ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, July 7, 2018

Mahabharata Tatparya Nirnaya Kannada 8.137-8.142


ಸ ಆತ್ತಧನ್ವಾ ಸಶರೋ ರಥೇನ ವಿಯತ್ ಸಮಾರುಹ್ಯ ಯಯಾವದರ್ಶನಮ್ ।
ಸ ನಾಗಪಾಶೈರ್ವರತಃ ಶಿವಸ್ಯ ಬಬನ್ಧ ಸರ್ವಾನ್ ಕಪಿವೀರಸಙ್ಘಾನ್                 ॥೮.೧೩೭॥

ಇಂದ್ರಜಿತನು ತನ್ನ ಬಿಲ್ಲು-ಬಾಣಗಳೊಂದಿಗೆ ರಥದಿಂದ ಆಕಾಶವನ್ನು ಏರಿ, ಮಾಯವಾದನು.  ಶಿವನ ವರ ಬಲದಿಂದ  ಸರ್ಪಾಸ್ತ್ರವನ್ನು ಬಿಡುವ ಮುಖೇನ, ಎಲ್ಲಾ ಕಪಿಗಳ ಸಮೂಹವನ್ನು ಆತ ಕಟ್ಟಿಹಾಕಿದನು.

ಪುರಾsವತಾರಾಯ ಯದಾ ಸ ವಿಷ್ಣು ರ್ದ್ದಿದೇಶ ಸರ್ವಾಂಸ್ತ್ರಿದಶಾಂಸ್ತದೈವ ।
ಮಮಾಪಿ ಸೇವಾ ಭವತೇ ಪ್ರಯೋಜ್ಯೈತ್ಯೇವಂ ಗರುತ್ಮಾನವದದ್ ವೃಷಾಕಪಿಮ್  ॥೮.೧೩೮॥

ಹಿಂದೆ, ರಾಮಾವತಾರ ಮಾಡುವ ಕಾಲದಲ್ಲಿ, ವಿಷ್ಣುವು ಎಲ್ಲಾ ದೇವತೆಗಳಿಗೆ  ‘ಭೂಮಿಯಲ್ಲಿ ಅವತಾರ ಮಾಡಿರಿ’  ಎಂದು ಆಜ್ಞೆ ಮಾಡಿದ್ದನು. ಆಗ ಗರುಡನೂ ಕೂಡಾ ‘ನನಗೂ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಬೇಕು’ ಎಂಬುದಾಗಿ  ‘ವೃಷಾಕಪಿ’ ಎನ್ನಿಸಿಕೊಂಡ ನಾರಾಯಣನಲ್ಲಿ ಪ್ರಾರ್ಥಿಸಿದ್ದನು.

ತಮಾಹ ವಿಷ್ಣುರ್ನ್ನ ಭುವಿ ಪ್ರಜಾತಿಮುಪೈಹಿ ಸೇವಾಂ ತವ ಚಾನ್ಯಥಾsಹಮ್ ।
ಆದಾಸ್ಯ ಏವಾತ್ರ ಯಥಾ ಯಶಃ ಸ್ಯಾದ್ ಧರ್ಮ್ಮಶ್ಚ ಕರ್ತ್ತವ್ಯಕೃದೇವ ಚ ಸ್ಯಾಃ    ॥೮.೧೩೯॥

ಗರುಡನ ಪ್ರಾರ್ಥನೆಯನ್ನು ಕೇಳಿದ ವಿಷ್ಣುವು: “ಭೂಮಿಯಲ್ಲಿ ಹುಟ್ಟುವಿಕೆಯನ್ನು ಹೊಂದುವುದು ಬೇಡ(ಭೂಮಿಯಲ್ಲಿ ಅವತಾರ ಮಾಡಬೇಡ).  ನಿನ್ನಿಂದ  ಬೇರೆ ರೀತಿಯಾಗಿ  ಸೇವೆಯನ್ನು ಸ್ವೀಕರಿಸುತ್ತೇನೆ. ಅದರಿಂದ ನಿನಗೆ ಒಳ್ಳೆಯ ಯಶಸ್ಸು, ಪುಣ್ಯ, ಎಲ್ಲವೂ ಬರುತ್ತದೆ” ಎಂಬುದಾಗಿ ಗರುಡನಿಗೆ ಹೇಳಿದ್ದನು. 

