ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 19, 2023

Mahabharata Tatparya Nirnaya Kannada 26-291-300

 

ಸ ನ್ಯಸ್ಯ ಕರ್ಮ್ಮಾಣಿ ತದಾSಖಿಲಾನಿ ಯೋಗಾರೂಢಃ ಪರಮಂ ವಾಸುದೇವಮ್ ।

ಸರ್ವೇಶ್ವರಂ ನಿತ್ಯನಿರಸ್ತದೋಷಂ ದ್ಧ್ಯಾಯನ್ ಮುಕ್ತ್ವಾ ದೇಹಮಗಾತ್ ಸ್ವಧಾಮ ॥೨೬.೨೯೧ ॥

 

ಆಗ ದ್ರೋಣಾಚಾರ್ಯರು  ಹುಟ್ಟಿದಂದಿನಿಂದ ಈತನಕ ಯಾವಯಾವ ಕರ್ಮಗಳನ್ನು ಮಾಡಿದ್ದರೋ, ಅದೆಲ್ಲವನ್ನೂ  ಭಗವಂತನಲ್ಲರ್ಪಿಸಿ, ಧ್ಯಾನದಲ್ಲಿದ್ದು, ಎಲ್ಲರಿಗೂ ಒಡೆಯನಾದ, ದೋಷರಹಿತ ಶ್ರೀಕೃಷ್ಣನನ್ನು ಧ್ಯಾನ ಮಾಡುತ್ತಾ, ದೇಹವನ್ನು ಬಿಟ್ಟು, ಸ್ವರ್ಗಲೋಕಕ್ಕೆ ತೆರಳಿದರು.

[‘ಪರಮಂ ಪುರುಷಂ ವಿಷ್ಣುಂ ಜಗಾಮ ಮನಸಾ ಪರಮ್’ (೧೯೩.೫೨) ಜಗಾಮ ಪರಮಂ ಸ್ಥಾನಂ ದೇಹಂ ನ್ಯಸ್ಯ ರಥೋತ್ತಮೇ’(೫೫) - ಪರಮಾತ್ಮನನ್ನು ಸ್ಮರಣೆ ಮಾಡುತ್ತಾ ದ್ರೋಣಾಚಾರ್ಯರು  ದೇಹವನ್ನು ತ್ಯಜಿಸಿ ತೆರಳಿದರು].  

 

ತಂ ಕೇಶವಃ ಪಾಣ್ಡವಾ ಗೌತಮಶ್ಚ ಯಾನ್ತಂ ಸ್ವಲೋಕಂ ದದೃಶುರ್ವಿಹಾಯಸಾ ।

ಧೃಷ್ಟದ್ಯುಮ್ನಃ ಪಾಣ್ಡವೈರ್ವಾರ್ಯ್ಯಮಾಣೋSಪ್ಯಗಾತ್ ಖಡ್ಗಂ ಚರ್ಮ್ಮ ಚಾSದಾಯ ತತ್ರ ॥೨೬.೨೯೨ ॥

 

ಹೀಗೆ ಆಕಾಶಮಾರ್ಗವಾಗಿ  ತಮ್ಮ ಲೋಕಕ್ಕೆ ಉತ್ಕ್ರಮಿಸುತ್ತಿರುವ ದ್ರೋಣಾಚಾರ್ಯರನ್ನು ಶ್ರೀಕೃಷ್ಣನು, ಪಾಂಡವರು, ಕೃಪಾಚಾರ್ಯರು ನೋಡಿದರು. ಅದೇಸಮಯದಲ್ಲಿ ಪಾಂಡವರಿಂದ ತಡೆಯಲ್ಪಟ್ಟರೂ ಕೂಡಾ,  ಧೃಷ್ಟದ್ಯುಮ್ನನು ಖಡ್ಗವನ್ನೂ, ಗುರಾಣಿಯನ್ನೂ ಹಿಡಿದು ದ್ರೋಣಾಚಾರ್ಯರ ಸಮೀಪವನ್ನು ಕುರಿತು ತೆರಳಿದನು.  

