ತತೋ ದ್ರೌಣಿಮುಖಾಂ
ಸೇನಾಂ ಸರ್ವಾಂ ಭೀಮೋSಭ್ಯವರ್ತ್ತತ
।
ಪಾರ್ತ್ಥಃ ಕರ್ಣ್ಣಮುಖಾಞ್ಛಿಷ್ಟಾನ್
ತತೋSಭಜ್ಯತ
ತದ್ ಬಲಮ್ ॥೨೬.೧೯೭ ॥
ತದನಂತರ ಭೀಮಸೇನನು
ಅಶ್ವತ್ಥಾಮನೇ ಪ್ರಧಾನನಾಗಿರುವ ಎಲ್ಲಾ ಸೇನೆಯನ್ನು ಕುರಿತು ಯುದ್ಧದಲ್ಲಿ ಪ್ರವೃತ್ತನಾದ. ಅರ್ಜುನನು
ಕರ್ಣನೇ ಪ್ರಧಾನವಾಗಿರುವ ಸೇನೆಯನ್ನು ಕುರಿತು ಯುದ್ಧ ಮಾಡಲಾರಂಭಿಸಿದ. ಆಗ ಕೌರವರ ಬಲವು ಎರಡು
ಸೀಳಾಗಿ ಹೋಯಿತು.
ಶೀರ್ಣ್ಣಾಂ ಸೇನಾಂ
ಪ್ರವಿವಿಶುರ್ದ್ಧೃಷ್ಟದ್ಯುಮ್ನಪುರೋಗಮಾಃ ।
ತತಸ್ತಂ ದೇಶಮಾಪುಸ್ತೇ
ಯತ್ರ ಭೀಮಧನಞ್ಜಯೌ ॥೨೬.೧೯೮ ॥
ಇದೇ ಸಮಯದಲ್ಲಿ ಧೃಷ್ಟದ್ಯುಮ್ನನೇ
ಮೊದಲಾದವರು ಭೀಮಾರ್ಜುನರಿಂದ ಪರಾಜಯಹೊಂದಿ ಸೀಳಾಗಿರುವ ಕೌರವ ಸೇನೆಯನ್ನು ಪ್ರವೇಶಿಸಿ, ಭೀಮಾರ್ಜುನರಿದ್ದಲ್ಲಿಗೆ
ಬಂದರು.
ತತ ಏಕೀಕೃತಾಃ ಸರ್ವೇ
ಪಾಣ್ಡವಾಃ ಸಹಸೋಮಕಾಃ ।
ಪರಾನ್
ವಿದ್ರಾವಯಾಮಾಸುಸ್ತೇ ಭೀತಾಃ ಪ್ರಾದ್ರವನ್ ದಿಶಃ ॥೨೬.೧೯೯ ॥
ತದನಂತರ ಪಾಂಚಾಲರಿಂದ
ಕೂಡಿರುವ ಎಲ್ಲಾ ಪಾಂಡವ ಪಕ್ಷದವರೂ ಕೂಡಾ ಶತ್ರುಗಳನ್ನು ಓಡಿಸಿದರು. ಆಗ ಕೌರವ ಪಾಳಯದವರು
ಭಯಗೊಂಡು ಸಿಕ್ಕ-ಸಿಕ್ಕಲ್ಲಿ ಓಡಿದರು.
ವಿದ್ರಾಪ್ಯಮಾಣಂ
ಸೈನ್ಯಂ ತಂ ದೃಷ್ಟ್ವಾ ದುರ್ಯ್ಯೋಧನೋ ನೃಪಃ ।
ಜಯದ್ರಥವಧಾಚ್ಚೈವ
ಕುಪಿತೋSಭ್ಯದ್ರವತ್
ಪರಾನ್ ॥೨೬.೨೦೦ ॥
ಓಡಿಸಲ್ಪಡುತ್ತಿರುವ
ಸೈನ್ಯವನ್ನು ಕಂಡ, ಜಯದ್ರಥನ ಸಾವಿನಿಂದ ವಿಪರೀತ ಸಿಟ್ಟುಗೊಂಡಿರುವ ರಾಜ ದುರ್ಯೋಧನನು, ಶತ್ರುಗಳನ್ನು ಕುರಿತು
ಯುದ್ಧಕ್ಕೆಂದು ತೆರಳಿದ.
