ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, July 28, 2018

Mahabharata Tatparya Nirnaya Kannada 8.235-8.238


   ದತ್ತೋ ವರೋ ನ ಮನುಜಾನ್ ಪ್ರತಿ ವಾನರಾಂಶ್ಚ ಧಾತ್ರಾsಸ್ಯ ತೇನ ವಿಜಿತೋ ಯುಧಿ ವಾಲಿನೈಷಃ ।
    ಅಬ್ಜೋದ್ಭವಸ್ಯ ವರಮಾಶ್ವಭಿಭೂಯ ರಕ್ಷೋಜಿಗ್ಯೇ ತ್ವಹಂ ರಣಮುಖೇ ಬಲಿಮಾಹ್ವಯನ್ತಮ್         ॥೮.೨೩೫॥

ಬ್ರಹ್ಮದೇವರಿಂದ ರಾವಣನಿಗೆ ಮನುಷ್ಯರು ಹಾಗು  ಕಪಿಗಳನ್ನು ಕುರಿತು ವರ ಕೊಡಲ್ಪಟ್ಟಿರಲಿಲ್ಲ. ಅದರಿಂದಾಗಿ ವಾಲಿಯಿಂದ ಆತ ಸೋಲಿಸಲ್ಪಟ್ಟಿದ್ದನು. ದತ್ತಾತ್ರಯ ನಾಮಕ ಭಗವಂತನ ವರಪ್ರಸಾದದಿಂದ ಕಾರ್ತವೀರ್ಯಾರ್ಜುನನು ರಾವಣನನ್ನು ಗೆದ್ದಿದ್ದ’.
ಮುಂದುವರಿದು ಶ್ರೀರಾಮ ಹೇಳುತ್ತಾನೆ: ‘ನಾನಾದರೋ, ಯುದ್ಧಕ್ಕೆ  ಆಹ್ವಾನ ಮಾಡುಲ ನನ್ನ ಭಕ್ತನಾದ ಬಲಿ ಚಕ್ರವರ್ತಿಯ ಬಳಿ ಬಂದ ಈ ರಾವಣನನ್ನು  ಬ್ರಹ್ಮನ ವರವನ್ನು ಉಲ್ಲಂಘಿಸಿ ಗೆದ್ದೆ. 

ಬಲೇ  ರ್ದ್ದ್ವಾರಸ್ಥೋsಹಂ ವರಮಸ್ಮೈ ಸಮ್ಪ್ರದಾಯ ಪೂರ್ವಂ ತು ।
ತೇನ ಮಯಾ ರಕ್ಷೋsಸ್ತಂ ಯೋಜನಮಯುತಂ ಪದಾಙ್ಗುಲ್ಯಾ              ॥೮.೨೩೬॥

