ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, July 21, 2018

Mahabharata Tatparya Nirnaya Kannada 8.202-8.206


ಪ್ರಾಕ್ಷಿಪತ್ ತಂ ಗಿರಿವರಂ ಲಙ್ಕಾಸ್ಥಃ ಸನ್ ಸ ಮಾರುತಿಃ ।
ಅರ್ದ್ಧಲಕ್ಷೇ ಯೋಜನಾನಾಂ ಯತ್ರಾಸೌ ಪೂರ್ವಸಂಸ್ಥಿತಃ                       ॥೮.೨೦೨॥

ತದ್ಬಾಹುವೇಗಾತ್ ಸಂಶ್ಲೇಷಂ ಪ್ರಾಪ ಪೂರ್ವವದೇವ ಸಃ ।
ಮೃತಾಶ್ಚ ಯೇ ಪ್ಲವಙ್ಗಾಸ್ತು ತದ್ಗನ್ಧಾತ್ ತೇsಪಿ ಜೀವಿತಾಃ               ॥೮.೨೦೩॥

ರಾಮಚಂದ್ರನ ಆಜ್ಞೆಯಂತೆ ಹೊತ್ತು ತಂದಿದ್ದ ಗಿರಿಯನ್ನು ಲಂಕೆಯಲ್ಲಿ ಇದ್ದುಕೊಂಡೇ ಹಿಂದಕ್ಕೆ ಎಸೆದ ಹನುಮಂತ,  ಅದು ಮೊದಲಿನಂತೆ ಯೋಜನಗಳ ಅರ್ದಲಕ್ಷದೂರದಲ್ಲಿರುವ ಸ್ವಸ್ಥಾನದಲ್ಲಿ, ಕಿತ್ತ ಗುರುತೇ ಇಲ್ಲದಂತೆ ಸ್ಥಿತವಾಗುವಂತೆ ಮಾಡಿದ. ಹನುಮಂತನ  ಬಾಹುವೇಗದಿಂದಾಗಿ  ಆ ಪರ್ವತ  ಮೊದಲಿದ್ದ ಸ್ಥಾನದಲ್ಲಿ ಮತ್ತೆ ಆಂಟಿಕೊಂಡಿತು. ಇತ್ತ, ಔಷಧಯುಕ್ತ ಪರ್ವತದ ಗಾಳಿಯಿಂದಾಗಿ ಸತ್ತ ಕಪಿಗಳೆಲ್ಲರೂ ಕೂಡಾ ಮರು ಜೀವ ಪಡೆದರು.

[ಕೇವಲ ಕಪಿಗಳಷ್ಟೇ ಏಕೆ ಮರುಜೀವ ಹೊಂದಿದರು ? ಏಕೆ ರಾಕ್ಷಸರ ಮೇಲೆ ಈ ಗಾಳಿ ಪ್ರಭಾವ ಬೀರಲಿಲ್ಲಾ ಎನ್ನುವುದನ್ನು  ಆಚಾರ್ಯರು  ಮುಂದಿನ ಶ್ಲೋಕದಲ್ಲಿ ತಿಳಿಸುತ್ತಾರೆ:]

ರಾಮಾಜ್ಞಯಾ ಹಿ ರಕ್ಷಾಂಸಿ ಹರಯೋsಬ್ಧಾವವಾಕ್ಷಿಪನ್ ।
ನೋಜ್ಜೀವಿತಾಸ್ತತಸ್ತೇ ತು ವಾನರಾ ನಿರುಜೋsಭವನ್                       ॥೮.೨೦೪॥