[‘ವಯಮೇವ ತದಾSದ್ರಾಕ್ಷ್ಮ ಪಞ್ಚ ಮಾನುಷಯೋನಯಃ । ಯೋಗಯುಕ್ತಂ ಮಹಾತ್ಮಾನಂ ಗಚ್ಛಂತಂ ಪರಮಾಂ ಗತಿಮ್ । ಅಹಂ ಧನಂಜಯಃ ಪಾರ್ಥಃ ಕೃಪಃ ಶಾರದ್ವತೋ ದ್ವಿಜಃ । ವಾಸುದೇವಶ್ಚ ವಾರ್ಷ್ಣೇಯೋ ಧರ್ಮಪುತ್ರಶ್ಚ ಪಾಂಡವಃ’ (೧೯೩-೫೯-೬೦). ‘ನಾನು, ಅರ್ಜುನ, ಕೃಪ, ವಾಸುದೇವ, ಧರ್ಮಪುತ್ರ-   ದ್ರೋಣಾಚಾರ್ಯರು  ಉತ್ಕ್ರಮಿಸುತ್ತಿರುವುದನ್ನು  ನೋಡಿದೆವು’ ಎಂದು  ಸಂಜಯ ಹೇಳುತ್ತಾನೆ.  ಇಲ್ಲಿ   ‘ಧನಂಜಯಃ ಪಾರ್ಥಃ - ಧರ್ಮಪುತ್ರಶ್ಚ ಪಾಂಡವಃ’ ಎನ್ನುವುದನ್ನು ‘ಪಂಚ ಪಾಂಡವರು  ಎಂದು ತಿಳಿಯಬೇಕೆಂದು  ಆಚಾರ್ಯರು ನಿರ್ಣಯ ನೀಡಿದ್ದಾರೆ]

 

ಛಿತ್ವಾSಸಿನಾ ತಸ್ಯ ಶಿರಃ ಪುನಶ್ಚ ರಥಂ ಸ್ವಕೀಯಂ  ತ್ವರಯಾ ಸಮಾಸ್ಥಿತಃ ।

ದೃಷ್ಟ್ವಾ ಕೃಪಸ್ತಂ ಸುಭೃಶಂ ಭಯಾರ್ದ್ದಿತಃ ಸಮ್ಪ್ರಾದ್ರವದ್ ವಾಜಿನಮೇಕಮಾಸ್ಥಿತಃ ॥೨೬.೨೯೩ ॥

 

ಧೃಷ್ಟದ್ಯುಮ್ನನು ದ್ರೋಣಾಚಾರ್ಯರ ತಲೆಯನ್ನು ಕತ್ತರಿಸಿ, ಮತ್ತೆ ತನ್ನ ರಥವನ್ನು ವೇಗದಿಂದ ಏರಿದನು. ಈ ಘಟನೆಯನ್ನು ನೋಡಿದ ಕೃಪಾಚಾರ್ಯರು ಬಹಳ ಹೆದರಿ, ಒಂದು ಕುದುರೆಯನ್ನೇರಿ ಓಡಿಹೋದರು.

 

ಸಞ್ಛಿನ್ನೇ ದ್ರೋಣಶಿರಸಿ ಗರ್ಹಯಾಮಾಸ ವಾಸವಿಃ ।

ಯುಧಿಷ್ಠಿರಂ ಚ ಪಾಞ್ಚಾಲ್ಯಂ ಸಾತ್ಯಕಿಶ್ಚಾಪಿ ಕೋಪಿತಃ ॥೨೬.೨೯೪ ॥

 

ಈರೀತಿಯಾಗಿ ದ್ರೋಣನ ತಲೆಯು ಕಡಿಯಲ್ಪಡಲು, ಅರ್ಜುನನು ಯುಧಿಷ್ಠಿರನನ್ನೂ, ಧೃಷ್ಟದ್ಯುಮ್ನನನ್ನೂ ನಿಂದಿಸಿದ. ಸಾತ್ಯಕಿಯೂ ಕೂಡಾ ಸಿಡುಕಿದ.