(ವಾಮನ ಅವತಾರದಲ್ಲಿ ಬಲಿಯ  ಭಕ್ತಿಗೆ ಮೆಚ್ಚಿ )ನಾನು ಸದಾ ನಿನ್ನ ಬಾಗಿಲನ್ನು ಕಾಯುತ್ತಿರುತ್ತೇನೆ ಎಂದು ಬಲಿ ಚಕ್ರವರ್ತಿಗೆ ವರವನ್ನು ಕೊಟ್ಟಿರುವುದರಿಂದ, (ಪಾತಾಳ ಲೋಕದಲ್ಲಿದ್ದ) ಬಲಿಯ ಬಾಗಿಲಲ್ಲಿ ನಿಂತು ನಾನು ಕಾಯುತ್ತಿದ್ದೆ. ಅಲ್ಲಿಗೆ ಬಂದಿದ್ದ ಈ ರಾಕ್ಷಸನು(ರಾವಣನು) ನನ್ನ ಪಾದದ ಬೆರಳಿನ ಹೊಡೆತದಿಂದ  ಹತ್ತು ಸಾವಿರ ಯೋಜನ ದೂರ ಎಸೆಯಲ್ಪಟ್ಟ.
[ರಾಮಾಯಣದಲ್ಲಿ ರಾವಣನು ಬಲಿಯನ್ನು ಭೇಟಿಯಾದ ಕಥೆ ಇದೆ. ಬಲಿಯನ್ನು ಯುದ್ಧಕ್ಕೆ ಆಹ್ವಾನಿಸಲು ಹೋದ ಅವನು ಬಾಗಿಲಲ್ಲಿ ಪಾಲಕನಾಗಿ ನಿಂತಿರುವ ಗದಾಪಾಣಿಯಾದ ವಾಮನ ದೇವನನ್ನು ಕಂಡು ಬೆರಗಾಗಿ ಬಲಿಯನ್ನು ಅದೇ ವಿಚಾರವಾಗಿ ಕೇಳುತ್ತಾನೆ:  ' ಯಾರು ಅವನು? ನಿನ್ನ ದ್ವಾರಪಾಲಕನೇ?  ಜಗತ್ತಿನ ಓಡೆಯನಂತೆ ಕಾಣುತ್ತಾನೆ...' ಎಂದು.
ಆಗ ಬಲಿ ರಾವಣನಿಗೆ ಹೇಳುತ್ತಾನೆ: 'ಅವನು ಯಾವನೋ ಬಾಗಿಲನ್ನು ಕಾಯುವವನಲ್ಲ. ವಿಷ್ಣು, ನಾರಾಯಣ, ಕಪಿಲಾದಿ ನಾಮದಿಂದ ಕರೆಯಲ್ಪಡುವ ಜಗದೀಶ್ವರನು', ಎಂದು.
ಈ ಕಥೆಯನ್ನು ಕೆಲವರು ರಾಮಾಯಣದಲ್ಲಿ ಪ್ರಕ್ಷಿಪ್ತ ಎಂದು ಬಗೆಯುತ್ತಾರೆ. ಆದರೆ ಅದು ಹಾಗಲ್ಲ ಎಂದು ಜಗತ್ತಿಗೆ ಸಾರುವುದಕ್ಕಾಗಿ ಮಧ್ವಾಚಾರ್ಯರು ಇಲ್ಲಿ  ಆ ಕಥೆಯನ್ನು ‘ಬಲಿಮಾಹ್ವಯಂತಮ್’ ಎಂದು ಒಂದೇ ಪದದಲ್ಲಿ ಸಂಗ್ರಹಿಸಿ ನೀಡಿದ್ದಾರೆ ]

ಪುನಶ್ಚ ಯುದ್ಧಾಯ ಸಮಾಹ್ವಯನ್ತಂ ನ್ಯಪಾತಯಂ ರಾವಣಮೇಕಮುಷ್ಟಿನಾ ।
ಮಹಾಬಲೋsಹಂ ಕಪಿಲಾಖ್ಯರೂಪಸ್ತ್ರಿಕೋಟಿರೂಪಃ ಪವನಶ್ಚ ಮೇ ಸುತಃ ॥೮.೨೩೭॥