ರಾಮಚಂದ್ರನ ಆಜ್ಞೆಯಂತೆ, ಪ್ರತೀ ಯುದ್ಧದ ನಂತರ ಕಪಿಗಳೆಲ್ಲರೂ ಕೂಡಾ, ರಾಕ್ಷಸರ ಶವವನ್ನು ಸಮುದ್ರಕ್ಕೆ ಎಸೆಯುತ್ತಿದ್ದರು. ಹೀಗಾಗಿ ಸತ್ತ ರಾಕ್ಷಸರು ಮರಳಿ ಬದುಕಲಿಲ್ಲಾ. ಆದರೆ ವಾನರರು ಬದುಕನ್ನು ಪಡೆದರು ಮತ್ತು ರೋಗವಿಲ್ಲದವರಾದರು.
[ವಾಲ್ಮೀಕಿರಾಮಾಯಣದಲ್ಲೂ ಕೂಡಾ(ಯುದ್ಧಕಾಂಡ ೭೪.೭೫-೭೬) ಕಪಿಗಳು ರಾಕ್ಷಸರ ದೇಹವನ್ನು ಸಮುದ್ರಕ್ಕೆ ಎಸೆಯುತ್ತಿದ್ದ ಪ್ರಸಂಗದ ವಿವರಣೆಯನ್ನು ಈ ರೀತಿ ವರ್ಣಿಸಿರುವುದನ್ನು ನಾವು  ಕಾಣಬಹುದು : ಯದಾಪ್ರಭೃತ್ತಿ ಲಙ್ಕಾಯಾಂ ಯುದ್ಧ್ಯನ್ತೇ ಕಪಿರಾಕ್ಷಸಾಃ । ತದಾಪ್ರಭೃತಿ ಮಾನಾರ್ಥಮಾಜ್ಞಯಾ ರಾಘವಸ್ಯ ಚ । ಏ  ಹನ್ಯಂತೇ ರಣೇ ತತ್ರ ರಾಕ್ಷಸಾಃ  ಕಪಿಕುಙ್ಜರೈಃ । ಹತಾಹತಾಸ್ತು ಕ್ಷಿಪ್ಯಂತೇ ಸರ್ವ ಏವ ತು ಸಾಗರೇ ॥
ಇಂದು ಮುದ್ರಣವಾಗಿರುವ ವಾಲ್ಮೀಕಿ ರಾಮಾಯಣದಲ್ಲಿ:  ‘ತದಾಪ್ರಭೃತಿ ಮಾನಾರ್ಥಮಾಜ್ಞಯಾ ರಾವಣಸ್ಯ ಚ’  ಎನ್ನುವ ತಪ್ಪು ಪಾಠ  ಕಾಣಸಿಗುತ್ತದೆ. ಆದರೆ ಆಚಾರ್ಯರು ನೀಡಿರುವ ನಿರ್ಣಯದಿಂದ ನಮಗೆ ಸ್ಪಷ್ಟವಾದ ವಿವರ ತಿಳಿಯುತ್ತದೆ]

ಛಿನ್ನಪ್ರರೋಹಿಣಶ್ಚೈವ ವಿಶಲ್ಯಾಃ ಪೂರ್ವವರ್ಣ್ಣಿನಃ ।
ಔಷಧೀನಾಂ ಪ್ರಭಾವೇನ ಸರ್ವೇsಪಿ ಹರಯೋsಭವನ್                        ॥೮.೨೦೫॥

ದಿವ್ಯೌಷಧದ ಪ್ರಭಾವದಿಂದ ಎಲ್ಲರ ಮುರಿದ ಅಂಗಗಳು ಮತ್ತೆ  ಬೆಳೆದವು. ದೇಹದ  ಒಳಗೆ ಅಡಗಿದ  ಬಾಣ ಕೀಳಲ್ಪಟ್ಟು  ಗಾಯದ ಕಲೆಯೂ ಇಲ್ಲದಂತೆ ಹಿಂದಿನ ಬಣ್ಣ ಬಂದಿತು. ಹೀಗೆ,  ಎಲ್ಲಾ ತರಹದ ಆರೋಗ್ಯವನ್ನು ಕಪಿಗಳು ಪಡೆದರು.

ಅಥಾsಸಸಾದೋತ್ತಮಪೂರುಷಂ ಪ್ರಭುಂ ವಿಮಾನಗೋ ರಾವಣ ಆಯುಧೌಘಾನ್ ।
ಪ್ರವರ್ಷಮಾಣೋ ರಘುವಂಶನಾಥಂ ತಮಾತ್ತಧನ್ವಾsಭಿಯಯೌ ಚ ರಾಮಃ         ॥೮.೨೦೬॥

ಹೀಗೆ ಎಲ್ಲರೂ ಚೇತರಿಸಿಕೊಂಡ ನಂತರ, ವಿಮಾನದಲ್ಲಿ ನಿಂತು  ಪುರುಷಶ್ರೇಷ್ಠನಾದ ರಾಮಚಂದ್ರನ ಮೇಲೆ ಬಾಣ ಮೊದಲಾದವುಗಳನ್ನು ಎಸೆಯುತ್ತಾ ಬಂದ ರಾವಣನಿಗೆ, ಬಿಲ್ಲನ್ನು ಹಿಡಿದ ರಾಮಚಂದ್ರ ಎದುರಾದ.

ಕನ್ನಡ ಪದ್ಯರೂಪ: https://go-kula.blogspot.com/2018/07/8-202-206.html

No comments:

Post a Comment