[ಮಹಾಭಾರತದಲ್ಲಿ ಅರ್ಜುನನ ಮಾತನ್ನು ಈರೀತಿ ವಿವರಿಸಿದ್ದಾರೆ- ‘ಉಪಚೀರ್ಣೋ ಗುರುರ್ಮಿಥ್ಯಾ ಭವತಾ ರಾಜ್ಯಕಾರಣಾತ್ । ಧರ್ಮಜ್ಞೇನ ಸತಾ ನಾಮ ಸೋSಧರ್ಮಃ ಸುಮಹಾನ್ ಕೃತಃ(೧೯೭.೩೬)- ಧರ್ಮಜ್ಞನೂ, ಸತ್ಪುರುಷನೂ ಆಗಿದ್ದರೂ, ರಾಜ್ಯದ ಕಾರಣದಿಂದ ನೀನು ಗುರುವಿಗೆ ಸುಳ್ಳನ್ನು ಹೇಳಿ ಮೋಸಗೊಳಿಸಿ ಮಹಾ ಅಧರ್ಮವನ್ನು ಮಾಡಿರುವೆ. ‘ನ್ಯಸ್ತಶಸ್ತ್ರಮಧರ್ಮೇಣ ಪಾತಯಿತ್ವಾ ಗುರುಂ ಭವಾನ್ । ರಕ್ಷತ್ವಿದಾನೀಂ ಸಾಮಾತ್ಯೋ ಯದಿ ಶಕ್ತೋSಸಿ ಪಾರ್ಷತಮ್’ (೪೨) ಆಯುಧವನ್ನು ಕೆಳಗಿಟ್ಟ ದ್ರೋಣಾಚಾರ್ಯರನ್ನು ಅಧರ್ಮದಿಂದ ಕೊಲ್ಲಿಸಿದ ನೀನು ಶಕ್ಯನಾದರೆ ಅಮಾತ್ಯರೊಂದಿಗೆ ಈ ಧೃಷ್ಟದ್ಯುಮ್ನನನ್ನು ರಕ್ಷಿಸು. ‘ಗುರುಂ ಮೇ ಯತ್ರ ಪಾಞ್ಚಾಲ್ಯಃ ಕೇಶಪಕ್ಷೇ ಪರಾಮೃಶತ್ । ತನ್ನ ಜಾತು ಕ್ಷಮೇದ್ ದ್ರೌಣಿರ್ಜಾನನ್ ಪೌರುಷಮಾತ್ಮನಃ’ (೧೯೭.೩೫) ತನ್ನ ಪೌರುಷವು ಎಷ್ಟಿರುವುದೆಂದು ತಿಳಿದಿರುವ ದ್ರೌಣಿಯು ನನ್ನ ಗುರುವಿನ ಮುಡಿಯನ್ನು ಹಿಡಿದು ಕೊಂದಿರುವವನನ್ನು ಖಂಡಿತವಾಗಿಯೂ ಕ್ಷಮಿಸುವುದಿಲ್ಲ.

ಸಾತ್ಯಕಿ ಹೇಳುತ್ತಾನೆ: ‘ಅನಾರ್ಯಂ ತಾದೃಶಂ ಕೃತ್ವಾ ಪುನರೇವಂ ಗುರುಂ ಕ್ಷಿಪನ್ । ವಧ್ಯಸ್ತ್ವಂ ನ ತ್ವಯಾSರ್ಥೋSಸ್ತಿ ಮುಹೂರ್ತಮಪಿ ಜೀವತಾ’(೧೯೯.೧೪) - ಆ ರೀತಿ ಮಾಡಬಾರದ್ದನ್ನು ಮಾಡಿ ಪುನಃ ಗುರುವನ್ನು ನಿಂದಿಸುತ್ತಿರುವ ನೀನು ವಧ್ಯನು. ಮುಹೂರ್ತಕಾಲವೂ ನೀನು ಜೀವಿಸಿರುವುದರಲ್ಲಿ ಅರ್ಥವಿಲ್ಲ ]

 

ಧೃಷ್ಟದ್ಯುಮ್ನಸ್ತು ತಾವಾಹ ಕಥಂ ಭೂರಿಶ್ರವಾ ಹತಃ ।

ಇತಿ ತಂ ಸಾತ್ಯಕಿಃ ಕ್ರುದ್ಧೋ ಗದಾಪಾಣಿಃ ಸಮಭ್ಯಯಾತ್ ॥೨೬.೨೯೫ ॥

 

ಆಗ ಧೃಷ್ಟದ್ಯುಮ್ನನು ‘ಭೂರೀಶ್ರವನು ಹೇಗೆ ಸಂಹರಿಸಲ್ಪಟ್ಟಿರುತ್ತಾನೆ ’ ಎಂದು ಕೇಳುತ್ತಾನೆ.  ಈರೀತಿಯಾಗಿ ಹೇಳಿದಾಗ ಮುನಿದ ಸಾತ್ಯಕಿಯು ಗದೆಯನ್ನು ಹಿಡಿದು ಧೃಷ್ಟದ್ಯುಮ್ನನ ಮೇಲೇರಿ  ಬಂದ.  

