ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, July 30, 2018

Mahabharata Tatparya Nirnaya Kannada 8.244-8.248

ತ್ವಮೇವ ಸಾಕ್ಷಾತ್ ಪರಮಸ್ವತನ್ತ್ರಸ್ತ್ವಮೇವ ಸಾಕ್ಷಾದಖಿಲೋರುಶಕ್ತಿಃ ।
ತ್ವಮೇವ ಚಾಗಣ್ಯಗುಣಾರ್ಣ್ಣವಃ ಸದಾ ರಮಾವಿರಿಞ್ಚಾದಿಭಿರಪ್ಯಶೇಷೈಃ           ॥೮.೨೪೪॥

ಸಮೇತ್ಯ ಸರ್ವೇsಪಿ ಸದಾ ವದನ್ತೋsಪ್ಯನನ್ತಕಾಲಾಚ್ಚ ನವೈ ಸಮಾಪ್ನುಯುಃ ।
ಗುಣಾಂಸ್ತ್ವದೀಯಾನ್ ಪರಿಪೂರ್ಣ್ಣಸೌಖ್ಯಜ್ಞಾನಾತ್ಮಕಸ್ತ್ವಂ ಹಿ ಸದಾsತಿಶುದ್ಧಃ    ॥೮.೨೪೫॥


ನೀನೇ ಸರ್ವೋತ್ತಮನು ಸರ್ವ ಸ್ವತಂತ್ರನು. ನೀನೇ ಸಾಕ್ಷಾತ್ ಸರ್ವಶಕ್ತಿಯಾಗಿದ್ದೀಯ. (ನಿನಗೆ ಇನ್ನೊಬ್ಬರಿಂದ ಶಕ್ತಿ ಬರುವುದಿಲ್ಲ ಎನ್ನುವುದು ‘ಸಾಕ್ಷಾತ್’ ಶಬ್ದ ನೀಡುವ ಅಭಿಪ್ರಾಯ). ಎಣಿಸಾಲಾಗದ ಗುಣಸಾಗರ ನೀನು.  ರಮೆ ಮತ್ತು ಎಲ್ಲಾ (ಆಗಿ ಹೋದ ಎಲ್ಲಾ) ಬ್ರಹ್ಮ-ರುದ್ರರು ಸೇರಿಕೊಂಡರೂ ಕೂಡಾ, ನಿನ್ನ ಗುಣವನ್ನು ಸಂಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ.
ಆ ಎಲ್ಲರೂ ಸೇರಿ, ನಿರಂತರವಾಗಿ, ಅನಂತ ಕಾಲದಿಂದ ವರ್ಣಿಸಿದರೂ, ನಿನ್ನ ಗುಣಗಳನ್ನು ಸಂಪೂರ್ಣವಾಗಿ ಎಣಿಸಲು(ಹೇಳಿ ಮುಗಿಸಲು) ಸಾಧ್ಯವಿಲ್ಲ.  ನೀನು ಪೂರ್ಣವಾಗಿರುವ ಸುಖ, ಜ್ಞಾನ, ಮೊದಲಾದವುಗಳೇ ಮೈದುಂಬಿ ಬಂದವನು.

ಯಸ್ತೇ ಕಥಾಸೇವಕ ಏವ ಸರ್ವದಾ ಸದಾರತಿಸ್ತ್ವಯ್ಯಚಲೈಕಭಕ್ತಿಃ ।
ಸ ಜೀವಮಾನೋ ನ ಪರಃ ಕಥಞ್ಚಿತ್ ತಜ್ಜೀವನಂ ಮೇsಸ್ತ್ವಧಿಕಂ ಸಮಸ್ತಾತ್      ॥೮.೨೪೬॥

