ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, July 5, 2018

Mahabharata Tatparya Nirnaya Kannada 8.125-8.131


      ತೇ ಭಕ್ಷಿತಾಸ್ತೇನ ಕಪಿಪ್ರವೀರಾಃ ಸರ್ವೇ ವಿನಿರ್ಜ್ಜಗ್ಮುರಮುಷ್ಯ ದೇಹಾತ್ ।
      ಸ್ರೋತೋಭಿರೇವಾಥ ಚ ರೋಮಕೂಪೈಃ ಕೇಚಿತ್ ತಮೇವಾsರುರುಹುರ್ಯ್ಯಥಾ ಗಿರಿಮ್ ॥೮.೧೨೫॥

ಕುಂಭಕರ್ಣ ತನ್ನ ಬಾಯೊಳಗೆ ಹಾಕಿಕೊಂಡಿದ್ದ ಕಪಿಪ್ರವೀರರೆಲ್ಲರೂ ಕೂಡಾ,  ಇಂದ್ರಿಯದ್ವಾರಗಳಿಂದ, ರೋಮಕೂಪಗಳಿಂದ  ಅವನ ದೇಹದಿಂದ ಹೊರ ಬಂದರು. ಕೆಲ ಕಪಿಗಳು ಕುಂಭಕರ್ಣನನ್ನು ಬೆಟ್ಟವೋ ಎಂಬಂತೆ ಏರಿದರು.

ಸ ತಾನ್ ವಿಧೂಯಾsಶು ಯಥಾ ಮಹಾಗಜೋ ಜಗಾಮ ರಾಮಂ ಸಮರಾರ್ತ್ಥಮೇಕಃ ।
ಪ್ರಭಕ್ಷಯನ್ ಸ್ವಾನಪರಾಂಶ್ಚ ಸರ್ವಶೋ ಮತ್ತಃ ಸಮಾಘ್ರಾಯ ಚ ಶೋಣಿತಂ ಪಿಬನ್ ॥೮.೧೨೬॥

ಮದೋನ್ಮತ್ತವಾದ ಆನೆಯಂತೆ ತನ್ನ ಮೈಮೇಲಿರುವ ಕಪಿಗಳನ್ನೆಲ್ಲಾ ಕೊಡವಿದ, ಮತ್ತನಾದ ಕುಂಭಕರ್ಣ, ಸ್ವಕೀಯರನ್ನೂ, ಕಪಿಗಳನ್ನೂ ತಿನ್ನುತ್ತಾ, ಆಘ್ರಾಣಿಸಿ ರಕ್ತವನ್ನು ಪಾನಮಾಡುತ್ತಾ, ಯುದ್ಧಕ್ಕೆಂದು ಶ್ರೀರಾಮನ ಬಳಿ ಬಂದ.

ನ್ಯವಾರಯತ್ ತಂ ಶರವರ್ಷಧಾರಯಾ ಸ ಲಕ್ಷ್ಮಣೋ ನೈನಮಚಿನ್ತಯತ್ ಸಃ ।
ಜಗಾಮ ರಾಮಂ ಗಿರಿಶೃಙ್ಗಧಾರೀ ಸಮಾಹ್ವಯತ್ ತಂ ಸಮರಾಯ ಚಾsಶು ॥೮.೧೨೭॥

ರಾಮನತ್ತ ಬರುತ್ತಿರುವ ಕುಂಭಕರ್ಣನನ್ನು ಲಕ್ಷ್ಮಣ ಬಾಣಗಳ ಮಳೆಯಿಂದ ತಡೆದ. ಆದರೆ ಕುಂಭಕರ್ಣನು ಅವನನ್ನು ಲೆಕ್ಕಿಸಲೇ ಇಲ್ಲಾ. ನೇರವಾಗಿ ಶ್ರಿರಾಮನತ್ತ ತೆರಳಿದ ಕುಂಭಕರ್ಣ, ದೊಡ್ಡದೊಂದು ಬೆಟ್ಟವನ್ನು ಹಿಡಿದುಕೊಂಡು, ರಾಮನನ್ನು ಯುದ್ಧಕ್ಕೆಂದು ಕರೆದ.

ಅಥೋ ಸಮಾದಾಯ ಧನುಃ ಸುಘೋರಂ ಶರಾಂಶ್ಚ ವಜ್ರಾಶನಿತುಲ್ಯವೇಗಾನ್ ।
ಪ್ರವೇಶಯಾಮಾಸ ನಿಶಾಚರೇ ಪ್ರಭುಃ ಸ ರಾಘವಃ ಪೂರ್ವಹತೇಷು ಯದ್ವತ್ ॥ ೮.೧೨೮ ॥

ತದನಂತರ, ಸರ್ವಸಮರ್ಥನಾದ ರಾಮಚಂದ್ರನು ಘೋರವಾದ ಬಿಲ್ಲಿನಿಂದ, ವಜ್ರಾಯುಧಕ್ಕೆ ಸಮನಾದ ಬಾಣಗಳನ್ನು ಕುಂಭಕರ್ಣನ ಮೇಲೆ ಪ್ರಯೋಗಿಸಿದನು.

