ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, July 2, 2018

Mahabharata Tatparya Nirnaya Kannada 8.111-8.117


ತದಾ ಪಪಾತ ಸೂರ್ಯಜಸ್ತತಾಡ ಚಾಙ್ಗದಂ ರುಷಾ ।
ಸಜಾಮ್ಬವನ್ತಮಾಶು ತೌ ನಿಪೇತತುಸ್ತಳಾಹತೌ ॥೮.೧೧೧॥

ಕುಂಭಕರ್ಣನ ಹೊಡೆತದಿಂದ ಸುಗ್ರೀವ ನೆಲದ ಮೇಲೆ ಬಿದ್ದನು. ಆಗ ಕುಂಭಕರ್ಣನು ಸಿಟ್ಟಿನಿಂದ ಜಾಂಬವಂತನೊಡಗೂಡಿದ ಅಂಗದನನ್ನು ಹೊಡೆದನು. ಅವರಿಬ್ಬರೂ ಅವನ ಮುಷ್ಟಿ ತಳಕ್ಕೆ ಸಿಕ್ಕಿ, ಕೆಳಗೆ ಬಿದ್ದರು.

ಅಥ ಪ್ರಗೃಹ್ಯ ಭಾಸ್ಕರಿಂ ಯಯೌ ಸ ರಾಕ್ಷಸೋ ಬಲೀ ।
ಜಗಾಮ ಚಾನು ಮಾರುತಿಃ ಸುಸೂಕ್ಷ್ಮಮಕ್ಷಿಕೋಪಮಃ ॥೮.೧೧೨॥

ಅದಾದ ಮೇಲೆ,  ಕುಂಭಕರ್ಣನು, ಸುಗ್ರೀವನನ್ನು ಹಿಡಿದುಕೊಂಡು ಮುಂದೆ ತೆರಳಿದನು. ಆಗ ಹನುಮಂತನು ಒಂದು ನೊಣಕ್ಕೆ ಸದೃಶವಾದ ರೂಪದಿಂದ ಅವನನ್ನು ಹಿಂಬಾಲಿಸಿದನು.

ಯದೈನಮೇಷ ಬಾಧತೇ ತದಾ ವಿಮೋಚಯಾಮ್ಯಹಮ್ ।
ಯದಿ ಸ್ಮ ಶಕ್ಯತೇsಸ್ಯ ತು ಸ್ವಮೋಚನಾಯ ತದ್ ವರಮ್ ॥೮.೧೧೩॥

“ಒಂದು ವೇಳೆ  ಕುಂಭಕರ್ಣನು ಸುಗ್ರೀವನಿಗೆ ವಿಪರೀತ ಪೀಡೆ ಕೊಟ್ಟರೆ, ಆಗ ನಾನು ಅವನನ್ನು ಬಿಡಿಸುತ್ತೇನೆ. ಒಂದು ವೇಳೆ ತನ್ನನ್ನು ತಾನು ಬಿಡಿಸಿಕೊಳ್ಳಲು ಅವನೇ ಶಕ್ಯನಾದರೆ, ಅದು ಒಳ್ಳೆಯದೇ”  ಎಂದುಕೊಂಡು ಹನುಮಂತ ಅವನನ್ನು ಅನುಸರಿಸಿದನು

ಇತಿ ವ್ರಜತ್ಯನು ಸ್ಮ ತಂ ಮರುತ್ಸುತೇ ನಿಶಾಚರಃ ।
ಪುರಂ ವಿವೇಶ ಚಾ ರ್ಚ್ಚಿತಃ ಸ್ವಬನ್ಧುಭಿಃ ಸಮಸ್ತಶಃ ॥೮.೧೧೪॥

ಈ ರೀತಿಯಾಗಿ ಹನುಮಂತನು ಅನುಸರಿಸುತ್ತಿರಲು, ಕುಂಭಕರ್ಣನು ಲಂಕೆಯನ್ನು ಪ್ರವೇಶಿಸಿದನು ಮತ್ತು ಅಲ್ಲಿ  ತನ್ನೆಲ್ಲಾ ರಾಕ್ಷಸ ಬಂಧುಗಳಿಂದ ಗೌರವಿಸಲ್ಪಟ್ಟನು.

