ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, July 25, 2018

Mahabharata Tatparya Nirnaya Kannada 8.218-8.223


ಇತೀರಿತೇ ತ್ವಬ್ಜಭವೇನ ಶೂಲೀ ಸಮಾಹ್ವಯದ್ ರಾಘವಮಾಹವಾಯ ।
ವರಂ ಮದೀಯಂ ತ್ವಗಣಯ್ಯ ರಕ್ಷೋ ಹತಂ ತ್ವಯಾ ತೇನ ರಣಾಯ ಮೇಹಿ ॥೮.೨೧೮ ॥

ಈ ರೀತಿಯಾಗಿ ಬ್ರಹ್ಮನಿಂದ ಹೇಳಲ್ಪಡುತ್ತಿರಲು,   ಸದಾಶಿವನು ರಾಮಚಂದ್ರನನ್ನು ಯುದ್ಧಕ್ಕೆ ಕರೆಯುತ್ತಾನೆ.  “ನನ್ನ ವರವನ್ನು ಲೆಕ್ಕಿಸದೇ ನೀನು ರಾವಣನನ್ನು ಕೊಂದೆ. ಅದರಿಂದ ಯುದ್ಧಕ್ಕಾಗಿ ಆಹ್ವಾನಿಸುತ್ತಿದ್ದೇನೆ. ನಾವಿಬ್ಬರು ಯುದ್ಧ ಮಾಡೋಣ” ಎನ್ನುತ್ತಾನೆ ಶಿವ!

ಇತೀರಿತೇsಸ್ತ್ವಿತ್ಯಭಿಧಾಯ ರಾಘವೋ ಧನುಃ ಪ್ರಗೃಹ್ಯಾsಶು ಶರಂ ಚ ಸನ್ದಧೇ ।
ವಿಕೃಷ್ಯಮಾಣೇ ಚಲಿತಾ ವಸುನ್ಧರಾ ಪಪಾತ ರುದ್ರೋsಪಿ ಧರಾಪ್ರಕಮ್ಪತಃ ॥೮.೨೧೯॥

ಈರೀತಿಯಾಗಿ ರುದ್ರನು ಹೇಳುತ್ತಿರಲು, ‘ಹಾಗೇ ಆಗಲಿ’ ಎಂದು ಹೇಳಿದ ಶ್ರೀರಾಮಚಂದ್ರನು, ಬಿಲ್ಲನ್ನು ಹಿಡಿದು ಬಾಣವನ್ನು ಹೂಡಿದನು. ಶ್ರೀರಾಮನು ತನ್ನ ಬಿಲ್ಲಿನ ನೇಣನ್ನು ಎಳೆಯುತ್ತಿರಲು  ಭೂಮಿಯೇ ಕಂಪಿಸಿತು. ಆ ಭೂಕಂಪನದಿಂದ  ರುದ್ರನೂ ಕೂಡಾ ಕೆಳಗೆ ಬಿದ್ದನು.

ಅಥೋತ್ಥಿತಶ್ಚಾsಸುರಭಾವವರ್ಜ್ಜಿತಃ ಕ್ಷಮಸ್ವ ದೇವೇತಿ ನನಾಮ ಪಾದಯೋಃ ।
ಉವಾಚ ಚ ತ್ವದ್ವಶಗೋsಸ್ಮಿ ಸರ್ವದಾ ಪ್ರಸೀದ ಮೇ ತ್ವದ್ವಿಷಯಂ ಮನಃ ಕುರು ॥೮.೨೨೦ ॥

ಬಿದ್ದ ರುದ್ರನು ಮೇಲೆದ್ದು, ತನ್ನ  ಅಸುರ ಭಾವವನ್ನು  ಕಳೆದುಕೊಂಡು,  ‘ದೇವಾ, ನನ್ನನ್ನು ರಕ್ಷಿಸು’  ಎಂದು ಶ್ರೀರಾಮನ ಪಾದಗಳಿಗೆರಗಿ ಹೀಗೆ ಹೇಳಿದನು: “ನಾನು ಸದಾ ನಿನ್ನ ವಶದಲ್ಲಿದ್ದೇನೆ. ನನಗೆ ಪ್ರಸನ್ನನಾಗು. ನನ್ನ ಮನಸ್ಸನ್ನು ನಿನ್ನಲ್ಲೇ ನೆಡುವಂತೆ ಮಾಡು” ಎಂದು.