ಯಾವದ್ಬಲೇನ ನ್ಯಹನತ್ ಖರಾದಿಕಾನ್ ನ ತಾವತೈವ ನ್ಯಪತತ್ ಸ ರಾಕ್ಷಸಃ ।
ಅತ ಪ್ರಹಸ್ಯಾsತ್ಮಬಲೈಕದೇಶಂ ಪ್ರದರ್ಶಯನ್ ಬಾಣವರಾನ್ ಮುಮೋಚ ॥೮.೧೨೯॥

ಎಷ್ಟು ಬಲದಿಂದ ಶ್ರೀರಾಮ ಖರ ಮೊದಲಾದವರನ್ನು ಕೊಂದಿದ್ದನೋ, ಅಷ್ಟೇ ಬಲದಿಂದ ಈ ರಾಕ್ಷಸನು ಬೀಳಲಿಲ್ಲಾ. ತದನಂತರ ನಗುತ್ತಾ ಶ್ರೀರಾಮಚಂದ್ರ ತನ್ನ ಬಲದ ಏಕದೇಶವನ್ನು ತೋರಿಸುತ್ತಾ ಬಾಣಗಳನ್ನು ಬಿಟ್ಟನು. [ಕುಂಭಕರ್ಣ ಖರ ಮೊದಲಾದವರಿಗಿಂದ ಬಲಿಷ್ಠ ಎನ್ನುವುದನ್ನು ಶ್ರೀರಾಮ ಜಗತ್ತಿಗೆ ತೋರಿಸುವುದಕ್ಕಾಗಿ ಈ ರೀತಿ ಮಾಡಿ ತೋರಿದನು ಎನ್ನುವುದು ತಾತ್ಪರ್ಯ]

ದ್ವಾಭ್ಯಾಂ ಸ ಬಾಹೂ ನಿಚಕರ್ತ್ತ ತಸ್ಯ ಪದದ್ವಯಂ ಚೈವ ತಥಾ ಶರಾಭ್ಯಾಮ್ ।
ಅಥಾಪರೇಣಾಸ್ಯ ಶಿರೋ ನಿಕೃತ್ಯ ಸಮ್ಪ್ರಾಕ್ಷಿಪತ್  ಸಾಗರತೋಯ ಆಶು ॥೮.೧೩೦॥

ರಾಮಚಂದ್ರನು ಕುಂಭಕರ್ಣನ ಎರಡು ತೊಳುಗಳನ್ನು ತನ್ನ  ಎರಡು ಬಾಣಗಳಿಂದ ಛೇದಿಸಿ, ಹಾಗೆಯೇ ಇನ್ನೆರಡು ಬಾಣಗಳಿಂದ ಆತನ ಎರಡು ಕಾಲುಗಳನ್ನು ಕತ್ತರಿಸಿದನು. ಇನ್ನೊಂದು ಬಾಣದಿಂದ ಆತನ ತಲೆಯನ್ನೂ ಕತ್ತರಿಸಿ, ಎಲ್ಲವನ್ನೂ ಸಮುದ್ರ ತೀರದಲ್ಲಿ ಎಸೆದನು.

ಅವರ್ದ್ದತಾಬ್ಧಿಃ ಪತಿತೇsಸ್ಯ ಕಾಯೇ ಮಹಾಚಲಾಭೇ ಕ್ಷಣದಾಚರಸ್ಯ ।
ಸುರಾಶ್ಚ ಸರ್ವೇ ವವೃಷುಃ ಪ್ರಸೂನೈರ್ಮ್ಮುದಾ ಸ್ತುವನ್ತೋ ರಘುವರ್ಯ್ಯಮೂರ್ಧ್ನಿ ॥೮.೧೩೧॥

ಈ ಕುಂಭಕರ್ಣನ ದೊಡ್ಡ ಬೆಟ್ಟದಂತೆ ಇರುವ ಶರೀರವು ಬೀಳುತ್ತಿರಲು ಸಮುದ್ರವು ಉಕ್ಕೇರಿತು. ಎಲ್ಲಾ ದೇವತೆಗಳೂ ಕೂಡಾ ಸಂತಸಗೊಂಡು, ವೇದಮಂತ್ರಗಳಿಂದ ಸ್ತೋತ್ರ ಮಾಡುತ್ತಾ, ರಾಮಚಂದ್ರನ ತಲೆಯಮೇಲೆ ಹೂ ಮಳೆಗರೆದರು.

ಕನ್ನಡ ಪದ್ಯರೂಪ: https://go-kula.blogspot.com/2018/07/8125-131.html

No comments:

Post a Comment