ವರೇಣ ಶರ್ವಸ್ಯ ಹಿ ರಾವಣಾತ್ಮಜೋ ಯದಾ ನಿಬಧ್ನಾತಿ ಕಪೀನ್ ಸ ಲಕ್ಷ್ಮಣಾನ್ ।
ಉರಙ್ಗಪಾಶೇನ ತದಾ ತ್ವಮೇವ ಸಮೇತ್ಯ ಸರ್ವಾನಪಿ ಮೋಚಯಸ್ವ              ॥ ೮.೧೪೦ ॥

“ಯಾವಾಗ ಇಂದ್ರಜಿತುವು ರುದ್ರನ ವರದಿಂದ ಪಡೆದ ಸರ್ಪಾಸ್ತ್ರದಿಂದ ಲಕ್ಷ್ಮಣನಿಂದ ಕೂಡಿದ, ಕಪಿಗಳನ್ನು ಕಟ್ಟಿ ಹಾಕುತ್ತಾನೋ, ಆಗ, ನೀನೇ ಬಂದು, ಎಲ್ಲರನ್ನೂ ಸರ್ಪ ಬಂಧದಿಂದ ಬಿಡಿಸು”.

ಅಹಂ ಸಮರ್ತ್ಥೋsಪಿ ಸ ಲಕ್ಷ್ಮಣಶ್ಚ ತಥಾ ಹನೂಮಾನ್ ನ ವಿಮೋಚಯಾಮಃ ।
ತವ ಪ್ರಿಯಾರ್ತ್ಥಂ ಗರುಡೈಷ ಏವ ಕೃತಸ್ತವಾsದೇಶ ಇಮಂ ಕುರುಷ್ವ              ॥ ೮.೧೪೧ ॥

“ನಾನು, ಲಕ್ಷ್ಮಣ ಮತ್ತು  ಹನುಮಂತನು ಈ ಕಾರ್ಯದಲ್ಲಿ ಸಮರ್ಥರಾಗಿದ್ದರೂ ಕೂಡಾ, ನಿನ್ನ ಪ್ರೀತಿಗಾಗಿ ನಾವು ಬಿಡಿಸಿಕೊಳ್ಳುವುದಿಲ್ಲ ಹಾಗು ಬೇರೊಬ್ಬರಿಗೆ ಬಿಡಿಸುವುದೂ ಇಲ್ಲಾ. ಓ ಗರುಡನೇ, ಇದು ನಿನಗೆ ಆದೇಶ. ಇದನ್ನು ನೀನು ಮಾಡತಕ್ಕದ್ದು” ಎಂದು ವಿಷ್ಣುವು ಗರುಡನಿಗೆ ಹೇಳಿದ್ದನು.

ತದೇತದುಕ್ತಂ ಹಿ ಪುರಾssತ್ಮನಾ ಯತ್ ತತೋ ಹಿ ರಾಮೋ ನ ಮುಮೋಚ ಕಞ್ಚನ ।
ನ ಲಕ್ಷ್ಮಣೋ ನೈವ ಚ ಮಾರುತಾತ್ಮಜಃ ಸ ಚೈವ ಜಾನಾತಿ ಹಿ ದೇವಗುಹ್ಯಮ್    ॥೮.೧೪೨ ॥

ತನ್ನಿಂದ ಹಿಂದೆ ಗರುಡನಿಗೆ ಹೇಳಿದ್ದ ಈ ಮಾತನ್ನು ರಾಮಚಂದ್ರನು ತಿಳಿದಿದ್ದರಿಂದಲೇ ಯಾರನ್ನೂ ಬಿಡಿಸಲಿಲ್ಲಾ. ಲಕ್ಷ್ಮಣನಾಗಲೀ, ಹನುಮಂತನಾಗಲೀ ಈ ಕಾರ್ಯಕ್ಕೆ ತೊಡಗಲಿಲ್ಲಾ.  ಅವರೂ ಈ ದೇವ ರಹಸ್ಯವನ್ನು ತಿಳಿದವರೇ ಆಗಿದ್ದರು.

ಕನ್ನಡ ಪದ್ಯರೂಪ: https://go-kula.blogspot.com/2018/07/8-137-142.html

No comments:

Post a Comment