ಮತ್ತೆ ಯುದ್ಧಕ್ಕಾಗಿ ಆಹ್ವಾನ ಮಾಡಿದ ರಾವಣನನ್ನು ಒಂದೇ ಗುದ್ದಿನಿಂದ ಕೆಳಗೆ ಬೀಳಿಸಿದೆ. ‘ಕಪಿಲವಾಸುದೇವ’ ಎಂದು ನನ್ನ ಹೆಸರು. ಮಹಾಬಲಿಷ್ಟನಾಗಿದ್ದೇನೆ. ನನ್ನ ಮಗ ‘ಪವನ’ ಮೂರು ಕೋಟಿ ರೂಪವುಳ್ಳವನಾಗಿದ್ದಾನೆ’ ಎನ್ನುತ್ತಾನೆ ಶ್ರೀರಾಮಚಂದ್ರ.
[ಇದನ್ನು ವಾಲ್ಮೀಕಿ ರಾಮಾಯಣದಲ್ಲಿ ಹೇಳಲಾಗಿದೆ. ಆದರೆ ಕೆಲವರು ಇದನ್ನು ಪ್ರಕ್ಷಿಪ್ತ ಎಂದು ಬಗೆದು ತಿರಸ್ಕರಿಸುತ್ತಾರೆ  (ಉತ್ತರಕಾಂಡ , ಅಧ್ಯಾಯ ೨೮.೬೫) ‘ದ್ವೀಪಸ್ಥಃ ಪುರುಷಃ ಕೋsಸೌ ತಿಸ್ರಃ ಕೋಟ್ಯಶ್ಚ ತಾಶ್ಚ ಕಾಃ’. ದ್ವೀಪದಲ್ಲಿ ಒಬ್ಬ ಪುರುಷನಿದ್ದಾನೆ. ಅವನು ಯಾರು? ಅವನ ಸುತ್ತ, ಮೂರು ಕೋಟಿ ರೂಪದಿಂದ ಇರುವವನು  ಯಾರು ಎಂದು   ಶ್ರೀರಾಮನೇ  ಅಗಸ್ತ್ಯರನ್ನು ಪ್ರಶ್ನಿಸುವ ಪ್ರಸಂಗ ಇದಾಗಿದೆ(ಲೋಕಶಿಕ್ಷಣಕ್ಕಾಗಿ ಶ್ರೀರಾಮ ಹಾಕಿದ ಪ್ರಶ್ನೆ). ಆಗ ಅಗಸ್ತ್ಯರು ಉತ್ತರಿಸುತ್ತಾ ಹೇಳುತ್ತಾರೆ: ಭಗವಾನ್ ಕಪಿಲೋ ರಾಮ ದ್ವೀಪಸ್ಥೋ ನರ ಉಚ್ಯತೇ । (ದ್ವೀಪದಲ್ಲಿರುವವನನ್ನು ಕಪಿಲ ಎಂದು ಕರೆಯುತ್ತಾರೆ)  ಸ ವೈ ನಾರಾಯಣೋ ದೇವಃ ಶಂಖಚಕ್ರಗದಾಧರಃ । ವಿಧಾತಾ ಚೈವ ಭೂತಾನಾಂ ಸಂಹರ್ತ ಸ ತತೈವ ಚ । ಆನಾದಿರಚ್ಯುತೋ ವಿಷ್ಣುಃ ಪ್ರಭವಃ ಶಾಶ್ವತೋsವ್ಯಯಃ । ಯೇ ತು ನೃತ್ಯಂತಿ ವೈ ತತ್ರ ಸುತಾಸ್ತೇ  ತಸ್ಯ  ಧೀಮತಃ  ತುಲ್ಯತೇಜಃಪ್ರತಾಪಾಸ್ತೇ ಕಪಿಲಸ್ಯ ನರಸ್ಯ ವೈ’ (೨೮. ೬೭-೭೦) . ಇಲ್ಲಿ ಹೇಳುತ್ತಾರೆ: ‘ಆ ಪುರುಷನ  ಸುತ್ತ ನರ್ತನ ಮಾಡಿಕೊಂಡಿರುತ್ತಾರೆ. ಕಪಿಲನಿಗೆ ಸಮನಾದ ತೇಜಸ್ಸು, ಪರಾಕ್ರಮ ಅವರಿಗಿದೆ’  ಎಂದು. ಆದರೆ ಅವರು ಯಾರು ಎನ್ನುವುದನ್ನು ಮಾತ್ರ ಇಲ್ಲಿ ಸ್ಪಷ್ಟಪಡಿಸಿಲ್ಲ.  ಆದರೆ ಆಚಾರ್ಯರು ಮೇಲಿನ ಶ್ಲೋಕದಲ್ಲಿ  ತ್ರಿಕೋಟಿರೂಪಃ ಪವನಶ್ಚ ಮೇ ಸುತಃ’  ಎಂದು ನಿರ್ಣಯ ನೀಡಿ ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ. ಇದರಿಂದ ವಾಲ್ಮೀಕಿ ರಾಮಾಯಣದ ಈ ಮೇಲಿನ ಮಾತು ಪ್ರಕ್ಷಿಪ್ತ ಅಲ್ಲಾ ಎನ್ನುವುದೂ ಸ್ಪಷ್ಟವಾಗುತ್ತದೆ.]