ಯಾವ  ಸಾಧಕನು ನಿನ್ನ ಕಥೆಯನ್ನು ನಿರಂತರವಾಗಿ ಕೇಳುತ್ತಿರುತ್ತಾನೋ, ಯಾವಾಗಲೂ  ನಿನ್ನಲ್ಲೇ ರತಿಯನ್ನು ಹೊಂದಿರುತ್ತಾನೋ, ನಿನ್ನಲ್ಲಿ ಅಚಲವಾದ ಭಕ್ತಿಯನ್ನು ಹೊಂದಿರುತ್ತಾನೋ, ಅವನ ಜೀವನ  ಸಾರ್ಥಕ. (ಇದಿಲ್ಲದೇ ಜೀವಿಸುವವನ ಜೀವನ ವ್ಯರ್ಥ).  ಅಂತಹ ಸದಾ ನಿನ್ನಲ್ಲಿ ಭಕ್ತಿಯಿಂದಿರುವ ಜೀವನ ನನಗಿರಲಿ.              

ಪ್ರವರ್ದ್ಧತಾಂ ಭಕ್ತಿರಲಂ ಕ್ಷಣೇಕ್ಷಣೇ ತ್ವಯೀಶ ಮೇ ಹ್ರಾಸವಿವರ್ಜ್ಜಿತಾ ಸದಾ ।
ಅನುಗ್ರಹಸ್ತೇ ಮಯಿ ಚೈವಮೇವ ನಿರೌಪಧೌ ತೌ ಮಮ ಸರ್ವಕಾಮಃ                  ॥೮.೨೪೭॥

ಒಡೆಯನಾದ ಓ ರಾಮಚಂದ್ರನೇ, ನಿನ್ನಲ್ಲಿ ನನ್ನ ಭಕ್ತಿಯು ಕ್ಷಣಕ್ಷಣದಲ್ಲಿಯೂ ಕೂಡಾ ಬೆಳೆಯುತ್ತಿರಲಿ(ಎಂದೂ ಹ್ರಾಸವಾಗದೇ ಸದಾ ವೃದ್ಧಿಯನ್ನು ಹೊಂದುತ್ತಿರಲಿ). ಇದೇ ರೀತಿಯಾದ ನಿನ್ನ ಅನುಗ್ರಹವು ಸದಾ ನನ್ನಮೇಲಿರಲಿ  ಎನ್ನುವುದು ನನ್ನ ಸಮಸ್ತ ಕಾಮನೆಯು’.

ಇತೀರಿತಸ್ತಸ್ಯ ದದೌ ಸ ತದ್ ದ್ವಯಂ ಪದಂ ವಿಧಾತುಃ ಸಕಲೈಶ್ಚ ಶೋಭನಮ್ ।
ಸಮಾಶ್ಲಿಷಚ್ಚೈನಮಥಾsರ್ದ್ರಯಾ ಧಿಯಾ ಯಥೋಚಿತಂ ಸರ್ವಜನಾನಪೂಜಯತ್           ॥೮.೨೪೮॥

ಈ ರೀತಿಯಾಗಿ ಹನುಮಂತನು ಹೇಳುತ್ತಿರಲು,  ರಾಮಚಂದ್ರನು ಅವೆರಡನ್ನೂ(ಭಕ್ತಿ ಹಾಗು ಅನುಗ್ರಹವನ್ನು), ಎಲ್ಲಕ್ಕೂ ಮಿಗಿಲಾದ ಬ್ರಹ್ಮ ಪದವಿಯನ್ನು ಹನುಮಂತನಿಗೆ ಕೊಟ್ಟನು. ನಂತರ ಪ್ರೀತಿಯಿಂದ ತುಂಬಿದ ಮನಸ್ಸಿನಿಂದ ಹನುಮಂತನನ್ನು ಗಟ್ಟಿಯಾಗಿ ತಬ್ಬಿಕೊಂಡನು.  ತದನಂತರ ಯೋಗ್ಯತೆಗನುಗುಣವಾಗಿ ಸಮಸ್ತ  ಜನರನ್ನೂ ಕೂಡಾ  ಶ್ರೀರಾಮ  ಸತ್ಕರಿಸಿದನು.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಶ್ರೀರಾಮಚರಿತೇ ಅಷ್ಟಮೋsಧ್ಯಾಯಃ ॥

ಕನ್ನಡ ಪದ್ಯರೂಪ: https://go-kula.blogspot.com/2018/07/8-244-248.html

No comments:

Post a Comment