ತುಹಿನಸಲಿಲಮಾಲ್ಯೈಃ ಸರ್ವತೋsಭಿಪ್ರವೃಷ್ಟೇ ರಜನಿಚರವರೇsಸ್ಮಿನ್ಸ್ತೇನ ಸಿಕ್ತಃ ಕಪೀಶಃ ।
ವಿಗತಸಕಲಯುದ್ಧಗ್ಲಾನಿರಾ ವಞ್ಚಯಿತ್ವಾ ರಜನಿಚರವರಂ ತಂ ತಸ್ಯ ನಾಸಾಂ ದದಂಶ ॥೮.೧೧೫॥

ತಣ್ಣಗಿನ ನೀರು, ತಣ್ಣಗಿನ ಮಾಲೆ, ಮೊದಲಾದವುಗಳಿಂದ, ಎಲ್ಲೆಡೆಯಿಂದ ರಾಕ್ಷಸರು ಕುಂಭಕರ್ಣನನ್ನು ಸ್ವಾಗತಿಸುತ್ತಿರಲು, ಆ ತಣ್ಣಗಿನ ನೀರು ಸುಗ್ರೀವನ ಮೇಲೂ ಬೀಳಲು, ಅವನು ತನ್ನೆಲ್ಲಾ ಯುದ್ಧದ ಶ್ರಮವನ್ನು ಕಳೆದುಕೊಂಡು, ಕುಂಭಕರ್ಣನ ಹಿಡಿತದಿಂದ  ತಪ್ಪಿಸಿಕೊಂಡು, ಕುಂಭಕರ್ಣನ ಮೂಗನ್ನು ಕಚ್ಚಿದನು.

ಕರಾಭ್ಯಾಮಥ ಕರ್ಣ್ಣೌ ಚ ನಾಸಿಕಾಂ ದಶನೈರಪಿ ।
ಸಞ್ಛಿದ್ಯ ಕ್ಷಿಪ್ರಮೇವಾಸಾವುತ್ಪಪಾತ ಹರೀಶ್ವರಃ ॥೮.೧೧೬॥

ಸುಗ್ರೀವನು ತನ್ನ  ಕೈಗಳಿಂದ ಕುಂಭಕರ್ಣನ ಕಿವಿಯನ್ನೂ,  ಹಲ್ಲುಗಳಿಂದ ಆತನ ಮೂಗನ್ನು ಕಚ್ಚಿ, ವೇಗವಾಗಿ ಮೇಲಕ್ಕೆ ಹಾರಿದನು.

ತಳೇನ ಚೈನಂ ನಿಜಘಾನ ರಾಕ್ಷಸಃ ಪಿಪೇಷ ಭೂಮೌ ಪತಿತಂ ತತೋsಪಿ ।
ಸಮುದ್ಗತೋsಸೌ ವಿವರೇsಙ್ಗುಲೀನಾಂ ಜಘಾನ ಶೂಲೇನ ಪುನಃ ಸ ರಾಕ್ಷಸಃ ॥೮.೧೧೭॥

ಆಗ ಕುಂಭಕರ್ಣನು  ತನ್ನ ಕೈತಳದಿಂದ ಸುಗ್ರೀವನಿಗೆ  ಹೊಡೆದನು. ಆ ಹೊಡೆತದಿಂದ ಕೆಳಗೆ ಬಿದ್ದ ಸುಗ್ರೀವನನ್ನು  ಹಾಗೇ ತನ್ನ ಕಾಲಿನಿಂದ ಒತ್ತಿ ಹಿಡಿದನು. ಅಲ್ಲಿಂದಲೂ ಕೂಡಾ ಬೆರಳುಗಳ ಮಧ್ಯದಲ್ಲಿ ಸುಗ್ರೀವನು ಮೇಲೇರಲು ಪ್ರಯತ್ನಿಸಿದಾಗ,  ರಾಕ್ಷಸನು(ಕುಂಭಕರ್ಣನು)  ತನ್ನ ಶೂಲದಿಂದ ಅವನನ್ನು ಹೊಡೆಯಲು ಹೋದನು.

ಕನ್ನಡ ಪದ್ಯರೂಪ:  https://go-kula.blogspot.com/2018/07/8-111-116.html

No comments:

Post a Comment