[ಧೃಷ್ಟದ್ಯುಮ್ನನ ಮಾತನ್ನು ಮಹಾಭಾರತದಲ್ಲಿ ಈರೀತಿ ವಿವರಿಸಿದ್ದಾರೆ- ‘ಪರಾನ್ ಕ್ಷಪನ್ತಿ ದೋಷೇಣ ಸ್ವೇಷು ದೋಷೇಷ್ವದೃಷ್ಟಯಃ ।   ಯಃ ಸ ಭೂರಿಶ್ರವಾಶ್ಛಿನ್ನಭುಜಃ ಪ್ರಾಯಗತಸ್ತ್ವಯಾ । ವಾರ್ಯಮಾಣೇನ ಹಿ ಹತಸ್ತತಃ ಪಾಪತರಂ ನು ಕಿಮ್’ (೨೦೦.೩೦) – ‘ತಮ್ಮ ದೋಷದ ಬಗ್ಗೆ ಗೊತ್ತಿಲ್ಲದೇ ಬೇರೊಬ್ಬರ ಬಗ್ಗೆ ಮಾತನಾಡುತ್ತಾರೆ. ಭುಜ ಕಳೆದುಕೊಂಡ ಭೂರೀಶ್ರವ ಪ್ರಾಯೋಪವೇಶ ಮಾಡುತ್ತಿದ್ದ ಕಾಲದಲ್ಲಿ ಸಂಹರಿಸಲ್ಪಟ್ಟ.  ಇದು ಪಾಪವೆಂದಾದರೆ ಅದೂ ಪಾಪವೇ. ಅದು ಪಾಪ ಅಲ್ಲವೆಂದರೆ ಇದೂ ಪಾಪವಲ್ಲ’ ಎನ್ನುತ್ತಾನೆ ಧೃಷ್ಟದ್ಯುಮ್ನ.]

 

ಆಹ್ವಯಾಮಾಸ ಪಾಞ್ಚಾಲ್ಯಸ್ತಂ ಧೃತಾಸಿರವಿಸ್ಮಯಃ ।

ತದಾ ಜಗ್ರಾಹ ಶೈನೇಯಂ ಭೀಮಃ ಕೃಷ್ಣಪ್ರಚೋದಿತಃ ।

ಶಮಯಾಮಾಸ ಪಾರ್ತ್ಥಂ ಚ ಪಾಞ್ಚಾಲ್ಯಸ್ನೇಹಯನ್ತ್ರಿತಃ ॥೨೬.೨೯೬ ॥

 

ಇದರಿಂದ ಧೃಷ್ಟದ್ಯುಮ್ನನಿಗೆ ಯಾವುದೇ ಆಶ್ಚರ್ಯವಾಗಲಿಲ್ಲ. ಅವನು ನಿರ್ಭೀತಿಯಿಂದ ‘ಬಾ’ ಎಂದು ಸಾತ್ಯಕಿಯನ್ನು ಕರೆದ. ಆಗ ಕೃಷ್ಣನಿಂದ ಪ್ರಚೋದಿಸಲ್ಪಟ್ಟ ಭೀಮಸೇನನು ಸಾತ್ಯಕಿಯನ್ನು ಹಿಡಿದುಕೊಂಡ. ಧೃಷ್ಟದ್ಯುಮ್ನನ ಮೇಲಿನ ಪ್ರೀತಿಯಿಂದ ಅರ್ಜುನನನ್ನೂ ಸಮಾಧಾನಗೊಳಿಸಿದ.  