ಸ ಭೀಮಸೇನಂ ಚ ಧನಞ್ಜಯಂ
ಚ ಯುಧಿಷ್ಠಿರಂ ಮಾದ್ರವತೀಸುತೌ ಚ ।
ಧೃಷ್ಟದ್ಯುಮ್ನಂ
ಸಾತ್ಯಕಿಂ ದ್ರೌಪದೇಯಾನ್ ಸರ್ವಾನೇಕಃ ಶರವರ್ಷೈರ್ವವರ್ಷ ॥೨೬.೨೦೧ ॥
ಆ ದುರ್ಯೋಧನನು
ಭೀಮಸೇನನನ್ನು, ಅರ್ಜುನನನ್ನು,
ಯುಧಿಷ್ಠಿರನನ್ನೂ, ನಕುಲ-ಸಹದೇವರನ್ನೂ, ಧೃಷ್ಟದ್ಯುಮ್ನ, ಸಾತ್ಯಕಿ,
ಐದು ಜನ ದ್ರೌಪದೇಯರು, ಇವರೆಲ್ಲರನ್ನೂ ಒಬ್ಬನೇ ತನ್ನ ಶರವರ್ಷದಿಂದ
ಪೀಡಿಸಿದನು.
ತೇ ವಿವ್ಯಧುಸ್ತಂ
ಬಹುಭಿಃ ಶಿಲೀಮುಖೈಃ ಸ ತಾನನಾದೃತ್ಯ ಚಕರ್ತ್ತ ಬಾಣೈಃ ।
ಧನೂಂಷಿ ಚಿತ್ರಾಣಿ
ಮಹಾರಥಾನಾಂ ಚಕಾರ ಸಙ್ಖೇ ವಿರಥೌ ಯಮೌ ಚ ॥೨೬.೨೦೨ ॥
ಅವರೆಲ್ಲರೂ
ದುರ್ಯೋಧನನನ್ನು ಕುರಿತು, ಬಹಳ
ಬಾಣಗಳಿಂದ ಹೊಡೆದರು. ದುರ್ಯೋಧನನಾದರೋ, ಯಾವುದನ್ನೂ ಲೆಕ್ಕಿಸದೇ, ಅವರನ್ನು ಕಡೆಗಣಿಸಿ,
ಬಾಣಗಳಿಂದ ರಥಿಕರ ಬಹಳ ವಿಚಿತ್ರವಾಗಿರುವ ಬಿಲ್ಲುಗಳನ್ನು ಕತ್ತರಿಸಿದನು. ಯುದ್ಧದಲ್ಲಿ ನಕುಲ
ಸಹದೇವರನ್ನು ರಥಹೀನರನ್ನಾಗಿ ಮಾಡಿದನು.
ಆದಾಯ ಚಾಪಾನಿ ಪರಾಣಿ
ತೇSಪಿ ದುರ್ಯ್ಯೋಧನಂ ವವೃಷುಃ ಸಾಯಕೌಘೈಃ ।
ಅಚಿನ್ತಯಿತ್ವೈವ ಶರಾನ್ತ್ಸ
ಏಕೋ ನ್ಯವಾರಯತ್ ತಾನಖಿಲಾಂಶ್ಚ ಬಾಣೈಃ ॥೨೬.೨೦೩ ॥
ಅವರೆಲ್ಲರೂ ಕೂಡಾ, ಬೇರೆ ಬಿಲ್ಲುಗಳನ್ನು
ತೆಗೆದುಕೊಂಡು ದುರ್ಯೋಧನನನ್ನು ಬಾಣಗಳ ಮಳೆಯಿಂದ ಪೀಡಿಸಿದರು. ದುರ್ಯೋಧನ ಒಬ್ಬನೇ ಅವರ ಬಾಣಗಳನ್ನು
ಕಡೆಗಣಿಸಿ, ಅವರೆಲ್ಲರನ್ನೂ ಕೂಡಾ ಬಾಣಗಳಿಂದ ತಡೆದನು.
ತಂ ಗಾಹಮಾನಂ ದ್ವಿಷತಾಂ
ಬಹೂನಾಂ ಮದ್ಧ್ಯೇ ದ್ರೋಣದ್ರೌಣಿಕೃಪಪ್ರಧಾನಾಃ ।
ದೃಷ್ಟ್ವಾ ಸರ್ವೇ
ಜುಗುಪುಃ ಸ್ವಾತ್ತಚಾಪಾ ಅನಾರತಂ ಬಾಣಗಣಾನ್ ಸೃಜನ್ತಃ ॥೨೬.೨೦೪ ॥
ಹೀಗೆ, ಬಹಳ ಶತ್ರುಗಳ
ನಡುವೆ ಸಿಕ್ಕಿಹಾಕಿಕೊಂಡಿರುವ ದುರ್ಯೋಧನನನ್ನು ನೋಡಿ, ದ್ರೋಣಾಚಾರ್ಯ, ಅಶ್ವತ್ಥಾಮ, ಕೃಪ, ಮೊದಲಾದ ಎಲ್ಲರೂ ಕೂಡಾ
ಬಿಲ್ಲುಗಳನ್ನು ಹಿಡಿದುಕೊಂಡು, ಬಾಣಗಳನ್ನು ಎಸೆಯುತ್ತಾ ಬಂದು, ದುರ್ಯೋಧನನನ್ನು
ರಕ್ಷಿಸಿದರು.
No comments:
Post a Comment