ಲಿ ಹಾಜರಿದ್ದರು. ಅಮೃತ ಪಾನಕ್ಕೆ ಭಗವಂತನ ಅಪ್ಪಣೆ ಇದ್ದದ್ದು ಕೇವಲ ದೇವತೆಗಳಿಗೆ, ಅದೂ ಕೇವಲ ಅವರ ಮೂಲರೂಪದಲ್ಲಿ ಮಾತ್ರ.  ಅವತಾರ ರೂಪದಲ್ಲಿದ್ದ ದೇವತೆಗಳು ಅಮೃತವನ್ನು ಕುಡಿಯಬಾರದು ಎನ್ನುವ ನಿಯಮ ಭಗವಂತನದ್ದಾಗಿತ್ತು. ಆದರೆ ಮೈನ್ದ–ವಿವಿದರು ಈ ನಿಯಮವನ್ನು ಮುರಿದು ಅಮೃತ ಕುಡಿದಿದ್ದರು. ]

No comments:

Post a Comment