 

ತೇ ವಾಸುದೇವೇನ ತದಾSನುಶಿಕ್ಷಿತಾಃ ಸ್ನೇಹಂ ಪುನಃ ಪೂರ್ವವದಾಪುರುತ್ತಮಮ್ ।

ಯತ್ತಾಶ್ಚ ಯುದ್ಧಾಯ ಸಮುದ್ಯತಾಶ್ಚ ತದಾSSಗಮದ್ ದ್ರೌಣಿರಪ್ಯಾತ್ತಧನ್ವಾ ॥೨೬.೨೯೭ ॥

 

ಆಗ ಶ್ರೀಕೃಷ್ಣನಿಂದ ಚೆನ್ನಾಗಿ ಬುದ್ಧಿಹೇಳಲ್ಪಟ್ಟ ಅವರು ಮತ್ತೆ ಹಿಂದಿನಂತೆಯೇ ಮೈತ್ರಿಯನ್ನು ಬೆಳೆಸಿಕೊಂಡರು. ಆಯುಧವನ್ನು ಧರಿಸಿ, ಯುದ್ಧಕ್ಕಾಗಿ ಸಿದ್ದರಾದರು. ಆಗ ಬಿಲ್ಲನ್ನು ಹಿಡಿದು ಅಶ್ವತ್ಥಾಮನು ಬಂದ.

 

ಆಶ್ರುತ್ಯ ತಾತಂ ನಿಹತಂ ಪ್ರತಿಜ್ಞಾಂ ಚಕಾರ ನಿಃಶೇಷರಿಪುಪ್ರಮಾಥನೇ ।

ನಾರಾಯಣಾಸ್ತ್ರಂ ವಿಸಸರ್ಜ್ಜ ಕೋಪಾತ್ ತದಾ ಭೀತಾ ಭೀಮಮೃತೇ ಸಮಸ್ತಾಃ ॥೨೬.೨೯೮ ॥

 

ನನ್ನ ಅಪ್ಪ ಸತ್ತಿದ್ದಾನೆ ಎಂದು ಕೇಳಿ ಅಶ್ವತ್ಥಾಮ, ಎಲ್ಲಾ ಶತ್ರುಗಳನ್ನು ಕೊಲ್ಲುವ ವಿಷಯದಲ್ಲಿ ಪ್ರತಿಜ್ಞೆಮಾಡಿದ ಮತ್ತು ಕೋಪದಿಂದ ನಾರಾಯಣಾಸ್ತ್ರವನ್ನು ಬಿಟ್ಟ ಕೂಡಾ. ಆಗ ಭೀಮಸೇನನನ್ನು ಬಿಟ್ಟು ಇತರ ಎಲ್ಲರೂ ಭಯಗೊಂಡರು.

[‘ಪಾಣ್ಡುಸೈನ್ಯಮೃತೇ ಭೀಮಂ ಸುಮಹದ್ ಭಯಮಾವಿಶತ್’ (ದ್ರೋಣಪರ್ವ ೨೦೦.೬೮)- ಭೀಮಸೇನನನ್ನು ಬಿಟ್ಟು ಎಲ್ಲರಿಗೂ ಭಯವಾಯಿತು]

 

ಯುಧಿಷ್ಠಿರಃ ಪ್ರಾಹ ವಿಷಣ್ಣಚೇತನಃ ಶೈನೇಯಪೂರ್ವಾಃ ಪ್ರತಿಯಾನ್ತು ಸರ್ವೇ ।

ಸಭ್ರಾತೃಕೋsಹಂ ದ್ರೌಣಿವರಾಸ್ತ್ರಮಗ್ನೋ ಭವೇಯಮಿತ್ಯತ್ರ ಜಗಾದ ಕೇಶವಃ ॥೨೬.೨೯೯ ॥

 

ಯುಧಿಷ್ಠಿರನು ಬಹಳ ಖತಿಗೊಂಡು, ‘ಸಾತ್ಯಕಿಯೇ ಮೊದಲಾದವರೆಲ್ಲರೂ ತೆರಳಿರಿ. ನಮಗಾಗಿ ನೀವು ಸಾಯುವುದು ಬೇಡ. ನಾನು ನನ್ನ ತಮ್ಮಂದಿರೊಡಗೂಡಿ ನಾರಾಯಣಾಸ್ತ್ರಕ್ಕೆ ಎದೆಗೊಟ್ಟು ಸಾಯುತ್ತೇನೆ’ ಎಂದು ಹೇಳಿದ. ಆಗ ಶ್ರೀಕೃಷ್ಣ ಹೇಳುತ್ತಾನೆ-

