ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 12, 2018

Mahabharata Tatparya Nirnaya Kannada 9.53-9.59


ಏಕಾನ್ತೇ ತು ಯದಾ ರಾಮಶ್ಚಕ್ರೇ ರುದ್ರೇಣ ಸಂವಿದಮ್
ದ್ವಾರಪಾಲಂ  ಸ ಕೃತವಾಂಸ್ತದಾ ಲಕ್ಷ್ಮಣಮೇವ ಸಃ ೯.೫೩

ಯದ್ಯತ್ರ ಪ್ರವಿಶೇತ್ ಕಶ್ಚಿದ್ದನ್ಮಿ ತ್ವೇತಿ ವಚೋ ಬ್ರುವನ್
ತದನ್ತರಾssಗತಮೃಷಿಂ ದೃಷ್ಟ್ವಾsಮನ್ಯತ ಲಕ್ಷ್ಮಣಃ ೯.೫೪

ದುರ್ವಾಸಸಃ ಪ್ರತಿಜ್ಞಾ ತು ರಾಮಂ ಪ್ರಾಪ್ಯೈವ ಭಜ್ಯತಾಮ್
ಅನ್ಯಥಾ ತ್ವಯಶೋ ರಾಮೇ ಕರೋತ್ಯೇಷ ಮುನಿರ್ದ್ಧ್ರುವಮ್ ೯.೫೫

ರಾಘವೋ ಘ್ನನ್ನಪಿ ತು ಮಾಂ ಕರೋತ್ಯೇವ ದಯಾಂ ಮಯಿ
ಇತಿ ಮತ್ವಾ ದದೌ ಮಾರ್ಗ್ಗಂ ಸ ತು ದುರ್ವಾಸಸೇ ತದಾ ೯.೫೬

ರಾಮಚಂದ್ರನು ಏಕಾಂತದಲ್ಲಿ ಮಾತುಕತೆಗಳನ್ನು ಮಾಡುವ ಸಮಯದಲ್ಲಿ ಲಕ್ಷ್ಮಣನನ್ನೇ ದ್ವಾರಪಾಲಕನನ್ನಾಗಿ ನೇಮಿಸಿ, ಯಾರೊಬ್ಬರೂ  ಪ್ರವೇಶ ಮಾಡದಂತೆ ನೋಡಬೇಕೆಂದು ಆಜ್ಞೆ ಮಾಡಿದ್ದ. ಒಂದುವೇಳೆ ಯಾರಾದರೂ  ಪ್ರವೇಶ ಮಾಡಿದರೆ, ನಿನ್ನನ್ನು ಕೊಲ್ಲುತ್ತೇನೆ’ ಎನ್ನುವ ಮಾತನ್ನೂ ಶ್ರೀರಾಮ ಲಕ್ಷ್ಮಣನಿಗೆ ಹೇಳಿದ್ದ.
ಆದರೆ  ಅದೇ ಸಮಯದಲ್ಲಿ ಬಂದ ದುರ್ವಾಸ ಮುನಿಯನ್ನು ಕಂಡ ಲಕ್ಷ್ಮಣ  ಹೀಗೆ ಚಿಂತನೆ ಮಾಡುತ್ತಾನೆ: ದುರ್ವಾಸನ ಪ್ರತಿಜ್ಞೆಯು  ರಾಮಚಂದ್ರನನ್ನು ಹೊಂದಿಯೇ ಮುರಿಯಲ್ಪಡಲಿ. ಇಲ್ಲದಿದ್ದರೆ ಈ ಮುನಿಯಿಂದ ರಾಮಚಂದ್ರನಿಗೆ  ಅಪಯಶಸ್ಸು ಬರುವಂತಾಗುತ್ತದೆ.  (ರಾಮಚಂದ್ರನಿಗೂ ಕೂಡಾ ನನ್ನ ಬಯಕೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲಾ ಎಂದು ಹೇಳುವುದರಿಂದ  ರಾಮಚಂದ್ರನಿಗೆ ಅಪಯಶಸ್ಸು ಬರುವಂತಾಗುತ್ತದೆ.)
(ಈ ರೀತಿ ರಾಮನ ಆಜ್ಞೆಯನ್ನು ಪಾಲಿಸದೇ ದುರ್ವಾಸನನ್ನು ಒಳಗೆ ಬಿಟ್ಟರೆ) ರಾಮಚಂದ್ರನು ನನ್ನನ್ನು ಸಂಹರಿಸುತ್ತಾನೆ. ಆದರೂ ಆತ  ನನ್ನಲ್ಲಿ ದಯೆಯನ್ನೇ ತೋರುತ್ತಾನೆ ಎಂದು ಚಿಂತಿಸಿದ ಲಕ್ಷ್ಮಣ,  ದುರ್ವಾಸ ಋಷಿಯನ್ನು ತಡೆಯದೇ ಒಳಗೆ ಬಿಟ್ಟನು.