ಆವಾಂ ಸ್ವಶಕ್ತ್ಯಾ ಜಯಿನಾವಿತಿ ಸ್ಮ ಶಿವೋ ವರಾನ್ಮೇsಜಯದೇನಮೇವಮ್ ।
ಜ್ಞಾತ್ವಾ ಸುರಾಜೇಯಮಿಮಂ ಹಿ ವವ್ರೇ ಹರೋ ಜಯೇಯಾಹಮಮುಂ ದಶಾನನಮ್         ॥೮.೨೩೮॥

ನಾವಿಬ್ಬರೂ ಕೂಡಾ(ಶ್ರೀರಾಮ ಮತ್ತು ಹನುಮಂತ) ನಮ್ಮ ಸ್ವಾಭಾವಿಕವಾದ ಶಕ್ತಿಯಿಂದಲೇ ರಾವಣನನ್ನು ಗೆದ್ದವರಾಗಿದ್ದೇವೆ. ಸದಾಶಿವನು ನನ್ನ ವರದಿಂದ ಈ ರಾವಣನನ್ನು ಗೆದ್ದಿದ್ದ.  ರಾವಣನನ್ನು ದೇವತೆಗಳು ಜಯಿಸಲು  ಸಾಧ್ಯವಿಲ್ಲ ಎಂದು ತಿಳಿದು, ‘ರಾವಣನನ್ನು ಗೆಲ್ಲುವ’  ವರವನ್ನು ಶಿವ ನನ್ನಿಂದ ಪಡೆದ. ಅದರಿಂದಾಗಿ ಅವನನ್ನು ಗೆದ್ದ.
[ತಾತ್ಪರ್ಯ : ರಾವಣನಿಗೆ ಬ್ರಹ್ಮನ ವರಬಲವಿತ್ತು. ಅದನ್ನು ಮೀರುವ ಶಕ್ತಿ ಕೇವಲ ಬ್ರಹ್ಮನಿಗಿಂತ ಎತ್ತರದಲ್ಲಿರುವವರಿಗೆ ಮತ್ತು ಬ್ರಹ್ಮನಿಗೆ ಸಮನಾಗಿರುವವನಿಗೆ ಮಾತ್ರ ಸಾಧ್ಯ. ಮುಖ್ಯಪ್ರಾಣ ತಾರತಮ್ಯದಲ್ಲಿ ಬ್ರಹ್ಮನಿಗೆ ಸಮನಾದರೆ,  ಭಗವಂತ ಬ್ರಹ್ಮನಿಗೆ ಸ್ವಾಮಿ. ಹೀಗಾಗಿ, ಶ್ರೀರಾಮ ಮತ್ತು ಮುಖ್ಯಪ್ರಾಣ ಮಾತ್ರ ರಾವಣನನ್ನು ಸ್ವಾಭಾವಿಕ ಬಲದಿಂದ ಗೆಲ್ಲಲು ಸಾಧ್ಯ. ಉಳಿದವರು ಅಂದರೆ: ವಾಲಿ, ಕಾರ್ತವೀರ್ಯಾರ್ಜುನ, ಶಿವ,  ಇವರ್ಯಾರೂ ಕೂಡಾ ಸ್ವಾಭಾವಿಕವಾಗಿ ರಾವಣನನ್ನು ಗೆದ್ದಿರುವುದಲ್ಲ. ಗೆದ್ದಿದ್ದರೆ ಅದು ಕೇವಲ ವರಬಲದಿಂದ. ಈ ಹಿಂದೆ ಹೇಳಿದಂತೆ  ಶತ್ರುವನ್ನ ಗೆಲ್ಲಲು ಬೇಕು ಅವನಿಗಿಂತ ನಾಕು ಪಟ್ಟು ಬಲ, ಶತ್ರುವನ್ನ ಕೊಲ್ಲಲು ಬೇಕು ಅವನಿಗಿಂತ ನೂರು ಪಟ್ಟು ಬಲ(೬.೦೭). ಅವಧ್ಯನೆನಿಸಿದ್ದ ರಾವಣನನ್ನು ಕೊಲ್ಲುವ ಸಾಮರ್ಥ್ಯವಿದ್ದಿದ್ದು  ಕೇವಲ ಪ್ರಾಣ(ಹನುಮಂತ) ಮತ್ತು ನಾರಾಯಣ(ಶ್ರೀರಾಮ)ರಿಗೆ ಮಾತ್ರ]

ಕನ್ನಡ ಪದ್ಯರೂಪ: https://go-kula.blogspot.com/2018/07/8-235-238.html

No comments:

Post a Comment