ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, August 11, 2018

Mahabharata Tatparya Nirnaya Kannada 9.50-9.52


   ಸಿದ್ಧಂ ನ ದೇಯಮಥ ಸಾಧ್ಯಮಪೀತಿ ವಾಚಂ ಶ್ರುತ್ವಾsಸ್ಯ ವಾಕ್ಸಮಯಜಾತಮುರು ಸ್ವಹಸ್ತಾತ್
   ಅನ್ನಂ ಚತುರ್ಗ್ಗುಣಮದಾದಮೃತೋಪಮಾನಂ ರಾಮಸ್ತದಾಪ್ಯ ಬುಭುಜೇsಥ ಮುನಿಃ ಸುತುಷ್ಟಃ          ೯.೫೦

ಈಗಾಗಲೇ ಸಿದ್ಧವಾಗಿರುವ ಆಹಾರ ನನಗೆ ಬೇಡ. ನಾನು ಹೇಳಿದ ಮೇಲೆ ಆಹಾರ ಸಿದ್ಧಪಡಿಸಬಾರದು.(ಸಿದ್ಧವಾದ ಅನ್ನವೂ ಬೇಡ, ಸಾಧ್ಯವಾದ ಅನ್ನವೂ ಬೇಡ) ಎಂದು ದುರ್ವಾಸಮುನಿಯು ಹೇಳುತ್ತಿರುವಾಗಲೇ, ಶ್ರೀರಾಮಚಂದ್ರ  ತನ್ನ ಕೈಯಿಂದ ಹುಟ್ಟಿರುವ, ಅಮೃತಕ್ಕೆ ಎಣೆಯಾಗಿರುವ,  ನಾಲ್ಕು ತರಹದ ಅನ್ನವನ್ನು ದುರ್ವಾಸ ಮುನಿಗೆ ನೀಡಿದನು. ಶ್ರೀರಾಮ ನೀಡಿದ ಈ ಅಪೂರ್ವ ಭಕ್ಷ್ಯವನ್ನು ಮುನಿಯು ಅತ್ಯಂತ ಸಂತಸದಿಂದ ಸ್ವೀಕರಿಸಿದ.

  ತೃಪ್ತೋ ಯಯೌ ಚ ಸಕಲಾನ್ ಪ್ರತಿ ಕೋಪಯಾನಃ ಕಶ್ಚಿನ್ನ ಮೇsರ್ತ್ಥಿತವರಂ ಪ್ರತಿಧಾತುಮೀಶಃ
  ಏವಂ ಪ್ರತಿಜ್ಞಕ ಋಷಿಃ ಸ ಹಿ ತತ್ಪ್ರತಿಜ್ಞಾಂ ಮೋಘಾಂ ಚಕಾರ ಭಗವಾನ್ ನತು ಕಶ್ಚಿದನ್ಯಃ     ೯.೫೧

ಇಲ್ಲಿಯತನಕ  ದುರ್ವಾಸರು ‘ಯಾರೂ ಕೂಡಾ ನನ್ನ ಬಯಕೆಯನ್ನು ಈಡೇರಿಸಲು ಸಮರ್ಥರಲ್ಲಾ’ ಎಂದು ಪ್ರತಿಜ್ಞೆಯನ್ನು ಮಾಡಿ ತಿರುಗಾಡುತ್ತಿದ್ದರು. ಅಂತಹ ದುರ್ವಾಸರು ಶ್ರೀರಾಮ ನೀಡಿದ ಅನ್ನವನ್ನು ಸ್ವೀಕರಿಸಿ, ತೃಪ್ತರಾದರು. ರಾಮಚಂದ್ರನಾದರೋ, ‘ಯಾರೂ ಕೂಡಾ ಈ ರೀತಿ ಕೊಡಲು ಸಾಧ್ಯವಿಲ್ಲಾ’  ಎನ್ನುವ ಮುನಿಯ ಮಾತನ್ನು ಸುಳ್ಳು ಮಾಡಿದ. ಇದು ಕೇವಲ ಭಗವಂತನಿಂದ ಮಾತ್ರ ಸಾಧ್ಯವಾಗುವ ಕಾರ್ಯವಾಗಿತ್ತು.

   ಕುನ್ತೀ ತು ತಸ್ಯ ಹಿ ಮುನೇರ್ವರತೋsಜಯತ್ ತು ರಾಮಃ ಸ ಕೃಷ್ಣತನುವಾ ಸ್ವಬಲಾಜ್ಜಿಗಾಯ 
   ತಸ್ಮಿಞ್ಛವೇ ಪ್ರತಿಗತೇ ಮುನಿರೂಪಕೇ ಚ ಯಾಹೀತಿ ಲಕ್ಷ್ಮಣಮುವಾಚ ರಮಾಪತಿಃ ಸಃ     ೯.೫೨

ಈ ದುರ್ವಾಸಮುನಿಯನ್ನು ಕುಂತಿ ತನ್ನ ಸೇವೆಯಿಂದ (ವರವನ್ನು ಪಡೆದು) ಗೆದ್ದಳು,  ರಾಮಚಂದ್ರ ಯಾರಿಂದಲೂ ಕೊಡಲು ಅಸಾಧ್ಯವಾದ ಆಹಾರವನ್ನು ನೀಡಿ ಗೆದ್ದ. ಕೃಷ್ಣ ತನ್ನ ಬಲದಿಂದಲೇ ಗೆದ್ದ^.
ನಂತರ, ಶಿವನ ಎರಡೂ ರೂಪಗಳು (ಕಾಲರೂಪಿಯಾಗಿ ಬಂದ ಶಿವ ಮತ್ತು  ಮುನಿರೂಪಿಯಾಗಿ ಬಂದ ಶಿವ) ಅಲ್ಲಿಂದ ತೆರಳಲು, ಶ್ರೀರಾಮ ಲಕ್ಷ್ಮಣನನ್ನು ಕುರಿತು ‘ನನ್ನನ್ನು ತೊರೆದು ಹೊರಡು’  ಎಂದ.
(^ಹಂಸ-ಡಿಭಿಕರು ದುರ್ವಾಸರನ್ನು ಹಿಂಸಿಸುತ್ತಿದ್ದರು. ಅವರನ್ನು ದುರ್ವಾಸರಿಗೆ ಏನೂ ಮಾಡಲು ಸಾಧ್ಯವಾಗಿರಲಿಲ್ಲಾ. ಏಕೆಂದರೆ ಅವರೇ ಸದಾಶಿವ ರೂಪದಲ್ಲಿ ಹಂಸ-ಡಿಭಿಕರಿಗೆ ವರವನ್ನು ನೀಡಿದ್ದರು. ಹೀಗಾಗಿ ಅವರು ಶ್ರೀಕೃಷ್ಣನ ಬಳಿ ಬಂದು, ಹಂಸ-ಡಿಭಿಕರನ್ನು ಶಿಕ್ಷಿಸುವಂತೆ ಕೇಳಿಕೊಂಡರು. ಶ್ರೀಕೃಷ್ಣನಿಂದ  ಹಂಸ-ಡಿಭಿಕರು ಕೊಲ್ಲಲ್ಪಟ್ಟರು.).

ಕನ್ನಡ ಪದ್ಯರೂಪ:  https://go-kula.blogspot.com/2018/08/9-50-52.html

No comments:

Post a Comment