ಸ್ವಲೋಕಗಮನಾಕಾಙ್ಕ್ಷೀ ಸ್ವಯಮೇವ ತು ರಾಘವಃ
ಇಯಂ ಪ್ರತಿಜ್ಞಾ ಹೇತುಃ ಸ್ಯಾದಿತಿ ಹನ್ಮೀತಿ ಸೋsಕರೋತ್ ೯.೫೭

ರಾಮಚಂದ್ರನಾದರೋ,  ಇವನು ತನ್ನ ಲೋಕಕ್ಕೆ ತೆರಳುತ್ತಾನೆ ಎಂದು ತಿಳಿದೇ, ಅದಕ್ಕೆ ಕಾರಣವಾಗಲಿ ಎಂದೇ ‘ನಿನ್ನನ್ನು ಕೊಲ್ಲುತ್ತೇನೆ’ ಎನ್ನುವ ಪ್ರತಿಜ್ಞೆಯನ್ನು ಮೊದಲೇ ಮಾಡಿದ್ದ.

ಅತ್ಯನ್ತಬನ್ಧುನಿದನಂ ತ್ಯಾಗ ಏವೇತಿ ಚಿನ್ತಯನ್
ಯಾಹಿ ಸ್ವಲೋಕಮಚಿರಾದಿತ್ಯುವಾಚ ಸ ಲಕ್ಷ್ಮಣಮ್ ೯.೫೮

ಅತ್ಯಂತ ಸಮೀಪದ ಬಂಧುಗಳ ಸಂಹಾರ ಎಂದರೆ ಅವರ ತ್ಯಾಗ ಎಂದು ಚಿಂತಿಸುವವನಾದ ರಾಮಚಂದ್ರ,  ‘ನಿನ್ನ ಲೋಕವನ್ನು ಶೀಘ್ರವಾಗಿ ಹೋಗಿ ಸೇರು’ ಎಂದು ಲಕ್ಷ್ಮಣನನ್ನು ಕುರಿತು ಹೇಳಿದನು.

ಇತ್ಯುಕ್ತಃ ಸ ಯಯೌ ಜಗದ್ಭವಭಯಧ್ವಾನ್ತಚ್ಛಿದಂ ರಾಘವಂ
ಧ್ಯಾಯನ್ನಾಪ ಚ ತತ್ಪದಂ ದಶಶತೈರ್ಯ್ಯುಕ್ತೋ ಮುಖಾಮ್ಭೋರುಹೈಃ
ಆಸೀಚ್ಛೇಷಮಹಾಫಣೀ ಮುಸಲಭೃದ್ ದಿವ್ಯಾಕೃತಿರ್ಲ್ಲಾಙ್ಗಲೀ
ಪರ್ಯ್ಯಙ್ಕತ್ವಮವಾಪ ಯೋ ಜಲನಿಧೌ ವಿಷ್ಣೋಃ ಶಯಾನಸ್ಯ ಚ ೯.೫೯

ಈರೀತಿಯಾಗಿ ಹೇಳಲ್ಪಟ್ಟ ಲಕ್ಷ್ಮಣನು, ಜಗತ್ತಿನ ಸಂಸಾರ  ಭಯವೆಂಬ ಕತ್ತಲೆಯನ್ನು ನಾಶಮಾಡುವ ರಾಮಚಂದ್ರನನ್ನು ಧ್ಯಾನ ಮಾಡುತ್ತಾ, ತನ್ನ ಮೂಲ ಪದವಿಯನ್ನು(ಶೇಷಸ್ಥಾನವನ್ನು) ಕುರಿತು ತೆರಳಿದನು.
ಸಾವಿರ ಹೆಡೆಗಳುಳ್ಳ ಶೇಷನಾಗಿ, ಒನಕೆ-ನೇಗಿಲನ್ನು ಹಿಡಿದ ದಿವ್ಯವಾದ ರೂಪವುಳ್ಳವನಾಗಿ, ಕ್ಷೀರ ಸಾಗರದಲ್ಲಿ ಮಲಗಿರುವ ನಾರಾಯಣನ ಹಾಸಿಗೆಯಾದ ತನ್ನ  ಮೂಲರೂಪವನ್ನು ಲಕ್ಷ್ಮಣ ಸೇರಿದನು.

ಕನ್ನಡ ಪದ್ಯರೂಪ: https://go-kula.blogspot.com/2018/08/9-53-59.html

No comments:

Post a Comment