[ಯುಧಿಷ್ಠಿರನ ಈ ಮಾತನ್ನು ಮಹಾಭಾರತದಲ್ಲಿ ಹೀಗೆ ವರ್ಣಿಸಿದ್ದಾರೆ- ‘ಸಙ್ಗ್ರಾಮಸ್ತು ನ ಕರ್ತವ್ಯಃ ಸರ್ವಸೈನ್ಯಾನ್ ಬ್ರವೀಮಿ ವಃ । ಅಹಂ ಹಿ ಸಹ ಸೋದರ್ಯೈಃ ಪ್ರವೇಕ್ಷ್ಯೇ ಹವ್ಯವಾಹನಮ್’ (೨೦೦.೩೦)]

 

ನಮಧ್ವಮಸ್ತ್ರಸ್ಯ ತತೋ ವಿಮೋಕ್ಷ್ಯಥೇತ್ಯಥ ಪ್ರಣೇಮುಶ್ಚ ಧನಞ್ಜಯಾಧಿಕಾಃ ।

ಸರ್ವೇ ನ ಭೀಮಸ್ತದಮುಷ್ಯ ಮೂರ್ಧ್ನಿ ಪಪಾತ ಸೋSಗ್ನಾವಿವ ಸಂಸ್ಥಿತೋSಗ್ನಿಃ ॥೨೬.೩೦೦ ॥

 

‘ಎಲ್ಲರೂ ಕೂಡಾ ಅಸ್ತ್ರವನ್ನು ಕುರಿತು ನಮಸ್ಕರಿಸಿರಿ, ಆಗ ಅದರಿಂದ ಬಿಡುಗಡೆ ಹೊಂದುತ್ತೀರಿ’ ಎಂದನು. ಆಗ ಅರ್ಜುನನೇ ಮೊದಲಾದವರು ನಮಸ್ಕರಿಸಿದರು. ಭೀಮನು ನಮಸ್ಕರಿಸಲಿಲ್ಲ. ಆಗ ಆ ಅಸ್ತ್ರವು ಭೀಮನ ತಲೆಯ ಮೇಲೆ ಹೊಳೆಯಲಾರಂಭಿಸಿತು. ಭೀಮಸೇನನು ಬೆಂಕಿಯಲ್ಲಿ ಬೆಂಕಿ ನಿಂತಂತೆ ನಿಂತ.

[‘ಯೇSಞ್ಜಲಿಂ ಕುರ್ವತೇ ವೀರ ನಮನ್ತಿ ಚ ವಿವಾಹನಾಃ । ತಾನ್ ನೈತದಸ್ತ್ರಂ ಸಙ್ಗ್ರಾಮೇ ನಿಹನಿಷ್ಯತಿ ಮಾನವಾನ್’ (ದ್ರೋಣಪರ್ವ ೨೦೦.೪೭)- ಯಾರು ನಮಸ್ಕಾರ ಮಾಡುತ್ತಾರೋ ಅವರಿಗೆ ಆ ಅಸ್ತ್ರ ಏನೂ ಮಾಡುವುದಿಲ್ಲ.ತೇಷು ನಿಕ್ಷಿಪ್ತಶಸ್ತ್ರೇಷು ವಾಹನೇಭ್ಯಶ್ಚ್ಯುತೇಷು ಚ । ತದಸ್ತ್ರವೀರ್ಯಂ ವಿಪುಲಂ ಭೀಮಮೂರ್ಧನ್ಯಥಾಪತತ್’ (೨೦೦.೭೦) ಅವರೆಲ್ಲರೂ ಅಸ್ತ್ರವನ್ನು ಕೆಳಗಿಡಲು, ಅದು ಎಲ್ಲರನ್ನೂ ಬಿಟ್ಟಿತು ಮತ್ತು ಭೀಮನ ಮೇಲೆ ನಿಂತಿತು. ‘ಅಗ್ನಾವಗ್ನಿರಿವ ನ್ಯಸ್ತೋ ಜ್ವಾಲಾಮಾಲೀ ಸುದುರ್ದೃಶಃ’ (೨೦೧.೩) ಅವನು ಬೆಂಕಿಯಲ್ಲಿ ಬೆಂಕಿ ಇದ್ದಂತೆ ಕಾಣುತ್ತಿದ್ದ.]

No comments:

Post a Comment