ಅಥೇನ್ದ್ರಮುಖ್ಯಾಶ್ಚ ತಮೂಚಿರೇ ಸುರಾಸ್ತ್ವಯಾsವಿತಾಃ ಸ್ಮೋsದ್ಯ ನಿಶಾಚರಾದ್ ವಯಮ್ ।
ತಥೈವ ಸರ್ವಾಪದ ಏವ  ನಸ್ತ್ವಂ ಪ್ರಪಾಹಿ ಸರ್ವೇ ಭವದೀಯಕಾಃ ಸ್ಮ ॥೮.೨೨೧॥

ಶಿವನ ಪ್ರಾರ್ಥನೆಯ ನಂತರ ಇಂದ್ರನೇ ಪ್ರಧಾನವಾಗಿರುವ ದೇವತೆಗಳು ರಾಮನನ್ನು  ಕುರಿತು  ಹೀಗೆ ಹೇಳುತ್ತಾರೆ: “ನಿನ್ನಿಂದಾಗಿ ಇಂದು ನಾವು ಹೇಗೆ ರಾವಣನ ಹಿಂಸೆಯಿಂದ  ರಕ್ಷಿಸಲ್ಪಟ್ಟಿದ್ದೇವೆಯೋ ಹಾಗೇ, ಮುಂದೆಯೂ ಕೂಡಾ  ಎಲ್ಲಾ ಆಪತ್ತಿನಿಂದ ನೀನು ನಮ್ಮನ್ನು ರಕ್ಷಿಸು. ನಾವೆಲ್ಲರೂ ನಿನ್ನವರಾಗಿದ್ದೇವೆ (ನಿನ್ನ ಭಕ್ತರಾಗಿದ್ದೇವೆ).”

ಸೀತಾಕೃತಿಂ ತಾಮಥ ತತ್ರ ಚಾsಗತಾಂ ದಿವ್ಯಚ್ಛಲೇನ ಪ್ರಣಿಧಾಯ ಪಾವಕೇ ।
ಕೈಲಾಸತಸ್ತಾಂ ಪುನರೇವ ಚಾsಗತಾಂ ಸೀತಾಮಗೃಹ್ಣಾದ್ಧುತಭುಕ್ಸಮರ್ಪ್ಪಿತಾಮ್ ॥೮.೨೨೨॥

ತದನಂತರ, ಅಲ್ಲಿ ಬಂದಿರುವ, ರಾವಣ ಅಪಹರಿಸಿ ತಂದಿದ್ದ ಸೀತಾಕೃತಿಯನ್ನು, ಅಗ್ನಿದಿವ್ಯ ಎಂಬ ನೆಪದಿಂದ ಅಗ್ನಿಯಲ್ಲಿ ಪ್ರವೇಶ ಮಾಡಿಸಿ, ಕೈಲಾಸದಿಂದ ಅಗ್ನಿ ಕರೆತಂದಿರುವ ತಾಯಿ ಸೀತಾದೇವಿಯನ್ನು ಶ್ರೀರಾಮ ಸ್ವೀಕರಿಸುತ್ತಾನೆ.

ಜಾನನ್ ಗಿರೀಶಾಲಯಗಾಂ ಸ ಸೀತಾಂ ಸಮಗ್ರಹೀತ್ ಪಾವಕಸಂಪ್ರದತ್ತಾಮ್ ।
ಮುಮೋದ ಸಮ್ಪ್ರಾಪ್ಯ ಚ ತಾಂ ಸ ರಾಮಃ ಸಾ ಚೈವ ದೇವೀ ಭಗವನ್ತಮಾಪ್ಯ ॥೮.೨೨೩॥

ಕೈಲಾಸದಲ್ಲಿದ್ದ ಸೀತೆಯನ್ನು ತಿಳಿದಿದ್ದ ಶ್ರೀರಾಮಚಂದ್ರನು, ಅಗ್ನಿಯಿಂದ ಕೊಡಲ್ಪಟ್ಟ  ಸೀತಾದೇವಿಯನ್ನು ಸ್ವೀಕರಿಸುತ್ತಾನೆ. ಈರೀತಿ, ಸೀತೆಯನ್ನು ಲೋಕದ ದೃಷ್ಟಿಯಿಂದ ಹೊಂದಿದ ಶ್ರೀರಾಮನು ಸಂತಸಪಟ್ಟನು. ಸೀತಾದೇವಿಯೂ ಕೂಡಾ  ಭಗವಂತನನ್ನು ಹೊಂದಿ ಸಂತಸಪಟ್ಟಳು.
[ಬಾಹ್ಯವಾಗಿ ನೋಡಿದರೆ ಅದು ಅಗ್ನಿದಿವ್ಯ. ಸೀತೆಯ ಅಗ್ನಿಪರೀಕ್ಷೆ.  ಆದರೆ ಅಲ್ಲಿ ನಡೆದಿರುವುದು ಸೀತಾಕೃತಿಯಾ ಅಗ್ನಿ ಪ್ರವೇಶ ಮತ್ತು ಅಗ್ನಿ ಕೈಲಾಸದಿಂದ ಕರೆ ತಂದಿರುವ  ಮಾತೆ ಸೀತಾದೇವಿ ಶ್ರೀರಾಮನನ್ನು ಹೊಂದುವ ಲೀಲೆ. (ಲೋಕದ ದೃಷ್ಟಿಗಾಗಿ, ಎಂದೂ ವೀಯೋಗವಿಲ್ಲದ ಜಗದ್ಮಾತಾಪಿತರ ಸಮಾಗಮದ ನಟನಾ ನಿಯಮ)] 

ಕನ್ನಡ ಪದ್ಯರೂಪ: https://go-kula.blogspot.com/2018/07/8-218-223.html

No comments:

Post a Comment